ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು

ಚಿಂತಾಮಣಿ ಕೊಡ್ಲೆಕೆರೆ
ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)

ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ ಐದು ಕವಿತೆಗಳ ವಿಶೇಷ ಪ್ರಸ್ತುತಿ ನಮ್ಮ ಕಾವ್ಯಸಕ್ತರಿಗಾಗಿ.

೧. ಸುಮ್ಮನಿರುವನು ಅವನು ಗುಡಿಗಳಲ್ಲಿ 

ಸುಮ್ಮನಿರುವನು ಅವನು ಗುಡಿಗಳಲ್ಲಿ 
ನೈವೇದ್ಯ ನಮಗವನ ಹೆಸರಿನಲ್ಲಿ 
ಮುಂಜಾವಿನಲಿ ಎದ್ದು 
ಭಾರಿ ಗಡಿಬಿಡಿ ಬಿದ್ದು 
ಗರ್ಭಗುಡಿ ಅಂಗಳ ತೊಳೆಯಬೇಕು 
ನೈರ್ಮಾಲ್ಯ ಎಲ್ಲವನು ಕಳೆಯಬೇಕು 
ಹಳೆಯ ವಸ್ತ್ರವ ತೆಗೆದು 
ಚೆನ್ನಾಗಿ ನೀರೆರೆದು 
ಶಿಲಾರೂಪಿಯ ಮೈಯನೊರೆಸಬೇಕು 
ಮಡಿ ಬಟ್ಟೆಯನು ಮತ್ತೆ ಉಡಿಸಬೇಕು 
ಮಂತ್ರಗಳ ಹೇಳುತ್ತ
ಹೂಮಾಲೆ ತೊಡಿಸುತ್ತ 
ಸರ್ವ ವಿಧದಲು ಪೂಜೆ ನೀಡಬೇಕು 
ಅಲಂಕಾರದಲವನ ನೋಡಬೇಕು!
ಹೀಗೆ ಬರಿದೇ ಪೂಜೆ 
ಮಾಡುತಿದ್ದರೆ ಸಾಕೆ?
ಹಣ್ಣು ಸಿಹಿಖಾದ್ಯಗಳ ಇರಿಸಬೇಕು 
ದೇವರಿಗೆ ನೈವೇದ್ಯ ಮಾಡಬೇಕು 
ಅವನು ತಿನ್ನುವುದಿಲ್ಲ 
ಮತ್ತೆ,ನಮಗೇ,ಎಲ್ಲ 
ಆದರೂ ಅವನೆದುರು ಇರಿಸಬೇಕು 
ಭಕ್ತರಿಗೆ ದೊನ್ನೆಯಲಿ ಹಂಚಬೇಕು 
ಪ್ರಸಾದಂಗಳ ತಿಂದು 
ಗುಡಿಯಿಂದ ಹೊರಬಂದು 
ನಾವು ಶುರು ಮಾಡುವೆವು ನಮ್ಮ ಕೆಲಸ 
ಅನ್ನುವುದು,ತಿನ್ನುವುದು ಇಡಿಯ ದಿವಸ!
ಸುಮ್ಮನಿರುವನು ಅವನು ಗುಡಿಗಳಲ್ಲಿ 
ತಿಳಿಸು ದೇವರೆ ಅರ್ಥ ನುಡಿಗಳಲ್ಲಿ!

೨. ಒಳ್ಳೆಯ ನುಡಿಗಳು ಉಚಿತ