- ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು - ಸೆಪ್ಟೆಂಬರ್ 11, 2025
- ಹುಣ್ಣಿಮೆ ರಾತ್ರಿ ದೇವರಾಡುವನು - ಜನವರಿ 1, 2025
- ಮರಿಹಕ್ಕಿ ಮರಳಿತು ಕಾಡಿಗೆ… - ಅಕ್ಟೋಬರ್ 29, 2024
ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ ಐದು ಕವಿತೆಗಳ ವಿಶೇಷ ಪ್ರಸ್ತುತಿ ನಮ್ಮ ಕಾವ್ಯಸಕ್ತರಿಗಾಗಿ.
೧. ಸುಮ್ಮನಿರುವನು ಅವನು ಗುಡಿಗಳಲ್ಲಿ


ಸುಮ್ಮನಿರುವನು ಅವನು ಗುಡಿಗಳಲ್ಲಿ
ನೈವೇದ್ಯ ನಮಗವನ ಹೆಸರಿನಲ್ಲಿ
ಮುಂಜಾವಿನಲಿ ಎದ್ದು
ಭಾರಿ ಗಡಿಬಿಡಿ ಬಿದ್ದು
ಗರ್ಭಗುಡಿ ಅಂಗಳ ತೊಳೆಯಬೇಕು
ನೈರ್ಮಾಲ್ಯ ಎಲ್ಲವನು ಕಳೆಯಬೇಕು
ಹಳೆಯ ವಸ್ತ್ರವ ತೆಗೆದು
ಚೆನ್ನಾಗಿ ನೀರೆರೆದು
ಶಿಲಾರೂಪಿಯ ಮೈಯನೊರೆಸಬೇಕು
ಮಡಿ ಬಟ್ಟೆಯನು ಮತ್ತೆ ಉಡಿಸಬೇಕು
ಮಂತ್ರಗಳ ಹೇಳುತ್ತ
ಹೂಮಾಲೆ ತೊಡಿಸುತ್ತ
ಸರ್ವ ವಿಧದಲು ಪೂಜೆ ನೀಡಬೇಕು
ಅಲಂಕಾರದಲವನ ನೋಡಬೇಕು!
ಹೀಗೆ ಬರಿದೇ ಪೂಜೆ
ಮಾಡುತಿದ್ದರೆ ಸಾಕೆ?
ಹಣ್ಣು ಸಿಹಿಖಾದ್ಯಗಳ ಇರಿಸಬೇಕು
ದೇವರಿಗೆ ನೈವೇದ್ಯ ಮಾಡಬೇಕು
ಅವನು ತಿನ್ನುವುದಿಲ್ಲ
ಮತ್ತೆ,ನಮಗೇ,ಎಲ್ಲ
ಆದರೂ ಅವನೆದುರು ಇರಿಸಬೇಕು
ಭಕ್ತರಿಗೆ ದೊನ್ನೆಯಲಿ ಹಂಚಬೇಕು
ಪ್ರಸಾದಂಗಳ ತಿಂದು
ಗುಡಿಯಿಂದ ಹೊರಬಂದು
ನಾವು ಶುರು ಮಾಡುವೆವು ನಮ್ಮ ಕೆಲಸ
ಅನ್ನುವುದು,ತಿನ್ನುವುದು ಇಡಿಯ ದಿವಸ!
ಸುಮ್ಮನಿರುವನು ಅವನು ಗುಡಿಗಳಲ್ಲಿ
ತಿಳಿಸು ದೇವರೆ ಅರ್ಥ ನುಡಿಗಳಲ್ಲಿ!
೨. ಒಳ್ಳೆಯ ನುಡಿಗಳು ಉಚಿತ
ಒಳ್ಳೆಯ ನುಡಿಗಳು ಉಚಿತ
ಹಾಗೆ ನಡೆವುದೂ ಉಚಿತ!
ಚಿನ್ನ ಕೇಳದೆ ಬೆಳ್ಳಿ ಕೇಳದೆ
ಹಿರಿಯರು ಆಡಿದ ಮಾತು
ಎದೆಯಲ್ಲುಳಿದಿದೆ, ಅಚ್ಚರಿ ನನಗೆ
ಯಾವುದಿದ್ದೀತು ಧಾತು!
ವೇದಗಳಂತೆ, ಶಾಸ್ತ್ರಗಳಂತೆ
ರಾಗಿ ಬೀಸುವ ಹಾಡು
ರಾಮ, ಕೃಷ್ಣರ ಕಾವ್ಯಗಳೋದು
ವಚನದ ವೈಭವ ನೋಡು!
ಹೇಗೆ ಉಳಿದಿವೆ ಒಳ್ಳೆ ನುಡಿಗಳು
ಅಲ್ಲಿಂದಿಲ್ಲಿಯವರೆಗೆ!
ಕಳ್ಳರು ಕೊಳ್ಳೆ ಹೊಡೆಯಲಾರರು
ಬೆಳಕಿದೆ ಮಾತಿನ ಮರೆಗೆ!
ಸಂತರ ಪದಗಳು ಕಾದಿವೆ ನಮ್ಮ
ಅಲುಗದೆ ಅರಿಯಿರಿ, ಕೇಳಿ
ಹಾಗೆ ನಡೆದರೆ ಬೆಳಕು ಕಾಣುವೆವು
ಈಗ ನಮ್ಮದೇ ಪಾಳಿ!
ಒಳ್ಳೆ ನುಡಿಗಳ ಅಡಗಿಸಿಟ್ಟಿಹೆ
ಪುಟ್ಟ ಕವಿತೆಯಲ್ಲಿ
ಬೆಲೆ ಬಾಳುವವು, ಬೆಲೆ ಕಟ್ಟದಿರಿ
ಒಳಗೆ ಉಳಿಸಿಕೊಳ್ಳಿ
೩. ಏನೋ ಮಾತನು ಹೇಳುವುದಿತ್ತು


ಏನೋ ಮಾತನು ಹೇಳುವುದಿತ್ತು
ನೀನು ಹೊರಟುಬಿಟ್ಟೆ
ಇರುವತನಕವೂ ಕೆಲಸಕ್ಕಿಲ್ಲದ
ಮಾತಾಡಿದೆವಷ್ಟೆ
ಮುನಿಸು, ಜಗಳ, ಸಂಶಯ, ಸೊಕ್ಕು
ಮೆರೆದಾಡಿದವಷ್ಟೆ
ಎಲ್ಲಾ ಮುಗಿಸಿ ಹೊರಡುವುದನ್ನು
ಹೇಗೆ ಮರೆತುಬಿಟ್ಟೆ!
ಪ್ರೀತಿಯ ಒಂದೂ ಮಾತು ಹೇಳದೆ
ಸಮಯ ಕಳೆದುಬಿಟ್ಟೆ
ಗಾಳಿಮಾತುಗಳನಾಡುತ ಕೇಳುತ
ಕೆಟ್ಟೆ ಮತಿಗೆಟ್ಟೆ
ಅಂತರಂಗದಲಿ ಮಾತೊಂದಿತ್ತು
ಆಡದೆ ಒಳಗಿಟ್ಟೆ
ಈಗುಳಿದಿರುವವು ಬರಿಯ ಬಿಂಬಗಳು
ನೆನೆಯುತಿರುವೆನಷ್ಟೆ
ಏನೋ ಮಾತನು ಹೇಳುವುದಿತ್ತು
ಹೇಳಲಿಲ್ಲ ಅಷ್ಟೆ!
೪. ನೀವೆ ಚಿನ್ನವಾಗಿ!


ಚಿನ್ನ ಬಯಸಬೇಡಿ
ನೀವೆ ಚಿನ್ನವಾಗಿ!
ಚಿನ್ನದಂಥ ಮಾತುಗಳನಾಡಿರಿ
ಚಿನ್ನದ ಗಣಿಯಾಗಿ!
ಚಿನ್ನ ಬಯಸುವರು ನಿಮ್ಮನರಸುವರು
ಚಿಂತಾಮಣಿಯಾಗಿ!
ಚಿನ್ನದಂತಿರಲಿ ನಿಮ್ಮ ನಡತೆಯೂ
ಚಿನ್ನ ಹೆಚ್ಚುತಿರಲಿ
ಚಿನ್ನಕೆ ಪರಿಮಳ ಬಂದಂತಿರಲು
ಲೋಕ ಮೆಚ್ಚು ತಿರಲಿ !
ಚಿನ್ನದ ಬೆಲೆಯು ಏರುತಲಿರುವುದು
ಶುದ್ಧ ಚಿನ್ನವಾಗಿ
ನಿಮ್ಮ ನೆಲೆ ಹಾಗೆ ಏರುತಲಿರಲಿ
ಚಿನ್ನದಂತೆ ಬಾಳಿ!
ಚಿನ್ಮಯರಲ್ಲವೆ? ಚಿನ್ನದ ಜಿಂಕೆಯ
ಹಿಂದೆ ಓಡಬೇಡಿ
ಗುಲಗಂಜಿಗಳು ಅಳೆಯಲಾಗದು!
ಅಂಥ ಚಿನ್ನವಾಗಿ!
೫.ಕರುಣಾಳು ಎಂದು ಕೇಳಿರುವೆ


ಕರುಣಾಳು ಎಂದು ಕೇಳಿರುವೆ
ಕರುಣೆಯನೆ ನಂಬಿ ಬಂದಿರುವೆ
ಸಮಯಕ್ಕೆ ತಕ್ಕಂತೆ ಆಗಾಗ ಹೇಳಿರುವೆ
ಲೆಕ್ಕವಿರದಷ್ಟು ಸುಳ್ಳು
ಕೇಡು ಬಗೆದರೆ ಬಿಡದೆ ಸೇಡು ತೀರಿಸಿಕೊಂಡೆ
ಹಿಡಿದಿಲ್ಲ ನನಗೆ ಮಳ್ಳು!
ಆಸೆಗಳ ಹಿಂದಿದ್ದೆ ಸಿಟ್ಟಿನಲ್ಲಿ ಬೆಂದಿದ್ದೆ
ಸಂಸಾರ ಮೋಹ ನನಗೆ
ಮದದಿಂದ ಮೆರೆದಿದ್ದೆ ಮತ್ಸರದಲುರಿದಿದ್ದೆ
ಧನಲೋಭ ಕಡೆಯವರೆಗೆ!
ಘಾಸಿ ಮಾಡಿದುದುಂಟು ಮೋಸ ಮಾಡಿದುದುಂಟು
ದೂಷಿಸಿದೆ ಸಭ್ಯರನ್ನು
ಇದೇ ಬದುಕುವ ದಾರಿ ಎಂದು ನಡೆದವನು
ಬೇರೇನು ಹೇಳಲಿನ್ನು?
ನಿನ್ನ ಕರುಣೆಗೆ ನಾನು ಪಾತ್ರನಾಗುವೆನೇ?
ಸನ್ನಿಧಿ ಸಿಕ್ಕಬಹುದೆ?
ಸಕಲ ಅಪರಾಧಗಳ ಪಟ್ಟಿ ಒಪ್ಪಿಸಿದೆ
ಉಕ್ಕುಕ್ಕಿ ಬಿಕ್ಕುತಿರುವೆ




ಹೆಚ್ಚಿನ ಬರಹಗಳಿಗಾಗಿ
ಹೂರಣವಿಲ್ಲದ ಹೋಳಿಗೆ
ಕನ್ನಡ ಕಾಂತಾರ..
ಸಂಕ್ರಾಂತಿ