ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಣಿಮುತ್ತುಗಳು

“ಹಲವು ವರ್ಷಗಳ ಕಾಲ ನಾನು ಓದುತ್ತಾ ಬಂದಿರುವ ಚೊಕ್ಕಾಡಿಯವರ ಯಾವ ಪದ್ಯವು ನನಗೆ ಕಳಪೆ ಎನ್ನಿಸಿದ್ದಿಲ್ಲ . ಅವರಿಂದ ನಾನು ಹಿಗ್ಗುತ್ತಲೇ ಬೆಳೆದಿದ್ದೇನೆ. ಚೊಕ್ಕಾಡಿಯವರ ಎಲ್ಲ ಪದ್ಯಗಳಲ್ಲೂ ಸ್ಪಷ್ಟತೆಗಾಗಿ ಕೆಲಸ ಮಾಡುವ ಕಸುಬುಗಾರಿಕೆ ಇರುತ್ತದೆ. ತಾನು ಹೇಳಿದ್ದು ಕೊನೆಯ ಪಕ್ಷ ತನಗಾದರೂ ಸ್ಪಷ್ಟವಾಗಿ ಇರಬೇಕೆಂದು ಬಯಸುವುದು ಶಿಷ್ಟಾಚಾರದ ಒಂದು ಅಗತ್ಯ ನಡವಳಿಕೆ ಎಂದು ನಾನು ತಿಳಿದಿದ್ದೇನೆ. ಚೊಕ್ಕಾಡಿ ಈ ಶಿಷ್ಟಾಚಾರವನ್ನು ಎಲ್ಲಿಯೂ ಬಿಡುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ನಾವು ಕಾಣುವ ಎರಡು ದೊಡ್ಡ ಗುಣಗಳು: ಅವು ವಿನಯ ಮತ್ತು ಪ್ರಾಮಾಣಿಕತೆ. ಈ ಎರಡು ಗುಣಗಳು ಇವೆ ಎಂದು ಗ್ಯಾರಂಟಿ ಆದಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿನಿಂದ ಆಲಿಸಲು ತಯಾರಾಗುತ್ತೇವೆ. ಹೀಗೆ ನಾವು ಆಲಿಸಬಹುದಾದ ನಮ್ಮ ನಡುವಿನ ಕವಿ ಚೊಕ್ಕಾಡಿಯವರು. ಅಡಿಗರ ನಂತರ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರೆಂದು ಈ ಟಿಪ್ಪಣಿಗಳ ಮುಖಾಂತರ ಗುರುತಿಸಲು ನನಗೆ ಸಂತೋಷವಾಗುತ್ತದೆ.
– ಪ್ರೊ. ಯು ಆರ್ ಅನಂತಮೂರ್ತಿ
“ಚೊಕ್ಕಾಡಿಯ ಹಕ್ಕಿಗಳು”
ಸಮಗ್ರ ಕವಿತೆಗಳ ಸಂಕಲನ ದ ಬೆನ್ನು ಪುಟದಿಂದ.

ಯಶಸ್ಸೆನ್ನುವುದು ಅತ್ಯಂತ ಅಪಾಯಕಾರಿ. ಒಮ್ಮೆ ಯಶಸ್ವಿಯಾದೆವೆಂದರೆ ನಮ್ಮನ್ನು ನಾವೇ ನಕಲು ಮಾಡಲು ಆರಂಭಿಸುತ್ತೇವೆ. ನಮ್ಮನ್ನು ನಾವೇ ನಕಲು ಮಾಡುವುದು ಇತರರನ್ನು…