ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾಣಸಿಗುವುದೆಂದು?

ದೇವರಾಜ್ ನಾಯಕ
ಇತ್ತೀಚಿನ ಬರಹಗಳು: ದೇವರಾಜ್ ನಾಯಕ (ಎಲ್ಲವನ್ನು ಓದಿ)

ವ್ಯವಧಾನವಿಲ್ಲದ ಬದುಕಿಗೊಂದು
ಪೂರ್ಣವಿರಾಮ,
ಇನ್ನೆಷ್ಟು ದಿನ?
ಅಲೆಗಾಗಿ ಕಾದು ಬೇಸತ್ತ ಬರಹ
ಮಲಗಿದೆ ಮರಳಮೇಲೆ.

ಕಾಣಸಿಗುವುದೆಂದು?
ನೂಕುನುಗ್ಗಲ ಪಯಣದಲ್ಲಿ
ನಾಸಿಕ ಕುಹರದೊಳ್ ಗಬ್ಬೆಬ್ಬಿಸಿದ
ಬೆವರ ಆಘ್ರಾಣ,ಮಾಸಿ,
ನಿಲ್ದಾಣ ಕಂಡರಳುವ ಕಂಗಳು!

ಕೂಸ ಕೈಹಿಡಿದು ಸ್ಕೂಲ್ನ
ಗೇಟ್ ನ ಮರೆಯಲ್ಲಿ ನಿಂತು
ದೇಶಗೆದ್ದ ಸಾಮ್ರಟನಂತೆ
ಮಂದಹಾಸದ ಮೊಗಗಳು
ಬೀಸುವ ಕೈಗಳನ್ನು!

ಬೇಸತ್ತ ಆಫೀಸ್ನ ಗೋಡೆಗಳು,
ಪಾಚಿಕಟ್ಟ ಊರ ಅರಳಿಕಟ್ಟೆ
ಕೇಳುವುದೆಂದು ಅವರಿವರ
ವದಂತಿಯ ಮಹಾಪೂರವನ್ನು!

ಒಡಲ ಖಾಲಿಮಾಡಿ ಕೂತ,
ತನ್ನೊಡಲ ತುಂಬಿ
ತಂಗಳ ಟಿಫನ್ ಬಟ್ಟಲು..
ಹಸಿವ ನೀಗಿಸಲು ಸಜ್ಜಾಗುವುದನ್ನು!

ಬಸ್ ನಿಲ್ದಾಣದ ಸುತ್ತ
ಚಿಟ್ಟೆಗಳ ಕಾಣ ಬರುವ ,
ಲೋನ್ ನಲ್ಲಿ ಕೊಂಡ ಬುಲೆಟ್ಗಳು
ಗುಡುಗುವುದನ್ನ , ಮನದಲ್ಲಿ
ಮಂಡಿಗೆ ತಿಂದಂತೆ ನಾಚಿ ನೀರಾಗೋ ಚಿಟ್ಟೆಗಳನ್ನು !

ಆದರೂ,
ಭಾವಗಳ ಪೂರ್ಣತೆಯಲ್ಲಿ
ನಗುಮೊಗದಿ ಕೆಸರಲ್ಲೂ ,
ಸ್ವಾಭಿಮಾನದ ಬದುಕ ಪಯಣಿಗನಂತೆ
ಗುಡಿ ಸೇರ್ವ ತಾವರೆಯಂತೆ
ಕಹಿ ಬರಹ ಅಳಿಸುವ ಅಲೆಯ
ನಿರೀಕ್ಷೆಯ ಹಪಹಪಿಸುತಿಹುದು ಜಗ.