ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾಂಸ್ಕೃತಿಕ ನಗರಿಯಲ್ಲೊಂದು ಶಿಕ್ಷಣ ಕ್ರಾಂತಿ

ಟಿ. ವಿ. ನಟರಾಜ್ ಪಂಡಿತ್

“ಸಂತನೆಂದರೆ ಯಾರು” – ದಿವ್ಯತೆಯ ಅರಿತವನು, ಸರಳತೆಯ ಸೂತ್ರದಲಿ ಸುಖವ ಕಂಡವನು” ಎಂಬ ಸಾಹಿತಿ ಕೆಸಿ ಶಿವಪ್ಪನವರ ಹಾಡು. ಮತ್ತು “ಎತ್ತ ನೋಡಿದರತ್ತ ನಿನ್ನದೇ ಸಿರಿ ಬೆಳಕು- ನಾ ನಡೆಯುವ ಹಾದಿ ನಿನ್ನದೇ ತಂದೆ ಎಂಬ ಸಾಲುಗಳು ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳನ್ನು ನೆನೆದಾಗ ಮನದಾಳದಿಂದ ತನ್ನಿಂದ ತಾನೇ ಹೊರಹೊಮ್ಮುತ್ತದೆ.

ಶ್ರೀಗಳು ಸಮಾಜ ಸೇವೆಯನ್ನೇ ಉಸಿರಾಗಿ ಬಾಳಿದವರು. ಅವರ ದೂರದರ್ಶಿತ್ವ- ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ; ಧ್ಯೇಯ ಮಹಾ ಜಲಧಿ ಎಡಗೆ ಸಲಿಲವಾಗಿ ಹರಿಯುವ; ಲೋಕಹಿತದ ಕಾಯಕ; ನಾಡಿಗ ಭಯದಾಯಕ; ವ್ಯಕ್ತಿ ವ್ಯಕ್ತಿ ಆಗಲಿಂದು ನೈಜ ರಾಷ್ಟ್ರ ಸೇವಕ; ದೀನದಲಿತ ಸೇವೆಯೇ ಪರಮ ಆರಾಧನೆ; ಸಾಕು ಬರಿಯ ಬೋಧನೆ-ಬೇಕು ಹಿರಿಯ ಸಾಧನೆ; ದಿಟದಿ ನಾವು ಅಳಿಸಬೇಕು ನುಡಿಯ ನಡೆಯ ಅಂತರ ಎಂಬ ದೇಶಭಕ್ತಿಯ ಗೀತೆಯನ್ನು ಪೂರ್ಣ ಆಚರಣೆಯಲ್ಲಿ ತಂದವರು.

ಶ್ರೀ ನಾರಾಯಣ ಸಾಯುಜ್ಯವನ್ನು ಹೊಂದಿರುವ ಶ್ರೀ ವಿಶ್ವೇಶತೀರ್ಥ ಮಹಾಸ್ವಾಮಿಗಳ ದಿವ್ಯ ಸ್ಮರಣೆಯೊಂದಿಗೆ.
ಮನಸಾ ಸತತಂ ಸ್ಮರಣೀಯಂ- ವಚಸಾ ಸತತಮ್ ವದನೀಯಂ
ಲೋಕಹಿತಮ್ ಮಮಕರಣಿಯಂ. ಲೋಕಹಿತಮ್ ಮಮಕರಣಿಯಂ
||
ಘನಾಂಧಕಾರೇ ಬಂಧುಜನಾ ಯೇ ಸ್ಥಿತಾ ಗಹ್ವರೇ ತತ್ರಾ ಮಯಾ ಸಂಚರಣೀಯಂ ಲೋಕಹಿತಂ ಮಮ ಕರಣೀಯಮ್ ||

ಈ ಹಾಡಿದ ವಿಚಾರಗಳೆಲ್ಲವೂ ಶ್ರೀಗಳ ಮನಸ್ಸಿನಲ್ಲಿ ಚಿಂತನ ಮಂಥನ ನಡೆದು. ಸಾಂಸ್ಕೃತಿಕ ನಗರಿಯಲ್ಲಿ “ಪೇಜಾವರ ಸಾರ್ವಜನಿಕ ವಿದ್ಯಾರ್ಥಿನಿಲಯ” ಸ್ಥಾಪನೆಗೆ ಮುನ್ನುಡಿ ಬರೆಯಲು ಕಾರಣವಾಗಿದೆ. ಅವರು ಹಚ್ಚಿದ “ಸೇವೆಯ ಹಣತೆ” (ನರಸೇವಾ- ನಾರಾಯಣ ಸೇವಾ) ಬೆಳಕು ಪ್ರಜ್ವಲವಾಗಿ ಬೆಳಗುತ್ತಿದೆ. ಅನೇಕ ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡುತ್ತಿದೆ. ಈ ಬೆಳಕು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗದೆ ಬಹುದೂರದ ಮೇಘಾಲಯ-ಮಣಿಪುರದ ಬಡ ಮಕ್ಕಳ ಪಾಲಿಗೂ ಆಶಾಕಿರಣವಾಗಿದೆ; ದಿಕ್ಸೂಚಿಯಾಗಿದೆ ಎಂಬುದು ಅತ್ಯಂತ ಹೆಮ್ಮೆಯ ಸಂಗತಿ. ಈ ಮಹತ್ಕಾರ್ಯವನ್ನು ಈಗಿನ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಯಾವುದೇ ಜಾತಿ ಜನಾಂಗದ ವಿದ್ಯಾರ್ಥಿಯೇ ಆಗಲಿ ತನ್ನಲ್ಲಿ ಅಪಾರವಾದ ದೈವದತ್ತ ಪ್ರತಿಭೆ, ಆಸಕ್ತಿ ಇದ್ದರೂ – ಕೇವಲ ಬಡತನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗಬಾರದು; ಜೀವನದಲ್ಲಿ ಉತ್ತಮ ಸ್ಥಾನವನ್ನು ಹೊಂದುವ ಅವಕಾಶದಿಂದ ವಂಚಿತರಾಗಬಾರದು. ಇಂತಹ ಬಡತನದ ಹಿನ್ನಲೆಯ ವಿದ್ಯಾರ್ಥಿಗಳಿಗೆ ಉತ್ತಮವಾದ ಊಟ,ವ್ಯವಸ್ಥಿತವಾದ ವಸತಿ ಮತ್ತು ಶಿಕ್ಷಣ ವ್ಯವಸ್ಥೆ ಕಲ್ಪಿಸಿದರೆ ಅವರು ಉನ್ನತ ವ್ಯಕ್ತಿಗಳಾಗಿ, ಉತ್ತಮ ಪ್ರಜೆಗಳಾಗಿ, ಆದರ್ಶ ನಾಗರೀಕರಾಗಿ ರೂಪುಗೊಳ್ಳುತ್ತಾರೆ ಎಂಬ ಕನಸಿನೊಂದಿಗೆ 2013 ರಲ್ಲಿ ಪ್ರಾರಂಭವಾದ “ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯ” ಮೈಸೂರಿನಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ನೂರಾರು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿದೆ ಮತ್ತು ಮಾಡುತ್ತಲೂ ಇದೆ.

ಈ ಹಿನ್ನೆಲೆಯಲ್ಲಿ ಸದರಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಸಂಕ್ಷಿಪ್ತ ಪರಿಚಯ 2013 ರಲ್ಲಿ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ಸುತ್ತೂರು ಮಠಾಧೀಶರಾದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ನೆರವೇರಿಸಿದರು.

ಈ ವಿದ್ಯಾರ್ಥಿ ನಿಲಯದ ಕಟ್ಟಡದಲ್ಲಿ 3 ಟ್ರಸ್ಟ್ ಗಳಿಂದ ಆಯ್ಕೆಗೊಂಡ ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ. ವಸತಿ ಮತ್ತು ಶಿಕ್ಷಣದ ಸೌಲಭ್ಯ ದೊರೆಯುತ್ತಿದೆ.
ಮೂರೂ ಟ್ರಸ್ಟ್ ಗಳ ಕಾರ್ಯವಿಧಾನ ಮತ್ತು ಸಾಧನೆ ಗುರಿಯು-ಬಡ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಉಚಿತವಾಗಿ ದೊರೆಯುವಂತೆ ಮಾಡುವುದೇ ಆಗಿದೆ.

1) ಶ್ರೀ ಪೇಜಾವರ ಸಾರ್ವಜನಿಕ ಟ್ರಸ್ಟ್, ಮೈಸೂರು
ಈ ಟ್ರಸ್ಟ್ ಆಶ್ರಯದಲ್ಲಿ ಹಾಲಿ ವಸತಿ ನಿಲಯದಲ್ಲಿ 2ನೇ ತರಗತಿಯಿಂದ ಇಂಜಿನಿಯರಿಂಗ್ ವರೆಗೆ ವಿವಿಧ ತರಗತಿಗಳಲ್ಲಿ ಓದುತ್ತಿರುವ 53 ವಿದ್ಯಾರ್ಥಿಗಳಿದ್ದಾರೆ.
ಇವರೆಲ್ಲರೂ ಭಾರತದ ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ಮಣಿಪುರ ಮುಂತಾದ ಗುಡ್ಡಗಾಡು ಪ್ರದೇಶದ ಬಡ ಮಕ್ಕಳಾಗಿರುತ್ತಾರೆ. ಇವರೆಲ್ಲರೂ ತಮ್ಮ ಶಿಕ್ಷಣವನ್ನು ಮೈಸೂರು ನಗರದ ಶಾರದಾ ವಿಲಾಸ, ಬಿಎಸ್ಎಸ್ ವಿದ್ಯೋದಯ ವಿಜಯ ವಿಠಲ ಕಾಲೇಜು, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ, ಬನುಮಯ್ಯ ಕಾಲೇಜ್, ಲಕ್ಷ್ಮಿಪುರಂ ಪಿಯು ಕಾಲೇಜ್, ಜೆಸಿಇ, ಎನ್ ಐ ಇ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರೆಲ್ಲರಿಗೂ ಸುಸಜ್ಜಿತವಾದ ವಸತಿ ವ್ಯವಸ್ಥೆ ಸಲುವಾಗಿ 48 ಕೊಠಡಿಗಳಿವೆ. ಸ್ನಾನಗೃಹ, ಪ್ರಾರ್ಥನಾ ಮಂದಿರ, ಭೋಜನ ಶಾಲೆ, ಗ್ರಂಥಾಲಯ, ಕಂಪ್ಯೂಟರ್ ರೂಮ್, ಕಚೇರಿ, ಆಡಳಿತ ಕೊಠಡಿ ಹೊಂದಿದೆ.

ಈಗಾಗಲೇ ಈಶಾನ್ಯ ರಾಜ್ಯಗಳ 28 ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿದ್ದಾರೆ. ಮತ್ತು ಹಾಸ್ಟೆಲ್ಲಿಗೆ ವರ್ಷವಾರು ಹೊಸ ವಿದ್ಯಾರ್ಥಿಗಳು ಸೇರ್ಪಡೆ ಆಗುತ್ತಿದ್ದಾರೆ. ಈ ನಿರಂತರ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆದಿದೆ.

2) ಓಜಸ್ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್
ಮೈಸೂರು ನಗರದ ಜಿಲ್ಲಾ ಸಂಘ ಕಾರ್ಯಾಲಯ”ಮಾಧವ ಕೃಪಾ” ಟ್ರಸ್ಟ್ ನ ಆಡಳಿತ ಕಚೇರಿ ಆಗಿದೆ. ಪೇಜಾವರ ಸಾರ್ವಜನಿಕ ಟ್ರಸ್ಟ್ ಹೊಂದಿರುವ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಸಮಾನ ವಿಚಾರಧಾರೆಯನ್ನು ಹೊಂದಿದೆ.
ಮೈಸೂರು ಜಿಲ್ಲೆ ಒಳಗೊಂಡಂತೆ ರಾಜ್ಯದ ಇತರ ಜಿಲ್ಲೆಗಳ ಬಡ ವಿದ್ಯಾರ್ಥಿಗಳಿಗೆ ಊಟ, ವಸತಿ, ಪುಸ್ತಕಗಳ ವೆಚ್ಚ, ಬಸ್ ಪಾಸ್ ವೆಚ್ಚ, ಶಾಲಾ ಶುಲ್ಕಗಳನ್ನು ಭರಿಸುವ ಮೂಲಕ ಉತ್ತಮ ಶಿಕ್ಷಣ ಒದಗಿಸುವ ಆದ್ಯತೆ ಹೊಂದಿದೆ.

2015 ರಿಂದ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದ್ದು ಪ್ರಸ್ತುತ 43 ಮಂದಿ ವಿದ್ಯಾರ್ಥಿಗಳಿಗೆ ಮೈಸೂರಿನ ವಿವಿಧ ಕಾಲೇಜುಗಳಲ್ಲಿ PUC ಶಿಕ್ಷಣ ವ್ಯವಸ್ಥೆ ಕಲ್ಪಿಸಿದೆ.
ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳ ಆಯ್ಕೆ ವಿಧಾನ – ಶೈಕ್ಷಣಿಕ ಅರ್ಹತೆ -ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ 70% ಮತ್ತು ಮೇಲಿನ ಅಂಕ ಪಡೆದಿರಬೇಕು.
ಪ್ರವೇಶ ಪರೀಕ್ಷೆ ವಿಷಯ-ಸಾಮಾನ್ಯ ವಿಜ್ಞಾನ, ಇಂಗ್ಲಿಷ್ ಗಣಿತ, ಸಾಮಾನ್ಯ ಜ್ಞಾನ. (GK), ಸಾಮಾನ್ಯ ಇತಿಹಾಸ ಪರಿಚಯ ಹೊಂದಿರಬೇಕು.
ಆಯ್ಕೆಯಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಓದು ಮುಂದುವರೆಸಲಾಗದ ಪರಿಸ್ಥಿತಿ, ಮನನ ಮಾಡಿಕೊಂಡು ಹಾಸ್ಟೆಲ್ ಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ.

3) ರಾಷ್ಟ್ರ ಭಾರತಿ ಟ್ರಸ್ಟ್
ಆಡಳಿತ ಕಚೇರಿ, ಮಾಧವಕೃಪಾ, ಮೈಸೂರು
ಮೇಲಿನ ಎರಡೂ ಟ್ರಸ್ಟ್ ಗಳಂತೆಯೇ, ಬಡತನದ ಹಿನ್ನೆಲೆಯ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು. SSLC ನಂತರದ ಅಂದರೆ PUC ಮತ್ತು ಸ್ನಾತಕೋತ್ತರ ಅಂದರೆ BE ಕೊರ್ಸ್ ಮುಂತಾದ ವಿದ್ಯಾರ್ಥಿಗಳಿಗೆ ಮಾತ್ರ.ಪ್ರವೇಶ ಪರೀಕ್ಷೆ ಇಲ್ಲ. ನೇರ ಸಂದರ್ಶನ ಮೂಲಕ ಆಯ್ಕೆ. SSLC ಯಲ್ಲಿ 70% ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ.

ಈ ಎಲ್ಲಾ ಕಾರ್ಯಗಳು ವ್ಯಕ್ತಿ ನಿರ್ಮಾಣದ ಪರಮ ಗುರಿಯನ್ನೇ ಹೊಂದಿದೆ.
ಸಂಘದ ಒಂದು ಹಾಡು ನೆನಪಿಗೆ ಬರುತ್ತದೆ
ದನಗಾಹಿ ಬಾಲಕರು ರಾಷ್ಟ್ರರಥ ಚಾಲಕರು
ಆದಾರು, ಬೆಳೆದಾರು, ಧ್ಯೇಯ ಜಲ ಎರೆದಾಗ
ಇದರ ಆಶಯ ಈ ವಿದ್ಯಾರ್ಥಿ ನಿಲಯದಲ್ಲಿ “ಸಾಕಾರವಾಗುತ್ತಿದೆ”.

ಎಲ್ಲಾ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯಶಾಖೆ ಕಡ್ಡಾಯ. ಇದಲ್ಲದೆ ಯೋಗಾಭ್ಯಾಸ, ದೇವರ ನಾಮ/ ಶ್ಲೋಕ/ ಸ್ತೋತ್ರಗಳ ನಿತ್ಯ ಅಭ್ಯಾಸ; ಆಸಕ್ತರಿಗೆ ಸಂಗೀತಭ್ಯಾಸ; ವಿಶೇಷ ಕ್ರೀಡಾ ತರಬೇತಿ; ನಿಯಮಿತವಾಗಿ ಸಾಮೂಹಿಕ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು; ಪಾಕ ತಯಾರಿಕಾ ತರಬೇತಿ; ನಿಸರ್ಗ ಸಂರಕ್ಷಣೆ ದೃಷ್ಟಿಯಿಂದ ಸಸಿ ನೆಡುವುದು ಹಾಗೂ ಪೋಷಿಸುವುದು; ಜ್ಞಾನಾರ್ಜನೆಗೆ ಪೂರಕವಾಗುವ ಸ್ಥಳಗಳ ಭೇಟಿ-ಪ್ರವಾಸದ ಅನುಭವ ಪಡೆಯುವುದು; ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು; ನುರಿತ ಶಿಕ್ಷಕರಿಂದ ಹೆಚ್ಚಿನ ತರಬೇತಿ; ಸಮಾಜ ಸೇವಾ ಸಂಸ್ಥೆಯಾದ Make A Difference (MAD) ನಿಂದ ಶಾಲಾ ವಿದ್ಯಾರ್ಥಿಗಳಿಗೆ ವಾರಾಂತ್ಯದಲ್ಲಿ “ಶಿಕ್ಷಣ ಕೌಶಲ್ಯ ತರಬೇತಿ”; ನಗರದಲ್ಲಿನ ಪ್ರಮುಖ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು; ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು; ಇತ್ಯಾದಿ ಹತ್ತು ಹಲವಾರು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಇದರ ಫಲವಾಗಿ ವಿದ್ಯಾರ್ಥಿ ನಿಲಯದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಸರ್ಕಾರದ ಮತ್ತು ಸರ್ಕಾರೇತರ ಹುದ್ದೆಗಳನ್ನು ಹೊಂದುವ ಮೂಲಕ ಭರವಸೆಯ ಹೊಂಗಿರಣ ಮೂಡಿಸಿದ್ದಾರೆ.

ವಿದ್ಯಾರ್ಥಿನಿಲಯವು ಬೃಹತ್ ಕಟ್ಟಡವನ್ನು ಹೊಂದಿದ್ದು 240 ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಸ್ಥಳಾವಕಾಶ ಹೊಂದಿದೆ.

ಈ ಮೇಲಿನ ಎಲ್ಲಾ ಚಟುವಟಿಕೆಗಳು; ಸೇವಾಕಾರ್ಯಗಳು ಸರ್ಕಾರದ ಯಾವುದೇ ಅನುದಾನವಿಲ್ಲದೆ – ಕೇವಲ ಸಮಾಜದಲ್ಲಿನ ಸಜ್ಜನ ಬಂಧುಗಳು ಹಾಗೂ ದಾನಿಗಳ ಸಹಾಯದಿಂದಲೇ ನಿರ್ವಹಿಸಲಾಗುತ್ತಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ವಿದ್ಯಾರ್ಥಿನಿಲಯದ ಮೂರೂ ಟ್ರಸ್ಟ್ ನ ಆರ್ಥಿಕ ವಹಿವಾಟುಗಳು ನಿಯಮಿತವಾಗಿ ಮತ್ತು ನಿಗದಿತವಾಗಿ ಲೆಕ್ಕ ಪರಿಶೋಧನೆಗೆ ಒಳಪಟ್ಟು. ಪಾರದರ್ಶಕತೆಯ ದೃಢಿಕರಣ ಪಡೆದಿದೆ.

ಮೈಸೂರಿನ ನಗರ ಸಾರಿಗೆ ಬಸ್ ಗಳಲ್ಲಿ ಸಂಚರಿಸುವ ನಾಗರೀಕರಿಗೆ ಈಶಾನ್ಯ ರಾಜ್ಯಗಳ ಮುದ್ದಾದ ಪುಟ್ಟ ಮಕ್ಕಳು ಪುಸ್ತಕಗಳ ಚೀಲದೊಂದಿಗೆ ನೋಡಿದಾಗ ಇವರುಗಳು ಯಾರು ಎಂಬ ಸಹಜ ಕುತೂಹಲ ಮೂಡುತ್ತದೆ. ಆದರೆ ನಮ್ಮ ದೇಶದ ಅವಿಭಾಜ್ಯ ಅಂಗವೇ ಆಗಿರುವ ಮೇಘಾಲಯ-ಮಣಿಪುರ ರಾಜ್ಯಗಳಲ್ಲಿ ಅನ್ಯಾನ್ಯ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗಿರುವ ಬಡ ಮಕ್ಕಳಿಗೆ ಅನ್ನ ವಸತಿ ಶಿಕ್ಷಣದ ನೆಲೆಯನ್ನು ಒದಗಿಸುತ್ತಿರುವ ಆಶ್ರಯ ತಾಣವೇ “ಶ್ರೀ ಪೇಜಾವರ ಸಾರ್ವಜನಿಕ ವಿದ್ಯಾರ್ಥಿನಿಲಯ “.

ರಾಜ್ಯದ ಬೇರೆ ಊರಿನ ನಾಗರಿಕರಿರಲಿ, ಮೈಸೂರಿನ ಅನೇಕರಿಗೇ ಈ ವಿದ್ಯಾರ್ಥಿ ನಿಲಯದಲ್ಲಿ ಸದ್ದಿಲ್ಲದೆ ನಡೆದಿರುವ ಶಿಕ್ಷಣ ಕ್ರಾಂತಿಯ ಪರಿಚಯ ಇದ್ದಂತಿಲ್ಲ. ಇದನ್ನು ಪರಿಚಯಿಸುವ ಪ್ರಯತ್ನವೇ ಈ ಲೇಖನದ ಆಶಯ. ಇಲ್ಲಿನ ಶೈಕ್ಷಣಿಕ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಮೈಸೂರಿನ ಮಹಾಜನತೆ, ದಾನಿಗಳು, ಸಜ್ಜನ ಬಂಧುಗಳು ವಿದ್ಯಾರ್ಥಿನಿಲಯದ ಬೆಳವಣಿಗೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತನು-ಮನ-ಧನ ಪೂರ್ವಕವಾಗಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಇಲ್ಲಿನ ಶ್ರೇಷ್ಠ ಸೇವಾ ಕಾರ್ಯವನ್ನು ಇನ್ನೂ ಹೆಚ್ಚು ಎತ್ತರಕ್ಕೆ ಕೊಂಡೊಯ್ಯೋಣ.

ಶ್ರೀ ನಾರಾಯಣ ಸಾಯುಜ್ಯವನ್ನು ಹೊಂದಿರುವ ವಿಶ್ವೇಶತೀರ್ಥರ ಕನಸನ್ನು ನನಸು ಮಾಡೋಣ.

ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯ
ಜೆ. ಪಿ. ನಗರ, ಮೈಸೂರು
ದೂರವಾಣಿ ಸಂಖ್ಯೆ 0821-2371511

ದೇಣಿಗೆಯನ್ನು ನೀಡುವವರು
ಕರ್ನಾಟಕ ಬ್ಯಾಂಕ್
ನಜರಬಾದ್ ಶಾಖೆ, ಮೈಸೂರು.
ಉಳಿತಾಯ ಖಾತೆ ಸಂಖ್ಯೆ 712500100482001
IFSC KARB0000571

ದೇಣಿಗೆ ನೀಡುವವರಿಗೆ ಆದಾಯಕರ ವಿನಾಯಿತಿ ದೊರೆಯಲಿದೆ.