ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಮತಿ ತಾರಾಮತಿ ಕುಲಕರ್ಣಿ
ಇತ್ತೀಚಿನ ಬರಹಗಳು: ಶ್ರೀಮತಿ ತಾರಾಮತಿ ಕುಲಕರ್ಣಿ (ಎಲ್ಲವನ್ನು ಓದಿ)

ಶಕುಂತಲೆ ನಾನಾಬಗೆಯಾಗಿ ನೆನಪಿಸಲು ಪ್ರಯತ್ನ ಮಾಡಿದರೂ ಅವಳನ್ನು ಮೋಸಗಾರ್ತಿ ಎಂದ..
ದುಷ್ಯಂತ ಈಗ ಉಂಗುರ ಕಂಡಾಗ ಅಭಿಜ್ಞಾನ ಆಗಿ, ಶಕುಂತಲೆಯನ್ನು ನೋಯಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾನೆ.

ರಾಜ ತನ್ನ ಮಿತ್ರ ವಿದೂಷಕನೊಂದಿಗೆ ಉದ್ಯಾನವನ್ನು ಪ್ರವೇಶಿಸುತ್ತಿರುವನು.
ರಾಜನ ಮೈಮೇಲೆ ಇರಬೇಕಾದ ಯಾವ ಆಭೂಷಣಗಳೂ ಇಲ್ಲ. ಎಡತೋಳಿನಲ್ಲಿ ಕಂಕಣ ಒಂದು ಮಾತ್ರ ಕಾಣುತ್ತಿತ್ತು. ಉಳಿದೆಲ್ಲವನ್ನು ತ್ಯಜಿಸಿದ್ದಾನೆ.
ಎಡ ತೋಳಿನಲ್ಲಿ ಕಂಕಣ ಧರಿಸಿದ್ದು
ಅರಸನ, ವಿಚಲಿತ ಮನಸ್ಸನ್ನು ಸೂಚಿಸುತ್ತದೆ. ಯಕೆಂದರೆ
” ಪುಷಸ್ಯ ಏಕ ,ಕಕಟ ಧಾರಣಂ ದಕ್ಷಿಣ ಹಸ್ತೇನ ಏವ ಕರ್ತವ್ಯಮ್”

” ಈ ಆಭರಣವನ್ನು ಬಲತೋಳಲ್ಲೇ ಧರಿಸಬೇಕು” ಎಂಬ ಶಾಸ್ತ್ರ ಇದೆ.

ಶಕುಂತಲೆಯ ವಿರಹದಿಂದ ಸಂಭ್ರಾಂತನಾದ ದುಷ್ಯಂತ, ಮರೆತು ಎಡಗೈಯಲ್ಲಿ ಧರಿಸಿರುವನು.
ರಾತ್ರಿಯಲ್ಲ ನಿದ್ದೆ ಇಲ್ಲದೇ ಕಣ್ಣುಗಳು ಕೆಂಪಾಗಿವೆ.

ಶಕುಂತಲೆಯ ವಿಯೋಗದ ಚಿಂತೆ ಹಾಗೂ ದು:ಖದಿಂದ ನಿಟ್ಟುಸಿರು ಬಿಡುತ್ತಾ ಇರುವ ದುಷ್ಯಂತನ ತುಟಿ ಉಸಿರಿನ ಬಿಸಿಯಿಂದ ಕೆಂಪಾಗಿದೆ.

” ಹೀಗೆ ದು:ಖದಿಂದ ಪರಿತಾಪ‌ ಹೊಂದಿದವನಾದರೂ ಅರಸನ ತೇಜಸ್ಸು , ಅಮೂಲ್ಯ ರತ್ನದಂತೆ ಹೊಳೆಯುತ್ತಿದೆ ” ಎಂದು ಕಂಚುಕಿಗೆ
ರಾಜನ ಮೇಲೆ ಅನುಕಂಪ, ಅಭಿಮಾನ ಎರಡೂ ಉಂಟಾಗಿವೆ.

ದುಷ್ಯಂತನ ಸೌಂದರ್ಯ ಕಂಡು, ಸಾನುಮತಿ ಕೂಡ ಅಂದುಕೊಂಡಳು
” ಓಹೋ, ಮಹಾಮಣಿಯಂತೆ ಹೊಳೆಯುತ್ತಿರುವ ಈ ತೇಜಸ್ವಿಗೆ ಶಕುಂತಲೆ ಮಾರು ಹೋದದ್ದರಲ್ಲಿ ಆಶ್ಚರ್ಯವೇನಿಲ್ಲ! ಅದಕ್ಕೇ ,ಪಾಪ ಅವಮಾನವನ್ನು ಸಹಿಸಿಕೊಂಡಳು.”

“ಪ್ರಥಮಂ ಸಾರಂಗಾಕ್ಷ್ಯಾ ಪ್ರಿಯಯಾ
ಪ್ರತಿಬೋಧ್ಯಮಾನಮ್ ಅಪಿ ಸುಪ್ತಮ್
ಅನುಶಯ ದು:ಖಾಯೇದಂ
ಹತಹೃದಯಂ ಸಂಪ್ರತಿ ವಿಬುದ್ಧಮ್”

” ನನ್ನ ಪ್ರಿಯತಮೆಯ, ಹರಿಣಾಕ್ಷಿಯ ನೋಟ ನನ್ನನ್ನು ಎಚ್ಚರಗೊಳಿಸಲು ಪ್ರಯತ್ನ ಮಾಡಿದರೂ ಸಹ ನಾನು ನಿದ್ರವಶನಾದೆ. ಆದರೆ ನಿಜಸಂಗತಿ ತಿಳಿದಾಗ ಹತಹೃದಯನಾಗಿ ಎಚ್ಚೆತ್ತು ಪಶ್ಚಾತ್ತಾಪದಿಂದ ದಗ್ಧನಾಗಿರುವೆ.”
ಎಂದು ತನ್ನ ಮನಸ್ಥಿತಿಗೆ ತಾನೇ ಮರುಗುತ್ತಾ ಇದ್ದಾನೆ ದುಷ್ಯಂತ.

ಇವನನ್ನು ಶಕುಂತಲಾ ವ್ಯಾಧಿಯಿಂದ ಹೇಗೆ ಗುಣಪಡಿಸಬಹುದು ಎಂಬ ಚಿಂತೆ ವಿದೂಷಕನನ್ನು ಕಾಡುತ್ತಿದೆ.

ಶಕುಂತಲೆಯನ್ನು ದುಷ್ಯಂತ ಸಮೀಪಿಸಲು ಭೃಂಗ ಕಾರಣ ಆಗಿತ್ತಲ್ಲವೇ ಮೊದಲ ಅಂಕದಲ್ಲಿ!
ಮಧುವಿನ ಆಕರ್ಷಣೆಯಿಂದ ಭೃಂಗ ಕಮಲದಲ್ಲಿ ಸೆರೆ ಬಿದ್ದಂತೆ
ಮಧುಕರ ದಾಂಪತ್ಯದ ಭ್ರಮೆಗೆ ಒಳಗಾದರು ಪ್ರೇಮಿಗಳು.

ಇಲ್ಲಿ ಮರೆವಿನಿಂದ ದು:ಖ. ಅಜ್ಞಾನದ ಪರಿಣಾಮ ಎದುರಿಸಲೇ ಬೇಕಾಗಿದೆ. ಕನಸು ಕಾಣಬೇಕೆಂದರೆ
ನಿದ್ರೆ ಬರುತ್ತಿಲ್ಲ.
ರಾಜಕಾರಣದಲ್ಲಿ ಆಸಕ್ತಿ ಇಲ್ಲ.

” ಅಜ್ಞಾನ ಆವರಿಸಿ ಮುನಿಸುತೆ, ಪ್ರಿಯತಮೆಯನ್ನು ನಿರಾಕರಿಸಿದೆ.
ಈಗ ಮದನನ ಬಾಣ ನನ್ನನ್ನು ಘಾಸಿಗೊಳಿಸುತ್ತಿದೆ.”
ಎಂದು ದುಷ್ಯಂತ ಮಿತ್ರನಲ್ಲಿ ದು:ಖ ತೋಡಿಕೊಳ್ಳುತ್ತಾನೆ.

ಶಕುಂತಲೆಯ ಚಿತ್ರ , ದುಷ್ಯಂತನೇ ಬರೆದುದು, ಅದನ್ನು ರಾಜನನ್ನು ರಂಜಿಸಲು ತರಿಸುವನು.
ಮಾಧವೀ ಬಳ್ಳಿಯ ಹತ್ತಿರ ಕರೆದುಕೊಂಡು ಹೋಗೀ ಅದರ ಸೌಂದರ್ಯವನ್ನು ಆಸ್ವಾದಿಸಲು ಪ್ರೇರೇಪಿಸಿದನು.
ಚಿತ್ರ ನೋಡ ನೋಡುತ್ತಿದ್ದಂತೆ ಮಹಾರಾಣಿ ವಸುಮತಿಯ ಬರವನ್ನು ಗುರುತಿಸಿದ ವಿದೂಷಕ.

ಶಕುಂತಲೆಯ ಚಿತ್ರ ರಾಣಿಯ ಕಣ್ಣಿಗೆ ಬೀಳಬಾರದು. ಇದು ಬಹುವಲ್ಲಭನ ಪೇಚು!!

ದುಷ್ಯಂತ ರಾಜಕಾರಣದಲ್ಲಿ ವ್ಯಸ್ತ ಇರುವನೆಂದು ಹೇಳಿ ಮಹಾರಾಣಿಯನ್ನು ದೂರದಿಂದಲೇ ಹೊರಟುಹೋಗುವಂತೆ ಮಾಡಿದನು ಚಾಣಾಕ್ಷ ವಿದೂಷಕ!
ಶಕುಂತಲೆಯ ಸ್ಪರ್ಧಿ ರಂಗಸ್ಥಳದ ಮೇಲೆ ಕಾಣಿಸದೇ ಮರೆಯಾದಳು.
ಮಹಾರಾಣಿಯನ್ನು ತಿರಸ್ಕರಿಸಿದಂತೆಯೂ ಆಗಲಿಲ್ಲ‌
ಮಿತ್ರನನ್ನು ಕಾಪಾಡಿದ.

ಶಕುಂತಲೆಯಲ್ಲಿ ತಾನು ಅನುರಕ್ತ ಆದ ವಿಷಯ ಕೇವಲ ಪರಿಹಾಸ ಎಂದು ದುಷ್ಯಂತ ವಿದೂಷಕನಿಗೆ
ಎರಡನೇಯ ಅಂಕದಲ್ಲಿ ನಂಬಿಸಿದ್ದನು. ಕಾರಣ ರಾಜಧಾನಿಯಲ್ಲಿ ಈ ಸುದ್ದಿ ಹಬ್ಬಬಾರದೆಂದು.
ಈಗ ನೋಡಿದರೆ ಶಕುಂತಲೆಯನ್ನು ನಿರಾಕರಿಸಿ ವ್ಯಥೆ ಪಡುತ್ತಾ ಇದ್ದಾನೆ.

ದೈವವೇ ಬಲವತ್ತರ ಆಗೀ ಈ ಸ್ಥಿತಿ ಆಗಿದೆ ಎಂದು ಅರಸನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ.
” ಸತ್ಪುರುಷರು ಶೋಕದಲ್ಲಿ ಹೀಗೆ ಧೈರ್ಯಗೆಡಬಾರದು.
ನನು ಪ್ರವಾತೇಪಿ ನಿಷ್ಕಂಪಾ: ಗಿರಯ: … ಬಿರುಗಾಳಿ ಬಂದರೂ ಸಹ ಪರ್ವತಗಳು ಅಲುಗದೇ ಸ್ಥಿರವಾಗಿ ನಿಲ್ಲುತ್ತವೆ. ಸತ್ಪುರುಷನಾದ ನೀನೂ ಕಂಗೆಡಬಾರದು “
ಎಂದು ಧೈರ್ಯ ತುಂಬುವನು ವಿದೂಷಕ.

“ಶಕುಂತಲೆ ನಿ:ಸಹಾಯಳಾಗಿ, ಕಣ್ಣೀರು ತುಂಬಿಕೊಂಡು ದೈನ್ಯದಿಂದ ನನ್ನತ್ತ ನೋಡುತ್ತಿದ್ದ ಹೆಣ್ಣಿನ ಬಗ್ಗೆ ನನ್ನಲ್ಲಿ ದಯೆ ಬಾರದಷ್ಟು ಕಠೋರವಾದೆನಲ್ವ. ನನ್ನ ಬುದ್ಧಿಗೆ ಮಂಕು ಬಡಿದಿತ್ತೆ? ಅವಳ ಆ ದೀನ
ದೃಷ್ಟಿ ನನ್ನನ್ನು ವಿಷದ ಬಾಣದಂತೆ ಚಚುಚ್ಚುತ್ತಾ ಇದೆ. ನನ್ನನು ಸುಡುತ್ತಿದೆ.
ಪುನ: ದೃಷ್ಟಿ: ಮಯಿ ಕ್ರೂರೇ ಯತ್ ತತ್ ಸವಿಷಮಿವ ‌‌ಶಲ್ಯಂ ದಹತಿ ಮಾಮ್ “
ಹೀಗೆ ಪ್ರಲಾಪಿಸುತ್ತ ಇರುವ ದುಷ್ಯಂತನ ಸ್ಥಿತಿ ಕಂಡು ನಮ್ಮ ಸಹೃದಯರಲ್ಲೂ ಕರುಣೆ ಮೂಡಿರ ಬೇಕು ಅಲ್ಲವೇ?
ಚಕ್ರವರ್ತಿಯ ಬೇಜವಾಬ್ದಾರಿಯುತ
ವರ್ತನೆ ಇಂದ ರೊಚ್ಚಿಗೆದ್ದ ಪ್ರೇಕ್ಷಕರು
ಸ್ವಲ್ಪ ಸಮಾಧಾನದಿಂದ ಅರಸನ
ನೊಂದ ಹೃದಯ ಕೂಗು ಕೇಳಿಸಿತೇ?
ಪಾಪ, ಬಹಳ ನೊಂದಿದ್ದಾನೆ, ಪಶ್ಚಾತ್ತಾಪದಿಂದ ಬಳಲುತ್ತಿದ್ದಾನೆ.
ಕ್ಷಮಿಸಿ ಬಿಡೋಣವೇ !!?
ಕ್ಷಮಾ ಇದು ದೈವೀ ಗುಣ!

ಪತಿಯೇ ದೇವರೆಂದು ಬಂದ ಶಕುಂತಲೆಗೆ ಅವನಿಂದಲೇ ಅನ್ಯಾಯ ಆಯಿತು.ಆಗ ಮಗಳ
ಸಂರಕ್ಷಣೆ ತಂದೆ ತಾಯಿಯರ ಕರ್ತವ್ಯ ಎನ್ನುವಂತೆ ಮೇನಕೆ ಎತ್ತಿ ಹಿಡಿದಳು.

“ಚಿಂತಿಸಬೇಡ, ಕಾಲವೇ ಇದಕ್ಕೆ ಔಷಧೀ. ಮತ್ತೆ ನಿಮ್ಮಿಬ್ಬರ ಸಮಾಗಮ ಸಂಭವಿಸುತ್ತದೆ”
ಎಂದು ವಿದೂಷಕ ದುಷ್ಯಂತನಿಗೆ
ಭರವಸೆ ಕೊಡಲು ಪ್ರಯತ್ನಿಸಿದ.

ಆದರೆ ಅರಸನನ್ನು ನಿರಾಶೆ ಆವರಿಸಿದೆ.
” ಮಲಗಿದಾಗ ಕನಸು ಕಾಣುವದು ಸಹಜವೇ.ಇಲ್ಲದ್ದನ್ನು ಕಲ್ಪಿಸುವದೇ ಮಾಯೆ.
ನಾನು ಶಕುಂತಲೆಯ ಕೂಡ ಕಳೆದ ದಿನಗಳೂ ಕನಸೇ ? ಛೇ ,ಛೇ ಅಲ್ಲಲ್ಲ! ನಾನಾಗ ಖಂಡಿತವಾಗಿಯೂ ನಿದ್ರೆ ಹೋಗಿರಲಿಲ್ಲ. ಅವಳ ಸಾಂಗತ್ಯದ ಪ್ರತಿಕ್ಷಣವನ್ನೂ ಆನಂದಿಸಿದೆ.
ಮಾಯೆನೂ ಅಲ್ಲ, ಮ್ಯಾಜಿಕ್ ಅಲ್ಲ!
ಸಾಕ್ಷಾತ್ ಅನುಭವ. ನಾನು ಧರ್ಮ ದಿಂದ ಸಂಪಾದಿಸಿದ ಪುಣ್ಯ ಬರಿದಾಯಿತೇ? ಶಕುಂತಲೆಯನ್ನು ಕಳೆದುಕೊಂಡೆನಲ್ಲ! ನನ್ನ ಮನೋರಥಗಳೆಲ್ಲ ಪ್ರಪಾತಕ್ಕೆ ಬಿದ್ದು ಹೋದವು.”
ಎಂದು ಹತಾಶನಾಗಿ ತನ್ನನ್ನು ತಾನೇ ಹಳಿದು ಕೊಳ್ಳುತ್ತಿದ್ದಾನೆ ದುಷ್ಯಂತ.

ಉಂಗುರ ಸಿಕ್ಕಿದ್ದೇ ಮಿಲನದ ಸಂಕೇತ‌ ಎನ್ನುವನು ಆಶಾವಾದಿ ವಿದೂಷಕ.

” ಹೇ ಉಂಗುರವೇ, ನಿನ್ನ ಪುಣ್ಯ ಕೂಡ ಅಲ್ಪವೇ ನನ್ನ ಹಾಗೆ.
ನನಗೆ ಶಕುಂತಲೆಯ ಸಾಂಗತ್ಯದ ಸದವಕಾಶ ಕೆಲವೇ ದಿನ ದೊರೆತಂತೆ ನಿನಗೂ ಅವಳ ಬೆರಳುಗಳ ಸಂಪರ್ಕ ಕೆಲವು ದಿನದ್ದು ಮಾತ್ರ ಆಯಿತಲ್ಲ! ಅವಳ ಅರುಣ ವರ್ಣದ ನಖಗಳ ಪರಿಣಾಮದಿಂದ ನೀನೂ ಸುಂದರವಾಗಿ ಹೊಳೆಯುತ್ತಿರುವಿ “

ಇದು ದುಷ್ಯಂತ ಭಾವನೆ, ಸುಂದರ ಕಲ್ಪನೆ ಅಲ್ಲವೇ?

ಈ ಉಂಗುರವನ್ನು ಶಕುಂತಲೆಗೆ ಯಾವ ಪ್ರಸಂಗದಲ್ಲಿ ಕೊಟ್ಟಿದ್ದು ಎಂದು ವಿದೂಷಕ ಕೇಳುವನು.

ಆಶ್ರಮದಿಂದ ದುಷ್ಯಂತ ರಾಜಧಾನಿಯ ಕಡೆಗೆ ಹೊರಟಾಗ ತನ್ನನ್ನು ಎಂದು ಬರಮಾಡಿಕೊಳ್ಳುವೆ ಎಂದು ಶಕುಂತಲೆ ಪ್ರಶ್ನಿಸಿದಾಗ
ಅವಳ ಬೆರಳಿಗೆ ಉಂಗುರ ತೊಡಿಸುತ್ತ ಈ ನುಡಿಗಳನ್ನು ಆಡಿದ್ಧೆ ಎಂದು ಅರಸ ನೆನಪಿಸಿಕೊಳ್ಳುತ್ತಾನೆ.

” ಏಕೈಕಮತ್ರ ದಿವಸೆ ದಿವಸೆ ಮದೀಯಮ್ ನಾಮಾಕ್ಷರಂ ಗಣಯ ಗಚ್ಛಸಿ ಯಾವತ್ ಅಂತಂ
ತಾವತ್ ಪ್ರಿಯೆ ಮದವರೋಧ ಗೃಹ ಪ್ರವೇಶಮ್ ,ನೇತಾ ಜನಸ್ತವ ಸಮೀಪಮ್ ಉಪೈಷ್ಷತಿ ಇತಿ .”

” ಈ ಉಂಗುರದ ಮೇಲಿದ್ದ ನನ್ನ ಹೆಸರಿನ ಒಂದು ಅಕ್ಷರವನ್ನು ನಿತ್ಯ ಹೇಳುತ್ತಿರು,ಪ್ರಿಯೆ .ನೀನು ಕೊನೆಯ ಅಕ್ಷರ ಉಚ್ಚರಿಸುವದರಲ್ಲಿ ನನ್ನ ಭಟರು ಇಲ್ಲಿ ಹಾಜರಿದ್ದು , ನಿನ್ನನ್ನು ನನ್ನ ಅಂತ: ಪುರಕ್ಕೆ ಕರೆತರುವರು”

ಇದು ಪ್ರಿಯತಮೆಗೆ ಇತ್ತ ಭರವಸೆ .
ಅಂದರೆ ಅಷ್ಟು ಬೇಗನೇ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಾಗುವದೆಂದ.

ಆದರೆ ವಿಧಿ ತನ್ನ ಆಟ ಹೂಡಿತ್ತು.
ಉಂಗುರ ಶಚಿತೀರ್ಥದಲ್ಲಿ ಕಳಚಿ ಹೋಯಿತು.
ಅದಕ್ಕೇ ಪಾಪ, ಅಧರ್ಮ ಭೀರು ಆದ ಅರಸ ಅವಳನ್ನು ಸ್ವೀಕರಿಸಲು
ನಿರಾಕರಿಸಿದನು ಎಂದು ಕೊಂಡಳು ಸಾನುಮತಿ. ಇಂಥ ಘನವಾದ ಪ್ರೀತಿಗೆ, ವಿವಾಹದ ದ್ಯೋತಕವಾಗಿ ಒಂದು ಉಂಗುರ ಸಾಕಾಗುತ್ತದೆಯಾ ಎಂಬುದೂ ಅವಳ ಸಂಶಯ.

” ಹೇ ಉಂಗುರವೇ, ಅವಳ ಕೋಮಲ ಬೆರಳುಗಳಿಂದ ಅಗಲೀ, ನೀರಲ್ಲಿ ಜಾರುವ ಮನಸಾದರೂ ನಿನಗೆ ಹೇಗಾಯಿತು?
ಒಹೋ,ನೀನು ಜಡನು.ನಿನಗೇನು ಗೊತ್ತು, ನಾನು ಪ್ರಿಯತಮೆಯನ್ನು ದೂರೀಕರಿಸೀ ಪಡುತ್ತಿರುವ ಯಾತನೆ? “
ಎಂದು ಉನ್ಮಾದಿಂದ ಪ್ರಲಪಿಸುತ್ತಾನೆ ದುಷ್ಯಂತ.

” ಪ್ರಿಯೆ ,ಅಕಾರಣ‌ ಪರಿತ್ಯಾಗಾನುಶಯ ತಪ್ತ ಹೃದಯ: ತಾವತ್ ಅನುಕಂಪ್ಯತಾಮ್ ಅಯಂ ಜನ: ಪುನರ್ದಶನೇನ “

” ಹೇ ಪ್ರಿಯೇ, ನಿನ್ನನ್ನು ವಿನಾಕಾರಣ
ನಿರಾಕರಿಸಿದವನ ಮೇಲೆ ,ದಯಮಾಡೀ ಕರುಣೆ ತೋರಿಸು. ನೊಂದ ಈ ವ್ಯಕ್ತಿಯ ಎದುರಿಗೆ ಮತ್ತೊಮ್ಮೆ ಕಾಣಿಸಿಕೋ”
ಎಂದು ಪ್ರಾರ್ಥಿಸುವನು.
ಆಗ ಚತುರಿಕಾ ಒಂದು ಚಿತ್ರವನ್ನು ಹಿಡಿದುಕೊಂಡು ಬರುವಳು‌.

ಚಿತ್ರ ಕೃಪೆ – ರಘುವೀರ್ ಮೂಲ್ ಗಾಂವ್ಕರ್