ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಕ್ಷತಾ ಕೃಷ್ಣಮೂರ್ತಿ
ಇತ್ತೀಚಿನ ಬರಹಗಳು: ಅಕ್ಷತಾ ಕೃಷ್ಣಮೂರ್ತಿ (ಎಲ್ಲವನ್ನು ಓದಿ)

ನೆನಪಾದೊಡನೆ ಕಣ್ಣರಳಿ ಮನತುಂಬುವುದನು ಮರೆಯಲಾಗದು ನನಗೆ
ಅರಳಿದ ಕಿರುನಗೆ ಕುಸುರಿಕಲೆ ಹೊಳೆಯುವುದನು ಮರೆಯಲಾಗದು ನನಗೆ

ನೀನಿಲ್ಲದಿರುವಾಗ ಬೇಗ ಸರಿಯದ ಇರುಳು ಹೊತ್ತು ಮನ ಕತ್ತಲು ಕವಿಯುವುದು
ಉಸಿರುಗಟ್ಟಿದ ಜೀವ ನೆನಪ ಹೆತ್ತೆತ್ತು ಸಾಯುವುದನು ಮರೆಯಲಾಗದು ನನಗೆ

ಕೊಳಲಿನೆದೆಯಲಿ ಇಡೀ ಲೋಕ ಹಿಡಿದಿರುವ ಮಾಧವ ನೀನು ಚತುರ ಚೆನ್ನಿಗ
ಬಯಕೆಯ ಕೊನೆಗಳಿಗೆಯಲ್ಲಿ ನನಗೆ ದನಿಯಾದುದನು ಮರೆಯಲಾಗದು ನನಗೆ

ಋತು ಬದಲಾದಂತೆ ಸದ್ದಿಲ್ಲದೆ ಅದಲು ಬದಲು ಎಲ್ಲ ಹೂ ಚಿಗುರು ಎಲೆ ಹಸಿರು
ಹೂಬನದ ಮೆಹಫಿಲ್ಲಿನಲ್ಲಿ ಬಣ್ಣಗಳು ಅರಳಿರುವುದನು ಮರೆಯಲಾಗದು ನನಗೆ

ನನ್ನೆದೆಗೂಡಲಿ ಇನ್ನೆಷ್ಟು ದಿನ ಬಚ್ಚಿಡಲಿ ಪ್ರೇಮ ಸಂಜೀವಿನಿಯ ನಿನಗಾಗಿ
ಗುಟ್ಟು ರಟ್ಟಾಗುವ ಅಕ್ಷತ ಒಲವಿನೆದೆಯ ಬಯಕೆಯನು ಹೇಳಲಾಗದು ನನಗೆ