ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೇಶ್ಮಾ ಗುಳೇದಗುಡ್ಡಾಕರ್
ಇತ್ತೀಚಿನ ಬರಹಗಳು: ರೇಶ್ಮಾ ಗುಳೇದಗುಡ್ಡಾಕರ್ (ಎಲ್ಲವನ್ನು ಓದಿ)

ಮುಟ್ಟದವರ ಅಪ್ಪಿ
ಮೇಲು ಕೀಳು ಎಂಬದನ್ನು
ಕಾಲಡಿಯಲಿ ಮೆಟ್ಟಿ
ನಿಜದ ನೋವನ್ನು
ಉಂಡು ಮಹಾತ್ಮರಾದರು

ಗಡಿಗಡಿಗಳ ದಾಟಿ
ಮನಮನಗಳ ತಲುಪಿ
ಸರಳತೆಯಲಿ ಬದುಕಿ
ಅಹಿಂಸೆಯ ಹಾದಿಯಲ್ಲಿ ನಡೆದರು
ದೀನರಿಗೆ ದೀವಿಗೆಯಾದರು

ಜನನಾಯಕರಾದರು
ಅಧಿಕಾರದ ಹತ್ತಿರ ಸುಳಿಯದೆ
ಉಳಿದರು , ಉಚ್ಚ ಪಂಥದವಾರದರೂ
ತಳಸಮುದಾಯದವರಿಗಾಗಿ ಬಾಳಿದರು

ಹಗಲು ಇರುಳು ಸತ್ಯವನ್ನೇ
ಪ್ರತಿಪಾದಿಸಿದರು
ತಮ್ಮ ಬದುಕನ್ನೆ ಒರೆಹಚ್ಚಿ
ತಾವೇ ನೋಡಿದರು
ಮಾಡು ಇಲ್ಲವೇ ಮಡಿ ಎಂದರು
ಅನ್ಯರ ದೋಷಿಸುವ ಬದಲು
ನಿನ್ನ ನೀ ಅರಿ ಎಂದರು

ಆದರ್ಶ ತತ್ವಗಳು ಪಠಣದ
ಮಂತ್ರವಲ್ಲ ಎಂದು
ಜೀವಿಸಿ ತೋರಿಸಿದರು
ಬಹುತ್ವ ಭಾರತಕ್ಕೆ ಭಾತೃತ್ವದ
ಮಡಿಲು ನೀಡಿದರು

ಅನೇಕತೆಯಲ್ಲಿ ಏಕತೆಯ
ಭಾರತವ ಕನಸ ಕಂಡರು
ನಮ್ಮ ರಾಷ್ಟ್ರ ಪಿತ ಎಂಬ
ಹೆಮ್ಮೆ ಇವರು
ಇಂದಿಗೂ ಅವರು ಜನಮನಗಳಲ್ಲಿ
ಅಳಿಯದೇ ಉಳಿದಿರುವರು ……