ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿಂತಾಮಣಿ ಕೊಡ್ಲೆಕೆರೆ
ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)

1. ಒಂದು,ಎರಡು,ಮೂರು
(ನಾಲ್ಕು ಪದ್ಯಗಳು)


೧. ಮಗು ಕಥೆ

ಒಂದು,ಎರಡು,ಮೂರು
ಒಂದಾನೊಂದು ಊರು

ನಾಲ್ಕು,ಐದು,ಆರು
ಕೇಳೋರಿಲ್ಲ ಯಾರೂ!
ಏಳು ,ಎಂಟು ,ಒಂಬತ್
ಲಿಂಬು ಸೋಡಾ ಶರಬತ್

ಕಡೆಗುಳಿದದ್ದು ಹತ್ತು
ಕುಡಿದದ್ದೊಂದೇ ಗೊತ್ತು!


೨. ಅಮ್ಮನ ಕಥೆ

ಒಂದು,ಎರಡು,ಮೂರು
“ಹಾಲೇನ್ರೀ ಇದು ನೀರು!”

ನಾಲ್ಕು,ಐದು,ಆರು
ಕುದಿಯಿತು ಬೇಳೆ ಸಾರು

ಏಳು ,ಎಂಟು ,ಒಂಬತ್
ನಲ್ಲಿ ನೀರೂ ನಿಂತಿತ್!

ಕಡೆಯಲಿ ಉಳಿದುದು ಹತ್ತು
“ಏನೋ ಹೇಳೋದಿತ್ತು!”

೩. ಅಪ್ಪನ ಕಥೆ

ಒಂದು,ಎರಡು,ಮೂರು
” ಯಾಕೋ ತುಂಬಾ ಬೋರು!”

ನಾಲ್ಕು,ಐದು,ಆರು
“ಕೆಲಸಕ್ ಹೋಗೋರ್ಯಾರು?”
ಏಳು ಎಂಟು ಒಂಬತ್
ಕಾಫಿ ಕೊಡ್ರೀ ಕಿಂಚಿತ್
ಬಂದೇ ಬಿಡ್ತು ಹತ್ತು
“ಹೊರಡೋವಾಗ್ಲೇ ಸುಸ್ತು!”

೪. ಒಂದು ಟೂರಿನ ಕಥೆ

ಒಂದು,ಎರಡು,ಮೂರು
ಹೊಸೂರು ಬ್ರಿಡ್ಜಿಗೆ ಟೂರು

ನಾಲ್ಕು,ಐದು,ಆರು
“ಟೂರಿಗೆ ಬರೋರು ಯಾರು ?”

ಏಳು ,ಎಂಟು ,ಒಂಬತ್
ಪೆದ್ದಿ,ಪೆದ್ದ,ಬೊಂಬಟ್

ಕಡೇಗೆ ಬಂತು ಹತ್ತು
ಬಸ್ಸು ನೀರಿಗೆ ಬಿತ್ತು!

ಈಜ್ತಾ ಬಸ್ಸೇ ಮೇಲೆ
ಎದ್ದು ಬರೋ ವೇಳೆ!
ಕಣ್ ಕಣ್ ಬಿಟ್ಟಿದ್ಯಾರು?
ಪದ್ಯ ಕಟ್ಟಿದ್ಯಾರು?

ಉಡುಪಿಯಲ್ಲಿ ಕಿಂಡಿ
ಜೋಗಾದಲ್ಲಿ ಗುಂಡಿ
ಹೊಟೆಲ್ ನಲ್ಲಿ ತಿಂಡಿ
ಎಲ್ಲಾ ಮುಗಿಸಿ ಮನೆಗೆ ಬಂದೆ
ಇವತ್ಯಾಕೋ ಥಂಡಿ!

2. ರಂಜನಾಳ ಗೊಂಬೆ

ರಂಜನ ಪುಟ್ಟಿಯ ಗೊಂಬೆಗೆ ಜ್ವರ ಜ್ವರ ಜ್ವರ
ಗೊಂಬೆಯ ಒಯ್ದರು ಡಾಕ್ಟರ್ ಬಳಿ ಸರ ಸರ ಸರ
ಡಾಕ್ಟರ್ ನರ್ಸ್ ಓಡಾಟ ಧಡ ಧಡ ಧಡ
ಪಾಪ! ಗೊಂಬೆಗೆ ಚಳಿ ನಡುಕ ಗಡ ಗಡ ಗಡ
ಡಾಕ್ಟರಂದರು ಗೊಂಬೆಗೆ ಬೇಕು ರೆಸ್ಟ್ ರೆಸ್ಟ್ ರೆಸ್ಟ್
ಇಂಥ ಜ್ವರಕ್ಕೆ ರೆಸ್ಟೆನೇ ಬೆಸ್ಟ್ ಬೆಸ್ಟ್ ಬೆಸ್ಟ್
ಬೆಳಗಾದದ್ದೇ ಜ್ವರವಿಲ್ಲ- ಗುಣ ಗುಣ ಗುಣ!
ಡಾಕ್ಟರಂದರು ಕೊಡಿ ಬಿಲ್ ಹಣ ಹಣ ಹಣ!

3. ಬೇಳೆ ಅಂಗಡಿ ಕಿಟ್ಟಣ್ಣ

ಬೇಳೆ ಅಂಗಡಿ ಕಿಟ್ಟಣ್ಣ
ಸಿಕ್ಕಾಪಟ್ಟೆ ಸಿಟ್ಟಣ್ಣ!

ಬೇಳೆಗಳೆಲ್ಲಾ ತುಟ್ಟಿ
ಬೇಯೋದಿಲ್ಲ! ಗಟ್ಟಿ!

ಒಲೆ ಮೇಲಿಟ್ಟರೆ ಬೇಳೆ
ಬೇಯೋದೆಂದು? ನಾಳೆ!

“ಕಿಟ್ಟಣ್ಣಾ ಕಿಟ್ಟಣ್ಣಾ
ಏನು ಬೇಳೆ ಇದು? ಕಿಟ್ಟಣ್ಣಾ!”

ಜನರ ಮಾತಿಗೆ ಸಿಟ್ಟಿನ ಖೋಡಿ
ಆಗೇಬಿಟ್ಟ ಕೆಟ್ಟಣ್ಣ!

ಏನ್ರೀ ಎಂಥಾ ಮಾತು!
ಮಾತೇನ್ರೀ ಅದು ಥು ಥು!

ಬೇಳೆ ಫಾರಿನ್ ಮಾಲು
ಚಿನ್ನಕ್ಕಿಂತಲೂ ಮೇಲು!

ಹೋಗ್ರೀ – ಸುಮ್ಮನೆ ಗೋ – ಗೋ
ಊಟಾ ಮಾಡ್ರಿ ಹೇಗೋ!

ಬೇಳೆ ಅಂಗಡಿ ಕಿಟ್ಟ
ಬೇಳೆ ತಂದವ ಕೆಟ್ಟ!

4. ಕುರಿಗಳು ನಾವು

Free Sheep Clip Art Vectors, 600+ Images in AI, EPS format

ಕುರಿಗಳು ನಾವು
ಬ್ಯಾ ಬ್ಯಾ ಬ್ಯಾ
ಕಾಗೆ ನಾವು
ಕಾ ಕಾ ಕಾ
ನಾಯಿ ನಾವು
ಬೌ ಬೌ ಬೌ
ಬೆಕ್ಕು ನಾವು
ಮ್ಯಾಂವ್ ಮ್ಯಾಂವ್ ಮ್ಯಾಂವ್
ಹಕ್ಕಿ ನಾವು
ಚಿಂವ್ ಚಿಂವ್ ಚಿಂವ್
ಚಿಂವ್ ಚಿಂವ್ ಚಿಂವ್ ಚಿಂವ್ ಚಿಂವ್ ಚಿಂವ್ ಚಿಂವ್

5. ಜಾತಿ

ಹಕ್ಕಿಗಿಲ್ಲ ಹಾಡಿಗಿಲ್ಲ
ಕಾಡಿಗಿಲ್ಲ ಜಾತಿ
ಹೂವಿಗಿಲ್ಲ ಮೊಗ್ಗಿಗಿಲ್ಲ
ಹಿಗ್ಗಿಗಿಲ್ಲ ಜಾತಿ
ಬೇಡ ನನಗೆ ಬೇಡ ನಿನಗೆ
ಬೇಡ ನಿಮಗೂ ಜಾತಿ
ಜಾತಿ ಭೂತ ಓಡಿ ಹೋಗು
ತೋರಬೇಡ ಮೂತಿ
ಕುಣಿದು ಕುಣಿದು ಹಾಡುತ್ತಾರೆ, ರಮ್ಯಾ, ಕಮಲಾ, ಪ್ರೀತಿ

6. ಸಾರಿ ಪುಟ್ಟಿ ಸಾರಿ

ಪುಟ್ಟಿ ಸೈಕಲ್ ಬರ್ತಾ ಇದೆ ದಾರಿ ದಾರಿ ದಾರಿ
‘ಎಲ್ಲಾ ಮಕ್ಕಳೂ ಪಕ್ಕಕ್ಕಿರಿ’ ಕೂಗ್ದೆ ಇಪ್ಪತ್ಸಾರಿ
ಏನ್ಮಾಡೋದು? ಜರಗ್ತಾ ಇಲ್ಲ.ಪುಟ್ಟಿ ಬಿದ್ಲು ಜಾರಿ
ಮಕ್ಕಳು ಈಗ ಕೂಗ್ತಿದ್ದಾರೆ ಸಾರಿ ಪುಟ್ಟಿ ಸಾರಿ

7. ಪುಟ್ಟಿ ಸೈಕಲ್

ಪುಟ್ಟಿ ಸೈಕಲ್ ಕರಿ ಹ್ಯಾಂಡಲ್ ಕೆಂಪು ಬಲೂನು ಟ್ರಿಣ್ ಟ್ರಿಣ್ ಗಂಟೆ
ಈ ಊರಲ್ಲಿ ಇಂಥ ಸೈಕಲ್ ಬೇರೆಲ್ಲಾದ್ರೂ ಉಂಟೆ?
ಪುಟ್ಟಿ ನಗ್ತಾ ಕೇಳ್ತಿದ್ದಾಳೆ ನಿಲುಕೋದಿಲ್ಲ ಪೆಡಲ್
ಆದ್ರೂ ತಮ್ಮನ ಕೂರಿಸ್ಕೊಂಡು ಹೊಡಿತಿದಾಳೆ ಡಬಲ್

8. ಪ್ರವಾಸ

ಉಡುಪಿಯಲ್ಲಿ ಕಿಂಡಿ
ಜೋಗಾದಲ್ಲಿ ಗುಂಡಿ
ಹೊಟೆಲ್ ನಲ್ಲಿ ತಿಂಡಿ
ಎಲ್ಲಾ ಮುಗಿಸಿ ಮನೆಗೆ ಬಂದೆ
ಇವತ್ಯಾಕೋ ಥಂಡಿ!

9. ವ್ಯರ್ಥ

ಕುಮಟೆಯಲ್ಲಿ ತೇರು
ನೆಲದ ಕೆಳಗೆ ಬೇರು!

ಏನು ಇದರ ಅರ್ಥ?
ಅಗೆಯಬೇಡ ವ್ಯರ್ಥ!

10.ಕುಮಟೆ ತೇರು

ಕುಮಟೆ ತೇರು
ಬರೋರು ಯಾರು?

ರೇಖಾ ಸೀತಾ
ಕಮಲಾ ಗೀತಾ

ರಾಜು ಮೂರ್ತಿ
ವಿಷ್ಣು ಕೀರ್ತಿ

ಅಪ್ಪ ಅಮ್ಮ
ಅಣ್ಣ ತಮ್ಮ

ಅಜ್ಜ ಅಜ್ಜಿ
ವಿಘ್ನ ವಿಜ್ಜಿ

ಶೆಟ್ರು ಭಟ್ರು
ಬಂದೇ ಬಿಟ್ರು!

ತುಂಬಿತು ಗಾಡಿ
ಹೊರಟಿತು ಓಡಿ!

ಕುಮಟೆ ತೇರು
ಭಾರೀ ಜೋರು!

ಸೇರಿದೆ ನೋಡಿ
ಊರಿಗೆ ಊರು!

ಕುಮಟೆ ತೇರು
ಬರದೋರ್ ಯಾರು?