ಹೈದರಾಬಾದಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನೆಯ ೧೧೧ ನೇ ದಿನಾಚರಣೆ
ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡ ಘಟಕವು ತಾ ೦೫-೦೫- ೨೫ರ ಸೋಮವಾರ ಬೆಳಿಗ್ಗೆ ರವೀಂದ್ರ ಭಾರತಿಯ ಸಭಾಂಗಣದಲ್ಲಿ ಪರಿಷತ್ ಸಂಸ್ಥಾಪನೆಯ ೧೧೧ ನೇಯ ಸಂದರ್ಭವನ್ನು ಸಂಭ್ರಮದಿಂದ ಆಚರಿಸಿತು. ನಾಡಗೀತೆಯೊಂದಿಗೆ ಸಭೆ ಆರಂಭವಾಯಿತು. ನಂತರ ವೇದಿಕೆಯ ಮೇಲಿನ ಗಣ್ಯರಿಂದ ಸಾಂಕೇತಿಕವಾಗಿ ದೀಪ ಪ್ರಜ್ವಲನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗುಡಗುಂಟಿ ವಿಠ್ಠಲ ಜೋಷಿಯವರು ನೆರೆದ ಕನ್ನಡಿಗರನ್ನು ಸ್ವಾಗತಿಸುತ್ತ, ಕನ್ನಡ ಸಾಹಿತ್ಯ ಪರಿಷತ್ ನಡೆದು ಬಂದ ದಾರಿಯನ್ನು ಸಭಿಕರಿಗೆ ತಿಳಿಸಿದರು. ಮೈಸೂರು ಸಂಸ್ಥಾನಾಧೀಶರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯನವರು ಹಾಗೂ ಹಲವಾರು ಸಾಹಿತಿಗಳ ಮುಂದಾಳತ್ವದಲ್ಲಿ ೧೯೧೫ರಲ್ಲಿ ರೂಪುಗೊಂಡ ಕರ್ನಾಟಕ ಸಾಹಿತ್ಯ ಪರಿಷತ್ ಇಂದು ಸಂಸ್ಥೆಯ ೧೧೧ನೆಯ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇಂದಿಗೆ ಸುಮಾರು ೫ ಲಕ್ಷ ಸದಸ್ಯತ್ವ ಹೊಂದಿದ್ದು, ಕನ್ನಡ ಭಾಷೆಯ ಸೇವೆ ಮಾಡುತ್ತ ಒಂದು ಶತಮಾನ ಕಳೆದ ಸಂಸ್ಥೆ ಇದು ಎಂದು ಹೇಳಿದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಮತ್ತು ತಾಲ್ಲೂಕುಗಳಲ್ಲೂ ಪರಿಷತ್ತು ಘಟಕಗಳನ್ನು ಹೊಂದಿದ್ದು, ಗಡಿನಾಡು ರಾಜ್ಯಗಳಲ್ಲಿ ಸಹ ಘಟಕಗಳನ್ನು ಹೊಂದಿರುವ ಬಗ್ಗೆ ಮತ್ತು ಅವುಗಳು ಮಾಡುತ್ತಿರುವ ಕನ್ನಡ ಸೇವೆ ಬಗ್ಗೆ ಬೆಳಕು ಚೆಲ್ಲಿದರು. ಈ ರೀತಿ ಭಾಷಾಭಿವೃದ್ಧಿಗೆ ಶ್ರಮಿಸುತ್ತಿರುವ ಏಕೈಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಎಂದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಇದುವರೆಗೆ ೨೫ ಜನ ಸೇವೆ ಸಲ್ಲಿಸಿ ಇದೀಗ ನಾಡೋಜ ಶ್ರೀ ಮಹೇಶ್ ಜೋಶಿಯವರ ಸಾರಥ್ಯದಲ್ಲಿ ಪರಿಷತ್ ಅನೇಕ ಕನ್ನಡ ಪರ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದರು. ಈ ಸಂಸ್ಥಾಪನಾ ದಿನವು ಪರಿಷತ್ತಿನ ಎಲ್ಲಾ ಜಿಲ್ಲೆಗಳ ಘಟಕಗಳಲ್ಲಿ ವೈಭವದಿಂದ ನಡೆಯುತ್ತದೆ, ಅದೇ ರೀತಿ ತೆಲಂಗಾಣ ಗಡಿನಾಡ ಘಟಕದಲ್ಲಿ ಸಹ ಈ ದಿನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪರಿಷತ್ತಿನ ಪರೀಕ್ಷೆಗಳಿಗೆ ಕೂಡುವ ವಿದ್ಯಾರ್ಥಿಗಳಿಗಾಗಿ ಈ ವರ್ಷದಿಂದ ಹೈದರಾಬಾದಿನಲ್ಲೇ ಪರೀಕ್ಷೇ ಬರೆಯುವ ಸವಲತ್ತು ಒದಗಿಸಲಾಗಿದೆ ಮತ್ತು ಅದರ ಶುಲ್ಕವನ್ನು ಸಹ ಪರಿಷತ್ತು ವಹಿಸಿಕೊಳ್ಳುವ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತೆಲಂಗಾಣಾ ಸರಕಾರದ ಭಾಷಾ ಮತ್ತು ಸಂಸ್ಕೃತಿ ವಿಭಾಗದ ನಿರ್ದೇಶಕರಾದ ಶ್ರೀ ಮಾಮಿಡಿ ಹರಿಕೃಷ್ಣ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಯಾವುದೋ ಆಡಳಿತ ಸಂಬಂಧಿ ಕಾರ್ಯಗಳಲ್ಲಿ ತೊಡಗಿದ್ದರಿಂದ ಬರಲಾಗಲಿಲ್ಲ. ಅವರಿಗೆ ಸಭಾಮುಖವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.







“ಜನ ಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು” ವಿಷಯದ ಬಗ್ಗೆ ಸ್ಥಳೀಯ ಇಂಗ್ಲೀಷ್ ಮತ್ತು ವಿದೇಶೀ ಭಾಷ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಪ್ರಾಧ್ಯಾಪಕರಾದ ಶ್ರೀ ವಿ.ಬಿ. ತಾರಕೇಶ್ವರ್ ಅವರು ಉಪನ್ಯಾಸ ನೀಡುತ್ತಾ ಕನ್ನಡ ಭಾಷೆಯ ವಿಕಸನದ ಬಗ್ಗೆ ವಿವರಿಸಿದರು. ಮುದ್ರಣಾ ಯಂತ್ರದ ಆವಿಷ್ಕಾರದ ನಂತರ ಹೇಗೆ ಭಾಷೆ ಬೆಳೆಯುತ್ತ ಹೋಯಿತು, ನೂತನ ತಂತ್ರಜ್ಞಾನಗಳು ಮಾಧ್ಯಮಗಳಿಗೆ ಹೇಗೆ ಪೂರಕವಾಗುತ್ತ ಭಾಷಾ ವಿನಿಮಯಗಳಿಗೆ ಸಹಾಯವಾದವು ಎನ್ನುವುದನ್ನು ಸಮರ್ಪಕವಾಗಿ ಮಂಡಿಸಿದರು. ಇತ್ತೀಚೆಗೆ ಸ್ಥಳೀಯ ಭಾಷೆಗಳು ಆಂಗ್ಲ ಭಾಷೆಯ ಮೋಹದಲ್ಲಿ ಬಳಕೆಯಲ್ಲಿ ಕುಗ್ಗುತ್ತಿರುವುದನ್ನು ನೆನೆದು ಎಲ್ಲರಿಗೂ ಕನ್ನಡ ಭಾಷೆಯನ್ನು ತಮ್ಮ ವ್ಯವಹಾರಗಳಲ್ಲಿ, ಅಭ್ಯಾಸದಲ್ಲಿ ಬಳಸಬೇಕಾದ ಅವಶ್ಯಕತೆಯ ಬಗ್ಗೆ ಒತ್ತುಕೊಟ್ಟು ಹೇಳಿದರು.
ವ್ಯವಸ್ಥಾಪನಾ ದಿನದ ಅಂಗವಾಗಿ ಸ್ಥಳೀಯ ಹಿರಿಯ ಕನ್ನಡಿಗರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ಕನ್ನಡಿಗರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಮುಂದುವರೆಯಿತು. ಹಿರಿಯ ಉದ್ಯಮಿ ಮತ್ತು ಸಾಹಿತ್ಯ ಪೋಷಕರಾದ ಶ್ರೀ ಪ್ರಹ್ಲಾದರಾವ್ ಮಾನ್ವಿಕರ್, ರಂಗ ಕಲಾವಿದರು ಮತ್ತು ಹಿರಿಯ ಬರಹಗಾರರು ಆದ ಡಾ|| ಸಂಪತ್ ಸೂಳಿಭಾವಿ ಮತ್ತು ಖ್ಯಾತ ಹೋಟೆಲ್ ಉದ್ಯಮಿ ಮತ್ತು ಸಾಹಿತ್ಯ ಪೋಷಕರಾದ ಶ್ರೀ ಎನ್ ಶ್ರೀಧರ್ ರಾವ್ ಅವರನ್ನು ವೇದಿಕೆಯ ಮೇಲೆ ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಸುಮತಿ ನಿರಂಜನ್ ಅವರು ಮತ್ತು ನಿರೂಪರಾಗಿ ಕಾರ್ಯಕ್ರಮ ನಡೆಸಿಕೊಟ್ಟ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಸಿ.ರಮೇಶಬಾಬು ಅವರು ಸನ್ಮಾನಿತರ ಪರಿಚಯವನ್ನು ಸಭಾಸದರಿಗೆ ಮಾಡಿಕೊಟ್ಟರು. ಸನ್ಮಾನಿತರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಸಭೆಯ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು.
Eu não consegui abster-me de comentar. Muito bem escrito!
isygmgsrdgzvzqujmjfeyvkkyytekw