ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂದುವರೆಯುವುದು ಮತ್ತು ಉದ್ದಾರ ಎನ್ನುವ ಎರಡು ಕವಿತೆಗಳು

ಚಿಂತಾಮಣಿ ಕೊಡ್ಲೆಕೆರೆ

ಅರೆರೆ ನರ್ತಕಿ ಚೆಲುವೆ ಬಿನ್ನಾಣಗಿತ್ತಿ
ನರ್ತನ ಮುಗಿಸಿದಿ
ನೈಟ್ ಗೌನ್ ಧರಿಸಿದಿ
ಮನೆಯೊಳಗೆ ಹೋದಿ
ಬೆಳಿಗ್ಗೆ ಹೇಳಿದರು:
ನಿನ್ನ ನರ್ತನ ಮುಗಿಯಿತು
ಒಳ ಹೋಗಿ
ಬಾಗಿ
ಹೊರ ಬರುವ ಹೊತ್ತಿಗೆ
ಸಿದ್ಧವಾಗಿದೆ ಇತ್ತ ವೇದಿಕೆ
ಮತ್ತೊಬ್ಬ ನರ್ತಕಿಗೆ
ಬಿನ್ನಾಣಗಿತ್ತಿಗೆ

ಟಿಪ್ಪಣಿ : ಈ ಕವಿತೆಯು ಮನುಷ್ಯರ ಅಲ್ಪಾವಧಿಯ ಯಶಸ್ಸು ಮತ್ತು ಬದಲಾಗುವ ಕಾಲಮಾನದ ವಾಸ್ತವತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ನರ್ತನ ಮುಗಿಸಿ ತೆರೆಮರೆಗೆ ಸರಿದ ನರ್ತಕಿಯ ಸ್ಥಾನವನ್ನು ಕ್ಷಣಮಾತ್ರದಲ್ಲಿ ಮತ್ತೊಬ್ಬರು ಆಕ್ರಮಿಸಿಕೊಳ್ಳುವ ಬಗೆಯಲ್ಲೇ ಲೋಕದ ಕೃತಕತೆ ಮತ್ತು ಮರುಕವಿಲ್ಲದ ಧಾವಂತವನ್ನು ಕವಿಗಳು ಇಲ್ಲಿ ಮಾರ್ಮಿಕವಾಗಿ ಬಿಂಬಿಸಿದ್ದಾರೆ.

ಬೆಳತನಕ ಕೇಳಿದರೂ ರಾಮಾಯಣ
ಉದ್ಧಾರ ಆಗ್ಲಿಲ್ಲ  ನಾರಾಯಣಾ!
ಛಲ ಕುಲವ ಸವರಿದ್ದು ಕೇಳಿಯೂ
ಬದಲಾಗುವುದೆ ಇಲ್ಲ ನಾಳೆಯೂ!
ಪೂಜೆ ಮಂತ್ರ ಜಪ ಪ್ರಾರ್ಥನೆ
ಆದ್ಯಂತ ತುಂಬಿದ್ದು ಸ್ವಾರ್ಥನೇ
ಮುಗಿದದ್ದೆ ಭಜನೆ  ಕೀರ್ತನೆ
ಮತ್ತೆ ಮೊದಲಿನ ಹಾಗೆ ಇರ್ತೆನೆ!
ಬರ್ತೆನೆ ಬಂದ್ ಹಾಂಗೆ ಹೋಗ್ತೆನೆ    
ಯಾವಾಗ ಉದ್ಧಾರ ಆಗ್ತೆನೆ?

ಟಿಪ್ಪಣಿ : ಈ ಕವಿತೆಯು ಕೇವಲ ಬಾಹ್ಯ ಆಚರಣೆಗಳು ಮತ್ತು ಮೂಢನಂಬಿಕೆಗಳಿಂದ ಮನುಷ್ಯನ ಮನಸ್ಸು ಪರಿವರ್ತನೆಯಾಗಲು ಸಾಧ್ಯವಿಲ್ಲ ಎಂಬುದನ್ನು ವ್ಯಂಗ್ಯ ಹಾಗೂ ನೇರವಾದ ಮಾತುಗಳಲ್ಲಿ ಪ್ರಶ್ನಿಸುತ್ತದೆ. ಕೇವಲ ಭಕ್ತಿ, ಪೂಜೆ-ಪುನಸ್ಕಾರಗಳಲ್ಲಿ ಕಾಲಹರಣ ಮಾಡುವ ಬದಲು ನಡತೆ ಮತ್ತು ಆಲೋಚನೆಗಳು ಬದಲಾಗದ ಹೊರತು ವ್ಯಕ್ತಿಯಾಗಲಿ ಅಥವಾ ಸಮಾಜವಾಗಲಿ ಉದ್ಧಾರವಾಗಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಇದು ಧ್ವನಿಸುತ್ತದೆ.