ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕರ್ಮದ ಧರ್ಮ

ಯಮುನಾ ಕಂಬಾರ
ಇತ್ತೀಚಿನ ಬರಹಗಳು: ಯಮುನಾ ಕಂಬಾರ (ಎಲ್ಲವನ್ನು ಓದಿ)

ಹನುಮನಿಗೆ ಒಂದು ದಿನ ಬಹಳ ಹೊಟ್ಟೆ ಹಸಿದಿತ್ತು.ಗವಿಯಲ್ಲಿ ತಿನ್ನಲು ಏನೂ ಇದ್ದಿರಲಿಲ್ಲ.ಆತ ಹೊರಗೆ ಬಂದು ಅತ್ತ ಇತ್ತ ನೋಡಿದ.ಅಲ್ಲೂ ಏನೂ ಸಿಗಲಿಲ್ಲ.ಮೂಡಣದತ್ತ ಮುಖ ಮಾಡಿದಾಗ ಉದಯಿಸುತ್ತಿರುವ ಸೂರ್ಯ ಹಣ್ಣಿನಂತೆ ಕಂಡನು.ಹಸಿದ ಹನುಮನು ಸಂತಸಗೊಂಡು ಬಾನಿಗೆ ನೆಗೆದನು.ಸೂರ್ಯನನ್ನು ತಿನ್ನಲು ಹೋದ ಹನುಮ ಇಂದ್ರನ ವಜ್ರಾಯುಧಕ್ಕೆ ಮೂಗು ಘಾಸಿಸಿಕೊಂಡು ಬಂದನು. ಹನುಮ ದೇವ ಶೌರ್ಯ ವರ್ಮನ ಮೂತಿ ಈಗಲೂ ಊದಿಯೇ ಇದೆ. ಭಕ್ತ ಸಾಗರನ ಪಾಡು ಹೀಗಾದರೆ ಹುಲುಮಾನವನ ಕತೆ ಏನು…? ಪ್ರಸ್ತುತ ಕತೆಯು ದಿ :೫-೧೦-೨೩ ರರ ವಿ.ಕ.ದಲ್ಲಿ ಅಕ್ಷಯ ಕಥಾ ವಿಭಾಗದಲ್ಲಿ ” ಸೂರ್ಯನ ಭಕ್ಷಿಸಲು ಹನುಮನ ಯತ್ನ ” ತಲೆ ಬರಹದಡಿ ಪ್ರಕಟವಾದ ಕತೆಯನಾಧರಿಸಿದ ಕವಿತೆ :ಕರ್ಮದ ಧರ್ಮ

ಮರುಳು ಮನುಜನೆ ದುರುಳು ನಿಷಿದ್ದ
ಹುರುಳು ಶೂನ್ಯದ ವಿಷಯ ವೇತಕೆ
ಹರಳು ಕಟ್ಟುವ ಕತೆಯ ಪೇಳುವೆ – ನಿನ್ನ ನೀತೆರೆಯೋ..
ಇರುಳು ಸಹಿತವು ಕಾಲ ಮಿತಿಯಲಿ
ಕರುಳು ಕೇಳುವ ರುಚಿಯು ಬೇಡವೊ
ಹೊರಳು ಮಗ್ಗುಲ ಹೊಸದು ದೃಶ್ಯಕೆ – ನಿನ್ನ ನೋಟವನೋ

ಭಕ್ತ ಸಾಗರ ಸ್ವಾಮಿ ದೇವನು
ಭಕ್ತಿ ಜಗಕೆ ಭಿತ್ತಿ ಬೆಳೆದನು
ಯುಕ್ತಿ ಧರಿಸೀ ಲಂಕೆ ಸುಡುತಲಿ – ಗರ್ವ ಬಿಡಿಸಿದನೋ
ಮುಕ್ತಿ ಲೋಕಕೆ ಭಕ್ತಿ ಜೀವನ
ಮುಕ್ತ ಮನಸನು ಧರಿಸಿ ಪೂಜಿಸು
ಶಕ್ತಿ ಕೇವಲ ಬಾಹ್ಯ ಡಂಗುರ – ತಿಳಿವ ತೋರಿದನೋ

ನೀಲ ಮೇಘನ ಮೊಗದಿ ಮೂಡಿದಾ
ಜಾಲ ಕೊಚ್ಚಿದ ಬಾಲ ಸೂರ್ಯನು
ಕಾಲ ಕರೆಯಲಿ ತನ್ನ ಕರ್ಮದ – ಸೇವೆ ಸುಗ್ಗಿಯಲೀ..
ಬಾಲ ಹನುಮನು ಹಸಿದು ಹಸಿದೂ
ಕಾಲ ಸಹಿಸದೆ ಮುಗಿಲ ನೋಡುತ
ಬಾಲ ರವಿಯನು ಹಣ್ಣೇ ಭ್ರಮಿಸಿ – ಭವದಿ ಕೆಟ್ಟಿಹನೋ……

ದೇವ ಮಹೇಂದ್ರ ರವಿಯ ಬೆನ್ನಿಗೆ
ಯಾವ ಯಾತನೆ ತಾಗ ದಂತೆಯೆ
ಜಾವ ಜಪಿಸುತ ಬಾಲ ಹನುಮನ – ಮೂತಿ ಘಾಸಿಪನೋ
ಬೇವು ಸಹಿಸುತ ಹನುಮ ದೇವನು
ಕಾವು ತಾಳದೆ ಧ್ಯಾನ ಗೈಯುತ
ಮಾವು ಹಣ್ಣಿನಾ ತೆರದಿ ಬದುಕನು – ಬೆಲ್ಲ ಗೈದಿಹನೋ….

ಕೃತಿಯು ಕರ್ಮವು ಮಾತು ಕರ್ಮವು
ಮಿತಿಯ ತಾಳದೆ ರೂಪ ಪಡೆವುದು
ಮತಿಯ ಕೇಳದೆ ತನ್ನ ಧರ್ಮವ – ಗೈಯೆ ಗೈಯುವುದೋ..
ಇತಿಯೆ ಹೇಳುವ ಹನುಮ ಮೂತಿಯು
ಕತೆಯು ತನ್ನನು ತಾನು ಹೊಸೆಯುತ
ಜೊತೆಯೆ ಸಾಗಿದೆ ಕರ್ಮ ಕತೆಯೋ – ನಿನ್ನ ಗತಿಯೇನೋ….