ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ಮಿತಾ ರಾಘವೇಂದ್ರ
ಇತ್ತೀಚಿನ ಬರಹಗಳು: ಸ್ಮಿತಾ ರಾಘವೇಂದ್ರ (ಎಲ್ಲವನ್ನು ಓದಿ)

ನಾನು ಗಮನಿಸಲಿಲ್ಲ
ಏನನ್ನೂ
ನಿನ್ನ ಕಂಗಳಲಿ ಬಿಂಬವಾಗುವ
ಪುಳಕಕ್ಕೆ ಜೋತು ಬಿದ್ದು
ಮತ್ತೆ ಮತ್ತೆ ಹತ್ತಿರವಾಗುತ್ತಲೇ ಇದ್ದೆ

ಸುತ್ತುವರಿದ ಮಾಯೆ,ಮೋಹ
ಉಹೂ ಯಾವುದೂ
ವಿಚಲಿತಗೊಳಿಸಲೇ ಇಲ್ಲ
ಆ ಕಪ್ಪು ಚುಕ್ಕಿಯ ಮೇಲೆ
ಕೇಂದ್ರಿತವಾದ ಧ್ಯಾನದ
ಹೊರತೂ

ನೋಟಗಳು ಭೇಟಿಯಾಗುವ ಗಳಿಗೆ
ಏನಿಲ್ಲ ಸುಮ್ಮನೇ ಘಟಿಸುವುದು
ಮಾತನಾಡುತ್ತವೆ ಕಂಗಳೂ ಎಂದು
ಅಂದೇ ಅರ್ಥವಾಗಿದ್ದು.
ದೇಹವೊಂದು ಪಕ್ಕಾ ಸೈನ್ಸು
ಎನ್ನುವವಳಿಗೆ
ಜ್ಞಾನೇಂದ್ರಿಯಗಳೆಲ್ಲ ಪ್ರೀತಿಯ ದ್ಯೋತಕವಾಗಿದ್ದು ಯಾವಾಗ.

ಇಡಿ ಇಡಿಯಾಗಿ ಆವರಿಸಿದ ಮೇಲೆ
ಬಿಡಿ ಬಿಡಿಯಾಗಿ ವರ್ಣಿಸಲು
ಚೂರು ಹಿಂಜರಿಕೆ ಗೆಳೆಯಾ
ಹಿಡಿಯಷ್ಟು ಹೃದಯದಲ್ಲೀಗ
ಹದ ಬೆಂದ ಭಾವ.

ಎಲ್ಲ ನಾಕಾ ಬಂದಿಗಳನ್ನು ದಾಟಿ
ಬಿಂಬ ಹುಡುಕುವ ಆಟದಲಿ
ಮೈ ಮರೆತವಳಿಗೆ
ನಿನ್ನ ಹೆಜ್ಜೆಯ ಹಿಮ್ಮುಖ ಚಲನೆ
ಅರಿವಾಗಲೇ ಇಲ್ಲ..