ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಾಚಾ ನೆಹರು ಮತ್ತು ನಮ್ಮ ಮಕ್ಕಳು

ವಿವೇಕಾನಂದ ಎಚ್.ಕೆ.
ಇತ್ತೀಚಿನ ಬರಹಗಳು: ವಿವೇಕಾನಂದ ಎಚ್.ಕೆ. (ಎಲ್ಲವನ್ನು ಓದಿ)

ನವೆಂಬರ್ 14

ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ ಹುಟ್ಟುಹಬ್ಬ ಮತ್ತು ಅದರ ಅಂಗವಾಗಿ ಮಕ್ಕಳ ದಿನಾಚರಣೆ.

ಈ ಕ್ಷಣದಲ್ಲಿ ನಿಮಗೆ ಭಾರತದ ಬಗೆಗೆ ಯಾವ ಅಭಿಪ್ರಾಯ – ದೃಷ್ಟಿಕೋನ – ನಿಲುವು ಇದೆಯೋ ಅದಕ್ಕೆ ಮೂಲ ಕಾರಣ ಜವಹರಲಾಲ್ ನೆಹರು.

ಒಂದು ವೇಳೆ ನಿಮ್ಮ ಅಭಿಪ್ರಾಯ

ಈ 75 ವರ್ಷಗಳಲ್ಲಿ ಭಾರತ ಅತ್ಯಂತ ಭ್ರಷ್ಟವಾಗಿ, ವ್ಯವಸ್ಥೆ ಅಧೋಗತಿಗೆ ಇಳಿದಿದೆ, ವಿಶ್ವದ ಇತರೆ ಅಭಿವೃದ್ಧಿ ದೇಶಗಳನ್ನು ನೋಡಿದಾಗ ನಾವು ತಲೆ ತಗ್ಗಿಸಬೇಕಾಗಿದೆ. ಜನರ ಜೀವನಮಟ್ಟ ಕುಸಿದಿದೆ, ಅರಾಜಕತೆ ಎಲ್ಲೆಲ್ಲೂ ತಾಂಡವವಾಡುತ್ತಿದೆ ಎನಿಸಿದರೆ ಅದಕ್ಕೆ ನೆಹರು ಅವರನ್ನೇ ಹೆಚ್ಚಾಗಿ ಹೊಣೆ ಮಾಡಬೇಕಾಗುತ್ತದೆ.

ಒಂದು ವೇಳೆ ನಿಮ್ಮ ಅಭಿಪ್ರಾಯ…..

ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಇಂದು ತಲೆ ಎತ್ತಿ ನಿಂತಿದೆ, ಬಲಿಷ್ಠ ಸೈನಿಕ ಮತ್ತು ‌ಆರ್ಥಿಕ‌ ಶಕ್ತಿಯಾಗಿದೆ, ಅತ್ಯುತ್ತಮ ಪ್ರಜಾಪ್ರಭುತ್ವ ಮತ್ತು ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿದೆ, ನಾವೆಲ್ಲರೂ ಇರುವುದರಲ್ಲಿ ಬಹುತೇಕ ಉತ್ತಮ ಜೀವನ ನಡೆಸುತ್ತಿದ್ದೇವೆ. ಹಲವಾರು ಕೊರತೆಗಳ ನಡುವೆಯೂ ನಮ್ಮ ತಂದೆ ತಾಯಿಗಳ ಕಾಲಕ್ಕಿಂತ ಈಗ ನಮ್ಮ ಬದುಕು ಸಮಾಧಾನಕರವಾಗಿದೆ ಎಂದು ಅನಿಸುವುದಾದರೆ ಅದಕ್ಕೂ ಪಂಡಿತ್ ನೆಹರು ಅವರೇ ಕಾರಣ….

ಬೃಹತ್ ವಿಸ್ತೀರ್ಣದ ವೈವಿಧ್ಯಮಯ ನೆಲ ಭಾರತ ಎಂಬ ಹೆಸರಿನಲ್ಲಿ ಅನೇಕ ಪ್ರಾಂತ್ಯಗಳ ಒಕ್ಕೂಟವಾಗಿ, ಪ್ರಜಾಸತ್ತಾತ್ಮಕ ಸಂವಿಧಾನಾತ್ಮಕ ಸ್ವಾತಂತ್ರ್ಯ ಗಣರಾಜ್ಯವಾಗಿ ಅಸ್ತಿತ್ವಕ್ಕೆ ಬಂದಾಗ ಅದರ ನಾಯಕತ್ವ ವಹಿಸಿದ್ದು ನೆಹರು. ಸುಮಾರು 14 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದರು.

ಇತಿಹಾಸವನ್ನು ಅಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ನಾವು ಪರಿಗಣಿಸಿದರೆ ಅದು ಹೆಚ್ಚು ವಾಸ್ತವಿಕವಾಗಿ ನಮಗೆ ಪರಿಚಯವಾಗುತ್ತದೆ. ಇಲ್ಲದಿದ್ದರೆ ಇಂದಿನ ದಿನಗಳಲ್ಲಿ ಪರಿಣಾಮ ಫಲಿತಾಂಶ ಆಧರಿಸಿ ಅಂದಿನ ಇತಿಹಾಸ ವಿಮರ್ಶಿಸಿದರೆ ಆಗ ಬೇರೆಯದೇ ಅರ್ಥ ದೊರೆಯುತ್ತದೆ.

ಕೆಲವು ಅಪವಾದಗಳ ನಡುವೆಯೂ ನೆಹರು ಪ್ರಜ್ಞಾವಂತ, ಬುದ್ದಿವಂತ ಮತ್ತು ದೂರದೃಷ್ಟಿಯ ನಾಯಕರಾಗಿದ್ದರು. ಹೆಚ್ಚಿನ ಓದು, ಪ್ರವಾಸ ಮತ್ತು ಗಾಂಧಿಯವರ ಪ್ರಭಾವದಿಂದಾಗಿ ಭಾರತದ ಸಂಸ್ಕೃತಿಯನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದರು. ಭಿನ್ನತೆಯಲ್ಲೂ ಐಕ್ಯತೆಯ ಮಹತ್ವ ಮತ್ತು ಸರ್ವ ಧರ್ಮಗಳ ಸಮನ್ವಯದ ಪ್ರಾಮುಖ್ಯತೆಯನ್ನು ಬಲ್ಲವರಾಗಿದ್ದರು. ಆ ಕಾರಣದಿಂದಲೇ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸದೆ ವಿವೇಚನೆಯಿಂದ ಕಾರ್ಯನಿರ್ವಹಿಸಿದರು.

ಆಗಿನ್ನೂ ಕೃಷಿ ಪ್ರಧಾನವಾದ, ಗುಡಿ ಕೈಗಾರಿಕೆಗಳ, ಅನಕ್ಷರಸ್ಥ, ಗಾಢವಾದ ನಂಬಿಕೆಗಳ, ಬಡತನವೇ ಪ್ರಧಾನವಾಗಿದ್ದ ಸಮಾಜವನ್ನು ಆರ್ಥಿಕವಾಗಿ ಮುನ್ನಡೆಸಲು ಸಾರ್ವಜನಿಕ ಸಹಭಾಗಿತ್ವದ ಅನೇಕ ಉದ್ದಿಮೆಗಳನ್ನು ಸ್ಥಾಪಿಸಿದರು. ಆ ಉದ್ದಿಮೆಗಳ ಉದ್ಯೋಗಿಗಳ ಮೊಮ್ಮಕ್ಕಳೇ ಇಂದಿನ ಆಧುನಿಕ ಭಾರತೀಯ ಸಮಾಜದ ಕೃಷಿ ಹೊರತುಪಡಿಸಿ ಇತರ ಎಲ್ಲಾ ಕ್ಷೇತ್ರಗಳನ್ನು ಮುನ್ನಡೆಸುತ್ತಿರುವ ಯುವ ಜನಾಂಗ.

ಅದೇ ಮೊಮ್ಮಕ್ಕಳೇ ಇಂದು ಚಾಚಾ ನೆಹರು ಅವರನ್ನು ಬೇರೆ ಬೇರೆ ಕಾರಣಕ್ಕಾಗಿ ತೀವ್ರವಾಗಿ ಟೀಕಿಸುತ್ತಿರುವವರು ಎಂಬುದು ವಿಪರ್ಯಾಸ.

ಕೃಷಿ ಮತ್ತು ಸಮಗ್ರ ಅಭಿವೃದ್ಧಿಗಾಗಿ, ಬಡತನ ನಿರ್ಮೂಲನೆಗಾಗಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದರು. ಅದು ಈ ವ್ಯವಸ್ಥೆಯಲ್ಲಿ ಸಾಧಾರಣ ಯಶಸ್ಸು ಗಳಿಸಲು ಮಾತ್ರ ಸಾಧ್ಯವಾಯಿತು.

ಆಗಿನ ರಕ್ಷಣಾ ದೃಷ್ಟಿಯಿಂದ ಸೈನಿಕವಾಗಿ ಅಷ್ಟೇನು ಪ್ರಬಲವಾಗಿಲ್ಲದ ಮತ್ತು ಇಡೀ ವಿಶ್ವವನ್ನೇ ಕಾಡಿದ ಎರಡು ಮಹಾಯುದ್ಧಗಳ ಭಯದಿಂದ ನೆಹರು ಅವರು ಭಾರತದ ಸುಭದ್ರತೆಗಾಗಿ ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿದರು. ಈಗ ಅದು ಟೀಕೆಗೆ ಒಳಗಾದರು ಆಗ ಅದು ಭಾರತದ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಒಳ್ಳೆಯ ಮತ್ತು ಪರಿಣಾಮಕಾರಿ ನೀತಿಯಾಗಿತ್ತು.

ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ಇಂದು ಬಲಿಷ್ಠ ಮರವಾಗಿ ಬೆಳೆಯಲು ನೆಹರು ಅವರ ಪ್ರಾಮಾಣಿಕತೆ ಕಾರಣವಾಯಿತು ಎಂಬುದನ್ನು ಮರೆಯಬಾರದು. ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದ ಪಾಕಿಸ್ತಾನ ಮತ್ತು ಆಫ್ರಿಕಾದ ಕೆಲವು ದೇಶಗಳ ಇಂದಿನ ಅರಾಜಕತೆಯನ್ನು ಗಮನಿಸಿದಾಗ ನಮಗೆ ಇದರ ಮಹತ್ವ ಅರಿವಾಗುತ್ತದೆ.

ಆ, ಒಂದಷ್ಟು ಭ್ರಷ್ಟಾಚಾರ, ಅನುವಂಶಿಕ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದ್ದು, ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿರುವುದು, ಚೀನಾದ ಆಕ್ರಮಣ ತಡೆಯಲು ವಿಫಲವಾಗಿದ್ದು ಮುಂತಾದ ಟೀಕೆಗಳು ಅವರ ಮೇಲಿದೆ. ಆಗಿನ್ನೂ ರಾಜಪ್ರಭುತ್ವದಿಂದ, ಬ್ರಿಟಿಷರ ಗುಲಾಮಿತನದ ಪ್ರಭಾವದಿಂದಾಗಿ ಹೊರಬರುತ್ತಿದ್ದ ಸಂದರ್ಭದಲ್ಲಿ, ಆಧುನಿಕ ಸಂಪರ್ಕ ಸಾಧನಗಳು, ಮಾಧ್ಯಮಗಳು ಹೆಚ್ಚಿನ ಪ್ರಭಾವ ಇಲ್ಲದೇ ಇದ್ದ ಸಮಯದಲ್ಲಿ ಸಹಜವಾಗಿ ಒಂದಷ್ಟು ದೌರ್ಜನ್ಯಗಳು, ಪಕ್ಷಪಾತಗಳು, ಅನ್ಯಾಯಗಳು ಆಗಿರುವುದು ನಿಜ.

ಈಗಿನ ಕಾಲದಲ್ಲೇ ಅಪ್ಪ ಮಕ್ಕಳು ಮೊಮ್ಮಕ್ಕಳ ರಾಜಕೀಯ, ಜಾತೀಯತೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತುಂಬಿ ತುಳುಕುತ್ತಿರುವಾಗ ಆಗ ಇದು ಇದ್ದದ್ದು ಆಶ್ಚರ್ಯವೇನು ಇಲ್ಲ.

ಒಟ್ಟಿನಲ್ಲಿ ಸ್ವಾತಂತ್ರ್ಯ ನಂತರದ ಭಾರತದ ಒಟ್ಟು ಆಡಳಿತಾತ್ಮಕ ಅಭಿವೃದ್ಧಿ ಗಮನಿಸಿದಾಗ ಜವಹರಲಾಲ್ ನೆಹರು ಅವರನ್ನು ಆಧುನಿಕ ಭಾರತದ ಅಡಿಪಾಯ ಹಾಕಿದ ಶಿಲ್ಪಿ ಎಂದು ಕರೆಯಲು ಅರ್ಹ ವ್ಯಕ್ತಿ ಎಂದು ಪರಿಗಣಿಸಬಹುದು.ಉಳಿದದ್ದು ಭಾರತದ ಇತಿಹಾಸವನ್ನು ನೀವು ಗ್ರಹಿಸುವ ದೃಷ್ಟಿಕೋನವನ್ನು ಅವಲಂಬಿಸಿದೆ.

ಜವಹರಲಾಲ್ ನೆಹರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುನ್ನು ಹೇಳುತ್ತಾ…..

ನಿಮ್ಮ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಗೌರವಿಸುತ್ತಾ….

ಮಕ್ಕಳ ಬಗೆಗೆ ಬರೆಯಲು ಮನಸ್ಸೇಕೋ ಹಿಂಜರಿಯುತ್ತಿದೆ.
ಭಾವನೆಗಳು ಮುದುಡುತ್ತಿದೆ,
ಅಕ್ಷರಗಳು ತಡಕಾಡುತ್ತಿವೆ.

ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ…..

ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು…..

ಆಸ್ತಿ ಮತ್ತು ಕೌಟುಂಬಿಕ ಕಲಹದಿಂದ ಮಗನೊಬ್ಬ ತನ್ನ ತಂದೆಯ ಎರಡೂ ಕಣ್ಣುಗಳನ್ನು ಕಿತ್ತ ಘಟನೆ ಹಿಂದೆ ನಡೆದಿತ್ತು……..

ಇದು ಕೇವಲ ಕೆಲವು ಘಟನೆಗಳು ಮಾತ್ರ. ಒಟ್ಟಾರೆ ಸಮಾಜದಲ್ಲಿ ಹಿಂಸೆ ಹೆಚ್ಚಾಗುತ್ತಿದೆ. ತಂದೆ ತಾಯಿ ಮಕ್ಕಳ ನಡುವಿನ ಒಂದು ಸಂಘರ್ಷಮಯ ಅಸಮಾಧಾನ ಆಂತರ್ಯದಲ್ಲಿ ಹೊಗೆಯಾಡುತ್ತಿದೆ.

ಬಹುಮುಖ್ಯವಾಗಿ ತಂದೆ ಮತ್ತು ಗಂಡು ಮಗ/ಮಕ್ಕಳು, ತಾಯಿ ಮತ್ತು ಹೆಣ್ಣು ಮಗಳು/ಮಕ್ಕಳು ನಡುವೆ ಒಂದು ಸಾಮಾಜಿಕ ಸಂಘರ್ಷ ಜಾರಿಯಲ್ಲಿದೆ. ಅದರಲ್ಲೂ ಯೌವ್ವನದ ಸಮಯದಲ್ಲಿ ಈ ಜನರೇಷನ್ ಗ್ಯಾಪ್ ತುಂಬಾ ದೊಡ್ಡದಾಗುತ್ತಿದೆ. ಬಹಳಷ್ಟು ಪೋಷಕರು ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ.

ಕೆಲವು ಒಳ್ಳೆಯ ಕೌಟುಂಬಿಕ ಸಂಬಂಧಗಳು ಈಗಲೂ ಉಳಿದಿರುವುದು ನಿಜ. ತಂದೆ ತಾಯಿ ಮಕ್ಕಳು ಅತ್ಯಂತ ಗೌರವಯುತವಾಗಿ ಒಬ್ಬರಿಗೊಬ್ಬರು ಪೂರಕವಾಗಿ ಪ್ರೀತಿಯಿಂದ ಚರ್ಚಿಸುತ್ತಾ ಅನ್ಯೋನ್ಯವಾಗಿ ಇದ್ದಾರೆ. ಅದನ್ನು ನೋಡಿದಾಗ ತುಂಬಾ ಸಂತೋಷವಾಗುತ್ತದೆ.

ಆದರೆ ಆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಯೋಚಿಸಬೇಕಿದೆ.

ಬಹಳಷ್ಟು ಜನರು ಯೋಚಿಸುವಂತೆ ಈಗಿನ ಯುವಜನಾಂಗವೇ ಇದಕ್ಕೆಲ್ಲಾ ಹೊಣೆ ಎಂಬುದು ಖಂಡಿತ ತಪ್ಪಾಗುತ್ತದೆ. ಇದನ್ನು ವೈಯಕ್ತಿಕ ನೆಲೆಯಲ್ಲಿ ನನ್ನ ಮಗ ಸರಿ ಇಲ್ಲ, ನನ್ನ ಮಗಳು ಸರಿ ಇಲ್ಲ, ನನ್ನ ತಂದೆ ಸರಿ ಇಲ್ಲ ಎಂದು ನೋಡದೆ ಇಡೀ ಸಾಮಾಜಿಕ ವ್ಯವಸ್ಥೆಯ ಬದಲಾವಣೆಗಳನ್ನು ಗಮನಿಸಬೇಕು. ಬಹುತೇಕರ ಮನೆಯಲ್ಲಿ ಈ ಸಮಸ್ಯೆ ಬೇರೆ ಬೇರೆ ರೂಪದಲ್ಲಿ ಇದೆ .
ನಮ್ಮ ಮನೆಯಲ್ಲಿ ಮಾತ್ರ ಎಂಬುದನ್ನು ದಯವಿಟ್ಟು ಬಿಟ್ಟುಬಿಡಿ.

ಮೊದಲಿಗೆ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ,
ವ್ಯವಸ್ಥೆಯೇ ಬದಲಾಗಿದೆ. ಸಂಪರ್ಕ ಕ್ರಾಂತಿ ಎಲ್ಲರನ್ನೂ ಬೆಸೆದಿದೆ. ಉದ್ಯೋಗ ಮತ್ತು ಹಣಕಾಸಿನ ಪರಿಸ್ಥಿತಿ ಸ್ವತಂತ್ರ ಚಿಂತನೆಗೆ ಅವಕಾಶ ಕಲ್ಪಿಸಿದೆ. ಪೋಷಕರು ಅಥವಾ ಮಕ್ಕಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಮನೋರಂಜನೆ ಎಲ್ಲಾ ಮಿತಿಗಳನ್ನು ಮೀರಿದೆ. ಮಾನವೀಯ ಮೌಲ್ಯಗಳು ಮತ್ತು ವೈಯಕ್ತಿಕ ಸಂಬಂಧಗಳ ಗಾಢತೆಯಲ್ಲಿ ಮೊದಲಿನಷ್ಟು ನಿರೀಕ್ಷಿ ಇಟ್ಟುಕೊಳ್ಳುವಂತಿಲ್ಲ. ಒತ್ತಡದ ಜೀವನಶೈಲಿ ತಾಳ್ಮೆಯ ಮಟ್ಟ ಕುಸಿಯುವಂತೆ ಮಾಡಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಬದಲಾವಣೆಗಳು ಮಿಂಚಿನಂತೆ ಆಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಯುವ ಜನಾಂಗದ ಮನಸ್ಥಿತಿ ಮೊದಲಿನಂತೆ ಇಲ್ಲ.

ಹಿಂದೆಯೂ ಈ ಸಂಘರ್ಷ ಇತ್ತು. ಜನಸಂಖ್ಯೆಗೆ ಅನುಗುಣವಾಗಿ ನೋಡಿದಾಗಲೂ ಈ ಪ್ರಮಾಣ ತುಂಬಾ ಕಡಿಮೆಯಿತ್ತು. ಆಗ ಹಿಂಸಾತ್ಮಕ ರೂಪ ಬಹಳ ವಿರಳವಿತ್ತು.


ಮಕ್ಕಳಿಗೆ ಬುದ್ದಿ ಹೇಳಬೇಕು, ಸಂಸ್ಕಾರ ಕಲಿಸಬೇಕು, ಮೊಬೈಲ್ ಕೊಡಬಾರದು, ಹೆದರಿಕೆ ಹುಟ್ಟಿಸಬೇಕು ಮುಂತಾದ ಕ್ರಮಗಳು ಹಳತಾಗಿವೆ. ಅದರಿಂದ ಹೆಚ್ಚಿನ ಪರಿಣಾಮ ಆಗುತ್ತಿಲ್ಲ.

ಮಕ್ಕಳ ಗ್ರಹಿಕೆಯ ಬುದ್ದಿಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಬಹುಬೇಗ ಸಮಾಜದ ಎಲ್ಲಾ ವಿಷಯಗಳು ಅವರಿಗೆ ತಿಳಿಯುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇದರಿಂದಾಗಿ ಅತಿಹೆಚ್ಚು ಅಪಾಯಕಾರಿ ಮತ್ತು ಪೋಷಕರಿಗೆ ತಲೆ ಬಿಸಿಯಾಗಿರುವುದು ಮಕ್ಕಳು ದುಶ್ಚಟಗಳ ದಾಸರಾಗುತ್ತಿರುವುದು. ಕೇವಲ ಸಿಗರೇಟು ಮದ್ಯಪಾನ ಮಾತ್ರವಲ್ಲದೆ ಹುಕ್ಕಾ ಬಾರ್, ಡ್ರಗ್ಸ್, ಬೆಟ್ಟಿಂಗ್ ಅವರ ಆಯ್ಕೆಗಳಾಗಿವೆ.

ನಂತರದಲ್ಲಿ ಮೊಬೈಲ್ ವೀಡಿಯೋ ಗೇಮ್ ಮತ್ತು ಬೈಕುಗಳ ಹುಚ್ಚು ಸಾಹಸ ಅವರನ್ನು ಆಕರ್ಷಿಸುತ್ತಿದೆ.

ಇದನ್ನು ಹೊರತುಪಡಿಸಿ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವ ಅತ್ಯಂತ ಗಾಢವಾಗಿ ಅವರನ್ನು ಸೆಳೆಯುವ ಚಟುವಟಿಕೆಗಳ ಬಗ್ಗೆ ಪೋಷಕರು ಚಿಂತೆಗೀಡಾಗಿದ್ದಾರೆ.

ಇದನ್ನು ಎದುರಿಸುವ ಬಗೆ ಹೇಗೆ ??????

ಇದು ಅಷ್ಟು ಸುಲಭವಲ್ಲ. ಮೊದಲೇ ಹೇಳಿದಂತೆ ಇದು ವೈಯಕ್ತಿಕ ನೆಲೆ ಮೀರಿ ಸಾಮಾಜಿಕ ಸಮಸ್ಯೆಯಾಗಿ ಎಲ್ಲಾ ಕಡೆ ಹರಡಿದೆ. ಶಾಲೆ, ಸ್ನೇಹಿತರು, ಸಾಮಾಜಿಕ ಜಾಲತಾಣಗಳು ಮುಂತಾದ ಎಲ್ಲವೂ ಈ ಮಕ್ಕಳು ಹದಗೆಡಲು ಪೂರಕ ವಾತಾವರಣ ಕಲ್ಪಸಿರುವಾಗ ಅದನ್ನು ತಡೆಯುವುದು ಹೇಗೆ ????????

ಮಕ್ಕಳ ಮೇಲೆ ಅತಿಯಾದ ನಿಯಂತ್ರಣ ಮತ್ತು ನಿರೀಕ್ಷೆ ಇಟ್ಟುಕೊಳ್ಳಬಾರದು.
ಆದರೆ ಅದೇ ಸಮಯದಲ್ಲಿ ಈಗಿರುವುದಕ್ಕಿಂತ ಎರಡು ಪಟ್ಟು ಪ್ರೀತಿ ಮತ್ತು ಮಕ್ಕಳ ಮೇಲಿನ ಕಾಳಜಿಯನ್ನು ದುಪ್ಪಟ್ಟು ಮಾಡಬೇಕು. ಇದು ಕೇವಲ ಕಾಟಾಚಾರಕ್ಕೆ ಆಗದೆ ಜವಾಬ್ದಾರಿಯುತವಾಗಿ ಆಗಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ವೇಳೆ ಮಕ್ಕಳು ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದರೆ ಅದರ ಅವಶ್ಯಕತೆ ಇಲ್ಲ. ದಾರಿ ತಪ್ಪಿದ್ದಾರೆ ಎಂದು ಮನವರಿಕೆಯಾದಾಗ‌ ಇದು ಅತ್ಯಂತ ಅವಶ್ಯ.

ಹದಿಹರೆಯದಲ್ಲಿ ಮಕ್ಕಳು ದುಶ್ಚಟ ಅಥವಾ ಪ್ರೀತಿಗೆ ಒಳಗಾಗಿದ್ದಾರೆ ಎಂದು ಪೋಷಕರಿಗೆ ತಿಳಿದಾಗ ಅವರು ವಿಲವಿಲ ಒದ್ದಾಡಿಬಿಡುತ್ತಾರೆ. ಸಮಾಜದ ನೀತಿ ನಿಯಮಗಳಿಗೆ ಹೆದರಿ ಅತ್ಯಂತ ಆಕ್ರೋಶ ಭರಿತರಾಗುತ್ತಾರೆ. ಸಮಸ್ಯೆಯ ಮೂಲ ಇರುವುದು ಇಲ್ಲಿಯೇ !!!!!

ಇದೊಂದು ಅಗ್ನಿ ಪರೀಕ್ಷೆ. ನಾವೇ ಹುಟ್ಟಿಸಿ ಪ್ರೀತಿಯನ್ನು ಧಾರೆ ಎರೆದು ಬೆಳೆಸಿದ ಮಗು ಈಗ ನಮ್ಮ ಕಣ್ಣ ಮುಂದೆಯೇ ಸಮಾಜದ ಒಪ್ಪಿತ ನಿಯಮಗಳಿಗೆ ವಿರುದ್ಧವಾಗಿ ಹಾಳಾಗುವ ವರ್ತನೆ ತೋರುತ್ತಿರುವಾಗ ನಾವು ತುಂಬಾ ತುಂಬಾ ತಾಳ್ಮೆಯ ಪ್ರಬುದ್ದತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಇಲ್ಲದಿದ್ದರೆ ಮಕ್ಕಳ ಜೊತೆ ಇಡೀ ಕುಟುಂಬವೇ ನಾಶವಾಗುವ‌ ಸಾಧ್ಯತೆ ಇದೆ.

ನಮ್ಮ ಬಂಧು ಬಳಗ ಸ್ನೇಹಿತರು ನೆರೆಹೊರೆಯವರು ಈ ಸಂದರ್ಭದಲ್ಲಿ ನಮ್ಮ ನೆರವಿಗೆ ಬರದೆ ಕುಹುಕವಾಡುವ ಸಾಧ್ಯತೆಯೇ ಹೆಚ್ಚು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದೆ ದಿಟ್ಟತನದಿಂದ ಸಮಸ್ಯೆಯ ಮೂಲವನ್ನು ಕಂಡುಹಿಡಿದು ಮಗು ನನ್ನ ದೇಹದ ಒಂದು ಭಾಗ ಅದರ ಎಲ್ಲಾ ಒಳಿತು ಕೆಡಕುಗಳಿಗೆ ನಾನೂ ಸಹ ಜವಾಬ್ದಾರ ಎಂದು ನಮ್ಮ ಸಂಪೂರ್ಣ ಪ್ರಯತ್ನ ಹಾಕಬೇಕು. ಅದು ಬಿಟ್ಟು ಕೋಪದ ಮನಸ್ಥಿತಿಯಲ್ಲಿ ಮಕ್ಕಳನ್ನು ನಮ್ಮಿಷ್ಟದಂತೆ ದಂಡಿಸಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ದುರಂತದ ಅಂತ್ಯ ಕಾಣಬೇಕಾಗುತ್ತದೆ.

ಇದು ತಾತ್ಕಾಲಿಕ ಪ್ರಯತ್ನವಾಗಬಾರದು. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು.
ಬಹುಬೇಗ ನಿರಾಶರಾಗಬಾರದು.

ಇದಲ್ಲದೆ ನಮ್ಮ ನಮ್ಮ ಅನುಭವದ ಆಧಾರದಲ್ಲಿ ಇನ್ನಷ್ಟು ಯೋಚಿಸಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಇದನ್ನು ಮೊದಲೇ ಊಹಿಸಿ ಸಾಧ್ಯವಾದಷ್ಟು ಪ್ರೀತಿ ಮತ್ತು ಜವಾಬ್ದಾರಿಯ ಮುನ್ನೆಚ್ಚರಿಕೆ ತುಂಬಾ ತುಂಬಾ ಅವಶ್ಯ.

ಏನೇ ಆದರೂ ‌ಧೃತಿಗೆಡದೆ ಸಮಸ್ಯೆಗಳನ್ನು ಎದುರಿಸುವುದು ನಮ್ಮ ಬದುಕಿನ ಭಾಗವಾಗಿ ಮಾಡಿಕೊಂಡರೆ ದುರಂತಗಳ ಸಾಧ್ಯತೆಯನ್ನು ಇಲ್ಲವಾಗಿಸಬಹುದು.

ಮತ್ತೊಮ್ಮೆ ಹೇಳುತ್ತೇನೆ. ಇದು ಸಾಮಾಜಿಕ ಸಮಸ್ಯೆ. ಇಂತಹ ಸಮಾಜದಲ್ಲಿ ಇದು ಸಾಮಾನ್ಯ. ಇದರಿಂದ ತಪ್ಪಿಸಿಕೊಳ್ಳಲು ಆಗದು. ಎದುರಿಸುವುದನ್ನು ಕಲಿಯಬೇಕು ಮತ್ತು ಬಂದದನ್ನು ಸ್ವೀಕರಿಸಬೇಕು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.


ವಿವೇಕಾನಂದ ಎಚ್.ಕೆ.

9844013068……