ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದ್ರೋಣ್ ಪ್ರತಾಪ ಎಪಿಸೋಡ್ ನ ಇನ್ನೊಂದು ಮಜಲಿನ ಬಗ್ಗೆ ಲೇಖಕರು ತಮ್ಮ ವಿಚಾರವನ್ನು ಮಂಡಿಸುವ ಪ್ರಯತ್ನ ಮಾಡಿದ್ದಾರೆ.
ವಿವೇಕಾನಂದ ಎಚ್.ಕೆ.
ಇತ್ತೀಚಿನ ಬರಹಗಳು: ವಿವೇಕಾನಂದ ಎಚ್.ಕೆ. (ಎಲ್ಲವನ್ನು ಓದಿ)

ದ್ರೋಣ್ ಪ್ರತಾಪ್ ಎಂಬ ಎಳೆಯ ಹುಡುಗನ ವೈಮಾನಿಕ ಸಾಧನೆ ಮತ್ತು ಅನುಮಾನಗಳ ಸುತ್ತಾ……

ಮೇಲ್ನೋಟಕ್ಕೆ ಆತನ ಧ್ವನಿ, ಇಂಗ್ಲಿಷ್‌ ಭಾಷೆ, ದ್ರೋಣ್ ತಂತ್ರಜ್ಞಾನದ ಬಗ್ಗೆ ಆತನಿಗಿರುವ ಜ್ಞಾನ ನಿಜಕ್ಕೂ ಕುತೂಹಲ ಮತ್ತು ಆಕರ್ಷಕವಾಗಿದೆ. ಗ್ರಾಮೀಣ ಪ್ರತಿಭೆಯಾದ ಆತನ ವಯಸ್ಸು ಸುಮಾರು 24 ರ ಸುತ್ತಮುತ್ತ ಇರಬೇಕು. ಕಳೆದ ಎರಡು ಮೂರು ವರ್ಷಗಳಲ್ಲಿ ಆ ಯುವ ವಿಜ್ಞಾನಿಯ ಸ್ಪೂರ್ತಿದಾಯಕ ಸುದ್ದಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿತ್ತು. ಇತ್ತೀಚೆಗೆ ಒಂದು ವಾರದಿಂದ ಆತನ ಸಾಧನೆಯ ಸುತ್ತ ಅದೇ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸುತ್ತಿವೆ.

ಮೊದಲನೆಯದಾಗಿ ಆತ ಇನ್ನೂ ಎಳೆಯ ವಯಸ್ಸಿನ ಯುವಕ. ನಾವು ಏನೇ ಅಭಿಪ್ರಾಯ ವ್ಯಕ್ತಪಡಿಸುವ ಮೊದಲು ಆತನ ವಯಸ್ಸನ್ನು ಪರಿಗಣಿಸಬೇಕು.

ಎರಡನೆಯದಾಗಿ ಆತ ಕೊಲೆ ದರೋಡೆ ಅತ್ಯಾಚಾರ ದೇಶದ್ರೋಹದಂತ ಕ್ರಿಮಿನಲ್ ಅಪರಾಧ ಮಾಡಿಲ್ಲ.

ಆತ ಹೇಳಿಕೊಂಡಿದ್ದು ಆತ ಕೆಲವು ಸ್ಥಳೀಯ ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ದ್ರೋಣ್ ಕ್ಯಾಮರಾ ಸಂಶೋಧನೆ ಮಾಡಿದೆ, ಅದಕ್ಕಾಗಿ ಹಣವನ್ನು ಹೊಂದಿಸಲು ಆತ ಪಟ್ಟ ಕಷ್ಟವನ್ನು ತುಂಬಾ ಮನಮಿಡಿಯುವಂತೆ ವಿವರಿಸುತ್ತಾನೆ. ನಂತರ ಜಪಾನ್ ಜರ್ಮನಿ ಸೇರಿ ಅನೇಕ ದೇಶಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿರುವೆನು ಎಂದು ಹೇಳಿಕೊಂಡು ಸಾಕಷ್ಟು ಸನ್ಮಾನಗಳನ್ನು ಪಡೆದಿದ್ದಾನೆ. ಐಐಎಂ ಐಐಸಿ ಗಳಲ್ಲಿ ವಿಷಯ ತಜ್ಞನಾಗಿ ಭಾಷಣ ಮಾಡಿದ್ದಾನೆ. ಅದಕ್ಕಾಗಿ ಆತ ಪಡಬಾರದ ಕಷ್ಟ ಪಟ್ಟಿದ್ದಾನೆ.

ಇದರಲ್ಲಿ ಸಹಜವಾಗಿಯೇ ಅತಿರೇಕಗಳು, ಅತಿರಂಜಿತ ಸುದ್ದಿಗಳು ಇರುವುದು ಕಂಡುಬರುತ್ತದೆ. ಆತ ಯುವಕನಾದ್ದರಿಂದ ಸಿಕ್ಕ ಯಶಸ್ಸು ಮತ್ತು ವೇದಿಕೆಗಳನ್ನು ಅರಗಿಸಿಕೊಳ್ಳಲಾಗದೆ ಸಾಕಷ್ಟು ಬಿಲ್ಡ್ ಅಪ್ ಕೊಟ್ಟಿರುವುದು ಸಹ ಕಾಣುತ್ತಿದೆ. ಸಾಕಷ್ಟು ಕಾಲ್ಪನಿಕ ಘಟನೆಗಳನ್ನು ಪೋಣಿಸಿ ತನ್ನದೇ ‌ಜೀವನದಲ್ಲಿ ನಡೆದ ಘಟನೆಗಳು ಎಂಬಂತೆ ಹೇಳಿ ಕೊಂಡಿದ್ದಾನೆ. ಆ ವಯಸ್ಸಿನಲ್ಲಿ ಕೆಲವರಿಗೆ ಈ ರೀತಿಯ ಖಾಯಿಲೆ ಇರುತ್ತದೆ.

ಒಂದೆರಡು ಅಂತರರಾಷ್ಟ್ರೀಯ ದ್ರೋಣ್ ಪ್ರದರ್ಶನ ಮಳಿಗೆಗಳಿಗೆ ಭೇಟಿಕೊಟ್ಟು ಅಲ್ಲಿ ನಡೆದ ವಿಚಾರ ಸಂಕಿರಣಗಳನ್ನು ನೋಡಿ ಅದರಿಂದ ಪ್ರೇರಿತನಾಗಿ ಕೆಲವು ನಾಟಕೀಯ ಕಥೆ ಕಟ್ಟಿರಬಹುದು. ಅದರಿಂದ ಸಿಕ್ಕ ಯಶಸ್ಸಿನ ಅಲೆಯ ಮೇಲೆ ಸುಳ್ಳಿನ ಸರಮಾಲೆ ನಿರ್ಮಿಸಿರಬಹುದು. ಒಂದಷ್ಟು ಹಣ ಮಾಡಿಕೊಂಡಿರಬಹುದು. ಕೊನೆಗೆ ಪ್ರಧಾನ ಮಂತ್ರಿಗಳಿಂದ ತನಗೆ ಕರೆ ಬಂದಿದೆ ಎಂದು ಹೇಳಿಕೊಂಡು ಅದು ಅತಿಯಾಗಿ ಯಾರೋ ಈತನ ಚಲನವಲನಗಳನ್ನು ಗಮನಿಸಿ ತನಿಖೆ ಮಾಡಿ ಸಾಕಷ್ಟು ವಿಷಯ ಬಯಲು ಮಾಡಿರಬಹುದು.

ಹಾಗಂತ ಈಗ ಆತನನ್ನು ವಿಲನ್ ರೀತಿ ಬಿಂಬಿಸುವುದು ಸರಿಯಲ್ಲ. ಹಾಗೆಯೇ ಮನಃಪೂರ್ವಕವಾಗಿ ಬೆಂಬಲಿಸುವುದೂ ಬೇಡ. ಒಂದು ನಿರ್ಲಕ್ಷ್ಯ ಮಾತ್ರ ಸಾಕು. ತಪ್ಪು ಮಾಡಿದ್ದರೆ ತಿದ್ದಿಕೊಳ್ಳಲಿ, ಸರಿ ಇದ್ದರೆ ದೃಢಪಡಿಸಿ ಮತ್ತಷ್ಟು ಸಾಧನೆ ಮಾಡಲಿ.

ಏಕೆಂದರೆ,
ಒಂದು ವೇಳೆ ಆತನ ಸಾಧನೆಗಳು ಭೋಗಸ್ ಆಗಿದ್ದರೆ ಇನ್ನು ಮುಂದೆ ಆತನ ಆಟ ನಡೆಯುವುದಿಲ್ಲ. ಆತ್ಮಸಾಕ್ಷಿ ಇದ್ದರೆ ಆತ ತಪ್ಪನ್ನು ಒಪ್ಪಿಕೊಂಡು ಮುಂದೆ ತನ್ನ ಬದುಕನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲು ಅವಕಾಶ ಕೊಡಬೇಕು. ಈ ತಪ್ಪಿಗಾಗಿ ಆತನನ್ನು ಸಾರ್ವಜನಿಕವಾಗಿ ತುಂಬಾ ಹಿಂಸೆ ಮತ್ತು ಅವಮಾನಕ್ಕೆ ಗುರಿ ಮಾಡುವುದು ಒಳ್ಳೆಯದಲ್ಲ. ಆತ ಇನ್ನೂ ಯುವಕ. ಮಾನಸಿಕವಾಗಿ ಕುಸಿದು ಏನಾದರೂ ಅನಾಹುತಕ್ಕೆ ಕೈ ಹಾಕುವಂತೆ ಮಾಡಬಾರದು. ಅವನಿಗೆ ಮತ್ತೊಂದು ಅವಕಾಶ ಕೊಡಲೇಬೇಕು.

ಒಂದು ವೇಳೆ ಆತ ನಿಜವಾಗಲೂ ಪ್ರತಿಭಾವಂತನಾಗಿದ್ದು ಈಗಿನ ಸುದ್ದಿಗಳು ಅತಿರಂಜಿತವಾಗಿದ್ದರೆ ಆಗಲೂ ಆತ ತನ್ನ ಮುಂದಿನ ಎಲ್ಲಾ ಸಾಧನೆಗಳನ್ನು ದಾಖಲೆ ಸಮೇತ ನಿರೂಪಿಸಲು ಜಾಗೃತನಾಗುತ್ತಾನೆ‌. ಏಕೆಂದರೆ ಮಾಧ್ಯಮಗಳು ಮುಂದೆ ಅನುಮಾನ ವ್ಯಕ್ತಪಡಿಸಬಹುದು ಎಂಬ ತೂಗುಕತ್ತಿ ಅವನ ಮನಸ್ಸಿನಲ್ಲಿ ಇದ್ದೇ ಇರುತ್ತದೆ.

ಈ ಸಮಾಜ ಈ ರೀತಿಯ ವಿಷಯಗಳಲ್ಲಿ ತುಂಬಾ ಭಾವುಕವಾಗಿ ತಕ್ಷಣವೇ ಪ್ರತಿಕ್ರಿಯಿಸುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿಯನ್ನು ಹಿಂದೆ ಮುಂದೆ ನೋಡದೆ ವೈಭವೀಕರಿಸುವುದು ನಂತರ ಮತ್ತೆ ಅದೇ ದಾಟಿಯಲ್ಲಿ ಹಿಯಾಳಿಸುವುದು ಸರಿಯಲ್ಲ. ಸ್ವಯಂ ಸಂಯಮ ವಿವೇಚನೆ ಪ್ರಬುದ್ದತೆ ಬೆಳೆಸಿಕೊಳ್ಳಬೇಕಿದೆ. ಯುವಕರಿಗೆ ಈ ರೀತಿಯ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಾತಾವರಣ ನಿರ್ಮಿಸಬೇಕಿದೆ. ಒಟ್ಟು ವ್ಯವಸ್ಥೆಯಲ್ಲಿ ಮುಕ್ತ ವಾತಾವರಣ ಇದ್ದಾಗ ಈ ರೀತಿಯ ಘಟನೆಗಳು ನಡೆಯುವುದು ಕಡಿಮೆ. ವೈಭವೀಕರಣ ಹೆಚ್ಚಾದಾಗ ಅದರ ಬಲೆಯೊಳಗೆ ಬೀಳಲು ಮನಸ್ಸುಗಳು ಹಾತೊರೆಯುತ್ತವೆ. ಅಪರೂಪದ ಪ್ರಕರಣಗಳಲ್ಲಿ ಇದನ್ನು ಮೀರುವ ಪ್ರಬುದ್ದತೆ ಕೆಲವರಿಗೆ ಇದೆ.

ನಮ್ಮ ನಿಜವಾದ ತಾಖತ್ತು, ಸಾಮರ್ಥ್ಯ, ಧೈರ್ಯ ವ್ಯಕ್ತಪಡಿಸಬೇಕಿರುವುದು ಈ ರೀತಿಯ ಸಣ್ಣ ಪುಟ್ಟ ಹುಡುಗರ ಮೇಲಲ್ಲ. ಈ ನಾಡಿನ ಸಂಪನ್ಮೂಲಗಳನ್ನು ನಮ್ಮ ಕಣ್ಣ ಮುಂದೆಯೇ ದೋಚುವವರ ಬಗ್ಗೆ ತೋರಿಸಿ ನಿಮ್ಮ ಆಕ್ರೋಶವನ್ನು, ಭ್ರಷ್ಟ ಅಧಿಕಾರ ರಾಜಕಾರಣಿಗಳ ಬಗ್ಗೆ ತೋರಿಸಿ ನಿಮ್ಮ ಕೋಪವನ್ನು, ಸುಳ್ಳು ಬಿಲ್ಲು ತೋರಿಸಿ ಕೋಟ್ಯಾಂತರ ಹಣ ವಂಚಿಸುವವರು ಬಗ್ಗೆ ಇರಲಿ ನಿಮ್ಮ ಹೋರಾಟ, ಪರಿಸರ ನಾಶಕ್ಕೆ ಪೂರಕವಾದ ಕಾನೂನುಗಳನ್ನು, ಕೃಷಿಗೆ ಮಾರಕವಾದ ನೀತಿಗಳನ್ನು ಜಾರಿಗೊಳಿಸುವ ಸರ್ಕಾರದ ವಿರುದ್ಧವಿರಲಿ ನಿಮ್ಮ ಧೈರ್ಯ…….

ಸಮಾಜ ಪ್ರಬುದ್ದತೆಯೆಡೆಗೆ ಸಾಗಬೇಕಾದರೆ ನಮ್ಮ ಪ್ರತಿಕ್ರಿಯೆಗಳು ಸಹ ಅಷ್ಟೇ ಪ್ರಬುದ್ದವಾಗಿರಬೇಕು. ಕ್ಷಮೆಗೆ ಅರ್ಹವಾದ, ಕಲಿಕೆಯ ಹಂತದಲ್ಲಿ ಮಾಡಬಹುದಾದ ತಪ್ಪುಗಳನ್ನು ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು. ಆದರೆ ಸಮಾಜಕ್ಕೆ ಮಾರಕವಾದ ಮಾಫಿಯಾಗಳು ಮಾಡುವ ಅನಾಹುತಕಾರಿ ವಂಚನೆಗಳನ್ನು ಬಯಲು ಮಾಡಿ ಅವರನ್ನು ಕಾನೂನಿನ ವ್ಯಾಪ್ತಿಯಲ್ಲಿ ತಿರಸ್ಕರಿಸುವ ಶಿಕ್ಷೆಗೆ ಗುರಿಪಡಿಸುವ ಧೈರ್ಯ ತೋರಿಸಬೇಕು.

ಎಷ್ಟೋ ಸಾಹಿತಿ, ಪತ್ರಕರ್ತರು ಸಹ ತಾವು ಎಲ್ಲೋ ಓದಿದ, ಕೇಳಿದ, ನೋಡಿದ ಘಟನೆಗಳನ್ನೇ ತಮ್ಮ ಜೀವನದ ಸ್ವಂತ ಘಟನೆಗಳು ಎಂದು ನಕಲು ಮಾಡಿ ಬರೆದು ಜನರನ್ನು ವಂಚಿಸುವುದು ಈಗಲೂ ನಡದೇ ಇದೆ.
ಕತೆ ಕವನಗಳನ್ನು ಕದ್ದು ತಮ್ಮ ಹೆಸರಿನಲ್ಲಿ ಪ್ರಕಟಿಸುವುದು ಇದೆ. ಆದ್ದರಿಂದ ದ್ರೋಣ್ ಪ್ರತಾಪನ ಬಗ್ಗೆ ಸಹಾನುಭೂತಿ ಇರಲಿ. ಆತನ ಅವಮಾನಕ್ಕಿಂತ ಆತ್ಮಾವಲೋಕನಕ್ಕೆ ಅವಕಾಶ ಮಾಡಿಕೊಡೋಣ. ಸಾಧನೆಯೋ ಪ್ರಚಾರವೋ ಅವನೇ ನಿರ್ಧರಿಸಲಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.