ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡದ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಒಂದು ವಿಡಂಬನಾ ಭರಿತ ಕವಿತೆ.
ಬಿ.ಆರ್. ಲಕ್ಷ್ಮಣರಾವ್
ಇತ್ತೀಚಿನ ಬರಹಗಳು: ಬಿ.ಆರ್. ಲಕ್ಷ್ಮಣರಾವ್ (ಎಲ್ಲವನ್ನು ಓದಿ)

ಕನ್ನಡದ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಒಂದು ವಿಡಂಬನಾ ಭರಿತ ಕವಿತೆ

ನಾಯಿ ಹೇಗಿದೆ?”
ಗೆಳೆಯನನ್ನು ಕೇಳಿದೆ
ಫೋನಿನಲ್ಲಿ.
“ಸ್ವಸ್ಥವಾಗಿದೆ.
ಎಂದಿನಂತೆ
ಸ್ಥಳೀಯ ನಾಯಿಗಳನ್ನು ಕಂಡಾಗ
ತಿರಸ್ಕಾರದಿಂದ
ಗುರುಗುಟ್ಟುತ್ತದೆಯಷ್ಟೇ.
ಉಳಿದಂತೆ,
ಇಲ್ಲ ಹುಚ್ಚು ರೇಗಿದ ಯಾವುದೇ ಲಕ್ಷಣ,
ಆತಂಕಕ್ಕೆ ಕಾರಣ”
ಎಂದ ಕವಿಮಿತ್ರ
ಪ್ರಾಸಬದ್ಧವಾಗಿ.
“ಯಾವುದಕ್ಕೂ ಒಂದು ಕಣ್ಣಿಟ್ಟಿರು, ಮಾರಾಯ,
ಕನಿಷ್ಠ ಹದಿನೈದು ದಿನ,
ಜೋಪಾನ!”
ಎಂದು ಫೋನಿಟ್ಟೆ.

ಆದದ್ದಿಷ್ಟೇ:
ಇದಕ್ಕೆ ಒಂದೆರಡು ದಿನದ ಹಿಂದೆ
ನಡೆದ ನಮ್ಮ ಮಾಮೂಲಿನ
ಸಾಯಂಸಂಧ್ಯಾಕೂಟದಲ್ಲಿ
ಅನಿರೀಕ್ಷಿತ ಅತಿಥಿಯಾಗಿ
ಉಪಸ್ಥಿತರಿದ್ದರು
ಕರೋನಾಗಿಂತ ಕೊಂಚ ಮುಂಚಿತವಾಗಿ
ಯಾವುದೋ ವಿದೇಶದಿಂದ
ದುಬಾಯಿಯ ಮಾರ್ಗವಾಗಿ
ಬೆಂಗಳೂರಿಗೆ ಬಂದಿಳಿದಿದ್ದ
ಅಂತಾರಾಷ್ಟ್ರೀಯ ಖ್ಯಾತಿಯ
ಹಿರಿಯ ಕವಿಯೊಬ್ಬರು.

ಅದು ಗೊತ್ತಾದದ್ದೇ,
ಹೀಗೆ ತಳಮಳಿಸುತ್ತಿದ್ದೇವೆ
ಉಳಿದ ಗೆಳೆಯರು

ಗುಪ್ತಭಾಷೆಯಲ್ಲಿ !!!