ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಸ್ ದಿವಾಕರ್
ಇತ್ತೀಚಿನ ಬರಹಗಳು: ಎಸ್ ದಿವಾಕರ್ (ಎಲ್ಲವನ್ನು ಓದಿ)
ಈ ಕವಿತೆಯನ್ನು ನಾಡಿನ ಹಿರಿಯ ಕವಿ,ಸಾಹಿತಿ,ವಿಮರ್ಶಕ,ಚಿಂತಕ ಶ್ರೀ ಎಸ್. ದಿವಾಕರ್ ಅವರ ಪ್ರಶಸ್ತಿ ವಿಜೇತ ಕವಿತಾ ಸಂಕಲನ “ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ” ದಿಂದ ಆಯ್ದುಕೊಳ್ಳಲಾಗಿದೆ.

ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯಿ
ಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳು
ಇಮ್ಮಡಿಸುತ್ತವೆ ಪುಸ್ತಕದ ಪುಟಗಳು
ಪುಟಗಳಲ್ಲಿರುವ ಎಲ್ಲವೂ…

ಕೈಯಾಡಿದಂತೆ ಕಣ್ಣಾಡಿದಂತೆ ಪುಸ್ತಕ
ಉಬ್ಬುತ್ತಾ ಉಬ್ಬುತ್ತಾ ಊದಿಕೊಳ್ಳುತ್ತ ,
ಬೀಳುತ್ತೆ ನೆಲಕ್ಕೆ; ನೆಲದಲ್ಲಿ ಗಿಡ ಹೂವು
ನದಿ ಕಾಡು ಗಿರಿ ಊರು ನಾವು ನೀವು
ಮೇಲೆ ಆಗಾಗ ಹುಬ್ಬು ಗಂಟಿಕ್ಕುವ ಆಕಾಶ

ಬೆಳೆಯುತ್ತೆ ಪುಸ್ತಕ ಇನ್ನೂ ದಪ್ಪ ದಪ್ಪಕ್ಕೆ
ಅದರೊಳಗೆಷ್ಟೋ ಕಪಾಟು
ಕಪಾಟುಗಳ ತುಂಬ ಊರು ದೇಶ ಕಾಲ ಸಮಸ್ತ
ಪುಸ್ತಕಗಳೇ ಮೊದಲು ಇದ್ದವಲ್ಲ ಒಳಗೆ
ಜ್ಞಾಪಿಸಿಕೊಳ್ಳುತ್ತೆ ಪುಸ್ತಕ ತಾನು
ಪುಸ್ತಕವಾದದ್ದನ್ನು;ಹಂಬಲಿಸಿ ಹಂಬಲಿಸಿ
ಸೊರಗಿ ಕೃಶವಾಗಿ ಪುಟಾಣಿಯಾಗುತ್ತೆ
ಕುಂಕುಮ ಡಬ್ಬಿಯಷ್ಟು.
ಈಗ ಪುಟಾಣಿ ಪುಸ್ತಕದೊಳಗೆ
ಗಜ್ಜುಗದಷ್ಟೂ ಇಲ್ಲದ ಜಗತ್ತು
ಇಟ್ಟುಕೊಳ್ಳಬಹುದು ಅಂಗೈಯಲ್ಲಿ

ಹುಷಾರು ಕಳೆದು ಹೋದೀತು ಜೋಪಾನ ..!