ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸರ್ವಧರ್ಮ ಸಮನ್ವಯ

ನಿರಂಜನ ಕೆ ನಾಯಕ
ಇತ್ತೀಚಿನ ಬರಹಗಳು: ನಿರಂಜನ ಕೆ ನಾಯಕ (ಎಲ್ಲವನ್ನು ಓದಿ)

ದಯೆಯ ಬೋಧಿಸದ ಧರ್ಮವಿರದು ಜಗದಿ
ಮೂಲ ಮಂತ್ರ ಒಂದೇ ಸೌಹಾರ್ದತೆ ನಿಜದಿ
ತಂತ್ರ ಮಂತ್ರಗಳ ನೆಪದಿ ಕಟ್ಟಿಹರು ಗಡಿಯ
ಕಲ್ಮಶಗಳ ಕಿತ್ತೊಗೆದು ಬೆಳಗಿ ಎದೆಯ ಗುಡಿಯ

ಜಗವ ಕುಟುಂಬವೆಂದ ಧೀಮಂತ ಮಣ್ಣಿದು
ಅಂಗುಲಿಮಾಲನ ಅಪ್ಪಿದ ಬುದ್ಧನ ನೆಲೆಯಿದು
ಆತ್ಮದಿ ಭೇದವ ಕಾಣದ ಜಿನನ ಬೀಡಿದು
ಎಲ್ಲರೂ ದೇವರ ಮಕ್ಕಳೆಂದ ನಾನಕರ ನಾಡಿದು

ಹೊಲಗೇರಿ ಶಿವಾಲಯಕೆ ನೆಲವೊಂದೆಂದ ವಚನ
ಕುಲವೆಂದು ಬಡಿದಾಡದಿರೆಂಬ ದಾಸ ಕೀರ್ತನ
ಸರ್ವಧರ್ಮವ ಸತ್ಯ ಸಮವೆಂದ ವಿವೇಕವಾಣಿ
ಬೆಳಗು ಅರಿವ ಜ್ಯೋತಿ ಆತ್ಮೋನ್ನತಿಯ ಏಣಿ

ಈ ಮಣ್ಣಲಿ ಬೆರೆತಿದೆ ಇಸ್ಲಾಂನ ಶ್ರೇಷ್ಠ ತತ್ವ
ಸೋದರತೆ ಹೆಚ್ಚಿಸಿದೆ ಈ ನೆಲದ ಸತ್ವ
ಪ್ರೀತಿಯ ಸಾರುವ ಶಿಲುಬೆಯ ಸಂದೇಶ
ನೀರೆರೆದಿದೆ ಮನುಜತ್ವಕೆ ಬಯಸಿ ಸರ್ವರ ಹಿತ

ಸುವಿಚಾರಗಳೆಲ್ಲ ನದಿಗಳು ಬೆರೆತ ಶರಧಿಯಂತೆ
ಆಳ ಅಗಲಗಳ ಅರಿತವ ನಿಜದಿ ಜ್ಞಾನಿಯಂತೆ
ಎಲ್ಲವೂ ಒಂದೇ ಬಳ್ಳಿಯ ಹಲವು ಸುಮಗಳಂತೆ
ಸೇರುವ ನೆಲೆಯೊಂದೇ ದೇವನ ಪಾದದಡಿಯಂತೆ

ಅರಿತು ಬಾಳಿದರೆ ಸಕಲ ಧರ್ಮಗಳ ಸಾರ
ದ್ವೇಷ ಅಳಿದು ಬದುಕು ಬಲು ಸಸಾರ
ರಾಮ-ರಹೀಮ, ಕನಕ-ಕಬೀರರೆಲ್ಲ ನಮ್ಮವರೆ
ಸತ್ಯದರ್ಶನವ ಸಂಧಿಸಿ ತಾರೆಗಳಾಗಿ ಮೆರೆದವರೆ