ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅರಿವಿನ ತೇಜ

ನೂತನ ದೋಶೆಟ್ಟಿ
ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)

ಎವೆ ಮುಚ್ಚಿದ ಮಂದಹಾಸ
ನೊಂದ ಮನ ಕಂಡುಕೊಂಡ ಸಾಂತ್ವನ
ಚಕ್ರವರ್ತಿಯ ಸಿಂಹಾಸನದ ನರಳುವಿಕೆ
ಶವದ ಮುಂದಿನ ರೋದನ
ಕ್ಷಣ ಹೊತ್ತಿಗೆಲ್ಲ ನಶ್ವರ
ಇಷ್ಟೆಯೇ ಬದುಕು?

ಸುಖಲೋಲುಪತೆಯಿಂದ ದೂರ
ತೆರೆದ ದಾರಿ
ತುಂಡು ಭೂಮಿಯೊಡೆಯನ
ತೆಕ್ಕೆಯಲ್ಲಿ ವಿಶ್ವ ಸೆರೆಯಾದ ಪರಿ !
ಸಂಸಾರ ಗೌಣ
ನೋವು ದುಃಖಗಳ ತಾಣ
ಮಡಿವಂತಿಕೆಯ ಮುದುಡಿದ್ದ ಕಂಗಳು

ಸಂಸಾರದಲ್ಲೂ ಇಹುದು ನಿರ್ವಾಣ
ತನು ಮನ ಧನದ ಕರ್ಮಗಳ ತಪ
ಆಚರಣೆಯ ಸತ್ಯ ಶುದ್ಧತೆ
ಮೋಹ ಮಾಯಗಳ ವಿಮುಖತೆ
ಹೊಸ್ತಿಲಾಚೆಯ ವಿಶ್ವ ವಾಸದ ಹೆಜ್ಜೆ
ಗಡಿರೇಖೆಗಳ ದಾಟಿ ನಿಂತ ಹಿರಿಮೆ
ನಿರ್ವಾಣಕ್ಕೆ ತೆರೆದ ಮಾರ್ಗ

ಇಲ್ಲಿಹುದು ಅಲ್ಲಿಯೂ ಇಹುದು
ಅಲ್ಲಿಹುದು ಇಲ್ಲಿಯೂ ಇಹುದು
ಎಲ್ಲವೂ ನೋಟದಲ್ಲಿಹುದು
ಅರಿವಿನ ತೇಜ ಮಂದಹಾಸವಾಗುಳಿದಿಹುದು.