ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : ಅಮೃತಾ ಮೆಹೆಂದಳೆ

ಚಿತ್ರ ಬರಹ​

ಅಮೃತಾ ಮೆಹೆಂದಳೆ
ಇತ್ತೀಚಿನ ಬರಹಗಳು: ಅಮೃತಾ ಮೆಹೆಂದಳೆ (ಎಲ್ಲವನ್ನು ಓದಿ)

ಚಿತ್ರ ಕೃಪೆ : ಅಮೃತಾ ಮೆಹೆಂದಳೆ

ಸಂಜೆಗೊಮ್ಮೆ ಇವನಿಗಾಗಿ ಮೋಡಗಳನ್ನೆಲ್ಲಾ ಚದುರಿಸಿ, ಮುಳುಗಲು ಸಹಕರಿಸಿದ ಆಗಸ. ಕೋಪಗೊಂಡ ಮೋಡಗಳು ಹಿಂಡುಗಟ್ಟಿ ಬಂದು, ಗುಡುಗು ಮಿಂಚಿನೊಡನೆ ಧೋ ಎಂದು ಸುರಿದು, ಸುಸ್ತಾಗಿ ಮಲಗಿದಾಗ, ಪಿಳಿಪಿಳಿ ಕಣ್ಬಿಟ್ಟು ತನ್ನ ಝಲಕ್ ತೋರಿ ಮಿಂಚಿದ ಚಂದ್ರಮ. ಬೆಳಬೆಳಗೇ ಹಿಮರೇಷಿಮೆ ಸೆರಗು ಹೊದ್ದು, ಕನಸಿಗೆ ನಾಚಿ, ಕಲ್ಪನೆಯ ಸಾಕಾರಕೆ ಕಾದು, ಹೊಸ ಸ್ಪರ್ಷಕೆ ಪುಳಕಿತಳಾದ ಮದುವಣಗಿತ್ತಿ ಪ್ರಕೃತಿ. ಕದ್ದು ನೋಡುವ ಚಂದಿರನ ಓಡಿಸಿ, ಸೌಂದರ್ಯರಾಶಿಯ ಅಮಲುಗಣ್ಣಲೇ ಹೀರಿ ಕಣ್ಣು ಮಿಟುಕಿಸುತ್ತ, ತನ್ನ ರಾಜ್ಯಭಾರ ಸ್ಥಾಪಿಸಲು ಬಂಗಾರದ ಬೆಳಕು ಸುರಿಸಿ ಹೊಳೆಯುತ್ತ ಮತ್ತೆ ಉದಯಿಸಿದ ಸೂರ್ಯರಾಜ. ಅರ್ಧ ದಿನದ ಅವಧಿಯಲ್ಲಿ ತನ್ನ ಬದಲಾಗುವ ಬಣ್ಣಗಳ ಚಾದರ ಹರಡಿದ ಪ್ರಕೃತಿಯ ಮಾಯೆಯಿದು.

ವಸಂತ ಋತುವಿನ ಸಂಭ್ರಮ ಮುಗಿವ, ಗ್ರೀಷ್ಮನ ಅಧಿಪತ್ಯ ಮೊದಲಾಗುವ ಸಂಭ್ರಮದ ದಿನಗಳಿವು. ಬಾಯಾರಿದ ವಿರಹ, ಪ್ರೀತಿ ಸಿಂಚನಕ್ಕಾಗಿ ಕಾದು, ಪ್ರೇಮದ ವರ್ಷಧಾರೆಯ ಕನಸು ಕಾಣುವ ಋತುವಿದು. ರಾಮನಿಗಾಗಿ ಕಾದ ಶಬರಿಯ ಮಮತೆಯಂತೆ, ಕೃಷ್ಣನಿಗಾಗಿ ಹಂಬಲಿಸಿದ ರಾಧೆಯೊಲವಿನಂತೆ, ಲಕ್ಷ್ಮಣನಿಗಾಗಿ ಕನವರಿಸಿದ ಊರ್ಮಿಳೆಯ ಪ್ರೇಮದಂತೆ, ಭಕ್ತನ ಭಕ್ತಿಯಂತೆ, ದಾಸನ ಮುಕ್ತಿಯಂತೆ ಕಾಯುವ ಕಾಲ. ಹೀಗೆ ಬಂದು ಹಾಗೆ ಹೋದರೂ ಸಾರ್ಥಕವೆನಿಸುವ ಕಾಲ.

ಬೇಸಗೆ ಮತ್ತು
ಮಳೆಗಾಲದ
ನಡುವಿನ
ಈ ದಿನ
ಬಲು ರೋಮಾಂಚನ
ಗ್ರೀಷ್ಮನಾಗಮನ…

ಚಿತ್ರ ಕೃಪೆ : ಅಮೃತಾ ಮೆಹೆಂದಳೆ