ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗುಲ್ಝಾರ್ ಜನ್ಮದಿನ ಮತ್ತು ದಿಗ್ಗಜರ ಪುಸ್ತಕ ಪ್ರೀತಿ

ರವೀಂದ್ರನಾಥ ದೊಡ್ಡಮೇಟಿ
ಇತ್ತೀಚಿನ ಬರಹಗಳು: ರವೀಂದ್ರನಾಥ ದೊಡ್ಡಮೇಟಿ (ಎಲ್ಲವನ್ನು ಓದಿ)

ಪುಸ್ತಕಗಳು.. ಗುಲ್ಝಾರ್… ಡಾ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು…

ಇತ್ತೀಚೆಗೆ ನಮ್ಮ ನಾಡಿನ ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿವರು ಇಡಿ ನಾಡಿಗೆ ನಾಡೇ ಒಪ್ಪಿಕೊಳ್ಳುವಂತಹ ಸಾಂಸ್ಕೃತಿಕ ನಿರ್ಣಯ ಕೈಗೊಂಡರು.. ಆದುವೆ ಸರಕಾರಿ ಕಾರ್ಯಕ್ರಮ ಗಳಲ್ಲಿ ಹಣ್ಣು ಹಾರ ತುರಾಯಿ ಬದಲು ಪುಸ್ತಕ ಗಳನ್ನು ಕೊಟ್ಟು ಗೌರವಿಸುವ ಸಂಪ್ರದಾಯ ಹಾಕಿದರು.. ಅದನ್ನು ಜಾರಿಗೆ ತರುವ ಸರಕಾರದ ಅಧಿಕೃತ ಆದೇಶ ಹೊರಡಿಸಿ ಸಾಹಿತ್ಯ ಸಂಪದದ ಅಭಿಮಾನಕ್ಕೆ ಪಾತ್ರ ರಾದರು.. ನಿಜಕ್ಕೂ ಮುಖ್ಯಮಂತ್ರಿ ಗಳು ಅಭಿನಂದನಾರ್ಹರು.. ಶ್ರೀ ಬಸವರಾಜ್ ಬೊಮ್ಮಾಯಿಯವರು ಪುಸ್ತಕ ಪ್ರಿಯರು.. ತಮ್ಮ ಎಡಬಿಡದ ರಾಜಕೀಯ ಕಾರ್ಯಗಳಲ್ಲಿಯೂ ಪುಸ್ತಕಗಳ ಓದುತ್ತಾರೆ..ತಮ್ಮ ವಿಚಾರಗಳನ್ನು ದಿನ ನಿತ್ಯದ ಅನುಭವಗಳನ್ನು ತಾವು ಓದಿದ ಸಾಹಿತಿಗಳು ಬರೆದ ಸಾಹಿತ್ಯ ದಲ್ಲಿ ಆಗಾಗ್ಗೆ ತಮ್ಮ ಮಿತ್ರವರ್ಗದಲ್ಲಿ ಹೇಳುವುದುಂಟು.. ಅವರ ಪ್ರಯಾಣದಲಿ ಕೆಲ ಪುಸ್ತಕ ಗಳು ಜೊತೆಗಾರವಾಗಿರುತ್ತವೆ.. ಅವರೊಡನೆ ಕಳಸಾ ಬಂಡೂರಿ ಯೋಜನೆಯ ಅವಶ್ಯಕತೆ ಕುರಿತು ಅವರು ನಡೆಸಿದ ಸುಪ್ರಸಿದ್ಧ ಪಾದಯಾತ್ರೆಯಲ್ಲಿ ಅಬ್ಬಿಗೇರಿಯಿಂದ ಜೊತೆಯಾಗಿದ್ದ ನಾವು ನೋಡಿದ್ದುಂಟು..

ಈ ಪಾದಯಾತ್ರೆ ಯ ಬಗ್ಗೆ ಅವರು ಸಂಪೂರ್ಣ ವಾಗಿ ವಿಶಿಷ್ಟ ಅನುಭವಗಳನ್ನು ಹಳ್ಳಿಗಳಲ್ಲಿ ರೈತರೊಡನೆ ಮಾತನಾಡಿದ ವಿವರಗಳನ್ನು ಬಿಸಿಲು ಬದುಕು ಪುಸ್ತಕ ದಲ್ಲಿ ದಾಖಲಿಸಿದ್ದಾರೆ.ಅದು ಆಂದಿನ ಸಾಂಧರ್ಭಿಕ ದಿನಗಳಲ್ಲಿ ಪ್ರವಾಸ ಜನರೊಂದಿಗೆ ಮುಖಾ ಮುಖಿಯಾದಾಗಿನ ಉತ್ತಮ ಪುಸ್ತಕವಾಗಿದೆ. ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿವರ ಪುಸ್ತಕ ಪ್ರೀತಿಯ ಆದೇಶ ಹೊರಬಿದ್ದ ಈ ದಿನಗಳಲ್ಲಿ ಹಿಂದಿ ಸಾಹಿತಿ ಸಂಪೂರ್ಣ ಸಿಂಗ್ ಕಾಲ್ರಾ.. ಗುಲ್ಝಾರ್ ರವರ ಜನ್ಮ ದಿನದ ನಿನ್ನೆ ಆಗಸ್ಟ್ 18..ಅವರು ಪುಸ್ತಕ ಓದುವ ಸುಖದ ಬಗೆಗೆ ಬರೆದ ಕವಿತೆಯನ್ನು ನಾನು ಓದಿದ ನೆನಪು..

ಪುಸ್ತಕಗಳು
ಹಣಿಕಿ ಹಾಕುತ್ತಿವೆ ಪುಸ್ತಕಗಳು
ಬಾಗಿಲು ಮುಚ್ಚಿದ ಕಪಾಟುಗಳ ಗಾಜಿನಿಂದ
ದಿಟ್ಟಿಸುತ್ತವೆ ಏಕವಾಗಿ
ನಾವಂತೂ ಭೇಟಿಯಾಗುವದಿಲ್ಲ ಅವಕೆ
ತಿಂಗಳಾನುಗಟ್ಟಲೆ ..ಆಗ ಕಳೆಯುತ್ತಿದ್ದೆವು
ಸಂಜೆಯ ಹೊತ್ತಿಗೆ ಇವುಗಳ ಸಂಗ ಸುಖದಲಿ
ಆದರೆ ಈಗ ಕಳೆಯುವೆವು ಕಂಪ್ಯೂಟರ್ ಮುಂದೆ
ಭಾರಿ ತಳಮಳ ಅವಕೆ.. ನಡೆಯುತ್ತವೆ ನಿದ್ದೆಯಲ್ಲಿ
ರೂಡಿಯಾಗಿಬಿಟ್ಟಿವೆ ನಮ್ಮನ್ನೇ ಬಿಟ್ಟು ಬಿಡದೆ
ದಿಟ್ಟಿಸಿ ನೋಡುತ್ತಿವೆ..
ಪುಟ ತಿರುವಿ ತಿರುವಿ ಓದುವಾಗ
ಎಂಥಾ ಸ್ವಾಧ. ರುಚಿ ನಮ್ಮ ನಾಲಿಗೆಗೆ
ಈಗಂತೂ ಬೆರಳ ತುದಿಯಿಂದ ಕ್ಲಿಕ್ ಎಂದರೆ ಸಾಕು.. ಚಕ ಚಕನೆ ಪುಟಗಳು ತೆರೆದು ನಿಲ್ಲುವವರು.
ಪುಸ್ತಕಗಳ ಗಾಢ ಸಂಬಂಧದ
ಗೂಡು ಮುರಿದು ಬಿದ್ದಿದೆ
ಎದೆಯ ಮೇಲೆ.. ಮಲಗಿ.. ತೊಡೆಯ ಮೇಲೆ ಒಮ್ಮೊಮ್ಮೆ..ಕುಳಿತು ಒರಗಿ ಎರಡೂ ಹಸ್ತಗಳಲಿ
ಹಿಡಿದು ಓದುವ ಸುಖದ ಪ್ರಾರ್ಥನೆಯಲಿ
ತೊಡಗಿ ತೊಡಗಿ
ಅದು ಸಿಕ್ಕ ಜ್ಞಾನದಲಿ ಆನಂದ ಆಮೇಲೆಯೂ
ಸಿಗುತ್ತಿದ್ದ ಪುಸ್ತಕ ಗಳಲಿ ಒಣ ಹೂವು
ಸುಗಂಧ ಭರಿತ ಪುಟಗಳು ಹೂವುಗಳಾಗಿ
ಪುಸ್ತಕ ಗಳಲಿ ಪುಸುಗಿ ಪುಸುಗಿ
ಬಿದ್ದು ಬಿದ್ದು.. ಎತ್ತಿ ಕೊಳ್ಳುವ ಪ್ರೀತಿಯ
ನವಿಲು ಗರಿಯಂತಹ ಭಾವನೆಗಳು ಬೆಸೆಯುವ
ಸೂಕ್ಷ್ಮ ಬಂಧಗಳು ನಮಗೆ ದೊರಕಲಾರವು
ಎಂದೂ ದೊರಕಲಾರವು
ಈ ಪುಸ್ತಕಗಳಿಲ್ಲದೆ..

ಗುಲ್ಝಾರ್

ಹೀಗೆ ಗುಲ್ಝಾರರು ಬರೆಯುವಂತೆ ಪುಸ್ತಕ ಓದುವ ಸುಖದ ಮುಂದೆ ಯಾವ ಸುಖವಿದೆ ಎಂದು ಕೇಳಿದರೆ.. ಪುಸ್ತಕದ ಓದುವ ಸುಖವನ್ನು ಬಲ್ಲವರೆ ಬಲ್ಲರು. ಪುಸ್ತಕಗಳ ಬಗೆಗೆ ಮಾತನಾಡುತ್ತ ಹೋದರೆ ನಮ್ಮ ನಡುವಿನ ಬಾಳಿಹೋದ ಗದಗಿನ ಲಿಂಗೈಕ್ಯ ಡಾ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿ ಗಳು ನೆನಪಿಗೆ ಬರುತ್ತಾರೆ.. ಅವರ ಪುಸ್ತಕಗಳ ಅಭಿಮಾನವಂತೂ ಕೊನೆಯಿಲ್ಲದ್ದಾಗಿದೆ..

ಸ್ವತಃ ಅವರು ಹುಬ್ಬಳ್ಳಿಯಲ್ಲಿ ಶ್ರೀ ಕಾಡ ಸಿದ್ಧೇಶ್ವರ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವಾಗಲೆ ಪುಸ್ತಕಗಳ ಬಹು ದೊಡ್ಡ ಓದುಗರಾಗಿದ್ದರು. ನಂತರ ತೋಂಟದಾರ್ಯ ಮಠದ ಜಗದ್ಗುರುಗಳಾಗಿ ಅವರು ಒಂದು ವಿಶ್ವವಿದ್ಯಾಲಯ ಕೆಲಸಮಾಡುವಷ್ಟು ಪುಸ್ತಕಗಳನ್ನು ಪ್ರಕಟಿಸಿದರು.. ಅವರ ಬಳಿ ಸದಾ ಪುಸ್ತಕಗಳು, ಪುಸ್ತಕಗಳು.. ಪುಸ್ತಕಗಳೊಂದಿಗೆ ಪೂಜೆ.. ಪುಸ್ತಕಗಳೊಂದಿಗೆ ಧ್ಯಾನ.. ಪುಸ್ತಕ ಗಳೊಂದಿಗೆ ಮಾತು.
ಯಾರಾದರೂ ಅವರ ಭೇಟಿಗೆ ಬಂದರೆ ಪುಸ್ತಕಗಳ ಉಚಿತ ಉಡುಗೊರೆ ಖಚಿತ. ಮತ್ತೆ ತಾವು ಓದಿದ ವಿಚಾರ ಗಳನ್ನು ಹೇಳಿ ತಮ್ಮ ವಿಚಾರಗಳನ್ನು ಸಮೀಕರಿಸಿ ಮಾತನಾಡುತ್ತಿದ್ದರು.

ತಮ್ಮ ಪ್ರವಾಸ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ಪುಸ್ತಕಗಳು ಕಾರಿನಲ್ಲಿ ತುಂಬಿರುತ್ತಿದ್ದವು.. ಪುಸ್ತಕ ಗಳು ವಚನ ವಿಮರ್ಶೆ.. ಶರಣರ ಜೀವನ ವಚನಗಳು.. ರಂಗಭೂಮಿ..ಅಭಿನಂದನಾ ಗ್ರಂಥಗಳು.. ಪಂಪ..ರನ್ನ ರಿಂದ ಕುಮಾರವ್ಯಾಸ.. ಬೇಂದ್ರೆ.. ಕುವೆಂಪು.. ಈ ನಾಡಿನ ಖ್ಯಾತ ಸಾಹಿತಿಗಳ ಎಲ್ಲವೂ ಇರುತ್ತಿದ್ದವು.. ಅಲ್ಲದೇ ತಮ್ಮ ಆಶೀರ್ವಚನದಲಿ ಪುಸ್ತಕ ಗಳನ್ನು ಓದುವಂತೆ ಬೋಧಿಸುತ್ತಿದ್ದರು.. ಅವರು ನಡೆಸಿದ ಶಿವಾನುಭವಗಳಲ್ಲಿ ಪುಸ್ತಕಗಳ ಬಿಡುಗಡೆ ನಿಶ್ಚಿತವಾಗಿ ಇರುತ್ತಿತ್ತು… ಪುಸ್ತಕಗಳು ಜಗತ್ತನ್ನು ಆಳುತ್ತವೆ.. ಪುಸ್ತಕ ಗಳಿಲ್ಲದ ಮನೆ ಆತ್ಮವಿಲ್ಲದ ದೇಹ ಎಂದು ವಿದ್ವಾಂಸರು ಹೇಳಿದ ವ್ಯಾಖ್ಯಾನಗಳನ್ನು ವಿಶ್ಲೇಷಿಸಿ ವಿವರಿಸುತ್ತಿದ್ದರು.. ಪೂಜ್ಯರು ಕೊನೆಯ ದಿನಗಳಲ್ಲಿ ತೋಂಟದಾರ್ಯ ಮಠದಲ್ಲಿ ಈ ನಾಡಿನಲ್ಲಿಯೇ ಬೃಹತ್ ಗ್ರಂಥ ಭಂಡಾರವನ್ನು ತೆರೆದು ಜ್ಞಾನ ಸಂಶೋಧನೆ ಗೆ ದಾರಿ ಮಾಡಿದ ಪುಸ್ತಕ ಜಗದ್ಗುರು ಎನಿಸಿಕೊಂಡರು.

ಅದರಂತೆ ಜ್ಞಾನ ದಾಸೋಹದ ಪೂಜ್ಯ ಶ್ರೀ ಸಿದ್ದೇಶ್ವರರು ನಾಡಿನಾದ್ಯಂತ ತಮ್ಮ ಪ್ರವಚನಗಳಿಂದ ಹೆಸರಾದವರು ಅವರೂ ಕೂಡಾ ತಿಂಗಳಾನುಗಟ್ಟಲೆ ಅನುಭಾವ ಸಾಹಿತ್ಯ ವನ್ನು ಜನರಿಗೆ ಉಣಿಸಿದವರು ಅವರ ಪಾಶ್ಚಾತ್ಯ ಮತ್ತು ಪೂರ್ವಾತ್ಯದ ಅಧ್ಯಾತ್ಮದ ಸಂಪೂರ್ಣ ಆಳವಾದ ಅಧ್ಯಯನಗಳನ್ನು ಚಿಂತನೆಗಳನ್ನು ಪ್ರತಿದಿನದ ಒಂದು ಗಂಟೆಯ ಪ್ರವಚನವು ಜ್ಞಾನ ನಿಧಿಯಾಗಿದೆ.ಅವುಗಳ ಪ್ರಕಟಣೆ ಪುಸ್ತಕಗಳು ಓದುವ ಸುಖವನ್ನು ಹೆಚ್ಚಿಸಿವೆ. ಸಾಮಾನ್ಯ ಜನರೂ ಕೂಡಾ ಬದುಕಿನಲ್ಲಿ ಅಳವಡಿಸಿ ಕೊಳ್ಳಲು ಪ್ರೇರೇಪಿಸುತ್ತಿವೆ.

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿವರು ಪುಸ್ತಕಗಳ ಉಡುಗೊರೆ ಯಂತಹ ನೂತನ ಸಂಪ್ರದಾಯ ನೋಡಿದಾಗ..

ಬೊಮ್ಮಾಯಿಯವರು ಸಹ ತಮ್ಮ ಖಾಸಗಿ ಟ್ರಸ್ಟ್ ಮೂಲಕ ತಮ್ಮ ತಾಯಿ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿವರ ಸ್ಮರಣೆಗೆ ಅನೇಕ ಮೌಲಿಕ ಕೃತಿಗಳನ್ನು ಪ್ರೊ ಚಂದ್ರಶೇಖರ್ ವಸ್ತ್ರದ ರವರ ಸಂಪಾದಕೀಯದಲ್ಲಿ ಪ್ರಕಟಿಸಿದ್ದಾರೆ. ಅವುಗಳು ಹೆಚ್ಚಾಗಿ ತಾಯಿಯ ಪ್ರೀತಿ ಅನುಬಂಧಗಳ ವಿಷಯಗಳನ್ನು ಹೊಂದಿವೆ.ಈ ವಿಚಾರ ದಲ್ಲಿ ಬೊಮ್ಮಾಯಿಯವರು ಮಾದರಿ ರಾಜಕಾರಣಿ ಎನಿಸುತ್ತಾರೆ.

ದಿ. ಎಂ ಪಿ ಪ್ರಕಾಶ್ ರವರೂ ಕೂಡಾ ಉಪ ಮುಖ್ಯ ಮಂತ್ರಿಯಾಗಿದ್ದರು ಅವರೂ ಬಹು ದೊಡ್ಡ ಓದುಗರು ಅವರ ಮನೆಯಲ್ಲಿ ಅವರು ಕುಳಿತು ಕೊಳ್ಳುತ್ತಿದ ಹಜಾರದಲ್ಲಿ ಬಹುದೊಡ್ಡ ಗ್ರಂಥಾಲಯವಿದ್ದು ಅವರ ಮನೆಯ ಪ್ರಭಾವಳಿಯಾಗಿದ್ದಿತು.. ಪುಸ್ತಕ ಬಿಡುಗಡೆ ಕಾರ್ಯಕ್ರಮವೆಂದರೆ ಎಲ್ಲಾ ರಾಜಕೀಯ ಕಾರ್ಯಗಳನ್ನು ಹಿಂದಕ್ಕಿಟ್ಟು ಪುಸ್ತಕ ಸಮಾರಂಭಗಳಿಗೆ ಧಾವಿಸುತ್ತಿದ್ದರು.. ಅವರ ಪುಸ್ತಕ ಗಳ ಅಭಿಮಾನದ ದ್ಯೋತಕವಾಗಿದೆ.

ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಯವರ ಮನೆಯಲ್ಲಿ ಗ್ರಂಥಾಲಯವಿದ್ದಿತು..ಅವರ ಅಧ್ಯನಾಭಿರುಚಿಗೆ ಸಾಕ್ಷಿಯಾಗಿತ್ತು. ದಿ. ಶಾಂತವೇರಿ ಗೋಪಾಲಗೌಡರು..ಮಾಜಿ ಮುಖ್ಯಮಂತ್ರಿ ದಿ. ಕಡಿದಾಳ ಮಂಜಪ್ಪನವರು ಓದುಗನೆಂದರೆ ಕಾದಂಬರಿಗಳನ್ನೂ ಬರೆದರು..ವಿದ್ಯಾಮಂತ್ರಿ ಕೆ ವ್ಹಿ ಶಂಕರೇಗೌಡರು ಬಹಳ ಅಧ್ಯಯನ ಮಾಡುತ್ತಿದ್ದರೆಂದು ಕೇಳಿರುವೆ.

ಮುಖ್ಯಮಂತ್ರಿ ದಿ. ಜೆ ಎಚ್ ಪಟೇಲ್ ರೂ ಪುಸ್ತಕ ಗಳೆಂದರೆ ಸಾಕು ಪಂಚಪ್ರಾಣ. ತಮ್ಮ ಭಾಷಣಗಳಲ್ಲಿ ವಿಧಾನ ಮಂಡಲದ ಚರ್ಚೆಗಳಲ್ಲಿ ನಿಜ ಜೀವನದ ಸತ್ಯಗಳನ್ನು ದೊಡ್ಡ ಬರಹಗಾರರ ಬರೆದ ಉಲ್ಲೇಖ ಗಳನ್ನು ಕೂಡಿಸಿ ಪಾರ್ಲಿಮೆಂಟರಿ ಚರ್ಚೆ ಗಳನ್ನು ಶ್ರೀಮಂತಗೊಳಿಸಿದರು.ನಾನು ನೋಡಿದಂತೆ ಮೈಸೂರಿನ ರಂಗಾಯಣ ರೂವಾರಿ ದಿ. ಬಿ ವ್ಹಿ ಕಾರಂತರವರ ಮನೆಯಲ್ಲಿ ಜಗತ್ತಿನ ರಂಗಭೂಮಿಗಳ ಸಂಬಂಧಿತ ಪುಸ್ತಕದ ಭಂಡಾರವೇ ಇದ್ದಿತು..ಕನ್ನಡ ಸಾಹಿತ್ಯದ ಕ್ಲಾಸಿಕಲ್ ಕೃತಿಗಳು ದಿನ ನಿತ್ಯದ ಓದುಗಳಲ್ಲಿ ಸಹಕಾರಿಯಾಗಿದ್ದವು.ಆಂದ್ರಪ್ರದೇಶದ ಮುಖ್ಯಮಂತ್ರಿ ಗಳಾಗಿದ್ದ ದಿ ಎನ್ ಟಿ ರಾಮರಾವ್ ರವರು ಯಾವದೇ ಸಾಹಿತ್ಯ ಕೃತಿಗಳನ್ನು ರಚಿಸದೇ ಇದ್ದರು ಅವರ ಖ್ಯಾತ ಸಿನಿಮಾಗಳಾದ ದಾನವೀರಶೂರ ಕರ್ಣದಂತಹ ಅನೇಕ ಸಿನಿಮಾಗಳಿಗೆ ಚಿತ್ರ ನಾಟಕ ಸಾಹಿತ್ಯ ಬರೆಯುತ್ತಿದ್ದರು..ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ ಕರುಣಾನಿಧಿ ರಾಜಕಾರಣದಲ್ಲಿರುವಾಗಲೆ ಚಿತ್ರ ಕಥೆ ಸಂಭಾಷಣೆ ಗಳನ್ನು ಬರೆಯುತ್ತಿದ್ದರು. ಲೋಕಸಭೆ ಸದಸ್ಯರಾಗಿದ್ದ ಕೇರಳದ ವಯಲಾರ್ ರವಿ ಮಲೆಯಾಳ ಚಿತ್ರ ರಂಗದ ಖ್ಯಾತ ಗೀತ ರಚನೆಕಾರರಾಗಿದ್ದರು.

ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಹೇಳಬೇಕೆಂದರೆ ನಮ್ಮ ಸ್ವಾತಂತ್ರ್ಯ ಚಳುವಳಿ ರೂಪಿಸಿದ ದಿ. ಗೋಪಾಲಕೃಷ್ಣ ಗೋಖಲೆಯವರು.. ದಿ ಬಾಲಗಂಗಾಧರ ತಿಲಕ್ ರವರು ..ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟವನ್ನು ಮುನ್ನೆಡೆಸಿದ ಪೂಜ್ಯ ಮಹಾತ್ಮ ಗಾಂಧೀಜಿಯವರು ಬಹು ದೊಡ್ಡ ಓದುಗ ರಾಗಿದ್ದರು..ಇವರೆಲ್ಲರೂ ನಾಗರಿಕ ಜಗತ್ತು ನೆನೆಪಿಡಬಲ್ಲ ಪುಸ್ತಕಗಳನ್ನು ಬರೆದರು..ಮಹಾತ್ಮ ಗಾಂಧೀಜಿಯವರು ತಮ್ಮ ಆತ್ಮ ಕಥೆ.. ನನ್ನ ಕನಸಿನ ಭಾರತ ಲೋಕ ಪ್ರಸಿದ್ಧ ವಾಗಿವೆ..ಅಸಂಖ್ಯ ಬಿಡಿ ಬರಹಗಳು ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ರವರು ತಮ್ಮ ವಿಚಾರಗಳನ್ನು ಬರಹಗಳ ಮೂಲಕ ಪರಿಣಾಕಾರಿಯಾಗಿ ಸಂವಹನ ಮಾಡಬಲ್ಲವರಾಗಿದ್ದರು.ಇನ್ನು ಪುಸ್ತಕ ಗಳ ಪ್ರೀತಿಗೆ ಅಧ್ಯಯನ ಗಳಿಗೆ ಮಾದರಿಯಾದ ಸಂವಿಧಾನ ರಚಿಸಿದ ಡಾ ಬಿ ಆರ್ ಅಂಬೇಡ್ಕರ್ ರವರು ಓದಿದಷ್ಟು.. ಅಧ್ಯಯನ ಮಾಡಿದಷ್ಟು ಬರೆದಷ್ಟು…ಬೇರಾರು ಮಾಡಿರಲಿಕ್ಕೆ ಸಾಧ್ಯವಿಲ್ಲ..ಅವರ ಮನೆಯ ಗ್ರಂಥಾಲಯ ಭಾರತಕ್ಕೆ ಪ್ರಸಿದ್ಧ ವಾದ ಅಧ್ಯಯನ ಕೇಂದ್ರ ವಾಗಿತ್ತು.. ಬದುಕಿನಲ್ಲಿ ಸಂಘರ್ಷಗಳ ಹೋರಾಟಗಳ ನಡುವೆಯೂ ಅವರು ಪುಸ್ತಕಳನ್ನು ಬರೆದವರು ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದವರು.. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಉತ್ತಮ ಬರಹಗಾರರಾಗಿದ್ದರು..ಡಿಸ್ಕವರಿ ಆಪ್ ಇಂಡಿಯಾ ಪುಸ್ತಕ ಭಾರತದ ದರ್ಶನ ಮಾಡಿಸುತ್ತದೆ.

ಈಗಿನ ರಾಜಕಾರಣಿಗಳಲ್ಲಿ ಪುಸ್ತಕ ಗಳ ಓದು ಅಪರೂಪವಾಗಿದ್ದು ಸೂಕ್ಷ್ಮ ಪ್ರಜ್ಞೆ ಪರಿಜ್ಞಾನ ವಿಲ್ಲದೆ ಚರ್ಚೆಗಳಲ್ಲಿ ವಿಧಾನ ಮಂಡಳ ಲೋಕಸಭೆಗಳು ನಿರಸವಾಗಿವೆ.ಈಗ ಮುಖ್ಯ ಮಂತ್ರಿಗಳ ಪುಸ್ತಕ ಪ್ರೀತಿ ಒಮ್ಮಿದೊಮ್ಮೆಲೆ ಮಹಾ ಬದಲಾವಣೆಯನ್ನು ರಾಜಕಾರಣದಲಿ ಸಮುದಾಯಗಳಲ್ಲಿ ತರುತ್ತದೆಯೆಂದು ನನಗನಿಸದಿದ್ದರೂ.. ಈ ನಡುವಳಿಕೆ ಕೆಲಮಟ್ಟಿಗೆ ಪುಸ್ತಕ ಗಳಿಂದ ಪ್ರಭಾವಿಸುವ ಕೆಲ ಮನಸ್ಸು ಗಳ ಮಟ್ಟಿಗೆ ಬಹು ದೊಡ್ಡ ಸಮಾಧಾನ ತಂದಿದೆ.. ಈಗಲೂ ಪುಸ್ತಕ ದ ಓದು.. ಅನುಭವಗಳ ವಿನಿಮಯದ ದಾರಿ ಬಹು ದೊಡ್ಡದು ಎಂದು ಅದರಲ್ಲೂ ರಾಜಕಾರಣ ಪ್ರಜಾಪ್ರಭುತ್ವದ ಪ್ರಜ್ಞೆಯ ಬೆಳವಣಿಗೆಗೆ ಸಹಕಾರಿಯೆಂದು ಎನಿಸದೆ ಇರಲಾರದು.

ಪುಸ್ತಕ ಗಳನ್ನು ಪ್ರೀತಿಯಿಂದ ಕಂಡ ಗುಲ್ಝಾರವರ ಜನ್ನ ದಿನದ ಶುಭಾಶಯಗಳು.

ಕೊನೆ ಮಾತು ಅಭಿನವ ಬೀChi ಯಂದು ಪ್ರಸಿದ್ಧ ರಾಗಿರುವ ಗಂಗಾವತಿ ಪ್ರಾಣೇಶ್ ರವರು ತಮ್ಮ ಹಾಸ್ಯ ರಸಾಯನ ದಲ್ಲಿ ಹೇಳುತ್ತಿದ್ದ ಮಾತು..
‘ಕೆಲ ಪುಸ್ತಕ ಗಳನ್ನು ಕೈ ತೊಳೆದುಕೊಂಡು ಮುಟ್ಟಬೇಕು.. 🙂 ಇನ್ನು ಕೆಲವನ್ನು ಮುಟ್ಟಿದರೆ ಕೈ ತೊಳೆದುಕೊಳ್ಳಬೇಕಾದ ಪುಸ್ತಕ ಗಳೂ ಇವೆ.