ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೃಷ್ಣ ಸ್ವಾಮಿ ಕಂಡರೆ ಕೈ ಮುಗಿದು ಬಿಡಿ… !

ಕೃಷ್ಣ ಸ್ವಾಮಿ ಕಂಡರೆ ಕೈ ಮುಗಿದು ಬಿಡಿ... ಎಂದು ಮಿಡತೆ ಯ ಬಗ್ಗೆ ಕತೆ ಬರೆದವರು ನಿಸರ್ಗದ ಸೃಷ್ಟಿಯ ಬಗ್ಗೆ ಕುತೂಹಲ ಇಟ್ಟುಕೊಂಡ ಲೇಖಕ ಪುಟ್ಟಾರಾಧ್ಯ ಎಸ್.

ಕಳೆದ ಎರಡು ಮೂರು ದಿನಗಳಿಂದ locust attack ಬಗ್ಗೆ ಚರ್ಚೆ ನಡೆಯುತ್ತಿದೆ ಆದ್ದರಿಂದ ಕೆಲವರು ಈ ಮಿಡತೆ ದಾಳಿಯಲ್ಲಿ ಗಮನಿಸಿರುವ ಕೀಟವನ್ನು ಸೂರ್ಯನ ಕುದುರೆ ಎಂದು ಕರೆದದ್ದು ಓದಿದೆ. ಮತ್ತಷ್ಟು ಜನ ಸೂರ್ಯನ ಕುದುರೆ ಚಿತ್ರ ಹಾಕಿ ಮಿಡತೆ ಎಂದು ಕರೆದದ್ದನ್ನೂ ಓದಿದೆ. ಗೊಂದಲ ಸಹಜವೇ ಆದ್ದರಿಂದ ಇದನ್ನು ವಿವರಿಸಲು ಪ್ರಯತ್ನಿಸುವೆ. ಕಾರಣ ಕೃಷಿ ಕೀಟ ನಿಯಂತ್ರಣದಲ್ಲಿ ಪಾಲು ಹೊಂದಿರುವ ಸೂರ್ಯನ ಕುದುರೆಗೆ ಕುತ್ತು ಬರಬಾರದು ಎಂಬ ಕಳಕಳಿಯಷ್ಟೇ. Praying Mantis ಎಂದು ಕರೆಯುವ ಕೃಷ್ಣಸ್ವಾಮಿ ಹುಳುವನ್ನು ಸೂರ್ಯನ ಕುದುರೆ , ಶಿವನ ಕುದುರೆ , ಬಸವನ ಕುದುರೆ, ದೇವ ಕೀಟ ಎಂದೆಲ್ಲ ಕರ್ನಾಟಕದ ಹಲವು ಭಾಗಗಳಲ್ಲಿ ಗುರುತಿಸುತ್ತಾರೆ.

ಈಗ ನಾವು ಕೇಳುತ್ತಿರುವ locust attack ಆಗಿರುವುದು Acrididae ಎಂಬ ಮಿಡತೆ ಕುಟುಂಬದ Desert Locust ಎಂಬುವ ಕೀಟಗಳಿಂದ. Locust swarm ಎಂದರೆ ಅಲೆಮಾರಿಯಂತೆ ಅಲೆಯುತ್ತಿರುವ ಮಿಡತೆ ಸಮೂಹ. ಈ ಲೋಕಸ್ಟ್ ಕೂಡ ಮಿಡತೆ ಕುಟುಂಬಕ್ಕೆ ಬರುತ್ತವೆ. Locusts are swarming phase of certain species of grasshoppers but they are different from Mantises.ಮುಂದುವರೆದು ಈ ಮಿಡತೆಗಳಿಗು ಮತ್ತು ಸೂರ್ಯನಕುದುರೆಗೆ ಬಹಳ ವ್ಯತ್ಯಾಸ ಇದೆ. ಆದ್ದರಿಂದ ನಾವು ಇದರಲ್ಲಿ ಯಾವುದೇ ಗೊಂದಲ ಇಟ್ಟುಕೊಳ್ಳುವುದು ಬೇಡ. ಸೂರ್ಯನ ಕುದುರೆಯಲ್ಲಿ 2400 ಜಾತಿಗಳಿದ್ದು ಹಲವು ತರದ ಬಣ್ಣ ಬಣ್ಣದ ವಿಶಿಷ್ಟ ತರಹದ ಜೀವಿಗಳು ಇವೆ. ಮಿಡತೆಗಳು ಹೆಚ್ಚಿನದಾಗಿ ಸೊಪ್ಪು ಸೆದೆ ತಿಂದರೆ ಸೂರ್ಯನ ಕುದುರೆ ಪಕ್ಕಾ ಮಾಂಸಾಹಾರಿ. ಸುತ್ತಲಿನ ಪರಿಸರದ ಬಣ್ಣಕ್ಕೆ ತಕ್ಕನಾಗಿ ಹೊಂದಿಕೊಂಡು (camouflage) ಹೊಂಚು ಹಾಕಿ ಕುಳಿತು ಕೃಷಿ ಭೂಮಿಗಳಲ್ಲಿ ಕಂಡು ಬರುವ ಅನೇಕ ಕೀಟಗಳನ್ನು ಪುಕ್ಕಟೆಯಾಗಿ ಹಿಡಿದು ತಿನ್ನುತ್ತವೆ.ಈ ಕೃಷ್ಣ ಸ್ವಾಮಿ ಹುಳು ಎಂಬ ಹೆಸರಿನ ಹಿಂದೆ ನನ್ನ FB ವಾಲ್ ನಲ್ಲೇ ಚರ್ಚೆ ನಡೆದಿತ್ತು ಆಗ ನಮ್ಮ ಹಿರಿಯ ಕೃಷಿಕರಾದ ಎಲ್ಸಿ ನಾಗರಾಜ್ ಸರ್ ಹೇಳಿದ್ದನ್ನು ಇಲ್ಲಿ ಹೆಕ್ಕಿ ಹಾಕಿದ್ದೇನೆ .

Praying Mantis ಎಂದು ಕರೆಯುವ ಕೃಷ್ಣಸ್ವಾಮಿ ಹುಳು

“ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ನಡೆಯುವಾಗ ಕೃಷ್ಣ ದ್ರೌಪದಿಗೆ ಸೀರೆಯ ಅಕ್ಷಯ ನಿಧಿಯನ್ನೇ ಬಿಡುವುದು ಜನಸಮುದಾಯಗಳ ಮನಸಿನ ಸುಪ್ತಪ್ರಜ್ಞೆಯನ್ನ ಕಟ್ಟಿರುತ್ತದೆ. ತಮ್ಮ ಬೆಳೆಗಳನ್ನ ಬಾಧಿಸುವ ಕೀಟಗಳನ್ನ ಗಬಕಾಯಿಸುವ ಮೂಲಕ ಫಸಲುಗಳನ್ನ ರಕ್ಷಿಸುವ ಸೂರ್ಯನ ಕುದುರೆ [ preying mantis ] ಯನ್ನ ಫಸಲಿನ ರಕ್ಷಕ ಎಂಬ ಭಾವನೆಯಿಂದ ಕೃಷ್ಣಸ್ವಾಮಿ ಹುಳ ಎಂಬ ಹೆಸರು ಕಟ್ಟಿರುತ್ತಾರೆ”. ಮುಂದುವರೆಯುತ್ತಾ ಕುದುರೆಯಂತೆ ಎರಡು ಮುಂಗಾಲುಗಳನ್ನೆತ್ತಿ ನಿಲ್ಲುವುದರಿಂದ ಸೂರ್ಯ , ಶಿವನ ಉಲ್ಲೇಖ ಬಳಸಿ ಸೂರ್ಯನಕುದುರೆ , ಶಿವನಕುದುರೆ ಎಂದೆಲ್ಲ ಹೆಸರು ಬಂದಿರಬಹುದು. ಇದನ್ನು Praying Mantis ಎಂದೂ ಗುರುತಿಸಲಾಗುತ್ತದೆ ಕಾರಣ ಪ್ರಾರ್ಥನೆ ಮಾಡುವಂತೆ ನಿಲ್ಲುವ ಕಾರಣ ಈ ಹೆಸರು ಬಂದಿದೆ. ನಮ್ಮ ದೇವರೆಂಬ ಪರಿಕಲ್ಪನೆಯು ಪರಿಸರಕ್ಕೆ ಹೇಗೆ ಹೊಂದಿಕೊಳ್ಳಬೇಕು ಎಂಬುದನ್ನು ಈ ಹೆಸರುಗಳು ಎತ್ತಿ ಹಿಡಿಯುತ್ತವೆ. ತಮ್ಮ ಪಾಡಿಗೆ ತಾವು ಪ್ರಕೃತಿ ನಿಯಮಗಳನ್ನು ಮೀರದೆ ಪರಿಸರ ನಿಯಂತ್ರಣ ಮಾಡುತ್ತಿರುವ ಅನೇಕ ಕೀಟಗಳು, ಪಕ್ಷಿಗಳು, ಸಸ್ಯಗಳು, ಪ್ರಾಣಿಗಳಿಗಿಂತ ದೊಡ್ಡ ಶಕ್ತಿ ಯಾವುದಿದೆ.ಇನ್ನು ಈ ಕೃಷ್ಣ ಸ್ವಾಮಿ ಹುಳು ಸಾಮಾನ್ಯವಾಗಿ ನಿಮ್ಮ ಹೊಲಗಳಲ್ಲಿ ಎಲೆಗಳ ಮೇಲೆ ಕುಂತು ಕೈಗೆ ಸಿಕ್ಕ ಯಾವುದೇ ಕೀಟಗಳನ್ನು ಹಿಡಿದು ತಿನ್ನುತ್ತಿರುತ್ತದೆ. ಹಸಿರೆಲೆ ಆದರೆ ಹಸಿರು ಕೃಷ್ಣಸ್ವಾಮಿಗಳು , ಕೆಂಪು ಪರಿಸರ ಇದ್ದರೆ ಕೆಂಪು ಕೃಷ್ಣಸ್ವಾಮಿಗಳು, ಒಣ ಎಲೆಗಳಲ್ಲಿ ಕೆಂದ ಕೃಷ್ಣಸ್ವಾಮಿಗಳು, ಹೀಗೆ ಹಲವು ವಿಧದ ಹುಳುಗಳು ಇವೆ. ಕೀಟಗಳನ್ನು ಹಿಡಿಯಲು ಇವಾದರೆ, ಇವುಗಳನ್ನು ಹಿಡಿಯಲು ಸಣ್ಣ ಸಣ್ಣ ಪಕ್ಷಿಗಳು, ಅವುಗಳು ಹೆಚ್ಚಾದರೆ ಸಣ್ಣ ಪಕ್ಷಿ ಹಿಡಿಯಲು ದೊಡ್ಡ ಪಕ್ಷಿಗಳು ಹೀಗೆ ಒಂದಕ್ಕೊಂದು ನಂಟು ಮಾಡಿಕೊಂಡು ನಿಮ್ಮ ಹೊಲಗಳಲ್ಲಿ ನಿಮ್ಮ ಅರಿವಿಗೆ ಬಾರದೆ ಕೃಷಿ ಮಾಡುತ್ತಿರುತ್ತವೆ. ಆದ್ದರಿಂದ Integrated Pest Management ನಲ್ಲಿ ಹಲವು ಕಡೆ ಈ ಕೃಷ್ಣ ಸ್ವಾಮಿ ಹುಳುವನ್ನು ಸೇರಿಸಿಕೊಂಡು ಕೀಟ ನಿಯಂತ್ರಣದ ಅಧ್ಯಯನಗಳನ್ನು ಮಾಡುತ್ತಿದ್ದಾರೆ ಜೊತೆಗೆ ಇವುಗಳ ಪಾಲೆಷ್ಟು ಎಂಬುದರ ಬಗ್ಗೆ ಇನ್ನೂ ಆಳವಾದ ಅಧ್ಯಯನ ಮಾಡಬೇಕಿದೆ. ಇನ್ನು ಭಾರತದಲ್ಲಿ ಇವುಗಳನ್ನು ಮತ್ತು ಇವುಗಳ ಪಾಲನ್ನು ಪುರಾತನ ಕಾಲದಿಂದಲೂ ಗುರುತಿಸಿಕೊಂಡು ಬಂದಿದರುವುದು ವಿಶೇಷವೇ ಸರಿ. ಕೊನೆಯಲ್ಲಿ ವೀಡಿಯೋ ಒಂದಿದೆ ಅದರಲ್ಲಿ ಈ ಸೂರ್ಯನ ಕುದುರೆ ಭೇಟಿಯನ್ನು ವೀಕ್ಷಿಸಬಹುದು.