ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಕವಿದ ಮಬ್ಬು ಜಡತೆಗಳ ಕಳೆಯಲಿ ಈ ಯುಗಾದಿ
ಬದುಕಿಗೆ ಹೊಸ ಬಣ್ಣಗಳ ಬಳಿಯಲಿ ಈ ಯುಗಾದಿ

ಸವೆದ ಜಾಡುಗಳಲ್ಲಿ ತಿರುತಿರುಗಿ ಮಂಕಾಗಿದೆ ಲೋಕ
ಬೆಳೆದ ಪೊರೆಗಳ ಕಿತ್ತು ಪೊರೆಯಲಿ ಈ ಯುಗಾದಿ

ಈ ಶಿಶಿರ ಎಷ್ಟು ಘೋರ, ಆವರಿಸಿದ ಹಿಮವೂ ಕೂಡ
ಹೊಸ ಬಿಸುಪಲಿ ಮೀಯಿಸಿ ಬೆಳಗಲಿ ಈ ಯುಗಾದಿ

ಕಾಣದ ಕ್ರಿಮಿಯ ಹಿಡಿತದಲ್ಲಿ ತತ್ತರಿಸಿದೆ ಬಾಳು
ದುಗುಡಗಳೆಲ್ಲವ ಹರಿಸಿ ತೊಳಗಲಿ ಈ ಯುಗಾದಿ

ಬಂಡಿ ಬೇವಿನ ಜೊತೆ ತುಂಡು ಬೆಲ್ಲವೂ ಇರಲಿ
ಕಹಿಗಳ ಮರೆಸಿ ಸವಿ-ಛವಿಯ ಮೆರೆಸಲಿ ಈ ಯುಗಾದಿ