ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಾಗೇಪಲ್ಲಿ ಕೃಷ್ಣಮೂರ್ತಿ
ಇತ್ತೀಚಿನ ಬರಹಗಳು: ಬಾಗೇಪಲ್ಲಿ ಕೃಷ್ಣಮೂರ್ತಿ (ಎಲ್ಲವನ್ನು ಓದಿ)

ಚಂದದ ಚೌಕಟ್ಟಿನಲ್ಲಿ ಕಾಣುವ ಏಕೈಕವಾದ ಬಿಂಬ
ಒಡೆದ ಚೂರುಗಳಲಿ ಕಾಣಲು ಅನೇಕವಾದ ಬಿಂಬ

ಅನುಜರಿಗೆ ಯಾರಿಗೂ ಕಣ್ ಸೆರೆಯಾಗದೆ ಹೋದದ್ದು
ಪಾರ್ಥಗೆ ದಕ್ಕಿತಾ ಹಕ್ಕಿಯ ಕಣ್ಣಿನ ನಿಖರವಾದ ಬಿಂಬ

ಶಬ್ಧದಲೆಗಳಲಿ ಸಾಕಾರವಾಯ್ತು ಅದು ಏಕಲವ್ಯಗೆ
ಅಗೋಚರದ ಬೇಟೆ ಪ್ರಾಣಿಯ ಖಚಿತವಾದ ಬಿಂಬ

ಪುಟ್ಟ ಎಳೆ ಮೊಲದ ಬುದ್ಧಿಯಲಿ ಚತುರತೆ ಅಡಗಿತ್ತು
ಸಿಂಹ ಎಂದೂ ನೋಡದ ತನ್ನ ಪ್ರತಿಫಲಿತವಾದ ಬಿಂಬ

ಬಿಂಬಜ್ಞಾನದ ಮಹತ್ವವ ಹೇಗೆ ಅರುಹಲಿ ಮಂಕೇ
ಆದಿಮಾನವ ಅರ್ಥೈಸಿಕೊಳ್ಳಲು ಅನುವಾದ ಬಿಂಬ..