ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಸ್ಥಾವರಕ್ಕಳಿವುಂಟು ಜಂಗಮಕ್ಕಲ್ಲ ಎಂದವ ನೀನು
ಏಡಿಸಿ ಕಾಡಿದ ಶಿವನ ಡಂಗುರವ ಕಂಡವ ನೀನು

ಮುತ್ತಿನ ಹಾರ ಸ್ಫಟಿಕದ ಶಲಾಕೆಯಂತೆ ನುಡಿದವನು
ನುಡಿನಡೆಯೊಳಗಣ ದ್ವಂದ್ವವ ದಾಟಿದವ ನೀನು

‘ಮರ್ತ್ಯವೆಂಬುದು ಕರ್ತಾರನ ಕಮ್ಮಟವಯ್ಯಾ’ ಎಂದವನು
ಇಲ್ಲಿಯೂ ಅಲ್ಲಿಯೂ ಸಲ್ಲುವ ಬಗೆಯ ತೋರಿದವ ನೀನು

ಮನವಿಲ್ಲದೇ ಮಾಡಿ ನಿಜವಿಲ್ಲದೆ ನೀಡುವ ಡಂಭ ಬೇಕೆ
ನಿಜಗುಣವುಳ್ಳವರ ಕೂಡುವ ಸಂಗನ ಕಾಣಿಸಿದವ ನೀನು

ಭಕ್ತಿಯೆಂಬ ಅನಿಯಮವ ಬಾಳಿದವ ನೀ ‘ಜಂಗಮ’
ನಡೆವ ದಾರಿಗೆ ದೀವಟಿಗೆಯಾಗಿ ನಿಂತವ ನೀನು

★ ಡಾ. ಗೋವಿಂದ ಹೆಗಡೆ