ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೂಡಂಗಂಡಿಯಲ್ಲೊಂದು ಸಂಜೆ

ಚನ್ನಪ್ಪ ಕಟ್ಟಿ
ಇತ್ತೀಚಿನ ಬರಹಗಳು: ಚನ್ನಪ್ಪ ಕಟ್ಟಿ (ಎಲ್ಲವನ್ನು ಓದಿ)

ಮೂಲ ಖಲಿಲ್ ಗಿಬ್ರಾನ್ ಕವಿತೆ : Ambition
ಕನ್ನಡಕ್ಕೆ: ಚನ್ನಪ್ಪ ಕಟ್ಟಿ

ಒಂದು ಸಂಜೆ ಗೂಡಂಗಡಿಯೊಂದರ ದುಂಡು ಮೇಜಿನ ಬಳಿ ಸಂಧಿಸಿದರು
ಮೂವರು ಗೆಳೆಯರು-
ನೇಕಾರ, ಬಡಿಗ
ಜೊತೆಗೆ ಗೋರಿ ತೋಡುವ ಕೂಲಿ.

ನೇಕಾರ ಹೇಳಿದ:
‘ಚಂದದ ಶವದ ನೈಲಾನ್ ಬಟ್ಟೆಯನು
ಎರಡು ಚಿನ್ನದ ವರಹಕ್ಕೆ ನಾನೀಗ ಮಾರಿ ಬಂದಿರುವೆ;
ಹೊಟ್ಟೆ ಬಿರಿಯುವಷ್ಟು ನಾವೆಲ್ಲ ಕುಡಿಯೋಣ ಬನ್ನಿ.’

ಬಡಿಗ ಹೇಳಿದ:
‘ಉತ್ತಮತರ ಶವಪೆಟ್ಟಿಗೆ ನಾನೀಗ ಮಾರಿ ಬಂದಿರುವೆ;
ಹೆಂಡದ ಜೊತೆಗೆ ಹುರಿದ ಖಂಡವ ತಿನ್ನೋಣ ಬನ್ನಿ.’

ಗೋರಿ ತೋಡುವ ಕೂಲಿ ಹೇಳಿದ:
‘ನಾನೊಂದು ಗೋರಿ ತೋಡಿ ಬಂದಿರುವೆ;
ನನ್ನಾಶ್ರಯದಾತ ವೀರಬಾಹುಕ ದುಪ್ಪಟ್ಟು ಕೂಲಿ ನೀಡಿದ್ದಾನೆ;
ಹನೀ ಕೇಕ್ ನೂ ಚಪ್ಪರಿಸೋಣ ಬನ್ನಿ.’

ಆ ಸಂಜೆಯಿಡೀ ಗೂಡಂಗಡಿಯ ತುಂಬ ಆದೇಶ ಸರಬರಾಜುಗಳ ಗಡಿಬಿಡಿಯೇ ಗಡಿಬಿಡಿ;
ಆ ಮೂವರು
ಹೆಂಡ ಕುಡಿದರು
ಖಂಡ ತಿಂದರು
ಹನೀ ಕೇಕ್ ಚಪ್ಪರಿಸಿದರು
ಅವರ ಹಿಗ್ಗಿಗೆ ಪಾರವಿರಲಿಲ್ಲ.

ಗೂಡಂಗಡಿಗೆ ಬಂದ ಬಿಂದಾಸ ಗಿರಾಕಿಗಳ ಕಂಡ ಮಾಲಿಕ ಖುಷಿಯಿಂದ
ಕೈ ಹೊಸೆಯುತ್ತ ಮಡದಿಯಡೆ ನೋಡಿ ಮುಗುಳು ನಗೆ ಬೀರಿದ.

ಮೂವರು ಗಿರಾಕಿಗಳು ಹಾಡುತ್ತ ಚೀರುತ್ತ ಮನೆಯ ಕಡೆಗೆ ಹೊರಟು ನಿಂತಾಗ
ಆಗಸದಿ ಚಂದಿರ ನೆತ್ತಿಯ ಮೇಲಿದ್ದ.

ಗಿರಾಕಿಗಳು ಹೊರಟ ದಾರಿಯತ್ತ
ಮಾಲಿಕ ಮಡದಿ ದಿಟ್ಟಿಸಿದರು
ಗೂಡಂಗಡಿಯ ಬಾಗಿಲಲಿ ನಿಂತು.

ಮಡದಿ ನುಡಿದಳು:
‘ಈ ಗಿರಾಕಿಗಳ ಹೊಟ್ಟೆ ತಣ್ಣಗಿರಲಿ,
ಎಂಥ ಹುಕಿಯ ಸಜ್ಜನರಿವರು,
ಬಿಚ್ಚುಗೈಯ ದುಂದುಗಾರರು.
ನಿತ್ಯವೂ ಅವರು ಬರಲಿ ನಮ್ಮ ಗೂಡಂಗಡಿಗೆ
ಅನುದಿನವೂ ತರಲಿ ಅವರು ಇಂಥ ಶುಭ ಗಳಿಗೆ,
ಆಗ ನೋಡಿ ನಮ್ಮ ಮಗ ಈ ದರಿದ್ರ ಗೂಡಂಗಡಿಯ ಮಾಲಿಕನಾಗಬೇಕಿಲ್ಲ
ನಮ್ಮಂತೆ ಅವನು ಏಗಬೇಕಿಲ್ಲ.
ನಾವು ನಮ್ಮ ಮಗನ ಶಾಲೆಗೂ ಕಳುಹಿಸಬಹುದು
ಅವನು ಚರ್ಚೊಂದರ
ಪಾದ್ರಿಯೂ ಆಗಬಹುದು