ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತೈಮೂರ್ ಮತ್ತು ಇತರರು

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ನೀವು ತೈಮೂರನ ಧರ್ಮಾಂಧತೆಯ ಬಗ್ಗೆ
ಟೀಕಿಸುತ್ತೀರಿ
ಆದರೆ ಅವನ ಧರ್ಮನಿರಪೇಕ್ಷತೆಯ ಬಗ್ಗೆ
ಮಾತಾಡಿದ್ದೀರ ? ಎನ್ನುತ್ತಾರೆ…
ಈಚಿನ ಚರಿತ್ರಕಾರರು
ಅತ್ಯಾಧುನಿಕ ವಿಶ್ಲೇಷಕರು ಭಾರತದ
ದಂಡಯಾತ್ರೆಯಲ್ಲಿ ಸಿಕ್ಕ 90,000
ಕೈದಿಗಳನ್ನು ನಿಷ್ಪ್ರಯೋಜಕರೆಂದು
ಒಟ್ಟಿಗೇ ಕೊಂದ ಹಿಂದೂ-ಮುಸ್ಲಿಮ್ ಎಂಬ ಭೇದವಿಲ್ಲದೆ
ಇದಲ್ಲವೇ ಧರ್ಮನಿರಪೇಕ್ಷತೆ ಎಂದರೆ

ನಾಝಿಗಳ ಗ್ಯಾಸ್ ಚೇಂಬರ್ ಬಗ್ಗೆ ಟೀಕಿಸುತ್ತೀರಿ
ಸಯನೈಡ್ ಗ್ಯಾಸ್‍ನ ಕ್ಷಣಮಾತ್ರತೆಯ ಬಗ್ಗೆ
ತಿಳಿದಿದ್ದೀರ ಎನ್ನುತ್ತಾರೆ
ನಾಝಿಗಳಿಗಿರಲಿಲ್ಲ ಲಿಂಗಪ್ರಭೇದ
ಗ್ಯಾಸ್ ಚೇಂಬರ್‍ನಲ್ಲಿ ಎಲ್ಲರೂ ಒಂದೇ
ಒಳಗೆ ಸಾಮೂಹಿಕ ಸ್ನಾನ
ಹೊರಗೆ ನಳನಳಿಸುವ ಉದ್ಯಾನ

ಇನ್ನು ಫ್ರೆಂಚ್ ಮಹಾಕ್ರಾಂತಿ
ಅದನ್ನು
ತಪ್ಪಾಗಿ ತಿಳಿದವರೆ ಹೆಚ್ಚು ಜನ
ಅಲ್ಲಿ ಬಹುಶಃ ವೃಥಾ ಸತ್ತವರು ಕೂಡ ಹೆಚ್ಚು ಜನ
ಆದರೂ ಆ ಗಿಲೆಟಿನ್ ನೋಡಿ ಆ ಕಾಲಕ್ಕೆ
ತಲೆ ಕಡಿವ ಅತ್ಯಂತ ದಯಾಮಯ ಯಂತ್ರ
ವಾಗಿತ್ತು
ಒಂದೇಟು ಎರಡು ತುಂಡು ಕಡ್ಡಿ ಮುರಿದ ಹಾಗೆ
ನೀಟ್ ಏಂಡ್ ಕ್ಲೀನ್ ಯಾರಿಗೂ
ಶ್ರಮವಿಲ್ಲ
ಇದರೆದುರು ಪರಶುರಾಮನ ಪರಶು ಅರ್ಥಾತ್
ಕೊಡಲಿ ಬಹಳ ಪ್ರಿಮಿಟಿವ್

ಕಡಿದ ತಲೆ ಹಿಡಿಯುವುದಕ್ಕೊಂದು
ಬುಟ್ಟಿಯನ್ನೂ ಇಟ್ಟಿದ್ದರು
ಅದರ ಪಕ್ಕ ಎಷ್ಟೊಂದು ಕಲಾತ್ಮಕ..

ಇನ್ನು ಸ್ಟಾಲಿನ್ ಮೋಸ್ಕೋ ಟ್ರಯಲ್ಸ್‍ಗೆ
ವೀಕ್ಷಕರಾಗಿ
ಅಂತಾರಾಷ್ಟ್ರೀಯ ಸೆಲಿಬ್ರಿಟಿಗಳನ್ನೂ ಕರೆಸುತ್ತಿದ್ದ
ಹೌ ಫೇರ್ ಏಂಡ್ ಲವ್ಲೀ


ಚಿತ್ರ ಕೃಪೆ – 1918 ಜಾರ್ಜ್ ವೆಸ್ಲೆ ಬೆಲ್ಲೊಸ್ ಬೋಸ್ಟನ್ ಪಬ್ಲಿಕ್ ಲೈಬ್ರರಿ ಪಬ್ಲಿಕ್ ಡೊಮೈನ್