ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಂದಿನಂತಿಲ್ಲದ ಸಂದೇಶ ರವಾನಿಸುವ ಗಜ಼ಲ್ ಬರೆದವರು ಗೋವಿಂದ ಹೆಗಡೆಯರು..!
ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಈ ಬೆಳಗು ಎಂದಿನಂತಿಲ್ಲ
ಈ ಬದುಕು ಎಂದಿನಂತಿಲ್ಲ
ಅಲೆಗಳೆಷ್ಟು ಕ್ಷುಬ್ಧವಾಗಿವೆ
ಈ ಕಡಲು ಎಂದಿನಂತಿಲ್ಲ
ಮಧುಶಾಲೆಗೇ ಗರ ಬಡಿದು
ಈ ಗುಟುಕು ಎಂದಿನಂತಿಲ್ಲ
ಎಂಥ ಮರುಳಿತ್ತು ಸಂಜೆಯಲ್ಲಿ
ಈ ಇರುಳು ಎಂದಿನಂತಿಲ್ಲ
ಮುಖ ತಿರುಗಿಸಿ ನಡೆದಳಲ್ಲ
ಯಾಕವಳು ಎಂದಿನಂತಿಲ್ಲ
ಎದೆಯೂಟೆ ಬತ್ತಿಹೋಯಿತೇ
ಈ ಮಡಿಲು ಎಂದಿನಂತಿಲ್ಲ
ಬಾಂದಳಕೆ ಬೆಂಕಿ ಬಿದ್ದಿದೆ
ಈ ಮುಗಿಲು ಎಂದಿನಂತಿಲ್ಲ
ಸಾಂತ್ವನವ ಅರಸಿದೆ ‘ಜಂಗಮ’
ಈ ಹೆಗಲು ಎಂದಿನಂತಿಲ್ಲ