ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಶೆಲ್ಫಿನಲ್ಲಿ ಮುದುಕರಂತೆ ಕೂತುಕೊಂಡಿರುವ
ಹಳೆ ಪುಸ್ತಕಗಳು
ಒಂದು ಕಾಲಕ್ಕೆ ಹೊಚ್ಚ ಹೊಸತಾಗಿದ್ದವು
ಇಂದು
ಕೆಲವರ ಬೆನ್ನು ಮುರಿದಿವೆ ಇನ್ನು ಕೆಲವರ
ಮುಖ ಹರಿದಿವೆ ಕೆಲವರ ಕಿವಿಗಳು
ಬಿದ್ದಿವೆ ಅಥವಾ ಕಿತ್ತು ಜೋಲುತ್ತಿವೆ

ಕೆಲವರ ಪುಟಗಳು ಹೋಗಿ
ಬೇರೆ ಪುಸ್ತಕದೊಳಗೆ
ಸೇರಿಬಿಟ್ಟಿವೆ
ಅರ್ಥಾರ್ಥ ಸಂಬಂಧ ಇದೆಯೆ..? ಇದೆಯೆಂದರೆ
ಇದೆ…
ಇಲ್ಲವೆಂದರೆ ಇಲ್ಲ..
*

ನನ್ನೆದೆ ಕಂಪಿಸುತ್ತಿದೆ
ನಾನೂ ವೃದ್ಧ ಈ ಪುಸ್ತಕಗಳಂತೆಯೇ
ಸ್ತಬ್ದ…
ಧೂಳು ಹೊದ್ದು
ಒಂದೆಡೆ ಕೂತಿರುತ್ತೇನೆ..
ಯಾರೂ ಮಾತಾಡಿಸುವುದಿಲ್ಲ..
ನನ್ನ ಪ್ರಕ್ಷುಬ್ದತೆ ನನ್ನೊಳಗೇ ಇದೆ..
ವಿವಿಧ ಸ್ಥಿತ್ಯಂತರಗಳಲ್ಲಿ ಮೌನ ಮಹಾಮೌನ
ಜನ ನಿಬಿಡ ನಿಶ್ಸಬ್ದ…
ಸುಷುಪ್ತಿ ಅರೆ ನಿದ್ರೆ ಹಲವು ಸಾವಿರ ಕನಸು..
ಒಂದು ಯುಗಕ್ಕೆ ಸಾಕಾಗುವಷ್ಟು ಮನಸು..
*

ಭುಜ ನೋವು ಆದ್ದರಿಂದ ಎತ್ತಲಾರೆ
ಕೈಗೆ ಎಸೆನ್ಶಿಯಲ್ ಟ್ರೆಮರ್ ಆದ್ದರಿಂದ
ಒರೆಸಲಾರೆ
ಕಣ್ಣಿಗೆ ದೃಷ್ಟಿ ಮಾಂದ್ಯ ಆದ್ದರಿಂದ
ಓದಲಾರೆ
ಆದರೂ ಇದೇನು ಋಣಾನುಬಂಧ ಈ
ಪುಸ್ತಕಗಳಿಗೂ ನನಗೂ… ಅವಿಲ್ಲದೆ ನಾನು
ಇರಲಾರೆನೆಂಬ..
ಇರಲಿ ನನ್ನುಸಿರಿರುವವರೆಗೆ