ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ವಸಂತವನದ
ವಸ್ತುಪ್ರದರ್ಶನಕ್ಕೆ
ನಿಮಗೆಲ್ಲ ಸ್ವಾಗತ
ನನ್ನ ಹೆಸರು ಕೋಗಿಲೆ
ನಾನು ವಸಂತನ
ಆಗಮನಸೂಚಿ
ನಾನು ಹೊರಡಿಸುವ ಇನಿದನಿ
ವಸಂತನು ಕಾಲಿಟ್ಟ ಗುರುತು

ಒಂದಾನೊಂದು ಕಾಲದಲ್ಲಿ
ನನಗೆ ಎಲ್ಲೆಂದರಲ್ಲಿ
ಮಾವಿನ ಚಿಗುರು ಸಿಗುತ್ತಿತ್ತು
ಅದು ಮೆದ್ದು ನಾನು
ನನ್ನ ಇನಿದನಿ ಹೊರಡಿಸುತ್ತಿದ್ದೆ
ಈಗ ಹುಡುಕುವುದರಲ್ಲೇ ಸಾಕಾಗಿದೆ
ದನಿ ಹೊರಡದಿದ್ದಲ್ಲಿ ಕ್ಷಮಿಸಿ

ಹೀಗೆ ಬನ್ನಿ
ಇಲ್ಲಿ ಒಂದು ಸಮಯದಲ್ಲಿ
ನಿಸರ್ಗದ ಮಡಿಲಾದ
ದಟ್ಟ ಕಾಡೊಂದಿತ್ತು
ಗಿಡಮರ ಹೂವು ಹಣ್ಣುಗಳಿಂದ
ನಮ್ಮೆಲ್ಲರ ತಂಗುದಾಣವಾಗಿತ್ತು
ಈಗ ಇದು ಬರೀ ಅವಶೇಷ ಭೂಮಿ
ಇಲ್ಲಿಗೆ ವಸಂತನ ಆಗಮನದ
ಸುಳಿವು ಸಿಗುವುದಿಲ್ಲ
ಕುರುಹೂ ಕಾಣುವುದಿಲ್ಲ
ಆದಕಾರಣ ಏನೂ ಕಾಣದಿದ್ದರೆ
ಕ್ಷಮೆ ಇರಲಿ

ಹೀಗೆ ಬನ್ನಿ
ಕೆಲವಾರು ದಶಕಗಳ ಹಿಂದೆ ಇಲ್ಲಿ
ವನಜೀವಿಗಳ ಸಂಭ್ರಮವಿತ್ತು
ಪಶು ಪಕ್ಷಿಗಳ ಜಾತ್ರೆಯಿತ್ತು
ಹಸಿರುವನ ಸಿರಿಯ ನಡುವೆ
ಅವುಗಳ ಜೀವನವೂ ಹಸಿರಾಗಿತ್ತು
ಈಗ ಇದು ಬರೇ ಬೀಡು
ಗುಡ್ಡ ದಿನ್ನೆಗಳ ನಾಡು

ನನ್ನ ಬಿಕ್ಕಳಿಕೆಗಳನ್ನು
ತಡೆದು ತಡೆದು
ದನಿಯ ಒತ್ತಿ ಹಿಡಿದು
ಈಗ ಹೊರಡುವುದೇ ಕಷ್ಟವಾಗಿದೆ
ನಿಮ್ಮೊಟ್ಟಿಗೆ ಬರಲೂ ಆಗದಾಗಿದೆ

ವಸಂತನ ಆಗಮನದ
ಕಾತರ ತೋರುವ ನಿಮಗೆ
ನಿರಾಶೆ ಮಾಡುತ್ತಿದ್ದಕ್ಕೆ
ಕ್ಷಮೆ ಇರಲಿ
ನೀವು ಮುಂದುವರೆಸಿ
ಎಲ್ಲಾದರೂ ವನಸಿರಿ
ನಳನಳಿಸಿದ್ದು ಕಂಡುಬಂದರೇ
ನನಗೆ ತಿಳಿಸಿ

ಮತ್ತೆ ನನ್ನ ದನಿಗೊಂದು
ನವ ಜೀವನ ಬಂದೀತು
ವನ ಜೀವನದ ಸವಿ ತಂದೀತು
ಹೋಗಿಬನ್ನಿ ನಮಸ್ಕಾರ