ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಧರ್ಮೋ ರಕ್ಷತಿ ರಕ್ಷಿತಃ

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಮನುಷ್ಯನು ಧರ್ಮವನ್ನೇಕೆ ಪಾಲಿಸಬೇಕು?
ಧರ್ಮದ ಎಂಬ ಶಬ್ದಕ್ಕೆ ನಿರ್ದಿಷ್ಟ ಹಾಗೂ ಸಂದೇಹ ರಹಿತ ಉತ್ತರವನ್ನು ಯಾರೂ ಕೊಡದಿದ್ದರೂ,ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ವಿವರಣೆ ನೀಡಿದ್ದಾರೆ. ಅಷ್ಟು ಮಹತ್ವಪೂರ್ಣ ಹತ್ತಾರು ಅರ್ಥಗಳು ಧರ್ಮ ಶಬ್ದದ ಅಡಗಿದೆ.
ಧರ್ಮ ಎನ್ನುವ ಪದ ‘ಧೃ’ ಎಂಬ ಧಾತುವಿನಿಂದ ಹುಟ್ಟು ಪಡೆದಿದೆ. ತಾನು ಅಚಲವಾಗಿದ್ದು, ಇತರರನ್ನು ಅಚಲವಾಗಿ ನಿಲ್ಲುವಂತೆ ಮಾಡುವ ಗುಣ ವಿಶೇಷತೆ ‘ಧರ್ಮ’ ಎಂದು ನಮ್ಮ ಹಿರಿಯರು ವಿವರಿಸಿದ್ದಾರೆ.ಸ್ಥಿರತೆ ಇದರ ಮೂಲ ತಿರಳು. ತಾನು ಯಾವ ಸಂದರ್ಭದಲ್ಲೂ ಚಂಚಲ ಗೊಳ್ಳದೆ ಸ್ಥಿರವಾಗಿದ್ದು ಇತರರನ್ನು ಸ್ಥಿರವಾಗಿ ನಿಲ್ಲುವಂತೆ ನೋಡಿಕೊಳ್ಳುತ್ತದೆ.
ದಿನನಿತ್ಯದ ಆಚರಣೆಗಳು, ವಿಧಿಗಳು, ನೀತಿ ನಿಯಮಾವಳಿಗಳು,ಶ್ರಧ್ಧೆಗಳು, ಮತಾಚಾರಗಳು, ನೀತಿ ವಾಕ್ಯಗಳು ಪೂರ್ವಾಚಾರರು, ಸಂಪ್ರದಾಯಗಳು ಹೀಗೆ ಎಲ್ಲವೂ ಧರ್ಮದ ಉದರದಲ್ಲಿ ಸೇರಿಹೋಗಿದೆ.
ಸೂರ್ಯಹುಟ್ಟುವುದು, ಮುಳುಗುವುದು, ಮಳೆ ಬೀಳುವುದು, ಬೇಸಿಗೆಕಾಲ ಬರುವುದು ಎಲ್ಲಾ ಚಟುವಟಿಕೆಗಳಿಗೆ ಧರ್ಮವೇ ಕಾರಣ. ಎಲ್ಲವನ್ನು ಕ್ರಮಬದ್ಧವಾಗಿ ನಡೆದುಕೊಂಡು ಹೋಗುವ ಹೊಣೆಯನ್ನು ಧರ್ಮ ಹೊತ್ತುಕೊಂಡಿದೆ. ಪ್ರತಿ ಯೊಂದು ಒಂದು ನಿಯಮಕ್ಕೆ ಅನುಸಾರವಾಗಿ ನಡೆಯುತ್ತದೆ‌.ಎಲ್ಲವೂ ಯಾವುದೋ ನಿಯಮಕ್ಕೆ ಕಟ್ಟುಪಾಡಿಗೆ ತಲೆಬಾಗಿ ನಡೆಯುತ್ತಿವೆ. ಅವೆಲ್ಲವನ್ನೂ ಧರಿಸಿಕೊಂಡಿರುವ ಧರ್ಮ, ಅವನ್ನು ಆಧರಿಸಿ ನಡೆಸಿಕೊಂಡು ಹೋಗುವ ಶಕ್ತಿಯನ್ನು ಪಡೆದಿರುತ್ತದೆ.ಆದ್ದರಿಂದ ನಮ್ಮ ಹಿರಿಯರು ಪದೇಪದೇ ಒಂದು ಮಾತನ್ನು ಒತ್ತಿ ಹೇಳುತ್ತಿದ್ದರು. “ಧರ್ಮವನ್ನು ಎಂದೂ ತಪ್ಪಿ ನಡೆಯಬೇಡ”ಎಂದು.ನಮ್ಮ ಹಿರಿಯರು, ಚಿಂತಕರು, ಕವಿಗಳು ಸಮಯ ಬಂದಾಗಲೆಲ್ಲ ಧರ್ಮದ ಶ್ರೇಷ್ಠತೆಯನ್ನು ತೋರಿಸಿದ್ದಾರೆ.

ಹಿಂದೆ ಋಷಿಮುನಿಗಳಿಗೂ ಸಹ ಧರ್ಮದ ಮೂಲ ತಿಳಿದಿತ್ತು. ರಾಮಾಯಣದಲ್ಲಿ ಧರ್ಮದಿಂದಲೇ ಸುಖ,ಸಂಪತ್ತು, ಶಾಂತಿ ಎಲ್ಲವೂ ಸಿದ್ಧಿಸುತ್ತವೆ ಎಂದು ಹೇಳಲಾಗಿದೆ. ಮಹಾಭಾರತದಲ್ಲಿ ಧರ್ಮದಿಂದಲೇ ಮನುಷ್ಯನಿಗೆ ಒಳ್ಳೆಯ ಕರ್ಮಫಲ ಲಭಿಸುತ್ತದೆ. ಪೂರ್ವಜನ್ಮದಲ್ಲಿ ಧರ್ಮವನ್ನು ನಂಬಿ ಆಚರಿಸಿದವರು ಈ ಜನ್ಮದಲ್ಲಿ ಶ್ರೀಮಂತರಾಗಿ ಹುಟ್ಟಿ ಸುಖ-ಶಾಂತಿ ಪಡೆಯುತ್ತಿದ್ದಾರೆ.ಗತಜನ್ಮದ ಧರ್ಮದಿಂದಲೇ ಈ ಜನ್ಮದಲ್ಲಿ ಸುಖಶಾಂತಿ ಪಡೆಯುತ್ತೇವೆ.ಧರ್ಮ ಇರುವ ಕಡೆ ಜಯವು ಇರುತ್ತದೆ ಎಂದು ತಿಳಿಸಲಾಗಿದೆ.

ಧರ್ಮ ಎಂಬುದಿಲ್ಲದಿದ್ದರೆ ಇಡೀ ಜಗತ್ತು ಗೊಂದಲಮಯವಾಗುತತ್ತು ಎಂದು ನಮ್ಮ ಹಿರಿಯರು ಭಾವಿಸಿದ್ದರು.ಪ್ರತಿಯೊಂದು ಜೀವಿಯೂ ತನ್ನ ಧರ್ಮಕ್ಕೆ ತಕ್ಕಂತೆ ನಡೆದುಕೊಳ್ಳುವುದರಿಂದ ಜಗತ್ತಿನ ಸಕಲ ವ್ಯಾಪಾರಿಗಳೂ ನಿರಾತಂರವಾಗಿ ಸಾಗುತ್ತಿವೆ.ಧರ್ಮದ ಮಿತಿಯನ್ನು ಮೀರಿದರೆ ಏನು ಬೇಕಾದರೂ ಅನಾಹುತವಾಗಬಹುದು.ಆದ್ದರಿಂದ ಇಂದೂ ನಾವು ಮುಂದುವರಿಸಿಕೊಂಡು ಬರುತ್ತಿರುವ ಆಚಾರ-ವಿಚಾರಗಳು, ಸಂಪ್ರದಾಯಗಳು, ನೀತಿ-ನಿಯಮವಾಳಿಗಳು ಧರ್ಮವನ್ನು ರಕ್ಷಿಸುವ ಹೊಣೆಯನ್ನು ಹೊತ್ತುಕೊಂಡಿವೆ.

ಸಮಾಜದಲ್ಲಿ ಪ್ರತಿಯೊಬ್ಬನಿಗೂ ಅವನದೇ ಆಗಿರುವಂತಹ ಒಳ್ಳೆಯ ರೀತಿ ನೀತಿ ಗಳಿರುತ್ತವೆ. ಅವನ್ನೇ ಬಲ್ಲವರು “ಧರ್ಮ”ಎನ್ನುತ್ತಾರೆ. ಆದ್ದರಿಂದ “ಧರ್ಮೋ ರಕ್ಷತಿ ರಕ್ಷಿತಃ”ಯಾರು ಧರ್ಮಕ್ಕಾಗಿ ಹೋರಾಡುತ್ತಾರೋ ಅವರನ್ನು ಅವರ ಧರ್ಮವೇ ರಕ್ಷಿಸುತ್ತದೆ ಎಂಬ ನುಡಿಯನ್ನು ನಮ್ಮ ಹಿರಿಯರು ಬಿಟ್ಟು ಹೋಗಿದ್ದಾರೆ. ಅಂದರೆ ಯಾರು ಧರ್ಮಕ್ಕೆ ತಮ್ಮ ಜೀವನವನ್ನು ಮೀಸಲಿಡುತ್ತಾರೋ ಅವರ ನಡತೆಯೇ ಅವರನ್ನು ಕಾಪಾಡುತ್ತದೆ. ಧರ್ಮ ಮತ್ತು ವ್ಯಕ್ತಿ ಪರಸ್ಪರ ಅವಲಂಬಿತರು.ಒಬ್ಬರು ಮತ್ತೂಬ್ಬರಿಗೆ ಅಗತ್ಯ ಅನಿವಾರ್ಯ.ಧಾರ್ಮಿಕ ಜೀವನದಿಂದ ಲೋಕಕ್ಕೆ ಒಳ್ಳೆಯದಾಗುವುದು, ಮಾನವನಿಗೆ ಹಿತವಾಗುವುದು ಎಂದು ಎಲ್ಲ ಸಂತ ವಾಣಿಗಳು ಹೇಳುತ್ತವೆ.
ಭಗವದ್ಗೀತೆಯಲ್ಲಿ ಯಾವುದು ಧರ್ಮ, ಯಾವುದು ಅಧರ್ಮ ಎಂಬುದನ್ನು ತಿಳಿಸಿ ಹೇಳುವ ಪ್ರಯತ್ನ ಮಾಡಿದೆ.”ಕೆಟ್ಟವನನ್ನು ಶಿಕ್ಷಿಸಲು ಮಾಡುವಯುದ್ಧ ಧರ್ಮಯುದ್ಧ”. ಅದು ಮಾನವನ ಕರ್ತವ್ಯ ಎಂದು ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಉಪದೇಶ ಸಿದ್ದಾರೆ. ಧರ್ಮ ಇರುವ ಕಡೆ ಜಯವೂ ಇರುತ್ತದೆಎಂದು ಮಹಾಭಾರತದಲ್ಲಿ ಹೇಳಿದೆ.

ಸುಭಾಷಯದಲ್ಲಿ ಹೇಳಿರುವಂತೆ,ಧರ್ಮವಿಲ್ಲದವರು
ಪಶುಗಳಿಗೆ ಸಮಾನ, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಆಚಾರದಿಂದಲೇ ಬರತಕ್ಕದ್ದು ಧರ್ಮ, ಧರ್ಮ ದಿಂದಲೇ ಆಯುವ್ರಧ್ಧಿ, ದಯೇಯನ್ನು ಮೀರಿದ ಧರ್ಮವಿಲ್ಲ, ಆ ಧರ್ಮವನ್ನು ನಾಶಪಡಿಸಿದರೆ ಅದು ನಮ್ಮನ್ನು ನಾಶಪಡಿಸಿದರೆ ಬಿಡುವುದಿಲ್ಲ. ಅವರವರ ಧರ್ಮ ರಕ್ಷಣೆಯನ್ನು ಎಂದಿಗೂ ಮರೆಯಬಾರದು.

ಇದನ್ನೇ ಬಸವಣ್ಣನವರು ಸಹ ತಮ್ಮ ಒಂದು ವಚನದಲ್ಲಿ ಧರ್ಮಾಚರಣೆಯ ನಿಜವಾದ ಅರ್ಥವನ್ನು ತಿಳಿಸಿದ್ದಾರೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,ಅನ್ಯರಿಗೆ ಅಸಹ್ಯ ಪಡಬೇಡ,ಇದಿರ ಹಳಿಯಲು ಬೇಡ, ತನ್ನ ಬಣ್ಣಿಸಬೇಡ, ಇದೆ ಅಂತರಂಗ ಶುದ್ದಿ, ಇದೆ ಬಹಿರಂಗ ಶುದ್ದಿ, ಇದೇ ನಮ್ಮ ಕೂಡಲ ಸಂಗಮನೊಲಿಸುವ ಪರಿ. ದಯವೇ ಧರ್ಮದ ಮೂಲ ಎಂದು ತಿಳಿಸಿದ್ದಾರೆ.
ಹಿಂದೂ ಧರ್ಮ ದೇವರಿದ್ದಾನೆ, ಎಂದು ಒಪ್ಪಿಕೊಂಡು ಆ ದೇವರು ಎಲ್ಲಾ ಕಡೆ ಇದ್ದಾನೆ ,ಎಲ್ಲರಲ್ಲೂ ಇದ್ದಾನೆ ಅವನು ನ್ಯಾಯಮೂರ್ತಿ, ಕರುನಾಳು ಎಂದು ಭೋಧಿಸುತ್ತದೆ. “ಎಲ್ಲ ಜನರು ಸೌಖ್ಯದಿಂದಿರಲಿ ಎಲ್ಲರಿಗೂ ಮಂಗಳವಾಗಲಿ”ಎಂದು ಹಾರೈಸುವ ಹಿಂದೂ ಧರ್ಮ ಶುದ್ಧ ಜೀವನ ಅಗತ್ಯಎಂದು ಪ್ರತಿಪಾದಿಸಿದೆ.
ಇತರರ ಕೋಪವನ್ನು ತಾಳ್ಮೆಯಿಂದ,ದ್ವೇಷವನ್ನು ಒಳ್ಳೆಯತನದಿಂದ ಗೆಲ್ಲಿರಿ, ನೀವು ಜಯಗಳಿಸಿದರೂ ನಿಮ್ಮ ಎದುರಾಳಿ ನಿಮ್ಮನ್ನು ದ್ವೇಷಿಸುತ್ತಾನೆ.ಆದ್ದರಿಂದ ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕು ಎಂದು ಉಪದೇಶಿಸಿದ ಬುದ್ಧನ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ವಿವಾಹ, ಸಾಂಸಾರಿಕ ಜೀವನ ಎಲ್ಲರಿಗೂ ಸಹಜವಾದದ್ದು. ಆಡಂಬರವಿಲ್ಲದ ಸರಳವಾದ ಜೀವನ, ಧರ್ಮಾಚರಣೆ, ಭಗವಂತನ ಧ್ಯಾನ,ನಾಮಸ್ಮರಣೆ, ಸತ್ಯದ ಆಚರಣೆ ಮುಖ್ಯವಾದವು ಎಂದು ಬೋಧಿಸಿದರು.

ಚೆನ್ನಾಗಿ ಬದುಕಿ ಬಾಳಬೇಕು ಎಂಬ ಉತ್ಸಾಹ ನಮ್ಮ ಪ್ರಾಚೀನ ಕೃತಿಗಳಾದ ಉಪನಿಷತ್ತುಗಳಲ್ಲಿ ತುಂಬಿ ತುಳುಕಾಡುತ್ತಿದೆ ಎಂದು ಪಂಡಿತರು ತಿಳಿಸಿದ್ದಾರೆ. ‘ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತದೆಡೆಗೆ ನಮ್ಮನ್ನು ನಡೆಸು’ಎಂದು ಉಪನಿಷತ್ತಿನ ಪ್ರಾರ್ಥನೆಯೊಂದು ಬೇಡಿಕೊಳ್ಳುತ್ತದೆ.ಸತ್ಯವನ್ನು ಹೇಳು,ಧರ್ಮವನ್ನು ಆಚರಿಸು, ಸತ್ಯದಿಂದ ಕದಲಬೇಡ, ಧರ್ಮದಿಂದ ಕದಲಬೇಡ,ತಾಯಿಯೇ ನಿನಗೆ ದೇವರಾಗಲಿ,ತಂದೆಯೇ ನಿನಗೆ ದೇವರಾಗಲಿ ನಿಮ್ಮಲ್ಲಿ ಯಾವ ಒಳ್ಳೆಯ ನಡತೆಗಳಿವೆಯೋ ಅವನ್ನು ಕಲಿಯಬೇಕು. ತನ್ನ ಐಶ್ವರ್ಯಕ್ಕೆ ತಕ್ಕಂತೆ ದಾನ ಮಾಡಬೇಕು. ವಿನಯದಿಂದ ಕೊಡಬೇಕು ಎಂದು ಉಪನಿಷತ್ತು ಬುದ್ಧಿ ಮಾತು ಹೇಳಿದೆ. ಹೀಗಾಗಿ ನಾವು ಧರ್ಮಗಳನ್ನು ರಕ್ಷಿಸಿಕೊಳ್ಳಬೇಕು. ಆಗ ಮಾತ್ರ ಧರ್ಮ ಕೂಡ ನಮ್ಮ ನಿಮ್ಮನ್ನು ರಕ್ಷಿಸುವುದು.
ಸದ್ಗುಣಗಳು ನೆಮ್ಮದಿಯನ್ನು ತರುವಂತಯೇ ದುರ್ಗುಣಗಳು ವ್ಯಸನವನ್ನು ತರುತ್ತವೆ.
ದಿನನಿತ್ಯದ ಜೀವನವನ್ನು ಈ ರೀತಿಯಲ್ಲಿ ರೂಡಿಸಿಕೊಳ್ಳಬೇಕು.

ನಮ್ಮ ಮಾತಾಪಿತೃಗಳನ್ನು ಕಾಪಾಡುವ ನಮ್ಮ ಧರ್ಮವನ್ನು ಪಾಲಿಸಿದರೆ, ನಾಳೆ ನಮ್ಮ ಮಕ್ಕಳು ಸಹ ನಮ್ಮನ್ನು ಕಾಪಾಡುತ್ತಾರೆ.ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ಗಾದೆ ಮಾತಿನಂತೆ, ಮಕ್ಕಳು ಚಿಕ್ಕವರಿರುವಾಗಲೆ ನೆಡವಳಿಕೆಯನ್ನು, ಶಿಸ್ತನ್ನು ತಿದ್ದುವ ಹೊಣೆಗಾರಿಕೆ ತಂದೆ-ತಾಯಿಯರಿಗೆ ಶಿಕ್ಷಕರಿಗೆ ,ಹಿರಿಯರಿಗೆ ಸೇರಿದ್ದು. ಆಗ ನಮ್ಮ ಮಕ್ಕಳೂ ಸಹ ಅದೇ ಧರ್ಮಾಚರಣೆಯುಳ್ಳವರಾಗಿ ಬೆಳೆಯುತ್ತಾರೆ.ನಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ, ನಮ್ಮ ಮೋಕ್ಷ
ಸಂಪಾದನೆಯ ಮಾರ್ಗವಾಗಿ ನಮ್ಮ ನಮ್ಮ ಧರ್ಮಗಳನ್ನು ಆಚರಿಸೋಣ.