ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಂಡರ್ಗಪ್ಪೆನೋ ಚೇಳ್ಕೈಲೋ ಕಚ್ಚಿಸ್ಕೊಂಡ್ ಒದ್ದಾಡಿದ್ದು

ಎಚ್ಚಾರೆಲ್

ನಾನ್ಹೇಳ್ತಿರೋ ಹೊಳಲ್ಕೆರೆ, ೧೯೬೦ ರ ಸುಮಾರಿನದು ; ಅಂದರೆ ಸುಮಾರು ೬೦ ವರ್ಷ ಹಿಂದಿಂದು. ನಮ್ಮ ಮನೇನೂ ಸೇರಿದಂತೆ ಬರೀ ಕಪ್ಪು ನಾಟಿ ಹೆಂಚಿನ್ಮನೆಗಳು. ಎಲ್ಲೋ ಪೇಟೆನಲ್ಲಿ ಅಮಲ್ದಾರ್ದೋ ಪೋಸ್ಟ್ಮಾಸ್ತರ್ ಮನೆಗಳೋ ಇಲ್ಲವೇ ಟಿಬೀ ಬಂಗಲೆಗಳೋ ಮಂಗಳೂರಿನ ಕೆಂಪು ಬಣ್ಣದ ಹೆಂಚನ್ನು ಹೊಂದಿದ್ದವು. ಈ ಹೆಂಚಿನ ಮಾತು ಯಾಕೆ ಬಂತಪ್ಪ ಅಂದ್ರೆ, ಚೇಳುಗಳು, ಹಾವುಗಳು, ಸಾಮಾನ್ಯವಾಗಿ ವಾಸಮಾಡೋದು ನಾನು ಮೇಲೆ ಹೇಳಿದ ಕಪ್ಪು ನಾಡ ಹೆಂಚಿನ ಸೂರಿನೊಳಗೆ.
ಈಗ ವಿಷಯಕ್ಕೆ ಬರೋಣ.

ಲೇಖಕರು

ನಮ್ಮೂರ್ನಲ್ಲಿ ಯಾರಿಗಾದರೂ ಒಮ್ಮೆಯಾದರೂ ಚೇಳು ಕಚ್ಚಿಲ್ಲವೆಂದರೆ, ಆಶ್ಚರ್ಯದಿಂದ ತಲೆಯೆತ್ತಿ ನೋಡ್ತಿದ್ದ ಕಾಲ ಆಗ. ಅಲ್ಲಿನ ವಾತಾವರಣದಲ್ಲಿ ಚೇಳು, ಹಾವು ಮಂಡರಗಪ್ಪೆ, ಹಲ್ಲಿಗಳು, ಓತಿಕ್ಯಾತ, ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಕಾಣಿಸುವ ಸಂಗತಿಗಳಾಗಿದ್ದವು. ಬೇಸಿಗೆಯ ಬಿಸಿಲಿನ ಝಳಕ್ಕೆ ಹಾವುಗಳು, ಚೇಳುಗಳು, ಮಂಡರಗಪ್ಪೆಗಳು, ಮನೆಯೊಳಗೆ ಬರುತ್ತಿದ್ದವು. ಅವುಗಳ ಬಗ್ಗೆ ನಮ್ಮ ಊರಿನ ರೈತಾಪಿ ಜನ ಎಂದೂ ತಲೆ ಕೆಡಸ್ಕೊಂಡಿರೋದು ನಾ ಕಾಣೆ. ಅವು ಗೋಡೆಯ ಬದಿಯಲ್ಲೇ ನಿಧಾನವಾಗಿ ಬರುತ್ತವೆ. ನಾವು ಅದಕ್ಕೇ ಮಲಗುವಾಗ ನಮ್ಮ ಹಾಸಿಗೆಗಳನ್ನು ಗೋಡೆಗೆ ಹತ್ತಹಾಕಿಕೊಂಡು ಮಲಗುವುದು ಕ್ಷೇಮಕರವಲ್ಲವೆಂದು ಅಮ್ಮ-ಅಪ್ಪ ಪ್ರತಿದಿನವೂ ಎಚ್ಚರಿಕೆ ಕೊಡುತ್ತಿದ್ದರು. ನಮ್ಮ ಮನೆಯೋ ೪ ಅಂಕಣದ ದೊಡ್ಡ ದೇಗುಲದಂತಹ ಮನೆ. ಸುಮಾರಾಗಿ ಎಲ್ಲರಮನೆಯೂ ಹಾಗೇ, ದೊಡ್ಡ ಕಂಭಗಳು, ಪಡಸಾಲೆ, ತೇಗದ ತೊಲೆಗಳು ಇವುಗಳಿಂದ ಮಜ್ಬೂತ್ ಆಗಿರ್ತಿದ್ವು , ಸಾವಿರಾರು ಮರಮುಟ್ಟುಗಳು, ಬಿದುರಿನ ಗಳುಗಳು, ಅಡಿಕೆ ಮರದ ದಬ್ಬೆ, ಮತ್ತು ಅವುಗಳನ್ನು ಜಗ್ಗಿಸಿ ಬಲವಾಗಿ ಸುತ್ತಿದ ಬಳ್ಳಿಗಳ ನಡುವೆ ಬೇಕಾದಷ್ಟು ಸಂದು ಬಿಟ್ಟಿರುತ್ತಿದ್ದದ್ದರಿಂದ ಇಲಿಗಳು ಒಂದರ ಹಿಂದೆ ಅಟ್ಟಿಸಿಕೊಂಡು ಓಡಾಡುವ, ಆಟವಾಡುವ ದೃಷ್ಯ ನಮಗೆ ಅಭ್ಯಾಸವಾಗಿ ಹೋಗಿತ್ತು. ಅದಕ್ಕೆ ಅಮ್ಮ, ಎಲ್ಲ ಪಾತ್ರೆಗಳ ಮೇಲೂ ಒಂದು ತಟ್ಟೆಯನ್ನಾದರೂ ಮುಚ್ಚಿರಬೇಕೆಂದು, ಯಾವಾಗಲೂ ಹೇಳುತ್ತಿದ್ದರು.

ಮನೆಯ ತುಂಬಾ ಕಪ್ಪಿರುವೆಗಳು, (ಗೊದ್ದಗಳು) ಕೆಂಪಿರಿವೆಗಳು, ಮತ್ತು ಝರಿಗಳನ್ನು ನೆನೆಸಿಕೊಂಡರೆ ನಗರಗಳ pesticides ತಜ್ಞರು ಒಂದುವೇಳೆ ನಮ್ಮೂರಿಗೆ ಬಂದು ನೆಲೆಸಿದರೆ ಅವರ ಕಥೆಯೇನು ಅನ್ನಿಸುತ್ತದೆ. ಸಾಯಂಕಾಲ ೬ ಗಂಟೆಗೇ ಕಗ್ಗತ್ತಲು. ಹೊರಗೆ ಆಟಕ್ಕಾಗಿ ಹೋಗುವ ಮಕ್ಕಳಿಗೆ ಅವರ ತಾಯಂದಿರು ‘ಬೇಗ ಬಂದ್ ಬಿಡಿ; ದೀಪ ಮೂಡ್ಸಕ್ ಮುಂಚೆನೇ’ ಅಂತ ಅವರ್ನ ಅಂಗಲಾಚಿ ಬೇಡಿಕೊಳ್ಳುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಕೆಲವುವೇಳೆ ಚಂದ್ರನ ಬೆಳಕಿರುವಾಗ, ಅಲ್ಲಿ ಲಗೋರಿ ಆಟವಾಡುತ್ತಿದ್ದ ಹಳ್ಳಿ ರೈತರ ಮಕ್ಕಳು, ಆ ಆಟದಲ್ಲಿ ತಲ್ಲೀನರಾಗಿ ಒಂದು ಧನ್ಯತೆಯನ್ನು ಗಳಿಸಿದರೆನ್ನುವ ಮುಖಭಾವ ವ್ಯಕ್ತ ಪಡಿಸುತ್ತಿದ್ದರು. ದೂರದಲ್ಲಿ ಬೊಗಳುವ ನಾಯಿಗಳ ಶಬ್ದ, ಮತ್ತು ‘ಅಂಬಾ’ ಎಂದು ಹಸುವಿನ ಕರುಗಳು ತಮ್ಮ ಅಮ್ಮಂದಿರನ್ನು ಪ್ರೀತಿಯಿಂದ ಕರೆಯುವ ಶಬ್ದಗಳನ್ನು ಬಿಟ್ಟರೆ, ಯಾವ ವಾಹನಗಳ ಶಬ್ದವೂ ಇರುತ್ತಿರಲಿಲ್ಲ ಆಗತಾನೆ ನಮ್ಮ ಧರಣೇಂದ್ರಪ್ಪ ಮಾಸ್ಟರ್ ತಾವು ಕೊಂಡು ತಂದ ಸೈಕಲ್ಲನ್ನು ಎಲ್ಲಾರಿಗೂ ಅದರ ಬಗ್ಗೆ ಗುಣಗಾನ ಮಾಡಿ ನಮಗೆಲ್ಲಾ ಹುಚ್ಚು ಹಿಡಿಸುತ್ತಿದ್ದರು. ಎಲ್ಲೆಲ್ಲೂ ಪ್ರಶಾಂತವಾದ ವಾತಾವರಣ. ಬೆಳಿಗ್ಯೆ, ನಸುಕಿನಿಂದ ಆರಂಭವಾದ ಕೋಳಿಗಳ “ಕೊಕ್ಕೋಕೊ,” ಕೂಗುವಿಕೆ, ೭ ಗಂಟೆಯ ತನಕವಿರುತ್ತಿತ್ತು. ದೂರದಲ್ಲಿ ಮರಕುಟಕಗಳು, ಇಲ್ಲವೇ ಕೋಗಿಲೆಗಳ ’ಕೂ ಸಂಗೀತ’. ಕಾಗೆಗಳು, ಪಾರಿವಾಳಗಳು, ಗಿಣಿಗಳು, ಅಳಿಲುಗಳು, ಹಸುವಿನ-ಕರುಗಳು, ಕತ್ತೆಗಳು, ನೇಗಿಲಿನ ಮತ್ತು ಎತ್ತುಗಳ ಕೊಂಬಿಗೆ ಹಾಕಿದ ಗೆಜ್ಜೆಗಳ ಮತ್ತು ಅವು ಎಳೆಯುತ್ತಿರುವ ಬಂಡಿಯ ಶಬ್ದಗಳು, ಆವರಿಸಿದ ಹಳ್ಳಿಯ ಬದುಕು. ಹಳ್ಳಿಯ ಮುಗ್ಧ ಕುರುಡು ಭಿಕ್ಷುಕ ಬಾಶಿಂಗ,’ ರಸ್ತೆಯಲ್ಲಿ ‘ರಘುಪತಿ ರಾಘವ ರಾಜಾರಾಮ್’ ಎಂದು ಹಾಡುತ್ತಾ ಭಿಕ್ಷೆಬೇಡುವ ಸನ್ನಿವೇಶ. ಅದೂ ನಮ್ಮ ಊರಿನ ರಸಿಕರಿಗೆ ಮನರಂಜನೆಯನ್ನು ಒದಗಿಸುತ್ತಿತ್ತು.

ರಾತ್ರಿ ಯಾವುದೋ ಮದುವೆಯ ದಿಬ್ಬಣ, ನಮ್ಮ-ಮನೆಯಮುಂದೆ ಬರುವುದೆಂದು ಕಾದಿದ್ದೆವು. ಆದರೆ ಅದು ಯಾಕೊ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಬರಲಿಲ್ಲ. ಗಾಣಿಗರ ಕೆಂಚಪ್ಪನವರ ಅಂಗಡಿಯನ್ನು ಹಾದುಹೋದನಂತರ, ನಮ್ಮ ಮನೆಯ ಬೀದಿಯ ಕಡೆ ತಿರುಗದೆ, ನೇರವಾಗಿ ಪೇಟೆಕಡೆ ಹೋಯ್ತಂತೆ. ಇದು ಆಗ ಬಲು ದೊಡ್ಡ ಆಗಿ ಬೆಳಿಗ್ಯೆ, ಅದರ ಬಗ್ಗೆ ಹಳ್ಳಿಯ ಜನವೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಹೀಗೆ ಮುಂದೆ ನಮ್ಮ ಮನೆಯ ರಸ್ತೆಯನ್ನು ಕಡೆಗಣಿಸಿದರೆ ಗತಿಯೇನು ಎನ್ನುವ ಕಾತುರ ಎಲ್ಲರ ಮುಖದಮೇಲೂ ಕಾಣಿಸುತ್ತಿತ್ತು. ನಾನು ನಮ್ಮ ಮನೆಯ ಒಳಗಡೆಯಿಂದ, ಹೊರಗಡೆ ಓಡಿಬಂದು, ವಠಾರದ ಪ್ರಮುಖದ್ವಾರದ ಮೆಟ್ಟಲಿನಮೇಲೆ ನಿಲ್ಲಲು ಅನುವುಮಾಡಿಕೊಳ್ಳುತ್ತಿದ್ದೆ. ಆಗ ಏನೋ ಕಾಲಿನ ಬೆರಳಿಗೆ ಕಚ್ಚಿದಂತೆ ಅನ್ನಿಸಿತು. ಸೊಳ್ಳೆಯಿರಬಹುದೆಂದು ಸುಮ್ಮನಾದೆ. ’ಅಮ್ಮನಿಗೆ, ಏನೊ ಕಾಲಿಗೆ ಕಚ್ತು’, ಎಂದು ಹೇಳಿದಾಗ ನಮ್ಮಮ್ಮನವರಾಗಲಿ ಬೇರೆ ಯಾರೂ, ನನ್ನ ಮಾತಿನಕಡೆ ಗಮನವೀಯಲಿಲ್ಲ. ಮದುವೆ ದಿಬ್ಬಣವನ್ನು ನೋಡುವ ಪ್ರಬಲವಾದ ಆಶೆ. ಆಮೇಲೆ ಬರುವುದಿಲ್ಲವೆಂದು ಗೊತ್ತಾದಾಗ ಅವರೆಲ್ಲಾ ಯಾಕೆ ಮದುವೆ ದಿಬ್ಬಣ ನಮ್ಮ ರಸ್ತೆಯಲ್ಲಿ ಬರಲಿಲ್ಲ ಅನ್ನುವುದ ಬಗ್ಗೆ ವಿಚಾರವಿನಿಮಯ (Big discussion) ನಡೆಸಿದ್ದರು. ನನ್ನ ಪ್ರೀತಿಯ ತಮ್ಮ ಚಂದ್ರ, ಮನೆಯೊಳಗೆ ಹೋಗಿ, ಲಾಟೀನು ಹಿಡಿದು ಬರಲು ವೇಳೆ ತಗುಲಿತ್ತು. ನೋಡಿದಾಗ ಕರಿ-ಮಂಡರಗಪ್ಪೆ, ನಿಧಾನವಾಗಿ ಕಲ್ಲಿನ ಪೊಟರೆಯೊಳಗೆ ಸಾಗಲು ಹವಣಿಸುತ್ತಿತ್ತು. ಆದರೆ ಅವಿತುಕೊಳ್ಳಲು ಆಗದೆ ಬೇರೆ ಜಾಗ ಹುಡುಕುತ್ತಿತ್ತು. ನನ್ನ ತಮ್ಮ, ಚಂದ್ರ, ಅಲ್ಲೇ ಕೈಗೆ ಸಿಕ್ಕ ಒಂದು ಕಟ್ಟಿಗೆ ತೊಗೊಂಡು ಚೆನ್ನಾಗಿ ಚಚ್ಚಿ ಚೇಳನ್ನು ಸಾಯಿಸಿದನು. ಅದೆಷ್ಟು ದೊಡ್ಡ ಕೊಂಡಿಗಳು ’ಸುರ್’ ಎಂದು, ಶಬ್ದಬೇರೆ ಮಾಡೋದದು.

ನಾನು ಕುಂಟುತ್ತಾ ಮನೆಯೊಳಗೆ ಹೊಗಿ ಚಾಪೆಯಮೇಲೆ ಕುಳಿತೆ. ಯಾಕೋ ಆಯಾಸವಾದಂತೆ ಭಾಸವಾಯಿತು. ಮೈಯೆಲ್ಲಾ ಬಿಸಿ-ಬಿಸಿ, ಉರಿಯುತ್ತೇನೊ ಅನ್ನಿಸತೊಡಗಿತು. ನಿಧಾನವಾಗಿ ಮೈಯೆಲ್ಲಾ ಬೆವರಲು ಪ್ರಾರಂಭವಾಯಿತು. ಆಗ ಅಮ್ಮ, ’ಯಾಕೊ ಏನಾಯ್ತು. ಇನ್ನೂ ಸರಿಹೋಗ್ಲಿಲ್ವ’ ಎಂದು ಕೇಳಿದರು. ನನ್ನ ಕಣ್ಣುಗಳು ನಿಧಾನವಾಗಿ ತೇಲುಗುಡ್ಡೆ-ಮೇಲುಗುಡ್ಡೆಯ ಸ್ಥಿತಿಗೆ ಬಂದಿದ್ದವು. ನಿದ್ರಾದೇವಿಯ ಆಸರೆಯಲ್ಲಿದ್ದಂತೆ ಅನ್ನಿಸಿತು. ಅಮ್ಮ ಬಂದು ಮನೆಯಲ್ಲಿದ ಯಾವುದೋ ಮುಲಾಮನ್ನು ಬಳಿದು, ’ಊಟಮಾಡಿ ಮಲಿಕ್ಕೊ’; ’ರಾತ್ರಿ ನಿದ್ದೆ ಮಾಡಿದ್ಮೇಲೆ ಅದೆ ಸರಿಹೋಗುತ್ತೆ’ ಅಂದಳು. ಕಾಲು ಊದಿಕೊಂಡಿತ್ತು. ಕೆಂಪಗಾಗಿತ್ತು.

ಬೆವರಿನ ನೀರು ಹರಿದುಹೋಗುತ್ತಿತ್ತು.ಆಗ, ಅಂಗಿ ಬಿಚ್ಚಿ ಹಾಸಿಗೆಯಮೇಲೆ ಮಲಗಿಸಿದರು. ’ಬೆಳಿಗ್ಯೆ ಡಾಕ್ಟರ್ ಹತ್ರ ಕರ್ಕೊಂಡ್ ಹೋಗ್ತೀನಿ ಮಲಕ್ಕೊ’. ನಾನು ಉರಿಯ ತಾಪದಿಂದ, ತಕ-ತಕ ಕುಣಿಯಕ್ಕೆ ಶುರುಮಾಡಿದೆ. ನನ್ನ ಅಳು ತಾರಕಕ್ಕೆ ಏರಿತು. ಕಿಟ್ಟಣ್ಣ ಬಂದು ನೋಡಿ, ’ದೊಡ್ಡಮ್ಮ, ಇದ್ಯಾವುದೊ ಕೆಟ್ಟ ಹುಳ ಕಡ್ದಿರೊದು, ಖಂಡಿತ’. ’ಇಲ್ದಿದ್ರೆ ಇಷ್ಟು ಬೆವರು ಬರಲ್ಲ’.’ ಅಲ್ನೋಡಿ ಕಾಲು ಅದೆಷ್ಟ್ ಕೆಂಪಾಗಿದೆ’. ಬೆಳಿಗ್ಯೆವರೆಗೆ ಮನೆಯಲ್ಲಿ ಯಾರಿಗೂ ನಿದ್ದೆಯಿಲ್ಲ. ನನ್ನ ಗೋಳಾಟ ನೋಡೋದೇ ಕಷ್ಟವಾಗಿತ್ತು. ಮನೆಯಲ್ಲಿದ್ದ ಗ್ರಾಮಾಫೋನ್ ರೆಕಾರ್ಡನ್ನು ತೇದು, ಅದರ ಲೇಪವನ್ನು ಜಾಗಕ್ಕೆ ಹಚ್ಚಿರೆಂದುಹೇಳಿದ್ದನ್ನೂ ಮಾಡಿದರು. ಆದರೆ ಉರಿ ಹೆಚ್ಚಾಯಿತೇ ವಿನಃ, ಕಡಿಮೆಯಾಗಲಿಲ್ಲ. ಸದ್ಯ, ಕಚ್ಚಿದ್ದು ಚೇಳು. ಏನಾದೃ, ಹಾವು ಅಂತ ಗೊತ್ತಾಗಿದ್ರೆ ಬಹಳ ಕಷ್ಟ ಆಗ್ತಿತ್ತು. ಹಾವು ಕಚ್ಚಿದರೆ, ಅದರ ಆರೈಕೆ ಬಹಳ ಕಷ್ಟ. ಅದು ವಿಷದ ಹಾವಿನ ಮೇಲೆ ಅವಲಂಬಿಸಿರುತ್ತದೆ. ಹಲವಾರು ಜನ ಹಾವು ಕಚ್ಚಿ ಮರಣಿಸಿದ್ದಾರೆ. ಅದಕ್ಕೆ ಹೇಳಿಮಾಡಿಸಿದ ಔಷಧಗಳಿಲ್ಲ. ಅದಲ್ಲದೆ, ಔಷಧಿ ನಾಟುವುದು ಕಷ್ಟ. ಅದಲ್ಲೆ ನಿದ್ರೆ ಬರದಂತೆ ತಡೆಹಿಡಿಯಬೇಕು. ಆಗ ವಿಷ ಮೈಯೊಳಗೆ ಬೇಗ ಏರುವುದಿಲ್ಲ. ಆಗ ಇನ್ನೂ ಶೆಂಕರಶೆಟ್ಟಿ ಡಾಕ್ಟರ್ ನಮ್ಮ ಊರಿಗೆ ಬಂದಿರಲಿಲ್ಲ. ಮೊದಲು ಡಾಕ್ಟರ್ ಯಾವ ಹುಳ ಕಚ್ಚಿದೆಯೆಂದು ಕಚ್ಚಿದಾಗ, ಪತ್ತೆಹಚ್ಚಿದಿರ ? ಎಂದು ವಿಚಾರಿಸಿದ ಪ್ರಶ್ನೆಗೆ ಸೂಕ್ತ ಉತ್ತರಕೊಟ್ಟನಂತರ, ಖಚಿತಪಡಿಸಿಕೊಂಡಾದ ಮೇಲೆ, ಚೂಪಾದ ಬ್ಲೇಡ್ ನಲ್ಲಿ ಕಚ್ಚಿದ ಜಾಗವನ್ನು ಹೆರೆದು, ಟಿಂಚರ್ ನಿಂದ ಶುದ್ಧಿಗೊಳಿಸಿ, ಒಂದು ವಿಶೇಷ ಮುಲಾಮನ್ನು ಹಚ್ಚಿ, ಬ್ಯಾಂಡೇಜ್ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿದರು.

ಕಾಲನ್ನು ಮೇಲಕ್ಕೆತ್ತಿ ಹಿಡಿದು, ದಿಂಬುಹಾಕಿಕೊಂಡು ಮಲಗಲು ಹೇಳಿದರು. ವಿಷಮೇಲೆ ಏರದಂತೆ, ಸಾಧ್ಯವಾದಷ್ಟು ಗದ್ದಲ, ಶಬ್ದಮಾಡಿ ರೋಗಿಯನ್ನು ನಿದ್ರೆಮಾಡದಂತೆ ತಡೆಯುವುದು ಉತ್ತಮವೆಂದು ಡಾಕ್ಟರ್ ಹೇಳಿದರು. ಆದರೆ, ನನಗೋ ಕಣ್ಣು ಎಳೆದುಕೊಂಡು ಹೋಗುತ್ತಿತ್ತು. ನಿದ್ದೆಮಾಡುವುದರಲ್ಲಿ ಮೊದಲೇ ನಾನು ನಿಸ್ಸೀಮ ಬೇರೆ ! ಸುಮಾರು ಎರಡು ದಿನರಾತ್ರಿ, ಯಮಯಾತನೆಯನ್ನು ಅನುಭವಿಸಿದಮೇಲೆ ನಿಧಾನವಾಗಿ ‘ಭೋಳೆ ‘ ಬಂದು ನಿದ್ದೆಹೋಗಿದ್ದೆ. ೮-೧೦ ತಾಸು ಮೈಮರೆತು ನಿದ್ದೆಯಲ್ಲಿದ್ದೆ. ಒಟ್ಟಿನಲ್ಲಿ ಮಂಡರಗಪ್ಪೆಯ ವಿಷದ ಮುಷ್ಟಿಯಿಂದ ಮುಕ್ತಿಪಡೆದಿದ್ದೆ.

ಹಿಂದೆ, ಅಮ್ಮ ಏನೋ ಕೆಲಸಮಾಡುವಾಗ, ಅಲ್ಲಿದ್ದ ಕಡಗೋಲಿನಮೇಲೆ ಒಂದು ಕೆಂಜೇಳು ಕುಳಿತಿದ್ದಿದ್ದನ್ನು ಗಮನಿಸಲಿಲ್ಲ. ಕೆಲಸಮಾಡುತ್ತಿರುವಾಗ, ಕಡಗೋಲಿನ ಹತ್ತಿರ ಅವಳ ಕಿವಿ ಬಂತು, ಗೊತ್ತಲ್ಲ ; ಚೇಳಿನ ಕೆಲಸ, ಕುಟುಕುವುದು ! ಅಮ್ಮ ಅದೇನು ಒದ್ದಾಡಿದರಪ್ಪ. ನಮಗೆಲ್ಲಾ ಅವರ ಒದ್ದಾಟ ನೋಡಿ, ಕಣ್ಣೀರನ್ನು ತಡೆಯಲಾಗಲಿಲ್ಲ. ಒಂದು ದಿನ ಪೂರ್ತಿ ಅವರು ಪಟ್ಟ ಕಷ್ಟ ನಮ್ಮ ಶತೃಗಳಿಗೂ ಬೇಡ ಸದ್ಯ !

ಪೇಟೆ ಮಕ್ಕಳಿಗೆ, ಅದರಲ್ಲೂ ಮುಂಬಯಿನಂತ ನಗರದ ಮಕ್ಕಳಿಗೆ ಇದು ಒಂದು ತರಹ Strange tale ಅನ್ನಿಸಿದರೆ ಆಶ್ಚರ್ಯವಲ್ಲ. ಇನ್ನು ಇವತ್ತಿನ ಹೊಳಲ್ಕೆರೆಯಲ್ಲಿ ಬಹಳಷ್ಟು ಪ್ರಗತಿಗಳಾಗಿವೆ. ನಲ್ಲಿ ನೀರು, ದೀಪ, ಎಲ್ಲಾ ಬಂದಿದೆ. ಜನಾನೂ ಬಹಳ ಮುಂದು ವರೆದಿದ್ದಾರೆ. ಕಪ್ಪು ನಾಟಿ ಹೆಂಚಿನ ಮನೆಗಳು ಈಗಲೂ ಇದ್ದರೂ ಅವು ಸ್ವಚ್ಛವಾಗಿವೆ. ಚೇಳುಗಳು ಮತ್ತು ಮಂಡರ ಕಪ್ಪೆಗಳು ಕಾಣಿಸುತ್ತಿಲ್ಲ. ರಾತ್ರಿಹೊತ್ತಿನಲ್ಲಿ ಮನೆಯಲ್ಲೂ ಹೊರಗೂ ಬಹಳ ದೀಪದ ಬೆಳಕಿದೆ. ನನ್ನ ಬಾಲ್ಯದ ತರಹದ ಸನ್ನಿವೇಶಗಳಿಲ್ಲ !