ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಜ಼ಲ್

ಡಾ.ತನುಶ್ರೀ ಹೆಗಡೆ
ಇತ್ತೀಚಿನ ಬರಹಗಳು: ಡಾ.ತನುಶ್ರೀ ಹೆಗಡೆ (ಎಲ್ಲವನ್ನು ಓದಿ)

ಕಂಗಳು ಹೇಳುವ ಗುಟ್ಟಿಗೆ ಕಿವಿಯಾಗಬೇಕು ನಾನು
ಒಲವು ಎರೆವ ತುತ್ತಿನ ಸವಿಯಾಗಬೇಕು ನಾನು

ಗುಳಿಕೆನ್ನೆಯಲ್ಲಿ ಬಚ್ಚಿಟ್ಟಿರುವೆಯಲ್ಲ ನಸುನಗುವನ್ನು
ಆ ಕದಪುಗಳ ರಂಗೇರಿಸುವ ರವಿಯಾಗಬೇಕು ನಾನು

ಮಿಡುಕುವ ಮುಂಗುರುಳುಗಳ ಸ್ವಲ್ಪ ಸರಿಸಿಬಿಡು
ಆ ಚಂದಮನ ಸೊಬಗಲಿ ಛವಿಯಾಗಬೇಕು ನಾನು

ತೀಡಿದ ಹುಬ್ಬುಗಳಲ್ಲಿ ಬಾಣಗಳ ಹೂಡುತ್ತಿರುವೆ
ಆ ನೋಟದ ಕಚಗುಳಿಗೆ ಕವಿಯಾಗಬೇಕು ನಾನು

ನಿನ್ನ ಮನದ ಸೆಳೆಯೊ ‘ತನು’ ವ ಕೆಳೆಯೊ ಕಾಣೆ
ಈ ಚೆಲುವಿಗೆ ಪರವ ಮರೆತು ಭವಿಯಾಗಬೇಕು ನಾನು