ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೋವಿಂದ ಹೆಗಡೆ ಅವರ ಹನಿಗವಿತೆಗಳ ನಕ್ಷತ್ರ ಕಡ್ಡಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಪ್ರಿಯ ಹೆಗಡೆಯವರೆ, ಓದಿದೆ. ಎಲ್ಲವೂ ಸಹಜವಾಗಿವೆ, ಸೊಗಸಾಗಿವೆ. ಕಿರುಗವನಗಳಲ್ಲಿರುವ ಭಾವಗಳು, ಕಲ್ಪನೆಗಳು ಓದುಗರಲ್ಲಿ ಬೆರಗು ಮೂಡಿಸುತ್ತವೆ. ಮುಕ್ತಾಯಕ್ಕ, ವೈದೇಹಿಯವರ ಕಿರುಗವನಗಳು ನೆನಪಾದವು. ಕಿರುಗವನ ಕೇವಲ ಬೌದ್ಧಿಕ ಚಮತ್ಕಾರವಲ್ಲ ಅನ್ನುವುದಕ್ಕೆ ಇವು ಉದಾಹರಣೆಗಳು. ಅಭಿನಂದನೆಗಳು.👏👏

ಶ್ರೀ ಎಚ್.ಡುಂಡಿರಾಜ್, ಖ್ಯಾತ ಹನಿಗವನ ಸಾಹಿತಿಗಳು… ಡಾ.ಗೋವಿಂದ ಹೆಗಡೆ ಯವರ ಈ ಕೆಳಗಿನ ಹನಿ ಗವಿತೆಗಳ ಬಗ್ಗೆ ಬರೆದ ಟಿಪ್ಪಣಿ.

ಹನಿಗಳು

ನಮ್ಮ ನಮ್ಮ
ಸಂದರ್ಭಗಳಲ್ಲಿ
ಸೆರೆ ನಾವು

ಮನಸಿನಂತೆ
ಮೈಗೂ
ರೆಕ್ಕೆಗಳಿದ್ದಿದ್ದರೆ!

ನವಿಲುಗರಿ, ಕೊಳಲು
ಕುಣಿವ ಕೈಕಾಲು,
ಜಗವ ಗೆಲ್ಲುವ ಮುಗುಳುನಗೆ
ಅರಿತವರಾರು ಇವನ ಬಗೆ?!

“ಗಿಡವೇ,
ದಿನವೂ ದೋಚುತ್ತೇನೆ, ನಿನ್ನ
ಮತ್ತೆ ಎಂದಿನಂತೆ
ನಸುಕಿನಲ್ಲಿ ಹೂ ನಗೆ
-ಯರಳಿಸುವೆ,ಹೇಗೆ?”

ನಕ್ಕು ಹೇಳಿದೆ ಗಿಡ-
“ನನಗೆ ತಿಳಿಯುವುದು ಇಷ್ಟೇ
ಅರಳಿಸುವುದು ಮತ್ತು
ಮರಳಿಸುವುದು”


ತಮ್ಮ ಮೂಗಿನ ನೇರಕ್ಕೇ ನಡೆಯುತ್ತಾರೆ ಎಲ್ಲರೂ
ಮೂಗೇ ಡೊಂಕು ಎಂಬುದನ್ನು ಮರೆಯುತ್ತಾರೆ ಎಲ್ಲರೂ

(ಸುಮಾರು 80 ರಿಂದ 90 ಪ್ರತಿಶತ ಜನರಲ್ಲಿ ಮೂಗು ಡೊಂಕಾಗಿರುತ್ತದೆ.)

ಈ ಹೂವು ಬಣ್ಣಗಳ
ತಳೆದು ಅರಳುತ್ತದೆ
ಕಂಪು ಸೂಸುತ್ತದೆ
ಎದೆ ಮಧುವ
ತುಟಿ ಬಟ್ಟಲಿನಲ್ಲಿಟ್ಟು
ಕಾಯುತ್ತದೆ-
ದುಂಬಿ ಚಿಟ್ಟೆ ಜೇನ್ನೊಣಕ್ಕೆ
ಯಾವುದೋ ಕೀಟಕ್ಕೆ
ಸುಳಿವ ಗಾಳಿಗೆ…

ಪರಾಗರೇಣು ಒಂದನ್ನು
ಪಡೆಯಲಿಕ್ಕಾಗಿ.

ಒಂದು ಜೀವ ಫಲಿಸಲು
ಹೇಗೆಲ್ಲ ತಪಿಸಬೇಕು-
ಎಷ್ಟೆಲ್ಲ ‘ಬೇಕು’ಗಳು
ಬೇಕು!

ಸರಿದು ಹೋದವರೆಷ್ಟು
ತಮ್ಮೆದೆಯ ಕಾವಳವ
ಸುರಿದು ಹೋದವರೆಷ್ಟು
ಮೌನದಲಿ
ಹಣತೆ ಬೆಳಗಿದ್ದು

ನೀನು ಮಾತ್ರ…


ನಿನ್ನ ತುಟಿರಂಗನ್ನು
ಕೊಂಚ ಕೊಡೇ
ಹುಡುಗಿ,

ನನ್ನ
ಕನಸುಗಳ
ಬಣ್ಣ ಮಾಸಿದೆ…


ಈ ರೂಪಸಿಯ
ಕಡೆಗಣ್ಣ ನೋಟದ
ಗಾಳಕ್ಕೆ ಸಿಲುಕಿದ
ಮೀನು

-ನಾನು


ಇಲ್ಲಿಯೇ ಎಲ್ಲೋ
ಇದ್ದಾನೆ-
ಮೌನದಲ್ಲಿ ನನ್ನ
ಆರಾಧಿಸುವವನು:
ಎಂಬ ಸಂಗತಿಯೇ
ಎಷ್ಟು ಮಧುರ,
ಎಷ್ಟು ಆಹ್ಲಾದಕರ!


ಹಾಲುಗಲ್ಲಿನ
ಪ್ರತಿಮೆ ನೀನು

ಮುಟ್ಟುತ್ತಲೇ
ಇರುವ
ಹಸಿವಿನ-

ನಾನು


ಆ ಗೆಜ್ಜೆಯಿಂದ
ಉದುರಿದ
ಕಿರುಗಂಟೆಯೊಂದನ್ನು
ಎತ್ತಿ ಕಿಸೆಗಿಟ್ಟೆ

ಈಗದರ
ಕಿಂಕಿಣಿ-
ಎದೆಯ ತುಂಬ


ಈ ಚಂದಿರ ನನ್ನೆದೆಯ
ಬೆಳಗಿದ್ದಾನೆ,
ಅಷ್ಟು ಸಾಕು.

ಜೊನ್ನ ಏನೆಲ್ಲವ
ಬೆಳಗಿದೆ-
ನನಗೇಕೆ ಬೇಕು?

ಅವಡುಗಚ್ಚಿದ ಕುರುಡು
ನಡಿಗೆಯಷ್ಟೇ ಬದುಕೇ?
ಮತ್ತೆ-
ಈ ಗುಲಾಬಿಗೆ
ಏನು ಹೇಳಲಿ ?

ನಿನ್ನ ಕಣ್ಣೋಟದ
ಕವಣೆ ಕಲ್ಲು

ಎದೆಗೊಳವ ಕಲಕಿ
ಪ್ರತಿಸಲ-

ಕವನ!

ಹಾವು
ಪೊರೆ ಕಳಚಿಯೂ
ಹಾವೇ.

ಕಂಬಳಿ ಹುಳು
ಪೊರೆ ಕಳಚಿ
ಚಿಟ್ಟೆ!

ಅಂಗೈಯಲ್ಲಿ ಕೂತು
ಆಡಿ ಮುದವಿತ್ತ
ಅರಗಿಣಿ

ಸಂದಣಿಯಲ್ಲಿ
ಅಪರಿಚಿತವೆಂಬಂತೆ
ಸರಿದು
ಸವೆದುಹೋಗುವ
ವಿಪರ್ಯಾಸ…

ಸೂರ್ಯೋದಯ
ಈಗಲೇ ಆಗಿದ್ದು ?!
ನನಗೆ

ನಡುರಾತ್ರಿಯಲ್ಲೇ
ಕಂಡ
-ನಲ್ಲ !

ಹರಡಿದ
ಕಡಲು
ಅದೇನಲ್ಲ ಬಿಡು

ಎದ್ದೆದ್ದು ಬೀಳುವ
ನಿನ್ನ ಕುರುಳು…

ಈ ಮಾಗಿ
ಚಳಿ ಮಂಜು
ಬಿರಿವ ಮೈ-
ಬಯಕೆ

ಬಂದುಬಿಡು ಹುಡುಗಿ,
ಬಿಸಿಯಪ್ಪುಗೆಗಳ
ನವೀಕರಿಸಲಿಕ್ಕೆ!

ನಿನ್ನ ತೋಳುಗಳಲ್ಲಿ
ಉಕ್ಕುತ್ತಿರುವ ಜೀವಂತಿಕೆಯ
ತುಸು ಎರವಲು ಕೊಡೇ
ಹುಡುಗಿ ,

ನನಗೆ ಬದುಕನ್ನು
ನವೀಕರಿಸಬೇಕಿದೆ !

ನಿನ್ನ ಮೈಗಂಧ-
ವನ್ನೇ ಅರಿಯದೇ
ಸಾವಿರ ಸುಗಂಧಗಳ
ಮಾತನಾಡುವ
ಈ ಜಗತ್ತು –

ಎಂಥ ಚೋದ್ಯ !

ಕತ್ತಲಲ್ಲಿ ಇರುವುದು
ಕತ್ತಲು ಮಾತ್ರವಲ್ಲ-

ಅದೋ ಮಿಂಚುಹುಳುಗಳು
ಮತ್ತು
ಮಿನುಗುವ ಚುಕ್ಕಿಗಳು !

ಇಲ್ಲಿ ಯಾರೂ ಒಂಟಿಯಲ್ಲ

★ಗೋವಿಂದ ಹೆಗಡೆ

Assorted-color Candles