ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾ ಕಂಡಂತೆ ಕಸ್ತೂರ್ ಬಾ: ಭಾಗ-೫

ಎಚ್ಚಾರೆಲ್

Page 53

ಮಾರ್ಚ್ ತಿಂಗಳ ಕೊನೆಯಲ್ಲಿ ಬಾ ರಿಗೆ broncho-pneumonia ಅಟ್ಯಾಕ್ ಆಯಿತು. ಏಪ್ರಿಲ್ ತಿಂಗಳ ಮೊದಲಲ್ಲಿ ಹಿಂದೆ ಸಂಭವಿಸಿದ್ದ B-coli infection ಬೇನೆ ಅವರಿಗೆ ಪುನಃ ಮರುಕಳಿಸಿತು. ದೇವರದಯದಿಂದ ತಕ್ಷಣ ಸರಿಯಾದ ಔಷಧಗಳ ಸೇವನೆಯಿಂದ ಅದು ಹೇಗೋ ನಿವಾರಣೆಯಾಯಿತು. ಮನು ಬೆನ್ ಬಂದಿದ್ದು ಬಾರಿಗೆ ಬಹಳ ಸಹಾಯವಾಯಿತು. ಸ್ವಲ್ಪ ದಿನಗಳಲ್ಲೇ ಅವರು ಗುಣಮುಖರಾದರು. ನಿಧಾನವಾಗಿ ನಮ್ಮೆಲ್ಲರ ಊಟದ ನಂತರ ಬಂದು ನಮ್ಮ ಜತೆ ಕುಳಿತು ಊಟಮಾಡಲು ಅವರಿಗೆ ಅನುಕೂಲವಾಯಿತು. ಡಾ ಗಿಲ್ಡರ್, ಮತ್ತು ಮಿ. ಕಟೇಲಿ ಇಬ್ಬರೂ ಮಾಂಸಾಹಾರಿಗಳು, ಪ್ರತ್ಯೇಕವಾಗಿ ಬೇರೆ ಟೇಬಲ್ಲಿನಮೇಲೆ ಕುಳಿತುಕೊಳ್ಳುತ್ತಿದ್ದರು. ಮೀರಾಬೆನ್ ನೆಲದಮೇಲೆಯೇ ಕುಳಿತು ಊಟಮಾಡುತ್ತಿದ್ದರು. ಅಣ್ಣ ಮತ್ತು ನಾನು, ಬೇರೆ ಟೇಬಲ್ಲಿನ ಮೇಲೆ ಕುಳಿತು ಊಟಮಾಡುತ್ತಿದ್ದೆವು. ಬಾ ಈಗ ಚೇತರಿಸಿಕೊಂಡಿದ್ದು ಎಲ್ಲರ ಹತ್ತಿರ ಹೋಗಿ, ನಮಗೆ ಊಟ ಸರಿಯಾಗಿ ಸಿಗುತ್ತದೆಯೇ ಎನ್ನುವುದನ್ನು ಖಾತ್ರಿಮಾಡಿಕೊಳ್ಳುತ್ತಿದ್ದರು. ನೆಲದಮೇಲೆ ಕುಳಿತೇ ಎಲ್ಲರನ್ನೂ ಉಪಚರಿಸುತ್ತಿದ್ದರು. ಹೊರಗಿನ ವರಾಂಡದಲ್ಲಿ ಅಡುಗೆ ಮಾಡುವ ವ್ಯವಸ್ಥೆ ಇತ್ತು. ಬಾ ಅಲ್ಲಿಗೆ ನಡೆದುಕೊಂಡು ಹೋಗಿ, ಅಡುಗೆಯವರನ್ನು ವಿಚಾರಿಸಿಕೊಳ್ಳುತ್ತಿದ್ದರು. ತಮಗೆ ತಿಳಿದ ಕೆಲವು ಸಲಹೆಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದರು. ತಾಯಿಯ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದರು, ಎಂದು ನಮಗೆ ಅನ್ನಿಸುತ್ತಿತ್ತು. ಭಾರತವರ್ಷದ ಒಬ್ಬ ಮಮತೆಯ ತಾಯಿಯಾಗಿದ್ದರು. ಜೈಲಿನ ಬಂದಿಗಳ ಪಾಲಿಗೆ ಅವರೊಬ್ಬ ಮಮತೆಯ ಮಾತೆ. ತಾವು ಆರೋಗ್ಯವಾಗಿರುವವರೆವಿಗೂ ಇದೇ ತರಹ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದಂತೆಯೇ, ಬಾಪು ಸರ್ಕಾರದ ಜತೆಗೆ ಹೆಚ್ಚು ಹೆಚ್ಚು ಪತ್ರವ್ಯವಹಾರ ಆರಂಭಿಸಿದರು. ಪತ್ನಿಗೆ ಪಾಠಹೇಳಿಕೊಡ್ಡುತ್ತಿದ್ದ ಬಾಪುರಿಗೆ, ಈಗ ಅವರ ಜತೆ ಸ್ಪಂದಿಸಲು ಸಮಯ ಸಿಕ್ಕುವುದೇ ದುರ್ಲಭವಾಯಿತು.

29

ಕಸ್ತೂರ್ ಬಾ ರವರ ಊಹಿಸಲೂ ಆಗದ ಹಲವಾರು ವಿಶೇಷ ಆಸಕ್ತಿಗಳು ನಮಗೆ ನಿಧಾನವಾಗಿ ಜೈಲಿನಲ್ಲಿದ್ದಾಗ ತಿಳಿಯತೊಡಗಿದವು. ಅವುಗಳಲ್ಲಿ ಪ್ರಮುಖವಾದದ್ದು, ಕ್ರೀಡೆಗಳು. ಕಾರಾಗೃಹದ ಹೊರಗೆ ನಾವೆಲ್ಲಾ ಸೇರಿಕೊಂಡು ಬ್ಯಾಡ್ಮಿಂಟನ್ ಕೋರ್ಟ್ ಮಾಡಿ ಆಡುತ್ತಿದ್ದೆವು. (Tenniquoit) ಹೆಚ್ಚು ಕಡಿಮೆ ಪ್ರತಿದಿನವೂ ಬಾಪು ಮತ್ತು ಕಸ್ತೂರ್ ಬಾ ಜೊತೆಗೂಡಿ, ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿದ್ದರು. ಇಬ್ಬರೂ ರಾಕೆಟ್ ಹಿಡಿದು ಶಟಲ್ ಕಾಕ್ ನ್ನು ನೆಟ್ ಮೇಲೆ ಒಬ್ಬರಿಗೊಬ್ಬರು ಟಾಸ್ ಮಾಡಿ ಆಡುತ್ತಿದ್ದರು. ಬಾ ವರಾಂಡದಲ್ಲಿ ತಮ್ಮ ವ್ಹಿಲ್ ಚೇರ್ ಮೇಲೆ ಕುಳಿತು ನಾವೆಲ್ಲ ಆಡುವ ಆಟವನ್ನು ಬಹಳ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ನಮ್ಮಲ್ಲಿ ಯಾರಾದರೂ ಭಂಡಾಟ ಆಡಿದಾಗ, ತಮ್ಮ ಜಾಗದಿಂದಲೇ ಜೋರಾಗಿ ಕೂಗಿ ಸರಿಯಾಗಿ ಆಡಲು ಹೇಳುತ್ತಿದ್ದರು. ಮೀರಾಬೆನ್, ಡಾ. ಗಿಲ್ಡರ್, ಮತ್ತು ಮಿ. ಕಟೇಲಿ ಒಟ್ಟಾಗಿ ಕುಳಿತು ಕೇರಂ ಆಟ ಆಡುತ್ತಿದ್ದರು. ಬಾ ಅವರ ಹತ್ತಿರ ಹೋಗಿ, ಆಟವನ್ನು ವೀಕ್ಷಿಸುತ್ತಿದ್ದರು. ಕೆಲವು ಸಲ ಅವರೂ ಕೇರಂ ಆಡಲು ಪ್ರಯತ್ನಿಸುತ್ತಿದ್ದರು. ಕೇರಂ ಆಟದಲ್ಲಿ ಅವರಿಗೆ ಎಷ್ಟು ಆಸಕ್ತಿಯೆಂದರೆ, ದಿನವೂ ಮದ್ಯಾನ್ಹದ ಹೊತ್ತಿನಲ್ಲಿ ಅರ್ಧಗಂಟೆಯಾದರೂ ಪ್ರಾಕ್ಟೀಸ್ ಮಾಡುತ್ತಿದ್ದರು. ಒಳ್ಳೆಯ ಕೇರಂ ಆಟಗಾತಿಯಾದ ಮೀರಾಬೆನ್ ಜತೆ ಅವರು ಯಾವಾಗಲೂ ಪಾರ್ಟ್ನರ್ ಆಗಲು ಇಚ್ಚಿಸುತ್ತಿದ್ದರು. ಹಾಗಾಗಿ ಅವರು ಎಲ್ಲ ಸಮಯದಲ್ಲೂ ಗೆಲ್ಲುತ್ತಿದ್ದರು. ಗೆಲುವು ಅವರಿಗೆ ಬಹಳ ಮುದ ನೀಡುತ್ತಿತ್ತು. ಒಂದು ವೇಳೆ ಆಟದಲ್ಲಿ ಸೋತರೆ, ಬಹಳ ದುಃಖಿತರಾಗಿ ರಾತ್ರಿಯೆಲ್ಲಾ ನಿದ್ರೆಮಾಡುತ್ತಿರಲಿಲ್ಲ. ಇದು ನಮಗೆ ತಿಳಿದಮೇಲೆ, ಬಾ ಸೋಲದಂತೆ ಬಹಳ ಜಾಗ್ರತೆ ವಹಿಸುತ್ತಿದ್ದೆವು.

Page 54

ಕೇರಂ ಆಟದಲ್ಲಿ ಕ್ವೀನ್ ಪಾನನ್ನು ಗೆಲ್ಲುವುದು ಅವರ ಮುಖ್ಯ ಆದ್ಯತೆಯಾಗಿತ್ತು. ಕ್ವೀನ್ ಗಳಿಸಿ, ಆಟದಲ್ಲಿ ಸೋತರೆ, ಅದು ಡ್ರಾ ಎಂದು ಅವರ ಅಭಿಪ್ರಾಯವಾಗಿತ್ತು. ತಮ್ಮ ನಿಶ್ಯಕ್ತಿ ಮತ್ತು ಅನಾರೋಗ್ಯ ಮೊದಲಾದವುಗಳು ಆಟವಾಡುತ್ತಿದ್ದ ಹೊತ್ತಿನಲ್ಲಿ ಅವರ ಗಮನಕ್ಕೆ ಬರುತ್ತಲೇ ಇರಲಿಲ್ಲ. ಕೊನೆ ಕೊನೆಗೆ ಇನ್ನೇನು ಅವರಿಗೆ ಕೇರಂ ಆಟ ಆಡಲು ಅಸಾಧ್ಯವೆಂದು ನಮಗನ್ನಿಸಿದಾಗ, ಕೇರಂ ಬೋರ್ಡನ್ನು ಅವರ ಕೋಣೆಗೆ ಎತ್ತಿಕೊಂಡು ಹೋಗಿ ಅವರ ಹಾಸಿಗೆಯ ಪಕ್ಕದಲ್ಲಿಟ್ಟು ಅವರಿಗೆ ಕಾಣಿಸುವಂತೆ ಆಟವಾಡುತ್ತಿದ್ದೆವು. ಇದರಿಂದ ಆವರಿಗೆ ಬಹಳ ಖುಷಿಯಾಗುತ್ತಿತ್ತು. ಬಾ ನಿಧನರಾಗುವ ೨-೩ ದಿನಗಳ ಮುಂಚೆಯೂ, ನಾವು ಅವರಿಗೆ ಕಾಣಿಸುವಂತೆ ಕೇರಂ ಆಡಿದ್ದೆವು. ಅವರ ಖಾಯಿಲೆಯಿಂದಾಗಲಿ ಕೇರಂ ಆಟಗಾರರಲ್ಲಿ ನಾಲ್ಕನೆಯ ಒಬ್ಬ ಸದಸ್ಯ ಇಲ್ಲದಂತಾಯಿತು. ಡಾ. ಗಿಲ್ಡರ್, ಮಿ. ಕಟೇಲಿ ಪಾರ್ಟ್ನರ್ ಆಗಿ ಮೀರಾಬೆನ್ (ಒಬ್ಬರ) ವಿರುದ್ಧ ಆಟವಾಡುತ್ತಿದ್ದರು. ಅವರು ತಮ್ಮ ಆಟ ಹಾಗೂ ತಮ್ಮ ಪಾರ್ಟ್ನರ್ ಆಟ ಸೇರಿಸಿ, ಎರಡು ಬಾರಿ ಆಡುತ್ತಿದ್ದರು. ಹೀಗೆ ಆಟ ಮುಂದುವರೆದಂತೆ, ಒಮ್ಮೊಮ್ಮೆ ಮೀರಾಬೆನ್ ಸೋಲುತ್ತಿದ್ದರು. ಕೇರಂ ಆಟವನ್ನು ತದೇಕ ದೃಷ್ಟಿಯಿಂದ ವೀಕ್ಷಿಸುತ್ತಿದ್ದ ಬಾರಿಗೆ ಅವರ ಹಿಂದಿನ ಪಾರ್ಟ್ನರ್ ( ಮೀರಾಬೆನ್) ಸೋಲುವುದು ಸುತರಾಂ ಇಷ್ಟವಾಗುತ್ತಿರಲಿಲ್ಲ. ಬಾರವರು ಕಾಯಿಲೆ ಮಲಗಿದಾಗ, ನಮಗೆ ಕೇರಂ ಆಟದಮೇಲೆ ಆಸಕ್ತಿ ಕಡಿಮೆಯಾಯಿತು. ಬಾ ಮಾತ್ರ ಮೀರಾಬೆನ್ ಜತೆಗೆ ಯಾರಾದರೂ ಆಡಿ ಆಟದಲ್ಲಿ ಅವರನ್ನು ಗೆಲ್ಲಿಸಬೇಕೆಂದು ಆಸಕ್ತಿವಹಿಸಿ ಬೇರೆಯವರಿಗೆ ಹೇಳುತ್ತಿದ್ದರು.

‘ಪಿಂಗ್ ಪಾಂಗ್ ಆಟ’ ವೂ ಕಸ್ತೂರ್ ಬಾ ಅವರ ಪ್ರಿಯ ಆಟಗಳಲ್ಲೊಂದು. ಬಾ ಆ ಆಟದಲ್ಲೂ ಭಾಗವಹಿಸಲು ಪ್ರಯತ್ನಿಸುತ್ತಿದ್ದರು. ಆಟವಾಡುವಾಗ ಬಿರುಸಿನ ಓಡಾಟ ಮೊದಲಾದವುಗಳಿಂದ ಅವರಿಗೆ ಏದುಸಿರುಬರುತ್ತಿತ್ತು.ಇದರಿಂದಾಗಿ ಅದನ್ನು ಬಿಡಬೇಕಾಯಿತು. ಈಗ ಬಾ ಅವರಿಗೆ ಹೆಚ್ಚಾಗುತ್ತಿರುವ ವಯಸ್ಸಿನ ಪ್ರಭಾವ ಕಾಣಿಸುತ್ತಿತ್ತು. ಮನಸ್ಸು ಮಾತ್ರ ಚಿಕ್ಕ ಮಗುವಿನ ತರಹ ಸರಳ ಹಾಗೂ, ಮುಗ್ದ !

ಕಸ್ತೂರ್ ಬಾ ರವರು ಮಕ್ಕಳ ಪಾಲನೆ ಪೋಷಣೆಯ ಜತೆಗೆ, ಅವರ ಜತೆ ಆಡಲು ಬಹಳ ಇಷ್ಟಪಡುತ್ತಿದ್ದರು. ಆಶ್ರಮದಲ್ಲಿ ಯಾವಾಗಲೂ, ಯಾರಾದರೂ ಒಂದಿಬ್ಬರು ಮಕ್ಕಳು ಅವರ ಪೋಷಣೆಯಲ್ಲಿರುತ್ತಿದ್ದರು. ಜೈಲಿನಲ್ಲಿ ಇದು ಹೇಗೆ ಸಾಧ್ಯ ? ಗಾಂಧೀಜಿವರು ಮೇಕೆಯ ಹಾಲು ಕುಡಿಯುತ್ತಿದ್ದರಷ್ಟೇ ? ಒಂದು ಮೇಕೆ ೨ ಮರಿಗಳಿಗೆ ಜನ್ಮ ಕೊಟ್ಟಿತು. ಮನುಬೆನ್ ಬಾ ಒಂದು ಹೊಸದಾಗಿ ಜನ್ಮಿಸಿದ ಅದರ ಮರಿಯನ್ನು ಬಾ ಹತ್ತಿರ ತಂದು ಕೊಟ್ಟರು. ಬಾ ಪ್ರೀತಿಯಿಂದ ಅದನ್ನು ತಮ್ಮ ತೊಡೆಯಮೇಲೆ ಮಲಗಿಸಿಕೊಂಡು ತಟ್ಟುತ್ತಾ, ಅದಕ್ಕೆ ಸ್ವಲ್ಪ ಆಹಾರವನ್ನು ತಿನ್ನಿಸಿದರು. ಅದು ಪ್ರಾಣಿಯೆನ್ನುವುದನ್ನು ಮರೆತು, ಅದರ ಜತೆ ಪ್ರೀತಿಯಿಂದ ಮಾತನಾಡಿಸಿ, ಮಗುವಿನ ತರಹ ಮುದ್ದಿಸುತ್ತಿದ್ದರು. ಮನುಬೆನ್ ಆ ಮೇಕೆ ಮರಿಯನ್ನು ಎತ್ತಿಕೊಂಡು ಹೊರಗೆ ಹೋಗುವಾಗ, “ದಿನವೂ ನನ್ನ ಜತೆ ಆಡಲು ಬಾ, ತುಂಟ ಮರಿಯೆ” ಎಂದು ಪ್ರೀತಿಯಿಂದ ಮಾತನಾಡಿಸುತ್ತಿದ್ದರು.

30

ಬಾ ಅಡುಗೆಯಲ್ಲಿ ಪರಿಣಿತರು. ಇಂದ್ರಿಯ ನಿಗ್ರಹದ ಮಾತು ಹೆಚ್ಚು ಪ್ರಚಲಿತವಾದಾಗ, ಬಾ ರ ಅಡುಗೆಯ ವಿಶೇಷತೆ ಸ್ವಲ್ಪ ಕಡಿಮೆಯಾಯಿತು. ಆದರೂ ಕೆಲವು ಸಲ ಅವರು ಏನಾದರು ರುಚಿಯಾದ ತಿಂಡಿಗಳನ್ನು ಮಾಡುತ್ತಿದ್ದರು. ಜೈಲಿನಲ್ಲಿದ್ದಾಗ ಅವರು ಮನುಬೆನ್ ಗೆ ಡಾ. ಗಿಲ್ಡರ್ ರವರಿಗೆ ಏನಾದರೂ ರುಚಿಯಾದ ಹೊಸ ತಿಂಡಿಯನ್ನು ಮಾಡಿ ಬಡಿಸಲು ಆದೇಶಿಸುತ್ತಿದ್ದರು. ಒಳ್ಳೆಯ ತಿನಸುಗಳನ್ನು ಅವರು ಬಯಸುತ್ತಿದ್ದರು. ಬೇರೆಯವರಿಗೂ ತಯಾರಿಸಿ ಉಣಬಡಿಸುತ್ತಿದ್ದರು. ಒಂದು ಸಲ, ಮನುಬೆನ್ ಗೆ ‘ಪೂರಣ್ ಪೂರಿ’ ಮಾಡಮ್ಮ”, “ಇವತ್ತು ನಾನೂ ತಿನ್ನುತ್ತೇನೆ. ನನಗೆ ಅದು ಬಲು ಇಷ್ಟ” ವೆಂದು ಹೇಳಿದರು. “ಬಾಪು ಅವರನ್ನೂ ಕೇಳು; ಅವರೂ ತಿನ್ನುತ್ತಾರೆಯೇ ಹೇಗೆ, ಎಂದು. ” ಬಾಪು, ಪ್ರತಿಕ್ರಿಯಿಸುತ್ತಾ, “ಇಂತಹ ತಿಂಡಿಗಳನ್ನು ತಿಂದು ಅರಗಿಸಿಕೊಳ್ಳುವುದು ಕಷ್ಟ ; ಅದರಲ್ಲೂ ಬಾರವರ ಅನಾರೋಗ್ಯದ ಸ್ಥಿತಿಯಲ್ಲಿ”, ಎಂದಾಗ ಬಾರಿಗೆ ಸ್ವಲ್ಪ ಬೇಸರವಾಯಿತು.

Page 55

ಬಾಪು, ‘ನಾನೇನೋ ತಿನ್ನುತ್ತೇನೆ, ಅವರು ತಿನ್ನದಿದ್ದರೆ ಮಾತ್ರ’ ಎಂದು ಹೇಳಿದರು. ಈ ಮಾತನ್ನು ಕೇಳಿಸಿಕೊಂಡ ಬಾರವರು ‘ಸರಿ; ಹಾಗಾದರೆ, ನಾನು ತಿನ್ನಲ್ಲ’. ಎಂದು ಬಾ ತಕ್ಷಣ ಹೇಳಿಕೆ ಕೊಟ್ಟುಬಿಟ್ಟರು.

ಒಂದು ದಿನ ಬಾರವರಿಗೆ ಹೃದಯಾಘಾತವಾಯಿತು ; ಬಹಳ ಹೊತ್ತಿನವರೆಗೆ. ಇದಾದ ಮಾರನೆಯ ದಿನ ಮನುಬೆನ್ ಕರೆದು, ತಮಗಾಗಿಯೇ ‘ತುಪ್ಪದಲ್ಲಿ ಒಗ್ಗರಣೆ ಹಾಕಿದ ಬದನೇಕಾಯಿ ಎಣ್ಣೆಗಾಯಿ’ ಮಾಡಲು ಹೇಳಿದರು. ಮನುಬೆನ್ ನನ್ನ ಹತ್ತಿರ ಬಂದು ಬಾ ಹೀಗೆ ಹೇಳ್ತಿದ್ದಾರೆ, ಈ ಎಣ್ಣೆಪದಾರ್ಥ ಅವರಿಗ್ಗೆ ಅರಗಿಸಿಕೊಳ್ಳಲು ಸಾಧ್ಯವೇ ಹೇಳಿ ? ಎಂದು ನನ್ನ ಅಭಿಪ್ರಾಯವನ್ನು ಕೇಳಿದರು. ನಾನು ಹಿಂದಿನ ದಿನ ಸಾಯಂಕಾಲವೇ ಬಾ ರವರಿಗೆ ಒಂದು ಹೃದಯಾಘಾತ ಆಗಿದ್ದು ನೆನಪಿಗೆ ಬಂತು. ಅವರಿಗೆ ಏನಾದರೂ ಅರಗಲು ಸುಲಭವಾಗಿರುವ ಆಹಾರ ಮಾತ್ರ ಕೊಡುವ ನಿರ್ಣಯ ನನ್ನದು. ಮನುಬೆನ್ ಬಾ ರವರನ್ನು ಸಂಬೋಧಿಸುತ್ತಾ, ‘ಸುಶೀಲ ಬೆನ್ ನಿಮಗೆ ಬದನೆಕಾಯಿನ ಖಾದ್ಯ ಮಾಡಿ ಕೊಡಬಾರದೆಂದು ಹೇಳಿದ್ದಾರೆ’ ಎಂದು ಹೇಳಿದರು. ಇದನ್ನು ಕೇಳಿದ ಬಾ ವಿಚಲಿತರಾದರು. ನನ್ನ ಮೇಲೆ ಕೋಪಗೊಂಡ ಬಾರವರು ನಾನು ಹೇಳಿದ್ದರ ಬಗ್ಗೆ ತಮ್ಮ ಪತಿಗೆ ವರದಿ ಒಪ್ಪಿಸಿದರು. ಗಾಂಧೀಜಿಯವರು ಆ ಸಮಯದಲ್ಲಿ ಬಹಳ ಬ್ಯುಸಿಯಾಗಿದ್ದರು. ಬಾ ಗೆ ಪ್ರೀತಿಯಿಂದ ಬೇಡವೆಂದು ವಿವರಿಸದೆ ಅವರು, ‘ಬಾ ತಮ್ಮ ಆರೋಗ್ಯದಕಡೆಗೆ ಗಮನಕೊಟ್ಟು, ಸ್ವಲ್ಪದಿನ ಬಾಯಿಕಟ್ಟುವುದು ಒಳ್ಳೆಯದೆಂದು’, ಎಂದು ಹೇಳಿದರು. ಈ ಮಾತುಗಳಿಂದ ಬಾ ಗೆ ಕೋಪ ಇನ್ನೂ ಹೆಚ್ಚಾಯಿತು. ‘ಇನ್ನು ಮೇಲೆ ಯಾವ ಬೇಯಿಸಿದ ಪದಾರ್ಥಗಳನ್ನೂ ನಾನು ಒಲ್ಲೆ’, ಎಂದು ಘೋಷಿಸಿದರು.
ನಾನು ಮನು ಬೆನ್ ಇಬ್ಬರೂ ಸೇರಿ, ಅವರ ಮನಸ್ಸನ್ನು ಒಪ್ಪಿಸಲು ಮಾಡಿದ ಪ್ರಯತ್ನಗಳೆಲ್ಲಾ ನಿಷ್ಫಲವಾಯಿತು. ‘ನಿಮ್ಮ ಆರೋಗ್ಯಕ್ಕೋಸ್ಕರ ಇವತ್ತು ಹೀಗೆ ಹೇಳಬೇಕಾಗಿಬಂತು. ಇಲ್ಲದಿದ್ದರೆ ನೀವು ಕೇಳಿದ ಯಾವುದೇ ತಿಂಡಿಯನ್ನು ನಾವು ಮಾಡಿಕೊಡಲು ಸದಾ ಸಿದ್ಧರಿದ್ದೇವೆ,’ ಎಂದು ಬೇಡಿಕೊಂಡೆವು. ಸುಲಭವಾಗಿ ಅವರನ್ನು ಒಪ್ಪಿಸುವುದು ಅಸಾಧ್ಯವಾಗಿತ್ತು. ‘ಇನ್ನು ಮೇಲೆ ಯಾರೂ ನನಗೋಸ್ಕರ ಏನೂ ಮಾಡಿಕೊಡಬೇಡಿ’ ಎಂದು ಹೇಳಿಬಿಟ್ಟರು. ಸುಮಾರು ೧೫ ದಿನಗಳ ಕಾಲ ಹಾಲು, ಹಣ್ಣು, ಬಿಸಿನೀರಿನಲ್ಲಿ ಬೆರಸಿದ ಜೇನುತುಪ್ಪದ ವಿನಃ, ಬೇರೆ ಏನೂ ಸೇವಿಸುತ್ತಿರಲಿಲ್ಲ. ಮನು ಬೆನ್ ಜತೆ ನನಗೂ ಮನಸ್ಸಿಗೆ ಬಹಳ ಖೇದವಾಯಿತು. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗಾಂಧೀಜಿಯವರು, ನಮ್ಮಿಬ್ಬರಿಗೂ ಸಮಾಧಾನ ಮಾಡಿದರು. ‘ಯೋಚಿಸಬೇಡಿ, ಇದರಿಂದ ಬಾರಿಗೆ ಏನೂ ಹಾನಿಯಾಗುವುದಿಲ್ಲ. ಬಹುಶಃ ಇದರಿಂದ ಅವರಿಗೆ ಒಳ್ಳೆಯದೇ ಆಗಬಹುದು’. ಎಂದು ಗಾಂಧೀಜಿಯವರು ಹೇಳಿದರು. ಬಾರವರ ಆರೋಗ್ಯ ಈ ಸಮಯದಲ್ಲಿ ಹೇಗೋ ಸುಧಾರಿಸಿತು. ಅವರ ತೂಕವೂ ಕಡಿಮೆಯಾಗಲಿಲ್ಲ. ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಾ, ಏನಾದರೂ ವಿಷಯಗಳನ್ನು ಹೇಳುತ್ತಿದ್ದಾಗ, ನಿಧಾನವಾಗಿ ಬದನೇಕಾಯಿ ಎಣ್ಣೆಗಾಯಿನ ಪ್ರಸಂಗ, ಸಂಪೂರ್ಣವಾಗಿ ಅವರ ತಲೆಯಿಂದ ಮಾಯವಾಗಿರುವುದನ್ನು ನಾವೆಲ್ಲಾ ಗಮನಿಸಿದೆವು. ಅವರು ಮೊದಲಿನಂತೆ ಆಹಾರ ಸೇವಿಸಲು ಪ್ರಾರಂಭಿಸಿದರು.

31

ಕಸ್ತೂರ್ ಬಾ ನಿಧನರಾಗುವ ೨ ದಿನಗಳ ಮೊದಲು ಅವರಿಗೆ ಒಂದು ಡೋಸ್ ಹರಳೆಣ್ಣೆ ಕುಡಿದಿದ್ದರೆ ಸರಿಹೋಗಬಹುದೆಂದು ಅನ್ನಿಸಿತ್ತು. ಡಾ ಗಿಲ್ಡರ್ ಈಗಾಗಲೇ ಬಹಳ ನಿಶ್ಯಕ್ತರಾಗಿರುವ ಬಾ ಹರಳೆಣ್ಣೆ (purgative) ಸೇವಿಸುವುದು ಒಳ್ಳೆಯದಲ್ಲವೆಂದು ಅಭಿಪ್ರಾಯಪಟ್ಟರು. ನನಗೂ ಹಾಗೇ ಅನ್ನಿಸಿತ್ತು.
ನಾನು ಬಾರಿಗೆ ಹರಳೆಣ್ಣೆ ಈಗ ಏಕೆ ಅವರಿಗೆ ಕೊಡುವುದು ಒಳ್ಳೆಯದಲ್ಲವೆಂದು ಪರಿಪರಿಯಾಗಿ ವಿವರಿಸಿದರೂ, ಅವರ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ನಾನು ಅವರ ರೂಮಿನಿಂದ ಹೊರಗೆ ಹೋಗುತ್ತಿದ್ದಂತೆ, ಗಾಂಧೀಜಿಯವರು ಒಳಗೆ ಬಂದರು. ಬಾ ಪತಿಯನ್ನೂ ‘ಹರಳೆಣ್ಣೆ ಡೋಸ್’ ಕುಡಿಸಲು ಬೇಡಿದರು. ಬಾಪು ಪ್ರೀತಿಯಿಂದ ಈಗ ನಿನ್ನ ಅನಾರೋಗ್ಯದ ಪರಿಸ್ಥಿತಿಯಲ್ಲಿ ಹರಳೆಣ್ಣೆ ಕೂಡದು ಎಂದು ಹೇಳಿದರು. ತಮ್ಮ ಮಾತನ್ನು ಮುಂದುವರೆಸುತ್ತಾ ಅವರು, ‘ಒಬ್ಬ ರೋಗಿ ತನಗೆ ತಾನೇ ಡಾಕ್ಟರಾಗುವುದು ಒಳ್ಳಯದಲ್ಲ. ನಾನು ಹೇಳುವುದೇನು ಅಂದರೆ, ಸಧ್ಯಕ್ಕೆ ಔಷಧಿಗಳ ಉಪಯೋಗ ನಿಲ್ಲಿಸು’. ‘ಎಲ್ಲವನ್ನೂ ಮರೆತುಬಿಡು ‘, ‘ನನ್ನನ್ನೂ ಸಹಿತ’ ; ‘ರಾಮನಾಮದಲ್ಲಿ ನೀನು ನಿನ್ನ ಮನಸ್ಸನ್ನಿಡು’.

Page 56

ಬಾ ರವರಿಗೆ ವಿವರವಾಗಿ ಮಾಹಿತಿಕೊಟ್ಟು ಒಪ್ಪಿಸಿದ್ದೇನೆ. ಇನ್ನು ಮೇಲೆ ಹರಳೆಣ್ಣೆ ಬಗ್ಗೆ ಆಕೆ ತನ್ನ ಬೇಡಿಕೆ ಸಲ್ಲಿಸುವುದಿಲ್ಲ. ಎಂದು ಬಾಪು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಹಾಗೆಯೇ, ಅವರಿಗೆ ಅದೊಂದು ಭ್ರಮೆ ಎನ್ನುವುದರ ಅರಿವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಡಾ. ಗಿಲ್ಡರ್ ಅವರನ್ನು ತಪಾಸಣೆಮಾಡಲು ಹೋಗುತ್ತಿದ್ದಂತೆಯೇ, ಬಾರವರು ತಕ್ಷಣವೇ ‘ನನಗೆ ಹರಳೆಣ್ಣೆ ಕುಡಿಯಲು ಬೇಗ ಕೊಡಿ’, ಎಂದು ಕೇಳಿಯೇ ಬಿಟ್ಟರು. ಗಿಲ್ಡರ್ ರವರು, ‘ನಾನು ಅದನ್ನು ಮಾತ್ರ ಕೊಡಲಾರೆ’ ಎಂದು ಹೇಳಿದಾಗ, ಬಾ ನೊಂದುಕೊಂಡರು. ಜಯ ಸುಖ್ ಲಾಲ್ ಗಾಂಧಿಯವರು ಮದ್ಯಾನ್ಹ ಅವರ ಯೋಗಕ್ಷೇಮ ವಿಚಾರಿಸಲು ಬಂದಾಗ, ನನ್ನ ಮೇಲೆ ಮತ್ತು ಎಲ್ಲರ ಮೇಲೂ ದೂರು ಹೇಳಿದರು. ‘ಇವರೆಲ್ಲಾ ನನ್ನ ಮೇಲೆ ತಮ್ಮ ಅಧಿಕಾರ ಚಲಾಯಿಸುತ್ತಿದ್ದಾರೆ. ನನಗೆ ಒಂದು ಮಿಳ್ಳೆ ಹರಳೆಣ್ಣೆ ಸಹಿತ ಕೊಡಲು ಯಾರೂ ಸಿದ್ಧರಿಲ್ಲ’. ನಾನು ಬಾರವರ ರೂಮಿಗೆ ಹೋದರೆ ಮತ್ತೆ ಈ ಎಲ್ಲ ದೂರುಗಳನ್ನೂ ಕೇಳಬೇಕಾಗಿಬರಬಹುದು, ಅಲ್ಲದೆ ನನಗೆ ಅವರು ಹರಳೆಣ್ಣೆ ತೆಗೆದುಕೊಂಡು ಬಾ, ಎಂದು ಆಜ್ಞಾಪಿಸಲೂ ಬಹುದೂ, ಎಂದು ನಾನು ಅವರ ಕಣ್ಣು ತಪ್ಪಿಸಿ ಓಡಾಡುತ್ತಿದ್ದೆ. ಸುಮಾರು ೨ ಗಂಟೆಯ ಹೊತ್ತಿಗೆ ಅವರಿಗೆ ಔಷಧ ಕೊಡಬೇಕಿತ್ತು. ಅವರು ನನ್ನನ್ನು ದುರುಗುಟ್ಟಿಕೊಂಡು ನೋಡಿ,ತಮ್ಮ ತೋರು ಬೆರಳನ್ನು ನನ್ನ ಕಡೆ ತೋರಿಸುತ್ತಾ, “ನೀನೇ ಅಲ್ಲವೇ ಎಲ್ಲರಿಗು ಹರಳೆಣ್ಣೆ ಕೊಡಬೇಡಿ ಎಂದು ಹೇಳಿ ತಪ್ಪಿಸಿದ್ದು” ಈಗ ನೀನು ಕೊಡುವ ಯಾವ ಔಷಧಗಳನ್ನೂ ನಾನು ತೆಗೆದುಕೊಳ್ಳುವುದಿಲ್ಲ. ನಿನಗೆ ಗೊತ್ತಿರುವ ಮೆಡಿಕಲ್ authority ಯನ್ನು ನನ್ನ ಮೇಲೆ ಹೇರಲು ಬಯಸುತ್ತಿರುವೆಯಾ” ? ಈ ತರಹದ ಹುಡುಗಾಟದ ಮಾತುಗಳಿಗೆ ಏನಂತ ಹೇಳುವುದು ? ಬಾರ ಮನಸ್ಸಿಗೆ ನೋವು ಮಾಡಲೂ ಇಷ್ಟವಿಲ್ಲ.

ನಾನು ಕಸ್ತೂರ್ ಬಾರವರನ್ನು ರಮಿಸುತ್ತಾ, ‘ಬಾ, ಬಹುಶಃ, ನಿಮಗೆ ಈಗ ನಾವು ಏಕೆ ಕ್ಯಾಸ್ಟರ್ ಎಣ್ಣೆ ಕೊಡುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆಯೆಂದು ನನ್ನ ಅನಿಸಿಕೆ. ಈಗ ನೀವೇ ಬೇಡ ಎನ್ನುವಿರಿ ಅಲ್ಲವೇ ‘? ಎಂದು ಅವರನ್ನು ನೋಡುತ್ತಾ ನಾನು ಹೇಳಿದಾಗ, ಬಾ ‘ಇಲ್ಲ. ಇಲ್ಲ. ನನಗೆ ಹರಳೆಣ್ಣೆ ತೊಗೊಂಡರೆನೇ ಸಮಾಧಾನ’ ಎಂದು ಅವರು ಹೇಳುವಾಗ, ಅಪೀಲ್ ಮಾಡುವ ಮುಖಭಾವ ಮತ್ತು ಅಸಹಾಯಕತೆ ಬೆರೆತ ಕೋರಿಕೆಗಳಿಂದ ಅವರು ಇನ್ನೇನು ನಮ್ಮಿಂದ ದೂರಹೋಗಲಿದ್ದಾರೆ ಅನ್ನಿಸತೊಡಗಿತು. ಇಂಥ ಸಮಯದಲ್ಲಿ, ‘ಅವರು ಪ್ರೀತಿಯಿಂದ ಕೇಳುತ್ತಿರುವ ಆಶೆಯೊಂದನ್ನು ಈಡೇರಿಸಬಾರದೇಕೆ’ ಎಂದು ನನ್ನ ಒಳಮನಸ್ಸು ಪ್ರಶ್ನಿಸತೊಡಗಿತು. ನಿಮಗದು ಬೇಕೇಬೇಕೆಂದು ನಿಮ್ಮ ನಿಶ್ಚಯವಾದರೆ, ನನಗೆ ಇಷ್ಟವಿಲ್ಲದಿದ್ದರೂ ಕೊಡಲೇಬೇಕಾಗುತ್ತದೆ ಅಲ್ಲವೇ, ಎಂದು ನಾನು ಮನಸ್ಸಿನಲ್ಲೇ ಗೊಣಗಿದೆ. ಇದನ್ನು ಕೇಳಿಸಿಕೊಂಡ ಬಾ, ‘ಹಾಗಾದರೆ ಹೋಗು ; ಬೇಗ ಹರಳೆಣ್ಣೆ ತೆಗೆದುಕೊಂಡು ಬಾ’ ಎಂದು ಆದೇಶಿಸಿದರು. ನನಗೆ ಹಿಂದೆ ಯಾರೋ ಹೇಳಿದ್ದ ನುಡಿ ಫಕ್ಕನೆ ಜ್ಞಾಪಕಕ್ಕೆ ಬಂದು, ಸ್ವಲ್ಪ ಹರಳೆಣ್ಣೆಗೆ ಲಿಕ್ವಿಡ್ ಪ್ಯಾರಾಫಿನ್ ಸೇರಿಸಿ, ಕುಡಿಯಲು ಕೊಟ್ಟಮೇಲೆ ನಿರಾಳವಾಗಿ ಕಣ್ಣು ಮುಚ್ಚಿ ನಿದ್ದೆಹೋದರು.

32

ಗಾಂಧೀಜಿ ಹಾಗೂ ನಮ್ಮೆಲ್ಲರಿಗೆ ಕೊಟ್ಟ ಜೈಲು ವಾಸ ಒಂದು ತರಹ ವಿಚಿತ್ರವಾಗಿತ್ತು. ಸರಕಾರಕ್ಕೂ ಆತಂಕ ಆದಂತೆ ತೋರುತ್ತಿತ್ತು. ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ಈ ಅಹಿಂಸಾ ಸತ್ಯಾಗ್ರಹಿಗಳು ಬುಡಮೇಲೆ ಮಾಡುತ್ತಿದ್ದಾರೆಯೋ ಅನ್ನಿಸಿರಬೇಕು. ಜೈಲಿನಲ್ಲಿರುವ ಬಂದಿಗಳು ಹೊರ ಜಗತ್ತಿನ ಜನರ ಜತೆ ಸಂಪರ್ಕವಿಟ್ಟುಕೊಂಡರೆ, ಏನಾದರೂ ಅಪಾಯ ಆಗಬಹುದೆಂದು ಅವರ ಅನಿಸಿಕೆ. ಆಗಸ್ಟ್ ೧೯೪೨ ರ ಹೊತ್ತಿಗೆ ಜೈಲುವಾಸಿಗಳು ನಿಯತಕಾಲಿಕೆಗಳನ್ನು ಓದುವಂತಿಲ್ಲವೆಂದು ಆದೇಶಹೊರಡಿಸಿದರು. ಯಾರ ಹತ್ತಿರವೂ ಸಂವಾದಮಾಡುವಂತಿಲ್ಲ. ಪತ್ರವ್ಯವಹಾರ ಪೂರ್ತಿಯಾಗಿ ನಿಲ್ಲಿಸಲು ಆಜ್ಞೆಮಾಡಿದರು. ಸರೋಜಿನಿ ನಾಯಿಡುರವರ ಮಗಳು ಅನಾರೋಗ್ಯದಿಂದಿದ್ದರು. ತಮ್ಮ ಮಗಳ ಆರೋಗ್ಯದ ಬಗ್ಗೆ ಸಮಾಚಾರ ತಿಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಾದ ನಂತರ, ಕಸ್ತೂರ್ಬಾ ಸಹಿತ, ತಮ್ಮ ಮಕ್ಕಳು-ಮೊಮ್ಮಕ್ಕಳ ಯೋಗಕ್ಷೇಮ ತಿಳಿಸಲು ಸರ್ಕಾರಕ್ಕೆ ಕೇಳಿಕೊಂಡರು. ಮೀರಾಬೆನ್ ಹತ್ತಿರ ಉಡಲು ಸಾಕಷ್ಟು ಉಡುಪುಗಳಿರಲಿಲ್ಲ. ಅವರೂ ಸಹಿತ ಐ. ಜಿ. ಪಿ. ಯವರಿಗೆ ಉಡುಪುಗಳನ್ನು ಅವರ ವಿಳಾಸಕ್ಕೆ ಒದಗಿಸಲು ಪ್ರಾರ್ಥನೆ ಸಲ್ಲಿಸಿದರು.

Page 57

ಆಗಸ್ಟ್ ೧೯೪೨ ರ ಹೊತ್ತಿಗೆ ಬಂಧಿಸಿ ೩ ವಾರಗಳ ನಂತರ, ಐ.ಜಿ.ಪಿ.ಯವರು ಬೇಕಾದರೆ ಕೈದಿಗಳು ತಮ್ಮ ಪರಿಜನರಿಗೆ ಪತ್ರವ್ಯವಹಾರ ಮಾಡಬಹುದೆಂದು ಅನುಮತಿ ಕೊಟ್ಟರು. ಆದರೆ ಪತ್ರಗಳಲ್ಲಿ ಎಲ್ಲೂ ತಾವು ಉಳಿದುಕೊಂಡಿರುವ ವಿಳಾಸವನ್ನು ನಮೂದಿಸಬಾರದು. ಮೊದಲು ಜೈಲ್ ಅಧಿಕಾರಿಗಳು ನಾವು ಸಂಬಂಧಿಗಳಿಗೆ ಬರೆಯುವ ಪತ್ರಗಳನ್ನು ಪರಿಶೀಲಿಸಿ, ಒಪ್ಪಿದರೆ ಮಾತ್ರ, ಪೋಸ್ಟ್ ಮಾಡುತ್ತಿದ್ದರು. ಅದೇ ತರಹ ಬೇರೆಯವರು ಪತ್ರಗಳನ್ನು ಸಹಿತ censor ಮಾಡಿದಮೇಲೆ ತಲುಪಿಸುತ್ತಿದ್ದರು. ನಮ್ಮ ಬಟ್ಟೆ-ಬರೆ ಮೊದಲಾದುವನ್ನು ಕಳಿಸಲು ಬೇಡಿಕೆಗಳಿಗೂ ಸಹಿತ ಇದೇ ಕಾನೂನು ಜಾರಿಯಲ್ಲಿತ್ತು. ಸರೋಜಿನಿ ನಾಯಿಡು ಮೊದಲು ತಮ್ಮ ಸಂಬಂಧಿಗಳಿಗೆ ಪತ್ರ ಬರೆಯಲು ಶುರುಮಾಡಿದರು. ಮೀರಾಬೆನ್ ಸಹಿತ ತಮ್ಮಭಾರತೀಯ ಗೆಳತಿಯರಿಗೆ ಪತ್ರಬರೆಯಲು ಅನುಮತಿ ಬೇಡಿ, ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಆಕೆಯ ಬಂಧು-ಬಾಂಧವರು ಸಮುದ್ರದಾಚೆ ನೆಲೆಸಿದ್ದರು. ಅವರನ್ನೆಲ್ಲಾ ಆಕೆ ತೊರೆದು ಭಾರತಕ್ಕೆ ಬಂದಿದ್ದರು. ಈಗ ಅವರಿಗೆ ಭಾರತೀಯ ಗೆಳತಿಯರೇ ಹತ್ತಿರವಾದರು ! ಗಾಂಧೀಜಿಯವರು ಸರಕಾರಕ್ಕೆ ಪತ್ರ ಬರೆಯುತ್ತಾ, ‘ನಾನು ಆಶ್ರಮವಾಸವನ್ನು ಬಹಳ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ. ನನಗೆ ಸ್ನೇಹಿತರಾಗಲಿ, ಬಂಧುಗಳಾಗಲಿ ಎಲ್ಲರೂ ಸಮಾನರು ; ಯಾವ ಭೇದವೂ ಇಲ್ಲ. ನನ್ನ ಪ್ರೀತಿಯ ಗೆಳೆಯ (ದಿವಂಗತ) ಮಹದೇವ್ ದೇಸಾಯ್ ಅವರ ಪತ್ನಿ ಮತ್ತು ಮಗನಿಗೆ ಪತ್ರಬರೆಯಲು ನೀವು ನನಗೆ ಅನುಮತಿಕೊಡದಿದ್ದರೆ, ಬೇರೆಯಾರಿಗೂ ಬರೆಯಲು ಇಷ್ಟಪಡುವುದಿಲ್ಲ. ನನಗೆ ಮನೆಯ ಬಗ್ಗೆ ಬರೆಯಲು ಏನೂ ವಿಷಯವಿಲ್ಲ. ರಾಜಕೀಯ ವಿಷಯಗಳನ್ನು ಬರೆಯಲು ಸಾಧ್ಯವಿಲ್ಲ. ರಾಜಕೀಯವಲ್ಲದ ಸಮಾಜ ಸುಧಾರಣೆಯ ವಿಷಯಗಳನ್ನೂ ಬರೆಯಲು ಅನುಮತಿಯಿಲ್ಲವಾದರೆ, ನಿಮ್ಮ ಅನುಮತಿ ನನಗೆ ಯಾವ ಉಪಯೋಗವನ್ನು ಕೊಡಲಾರದು’. ಇದನ್ನು ನೋಡಿ, ಸರಕಾರ ತೀವ್ರವಾಗಿ ಯೋಚಿಸುವಂತಾಯಿತು.

ಸರೋಜಿನಿ ನಾಯಿಡು ಹಾಗೂ ಕಸ್ತೂರ್ ಬಾ, ನನ್ನನ್ನು ನಿಮ್ಮ ತಾಯಿಗೆ ಪತ್ರಬರೆದೆಯಾ ? ಎಂದು ವಿಚಾರಿಸುತ್ತಲೇ ಇದ್ದರು. ಈ ವಿಷಯವಾಗಿ ಬಾಪೂರವರ ಅಭಿಪ್ರಾಯವನ್ನು ಕೇಳಿದಾಗ, ಅವರು ಆಗಲೇ ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ಉತ್ತರ ಬರುವವರೆಗೂ ಕಾಯಲು ತಿಳಿಸಿದರು.

ಸರಕಾರದ ಆದೇಶ ಬಹಳ ದಿನಗಳ ನಂತರ ಬಂತು. ಅದರಲ್ಲಿ ಅವರು ‘ಆಶ್ರಮವಾಸಿಗಳಿಗೆ, ಬಂಧುಗಳಿಗೆ ಪತ್ರಬರೆಯಲು ಅನುಮತಿ ಕೊಡುತ್ತೇವೆ ; ಆದರೆ, ಮನೆಗೆ ಸಂಬಂಧಪಟ್ಟ ವಿಷಯಗಳಲ್ಲದೆ ಬೇರೆಯೇನನ್ನೂ ಬರೆಯುವಂತಿಲ್ಲ’. ಇದನ್ನು ಓದಿದಮೇಲೆ, ಈ ಕಾನೂನು ತಮಗೆ ಮಾನ್ಯವಲ್ಲವೆಂದು ಬಾಪು ಸರಕಾರಕ್ಕೆ ತಿಳಿಸಿದರು. ನಾನು ಮತ್ತು ಬಾ ಗಾಂಧೀಜಿಯವರ ರೂಮಿನಲ್ಲಿದ್ದಾಗ ಪ್ಯಾರೇಲಾಲ್ ಅಣ್ಣ ಅಲ್ಲಿಗೆ ಬಂದರು. ಅಣ್ಣನನ್ನು ಕಂಡು ಬಾಪು, ‘ಸರಕಾರದ ಈ ಹೊಸ ಆದೇಶಕ್ಕೆ ನಾವು ಗೌರವಕೊಡುವುದಿಲ್ಲ. ಇನ್ನು ಮೇಲೆ ಯಾರೂ ಪತ್ರಬರೆಯಬಾರದೆಂದು ತಿಳಿಸಿದರು’. ಪುನಃ ಸರ್ಕಾರದವರು ನಾವು ಯಾರನ್ನು ಸಂಪರ್ಕಿಸಲು ಇಷ್ಟಪಡುವೆವೋ ಅವರ ಹೆಸರು ವಿಳಾಸಗಳ ಪಟ್ಟಿಯನ್ನು ಮಾತ್ರ ಒದಗಿಸಲು ಒಂದು ನೋಟೀಸ್ ಕಳಿಸಿದರು. ‘ಗಾಂಧೀಜಿಯವರಿಗೆ ಅನುಕೂಲಮಾಡಿಕೊಟ್ಟರೆ ಮಾತ್ರ ನಾವು ಇದನ್ನು ಉಪಯೋಗಕ್ಕೆ ತರುತ್ತೇವೆ’, ಎಂದು ನಾನು ಅಣ್ಣ ಸರಕಾರಕ್ಕೆ ಉತ್ತರಕೊಟ್ಟೆವು. ಈ ಅಭಿಪ್ರಾಯ ನಮ್ಮಲ್ಲಿ ಕೆಲವರಿಗೆ ಸರಿಹೋಗಲಿಲ್ಲ. ‘ಗಾಂಧೀಜಿಯವರೇನೋ ಮಹಾತ್ಮರು. ನಿಮ್ಮ ತಾಯಿಗೆ ಈಗ ನೀನು ಪತ್ರ ಬರೆಯಬೇಕಲ್ವಾ’ ? ನೀನು ಮಹಾತ್ಮಳ ತರಹ ಅನುಕರಿಸಲು ಇಷ್ಟಪಡುವೆಯಾ ‘? ಇದು ಕಸ್ತೂರ್ ಬಾರವರು ನನಗೆ ಹಾಕಿದ ತಕ್ಷಣದ ಸವಾಲು. ‘ನಾನೇನು ಮಹಾತ್ಮಳಾಗುವ ಇಷ್ಟದಿಂದ ಹಾಗೆ ಮಾಡಲಿಲ್ಲ’, ಎಂದು ನಾನು ಉತ್ತರಿಸಿದೆ. ಈ ತರಹದ ಮಾತುಕತೆಗಳಿಂದ ನನ್ನ ಮನಸ್ಸಿಗೆ ಆಘಾತವಾಯಿತು. ನಾನು ಬಾಪೂರವರ ಸಾಯಂಕಾಲದ ವಾಕಿಂಗ್ ನಲ್ಲಿ ಪಾಲ್ಗೊಂಡಾಗ, ಅವರು ನನ್ನ ಕಡೆ ನೋಡಿ ಏಕೆ ಹೀಗೆ ಮಂಕಾಗಿರುವೆ ? ಎಂದು ಪ್ರಶ್ನಿಸಿದಾಗ, ನಡೆದ ಘಟನೆಯನ್ನು ವಿವರಿಸಿದೆ.

Page 58

ಬಾಪು, ನಿಮ್ಮ ಮಾತನ್ನು ನಾನು ಅನುಸರಿಸಿ ನಡೆದೆ. ಆದರೆ ಜನ ಏಕೆ ಹಾಗೆ ಚುಚ್ಚಿ ನನ್ನ ಮನಸ್ಸನ್ನು ನೋಯಿಸುವ ತರಹ ಮಾತಾಡುತ್ತಾರೆ ? ಹೀಗೆ ಅವರ ಮುಂದೆ ನನ್ನ ಅಳಲನ್ನು ತೋಡಿಕೊಂಡಾಗ, ನನ್ನ ಮನಸ್ಸಿನ ದುಗುಡವನ್ನು ಕಡಿಮೆ ಮಾಡಿಕೊಳ್ಳಲು ಆಗಲಿಲ್ಲ. ಬಾಪು ಸ್ವಲ್ಪ ಯೋಚಿಸಿ ಹೇಳಿದ್ದು ಹೀಗೆ. ‘ನಾನು ಇಂತಹ ಸಮಯದಲ್ಲಿ ನಿಮ್ಮ ಕರ್ತವ್ಯವನ್ನು ಕುರಿತು ನನಗೆ ಸರಿಕಂಡಂತೆ ಹೇಳಿದೆ ಅಷ್ಟೆ ; ನೀನು, ಹಾಗೂ ನಿನ್ನ ಅಣ್ಣ ಪ್ಯಾರೇಲಾಲ್ ಹಾಗು ಕಸ್ತೂರ್ ಬಾ ನನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದೀರಿ. ನನ್ನಿಂದಾಗಿ ನೀನು ಇಲ್ಲಿ ಇರುವೆ. ಆದ್ದರಿಂದ ನಾನು ಬರೆಯದ್ದನ್ನು ನೀನು ಬರೆಯುವಂತಿಲ್ಲ. ಆದರೆ ನಿನಗೆ ನನ್ನನ್ನು ಅನುಸರಿಸುವ ಮಾನಸಿಕ ಶಕ್ತಿಯಿಲ್ಲದಿದ್ದರೆ, ಅಥವಾ ನಿನ್ನದೇ ಸ್ವಂತವಾಗಿ ಯೋಚಿಸಿ ಸರ್ಕಾರಕ್ಕೆ ಬರೆಯುವುದು ಸರಿಯಾದ ಮಾರ್ಗವೆಂದು ಅನ್ನಿಸಿದರೆ, ನೀನು ಈಗಾಗಲೇ ಸರ್ಕಾರಕ್ಕೆ ಬರೆದ ಪತ್ರವನ್ನು ವಾಪಸ್ ತರಿಸಬಹುದು, ಮತ್ತು ಬೇರೆಯವರ ತರಹ ಪತ್ರವ್ಯವಹಾರ ಮಾಡಲು ನನ್ನ ಅಭ್ಯಂತರವಿಲ್ಲ. ಎಂದು ಹೇಳಿದರು. ಆದರೆ ನನಗೆ ಅದನ್ನು ಮಾಡಲು ಇಷ್ಟವಾಗಲಿಲ್ಲ. ಈ ತರಹ ಯೋಚಿಸುವುದೇ ಅರ್ಥಹೀನವಾಗಿತ್ತೆಂದು ನನಗನ್ನಿಸಿತು.

ಕೆಲದಿನಗಳ ನಂತರ ಕಸ್ತೂರ್ ಬಾ ಪತ್ರಬರೆಸಲು ಪ್ರಾರಂಭಿಸಿದರು. ಜೈಲಿನಲ್ಲಿ ನಮ್ಮನ್ನು ವಿಚಾರಿಸಲು ಯಾರಿಗೂ ಅವಕಾಶವಿರಲಿಲ್ಲ. ಪತ್ರ ಮುಖೇನವೇ ನಾವು ಹೊರಜಗತ್ತಿನ ಯಾರ ಹತ್ತಿರವಾದರೂ ಸಂಪರ್ಕಿಸಲು ಸಾಧ್ಯವಾಗಿತ್ತು.
ಅದೂ ಅಲ್ಲದೆ ಮಕ್ಕಳು, ನೆಂಟರಿಷ್ಟರು, ಮತ್ತು ಸ್ನೇಹಿತರಿಂದ ನಾವುಗಳು ದೂರವಾದೆವು. ಬಾ ಬಹಳ ಒಂಟಿತನದ ದುಃಖವನ್ನು ಅನುಭವಿಸುತ್ತಿದ್ದರು. ಯಾವುದಾದರೂ ಪತ್ರ ಬರುವುದೇನೋ ಎಂದು ಯಾವಾಗಲೂ ಬಾಗಿಲಕಡೆಯೇ ಎದುರುನೋಡುತ್ತಿದ್ದರು. ಒಂದೇ ಕಡೆಯಿಂದ ಮಾಡಿದ ಪತ್ರವ್ಯವಹಾರ ಉಪಯೋಗವಾಗುತ್ತಿರಲಿಲ್ಲ. ಬಂದ ಪತ್ರಗಳಿಗೆ ಉತ್ತರ ಹೇಳಿ ಬರೆಸಲು ನಿಶ್ಚಯಿಸಿದರು. ನನಗೆ ಹೇಳಿ ಕಾಗದ ಬರೆಸಿದಮೇಲೆ, ಅವರು ಸಹಿಹಾಕುವ ಮೊದಲು ನನ್ನ ಹತ್ತಿರ ಓದಿಸಿ ಕೇಳಿ ತಿಳಿದುಕೊಳ್ಳುತ್ತಿದ್ದರು. Superintendent ರಿಗೆ ಪೋಸ್ಟ್ ಮಾಡಲು ಕೊಡುವ ಮೊದಲು ತಮ್ಮ ಉದಾಹರಣೆಯನ್ನು ಅನುಮೋದಿಸಲು ಬೇಡುತ್ತಿದ್ದರು. ಬಾಪು ಒಬ್ಬ ಸಾಧುವಿನ ತರಹ ಪ್ರಪಂಚದ ಬಂಧನಗಳನ್ನು ಕಳಚಿಕೊಂಡಿದ್ದಾರೆ. ನಮಗೆ ಆ ಮಟ್ಟಕ್ಕೆ ಇನ್ನೂ ಏರಲು ಸಾಧ್ಯವಾಗಿಲ್ಲ. ‘ಸುಶೀಲ, ಈಗ ನೀನು ನಿಮ್ಮ ತಾಯಿಯವರಿಗೆ ಪತ್ರಬರೆದು ನಿನ್ನ ಅಣ್ಣ ಹಾಗೂ ಎಲ್ಲರ ಯೋಗಕ್ಷೇಮ ಮತ್ತಿತರ ವಿಷಯಗಳನ್ನುಅವರಿಗೆ ತಿಳಿಸಬೇಕು’. ಬಾರವರು ತಮ್ಮ ಪತಿಯ ಹತ್ತಿರಹೋಗಿ, ಸುಶೀಲ ತಮ್ಮ ತಾಯಿಗೆ ಪತ್ರ ಬರೆಯಬೇಕಲ್ಲವೇ ? ಎಂದು ಕೇಳಿದಾಗ ಅವರು, “ನಾನೇನು ಆಕೆಗೆ ಪತ್ರ ಬರೆಯಬೇಡವೆಂದು ಹೇಳಿಲ್ಲ. ಬೇಕಾದರೆ ಬರೆಯಲಿ’ ಎಂದರು. ನಾನು ನನ್ನ ನಿರ್ಣಯಕ್ಕೆ ಒತ್ತುಕೊಡಬೇಕು. ತಾಯಿಯಾಗಿ ಬಾರವರಿಗೆ ಮತ್ತೊಬ್ಬ ತಾಯಿಯ ಹೃದಯದ ನೋವಿನ ಬಗ್ಗೆ ಗೊತ್ತಿದೆ. ಮಕ್ಕಳ ಬಗ್ಗೆ ಯಾವ ವಿಚಾರಗಳೂ ತಿಳಿಯದೆ ಇದ್ದಾಗ ಯಾವ ತಾಯಿಯ ಹೃದಯವಾದರೂ ಮಿಡಿಯುತ್ತದೆ. ಕಸ್ತೂರ್ ಬಾರವರು ಹೀಗೆ ನನ್ನ ಬಳಿ ಮಾತಾಡುತ್ತಿದ್ದಾಗ, ತಾವೇ ತಮ್ಮ ಮಕ್ಕಳಾದ ದೇವದಾಸ್ ಗಾಂಧಿ ಮತ್ತು ಪರಿವಾರಕ್ಕೆ ನಿಯಮಿತವಾಗಿ ನನ್ನ ಬಗ್ಗೆ, ಮತ್ತು ನನ್ನ ಅಣ್ಣ ಪ್ಯಾರೇಲಾಲ್ ಬಗ್ಗೆ ಪತ್ರ ಬರಿಯುತ್ತಿದ್ದರು. ನಮ್ಮಊರಿನ ತಾಯಿಯವರ ಮನೆಯ ಹತ್ತಿರವೇ ದೇವದಾಸ್ ಗಾಂಧಿ ವಾಸವಾಗಿದ್ದರು. ಹಾಗಾಗಿ ಬಾರವರ ಪತ್ರದಿಂದ ನಮ್ಮಿಬ್ಬರ ವಿಷಯಗಳು ಅಮ್ಮನಿಗೆ ಮುಟ್ಟುತ್ತಿದ್ದವು. (ಅಣ್ಣ ಹಾಗೂ ನಾನು ಪತ್ರ ಬರೆಯುತ್ತಿರಲಿಲ್ಲವಲ್ಲ)

33

ಎರಡನೆಯ ಅಕ್ಟೊಬರ್ ೧೯೪೩ ರಂದು ಬಾಪುರವರ ಹುಟ್ಟಿದ ಹಬ್ಬದ ದಿನ. (ಜೈಲಿನಲ್ಲಿದ್ದಾಗ) ಬಾ ಅನಾರೋಗ್ಯ ಸ್ಥಿತಿ ಹಾಗೆಯೇ ಇತ್ತು. ನಮಗೆ ಸಹಾಯಮಾಡಲು ಸರೋಜಿನಿ ನಾಯಿಡುರವರು ಇರಲಿಲ್ಲ. ನಾವೇ ಎಲ್ಲರೂ ಸೇರಿ ನಮಗೆ ತಿಳಿದಂತೆ ಸಮಾರಂಭದ ಆಯೋಜನೆಯನ್ನು ಮಾಡಿದೆವು. ಕಸ್ತೂರ್ ಬಾ ರವರು ತಮ್ಮ ಅನಾರೋಗ್ಯದ ಸ್ಥಿತಿಯಲ್ಲೂ ತಮ್ಮ ಕೈಗಳಿಂದ ಕೈದಿಗಳಿಗೆ ಆಹಾರ ಮತ್ತು ಸಿಹಿಯನ್ನು ಹಂಚಿದರು. ಬಾಪು ನೂತ ದಾರದಿಂದ ನೇಯ್ದ ಕೆಂಪು ಅಂಚಿನ ಸೀರೆ ಅವರ ಬಳಿ ಇತ್ತು. ಸೇವಾಗ್ರಾಮದಿಂದ ಬರುವಾಗ ಮನುಬೆನ್ ಹತ್ತಿರ ಈ ಆಶ್ರಮವನ್ನು ಸರ್ಕಾರ ತಮ್ಮ ವಶಪಡಿಸಿಕೊಳ್ಳುವರೆಂಬ ಗಾಳಿ ಸುದ್ದಿಯನ್ನು ಕೇಳಿದ್ದರು. “ಆದರೆ ಈ ಕೆಂಪು ಅಂಚಿನ ಸೀರೆಯನ್ನು ಎಲ್ಲೂ ಕಳೆಯದಂತೆ ಜೋಪಾನವಾಗಿ ಎತ್ತಿಡು” ಎಂದು ಸದಾ ಹೇಳುತ್ತಿದ್ದರು.

Page 59

ಕಸ್ತೂರ್ ಬಾ ಯಾವಾಗಲೂ ಎಲ್ಲರಿಗು ಹೇಳುತ್ತಿದ್ದದ್ದು, “ನಾನೇನಾದರೂ ಸತ್ತರೆ, ನನ್ನ ದೇಹಕ್ಕೆ ಈ ಸೀರೆಯಿಂದ ಹೊದ್ದಿಸಿ ಕ್ರಿಯಾಕರ್ಮ ಮಾಡಬೇಕು. ನೆನಪಿರಲಿ.” ಎಂದು. ಪುಣೆಯ ಆಗಾಖಾನ್ ಪ್ಯಾಲೇಸ್ ಬಂಧಿಗೃಹದಲ್ಲಿದ್ದಾಗ ತಮ್ಮ ಖಾದಿ ಸೀರೆಯ ಬಗ್ಗೆ ಅನೇಕರಿಗೆ ಪತ್ರಬರೆದು ವಿಚಾರಿಸಿದರು. ಮನುಬೆನ್ ಬಂದಾಗ, ಆವಳು ಬಾರನ್ನು ಕುರಿತು ‘ಸೀರೆಯನ್ನು ಎಲ್ಲಿ ತೆಗೆದಿಟ್ಟಿದ್ದೀರಿ’ ? ಎಂದು ಕೇಳಿದಳು. ಬಾಪು ಹುಟ್ಟಿದ ಹಬ್ಬದ ದಿನ ಆ ಸೀರೆಯನ್ನು ತರಿಸಿ, ಅದನ್ನು ಉಟ್ಟುಕೊಂಡು ಸಂಭ್ರಮಿಸಿದರು.

ಅಕ್ಟೊಬರ್ ೧೯೪೩ ರ ಕೊನೆಯಲ್ಲಿ ನನ್ನ ಎರಡನೆಯ ಅಣ್ಣನವರಿಗೆ ಹೆಣ್ಣು ಮಗುವಿನ ಜನನವಾಯಿತು. ಆದರೆ ಶಸ್ತ್ರ ಚಿಕಿತ್ಸೆ ಮಾಡಿ ಮಗುವನ್ನು ಹೊರಗೆ ತೆಗೆಯಬೇಕಾಯಿತು. ನವೆಂಬರ್ ಮೊದಲ ವಾರದಲ್ಲಿ ನನ್ನ ಅತ್ತಿಗೆ ೭ ದಿನದ ಶಿಶುವನ್ನು ಬಿಟ್ಟು ನಿಧನಹೊಂದಿದರು. ಜೈಲಿನಲ್ಲಿ ಪತ್ರಗಳು ಬರುವುದು ಬಹಳ ತಡವಾಗಿ, ಅಂದರೆ, ಅಣ್ಣನ ಹೆಂಡತಿಗೆ ಶಿಶುವಿನ ಜನನವಾಗಿದ್ದು, ನಂತರ ಮರಣಹೊಂದಿದ್ದು ಎರಡೂ ವಿಷಯಗಳನ್ನು ತಿಳಿಸಿ ಬರೆದ ಪತ್ರಗಳು ಈ ಘಟನೆಗಳಾಗಿ ೮ ದಿನಗಳ ಬಳಿಕ ತಲುಪಿದವು.

ಊರಿನಿಂದ ನನ್ನ ಎರಡನೆಯ ಅಣ್ಣನ ಪತ್ರವು ಅದೇ ಸಮಯಕ್ಕೆ ಬಂತು. ಅಣ್ಣ ತನ್ನ ಪತ್ರದಲ್ಲಿ ಬರೆಯುತ್ತಾ, “ಸಾಯುವ ಮೊದಲು ನಿನ್ನ ಅತ್ತಿಗೆ ನಿನ್ನ ಬಗ್ಗೆ ವಿಚಾರಿಸುತ್ತಲೇ ಇದ್ದಳು”. ಎನ್ನುವುದನ್ನು ವಿವರಿಸಿ ಬರೆದಿದ್ದರು. ನಾನು, ಅತ್ತಿಗೆ ಆಪ್ತ ಸ್ನೇಹಿತೆಯರಂತೆ, ಅಕ್ಕ-ತಂಗಿಯರಂತೆ ಪ್ರೀತಿ ವಿಶ್ವಾಸಗಳಿಂದ ಬಾಳಿದೆವು. ಅಮ್ಮ ಮತ್ತು ಅಣ್ಣ ಸರಕಾರಕ್ಕೆ ತಮ್ಮನ್ನು ಬಿಡುಗಡೆಮಾಡಲು ವಾಗ್ದಾನಮಾಡಿದ್ದರು. ಸರ್ಕಾರ ನಿರಾಕರಿಸಿತು. ನಾನು ಬಾಪೂಜೀಯವರ ಹತ್ತಿರವಿದ್ದೆ. ಅವರ ಜತೆಯಲ್ಲಿರುವ ಬಂದಿಗಳು ಜೈಲಿನಿಂದ ಹೊರಗೆ ಹೋಗುವಂತಿಲ್ಲ. ಈ ವಿಷಯವನ್ನು ಕೇಳಿದಮೇಲೆ ಬಾರವರ ಹೃದಯಕ್ಕೆ ಬಹಳ ವೇದನೆಯಾಯಿತು. ಬಾಪು ಹತ್ತಿರ ಹೋಗಿ ಅವರು, ಸುಶೀಲಳನ್ನು ಅವರ ತಾಯಿಯನ್ನು ನೋಡಿಕೊಂಡು ಬರಲು ಅವರ ಊರಿಗೆ ಕಳಿಸಿಕೊಡಿ, ಎಂದು ಬೇಡಿದರು. ಗಾಂಧೀಜಿಯವರು ಬಾ ಕಡೆ ತಿರುಗಿ, ಮುಗುಳ್ನಗುತ್ತಾ, ಆಕೆ ಊರಿಗೆ ಹೋದರೆ ನಿನ್ನನ್ನು ಯಾರು ನೋಡಿಕೊಳ್ಳುತ್ತಾರೆ ? ಎಂದು ನುಡಿದರು. ನನಗೆ ತೊಂದರೆ ಏನೋ ಆಗುವುದು ನಿಜ. ಆದರೆ ಒಬ್ಬ ವಯಸ್ಸಾದ ತಾಯಿಗೆ, ಮನೆಯಿಂದ ದೂರದಲ್ಲಿರುವ ಮಗಳನ್ನು ಕಾಣುವ ಆಶಯವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಬಾ ನನ್ನ ಹತ್ತಿರಬಂದು ‘ಸುಶೀಲ, ನೀನು ನಿಮ್ಮ ತಾಯಿ ಮತ್ತು ಅಣ್ಣನಿಗೆ ಕೂಡಲೇ ಕಾಗದ ಬರಿ’. ಎಂದು ಆಜ್ಞೆ ಮಾಡಿದರು. ಆದರೆ ಬಾ, ನಾನು ಈಗಾಗಲೇ ಸರ್ಕಾರಕ್ಕೆ ನಾನು ಯಾರಿಗೂ ಪತ್ರಬರೆಯುವುದಿಲ್ಲವೆಂದು ಪತ್ರಬರೆದು ತಿಳಿಸಿದ್ದೇನೆ, ಅದಕ್ಕೆ ವಿರುದ್ಧವಾಗಿ ಹೋಗಲಾರೆ, ಎಂದಾಗ, ಏನೂ ತೋಚದೆ ಅವರು ತಮ್ಮ ಪತಿಯ ಹತ್ತಿರ ಹೋದರು. ‘ಬಾಪು, ನೀವು ಈಗ ಸುಶೀಲಗೆ ತನ್ನ ಮನೆಗೆ ಪತ್ರಬರೆಯಲು ಒಪ್ಪಿಸಬೇಕು. ಸರ್ಕಾರಕ್ಕೆ ತಾನು ಯಾರಿಗೂ ಪತ್ರಬರೆಯುವುದಿಲ್ಲವೆಂದು ಹಿಂದೆ ಬರೆದರೇನಾಯಿತು ? ಯಾರು ಎಣಿಸಿದ್ದರು, ಅವರ ಜೀವನದಲ್ಲಿ ಈ ತರಹದ ಒಂದು ಕೆಟ್ಟ ಘಟನೆ ನಡೆಯುವುದೆಂದು’ !

ಅಣ್ಣ-ತಂಗಿ, ತಮ್ಮ ತಾಯಿಗೆ, ಅಣ್ಣನಿಗೆ ವ್ಯವಸ್ಥಿತವಾಗಿ ಪತ್ರ ವ್ಯವಹಾರ ನಡೆಯುತ್ತಿರಬೇಕು. ಆಗ, ಅವರಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ. ಈಗ ಬಾಪೂರವರಿಗೆ ಸ್ವಲ್ಪ ಪರಿಸ್ಥಿತಿಯ ತೀವ್ರತೆ ಅರ್ಥವಾಯಿತು. ಅವರು ಕೂಡಲೇ ನನಗೆ ಹೇಳಿಕಳಿಸಿದರು. “ನಾನು ಹೇಳಿದಮೇಲೆ, ನೀವಿಬ್ಬರು ಜೈಲಿನಿಂದ ಪತ್ರಬರೆಯಲು ಆರಂಭಿಸಿ”. “ವಿಶೇಷ ಪರಿಸ್ಥಿತಿ ಉದ್ಭವವಾದಾಗ, ನೀವು ಒಂದು ಬಾರಿಯಾದರೂ ನೀವು ನಿಮ್ಮ ತಾಯಿಯವರ ಮಾನಸಿಕ ನೆಮ್ಮದಿಗಾದರೂ ಕಾಗದ ಬರೆಯಲೇ ಬೇಕು”.

Page 60

ಅವತ್ತಿನ ರಾತ್ರಿಯಂದೇ ನಾವಿಬ್ಬರು ಮನೆಗೆ ಕಾಗದ ಬರೆದೆವು. ಅವರು ಬರೆದ ಉತ್ತರದಲ್ಲಿ ಅಣ್ಣನವರು ಅಮ್ಮನ ಅರೋಗ್ಯ ಸರಿಯಿಲ್ಲವೆಂದು ತಿಳಿಸಿದ್ದರು. ಹುಟ್ಟಿದ ಕೂಸು, ತಾಯಿಯಿಲ್ಲದೆ ತೊಂದರೆ ಅನುಭವಿಸುತ್ತಿತ್ತು. ಇದನ್ನು ಕೇಳಿದ ಬಾಪು ಮಗುವನ್ನು ಇಲ್ಲಿಗೆ ಕರೆಸೋಣವೇ ? ನೀನು ನೋಡಿಕೊಳ್ಳುವೆಯಲ್ಲವೇ ಎಂದು ಮುಗುಳ್ನಗುತ್ತಾ ಬಾರವರನ್ನು ಕೇಳಿದರು. ‘ಹಿಂದೆ ಅದೆಲ್ಲಾ ಮಾಡುವಷ್ಟು ಶಕ್ತಿಯಿತ್ತು. ಮಾಡುತ್ತಿದ್ದೆ. ಈಗ ನನ್ನ ಈ ಸ್ಥಿತಿಯಲ್ಲಿ ನನಗೇ ಕಷ್ಟವಾಗುತ್ತಿದೆ. ಒಂದುವೇಳೆ ಸರ್ಕಾರ ಮಗುವನ್ನು ಇಲ್ಲಿಗೆ ಕರೆದುಕೊಂಡು ಬರಲು ಅನುಮತಿಯಿತ್ತರೆ, ನನಗೆಷ್ಟು ಸಾಧ್ಯವೋ ಅಷ್ಟನ್ನು ವಂಚನೆ ಇಲ್ಲದೆ ಮಾಡಬಲ್ಲೆ’. ಎಂದು ಬಾ ಉತ್ತರವಿತ್ತರು.

ಗಾಂಧೀಜಿಯವರು ಸರಕಾರಕ್ಕೆ ಪತ್ರಬರೆದು, ‘ಅಲ್ಲಿ ಮನೆಯಲ್ಲಿ ಹುಟ್ಟಿದ ಶಿಶುವನ್ನು ನೋಡಿಕೊಳ್ಳಲು ಏನೇನೂ ಅನುಕೂಲವಿಲ್ಲ. ದಯಮಾಡಿ, ನಮ್ಮ ಸುಶೀಲಾಳನ್ನು ಅಲ್ಲಿಗೆ ಕಳಿಸಲು ಏರ್ಪಾಡುಮಾಡಿ’ ಎಂದು. ‘ಇದು ಸಾಧ್ಯವಾಗದಿದ್ದಲ್ಲಿ ಮಗುವನ್ನು ನಾವಿರುವ ಜೈಲಿಗೆ ಕಳಿಸಿಕೊಡಲು ಅನುಮತಿ ಕೊಡಿ. ಸುಶೀಲ ಒಬ್ಬ ಒಳ್ಳೆಯ ವೈದ್ಯೆಯಲ್ಲದೆ ನಮ್ಮ ಮಗಳ ತರಹ ನಮ್ಮ ಜೊತೆ ಹೊಂದಿಕೊಂಡಿದ್ದಾಳೆ. ಆಕೆಯ ಅನುಪಸ್ಥಿತಿ ನಮಗೆ ಬಹಳ ಅನಾನುಕೂಲವಾಗುತ್ತದೆ. ಸರಿಯಾದ ಮಾರ್ಗವೆಂದರೆ, ನವಜಾತ ಶಿಶುವನ್ನು ಈ ಜೈಲಿಗೆ, ನಮ್ಮ ಹತ್ತಿರಕ್ಕೆ ಕಳಿಸಿಕೊಡುವುದು. ಇದು ಅಸಾಧ್ಯವೆನಿಸಿದರೆ ಡಾ ಸುಶೀಲರನ್ನು ಜೈಲಿನಿಂದ ಬಿಡಲು ಮನವಿಯನ್ನು ಅಂಗೀಕರಿಸಬೇಕು. ನಾವು ಹೇಗೋ ಇಲ್ಲಿನ ಪರಿಸ್ಥಿತಿಯನ್ನು ಎದುರುಸುತ್ತೇವೆ’. ಇದಕ್ಕೆ ಸರಕಾರ ಉತ್ತರಿಸುತ್ತಾ, ಬಾಪೂರವರ ಎರಡು ಮನವಿಗಳನ್ನೂ ಪರಿಗಣಿಸಲು ಅಸಾಧ್ಯವೆಂದು ಅವರ ಪತ್ರದಲ್ಲಿ ತಿಳಿಸಿದರು.

34

೧೯೪೩, ಡಿಸೆಂಬರ್ ತಿಂಗಳಿನಲ್ಲಿ ಕಸ್ತೂರ್ ಬಾ ದೇಹಸ್ಥಿತಿ ಕಳವಳಕ್ಕೆ ಕಾರಣವಾಗಿತ್ತು. ಉಸಿರಾಟದ ತೊಂದರೆ ಉಲ್ಬಣಿಸಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ. ಒಂದು adjustable bed ಕೊಡಲು ಪ್ರಾರ್ಥಿಸಿದೆವು. ಹಾಸಿಗೆಯನ್ನು ಅವರಿಗೆ ಅನುಕೂಲವಾಗುವಂತೆ ಮೇಲಕ್ಕೆ ಕೆಳಗೆ ಮಾಡಬಹುದಾಗಿತ್ತು. ಆದರೆ ಅವರ ನಿಶ್ಯಕ್ತಿ ಹಾಗೂ ಮಾನಸಿಕ ದೈಹಿಕ ಬಲ ಬಹಳ ತೀವ್ರವಾಗಿ ಕಳವಳಕ್ಕೆ ಕಾರಣವಾಗಿತ್ತು. ಒಂದು ಮರದ ಟೇಬಲ್ ಮಾಡಲು ಹೇಳಿದೆವು. ಅವರ ಹಾಸಿಗೆಯಮೇಲೆ ಅದನ್ನು ಇಡಲು ವ್ಯವಸ್ಥೆ ಮಾಡುವುದು, ನಮ್ಮ ಅಭಿಲಾಷೆಯಾಗಿತ್ತು. ಆ ಪುಟ್ಟ ಟೇಬಲ್ ಮೇಲೆ ಕೈ ಊರಿ ಸಹಾಯಪಡೆದು ತಮ್ಮ ತಲೆಯನ್ನು ಭುಜದಮೇಲೆ ವಾಲಿಸಿಕೊಂಡು ಸಾಧ್ಯವಾದಷ್ಟು ನಿದ್ದೆಮಾಡಲು ಅನುಕೂಲವಾಗುವಂತೆ ಮಾಡುವುದು ನಮ್ಮ ಯೋಜನೆಯಾಗಿತ್ತು. ಈ ದೃಶ್ಯವನ್ನು ನೋಡುವಾಗ ಕರುಳು ಕತ್ತರಿಸಿ ಬರುತ್ತಿತ್ತು.

ಕಸ್ತೂರ್ ಬಾ ನಿಧನದ ತರುವಾಯ, ಬಾಪುರವರು ಆ ಟೇಬಲ್ ನ್ನು ತಮ್ಮ ಜತೆ ಎಲ್ಲಾ ಕಡೆ ಒಯ್ಯುತ್ತಿದ್ದರು. ಡೈನಿಂಗ್ ಟೇಬಲ್ ತರಹವೂ ಬಳಸುತ್ತಿದ್ದರು. ಕಸ್ತೂರ್ ಬಾ ರವರ ಪರಿಸ್ಥಿತಿ ವಿಷಮಕ್ಕೆ ಹೋದಾಗ, ‘ಆಕ್ಸಿಜನ್ ಪೈಪ್’ ಕೊಡಲು ವ್ಯವಸ್ಥೆ ಮಾಡಿದೆವು. ಅದನ್ನು ಮೂಗಿಗೆ ಸೇರಿಸಲು ಮೊದಲು ಅವರಿಗೆ ಕಷ್ಟವಾಗುತ್ತಿತ್ತು. ಆದರೆ ಕ್ರಮೇಣ ‘ಆಕ್ಸಿಜನ್ ಪೈಪ್ ಹಾಕಿಕೊಡಿ’, ಎಂದು ಅವರೇ ಬೇಡುತ್ತಿದ್ದರು.
ನಾನು ಹಾಗೂ ಡಾ ಗಿಲ್ಡರ್ ಜೊತೆಯಾಗಿ, “ದಯಮಾಡಿ ಡಾ. ಬಿ.ಸಿ.ರಾಯ್ ಇಲ್ಲವೇ ಡಾ ಜೀವರಾಜ್ ಮೆಹ್ತಾರನ್ನು ಸಲಹೆಗಾಗಿ ಕರೆಸಲು ಸರ್ಕಾರಕ್ಕೆ ಮನವಿಮಾಡಿದೆವು”. ಪುಣೆಯ ಜೈಲಿನಲ್ಲಿ ಡಾ. ಜೀವರಾಜ್ ಮೆಹ್ತಾ ಸರಕಾರಿ ಕೈದಿಯಾಗಿ ಇದ್ದರು. ಒಂದು ದಿನ ಸಾಯಂಕಾಲ ಅವರನ್ನು ಆಗಾಖಾನ್ ಪ್ಯಾಲೇಸ್ ಬಂದಿ ಗೃಹಕ್ಕೆ ಯರವಾಡ ಜೈಲಿನಿಂದ ಸ್ವಲ್ಪ ಸಮಯ ಕರೆಸಲಾಯಿತು. ಆಗ ಬಾಪು ಬಾ, ಹತ್ತಿರವಿರಲಿಲ್ಲ. ಮತ್ತೊಬ್ಬ ಸಲಹಾಕಾರ ಡಾಕ್ಟರ್, ಬಿ. ಸಿ. ರಾಯ್ ಎರಡು ಬಾರಿ ಕರೆ ಕಳಿಸಿದಾಗಲೂ, ಅವರು ಉತ್ತರವನ್ನೂ ಕೊಡಲಿಲ್ಲ ; ಬರಲೂ ಇಲ್ಲ.

ಮುಂದುವರೆಯುವುದು

ಚಿತ್ರ ಕೃಪೆ-ಇಂಡಿಟೇಲ್ಸ್