ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ – ೧೦

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಶಬ್ದ “ಮಾತಿನ ಧ್ವನಿ”ಗೆ ಬಳಸಲಾಗುವ ಸಂಸ್ಕೃತ ಪದ. ಸಂಸ್ಕೃತ ವ್ಯಾಕರಣದಲ್ಲಿ ಈ ಪದವು ಭಾಷಾ ಸಾಧನೆಯ ಅರ್ಥದಲ್ಲಿ ಉಕ್ತಿಯನ್ನು ಸೂಚಿಸುತ್ತದೆ. ಶಾಸ್ತ್ರೀಯ ಭಾರತೀಯ ಭಾಷಾ ತತ್ವಶಾಸ್ತ್ರದಲ್ಲಿ, ಶಬ್ದವು ನಿತ್ಯ, ಅರ್ಥವೂ ನಿತ್ಯ, ಮತ್ತು ಇವೆರಡೂ ಪರಸ್ಪರ ಸಹ-ಸಂಬಂಧ ಹಂಚಿಕೊಳ್ಳುತ್ತವೆ
ಎನ್ನುತ್ತಾನೆ ವ್ಯಾಕರಣ ಪಂಡಿತ ಕಾತ್ಯಾಯನ.
ಕಾವ್ಯ ಮೀಮಾಂಸೆಯಲ್ಲಿ ಶಬ್ದ – ಅರ್ಥ ಕ್ಕೆ ಒಂದು ಅಧ್ಯಾಯವೇ ಮೀಸಲಾಗಿದೆ.

ವಾಗಾರ್ಥವಿವ ಸಂಪೃಕ್ತೌ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

ಎಂದರೆ ತಾನು ಕೈಕೊಂಡಿರುವ ಕಾವ್ಯ ರಚನೆಯಲ್ಲಿ ತನಗೆ ಅಗತ್ಯವಾದ ಶಬ್ದಾರ್ಥ ಗಳ ಜ್ಞಾನವನ್ನು ಜಗತ್ತಿನ ತಂದೆ ತಾಯಿ ಗಳಾದ ಶಿವ- ಪಾರ್ವತಿಯರು ತನಗೆ ನೀಡಲಿ ಎಂದು ಕಾಳಿದಾಸ ಕವಿ ತನ್ನ ರಘು ವಶದ ಮಂಗಳಾಚರಣೆ ಪದ್ಯಗಳಲ್ಲಿ ಹೇಳುತ್ತಾನೆ. ಶಬ್ದಾರ್ಥಗಳು ಹೇಗೆ ನಿಕಟವಾದ ಸಂಬಂಧವನ್ನು ಹೊಂದಿವೆ ಎಂದು ತಿಳಿಯುತ್ತದೆ.
ಈ ಮಾತು ರಘುವಂಶ ವಿರಚಿತ ಕವಿ ಕಾಳಿದಾಸನಿಗೆ ಅನ್ವಯಿಸುತ್ತದೆ ಎಂದು ತಿಳಿಯಬೇಕಾಗಿಲ್ಲ. ಹಳೆಗನ್ನಡ ದಿಂದ ಪ್ರಾರಂಭಿಸಿ ಆಧನಿಕ ಕನ್ನಡ ದ ವಿವಿಧ ಮಾರ್ಗಗಳಾದ ನವೋದಯ,ನವ್ಯ,ನವ್ಯೋತ್ತರ ಗಳಿಗೂ ಅನ್ವಯಿಸುವಂತಹುದು. ಜೊತೆಗೆ ಯಾವುದೇ ಗದ್ಯ ಬರಹಗಳಿಗೂ ಇದು ಅಗತ್ಯ.

ದಿನಚರಿಗಳಲ್ಲಿ, ಮಾತು ಮೂಡಿಬರುತ್ತಿದ್ದಂತೇ ಅದರ ಅರ್ಥ ಕೇಳುವವರ ಮನಸ್ಸಿನಲ್ಲಿ ಮೂಡಿಬಿಡುತ್ತದೆ.ಮಾತಿಲ್ಲದೆ ಮನಸ್ಸಿನ ಅಭಿಪ್ರಾಯ ಹೇಳುವವನಿಗೂ ಅದರ ನಿಶ್ಚಿತ ರೂಪ ಖಚಿತವಾಗಲಾರದು.ಹೀಗೆ, ಮಾತು,ಅರ್ಥ ಒಂದುರೀತಿಯ ಜೋಡಿಹಕ್ಕಿಗಳು.ಒಂದಿಲ್ಲದೆ ಇನ್ನೊಂದಿಲ್ಲ.ಸೃಷ್ಟಿ ನಿರ್ಮಾಣಗೊಂಡಾಗ ಮಾನವ ಇದ್ದ ಎನ್ನುವದಕ್ಕೆ ಆಧಾರಗಳಿಲ್ಲ. ಅವನ ಅಸ್ತಿತ್ವ ವ ಕಾಣಿಸಿಕೊಂಡಿದ್ದು ಹಲವು ಲಕ್ಷ ವರುಷಗಳಹಿಂದೆ.ಅಂದು ಪಶು-ಪಕ್ಷಿಗಳಂತೆ ನಲಿವು ನರಳಿಕೆಗಳು ಮನುಷ್ಯನಿಗೆ ತನ್ನ ಭಾವ ಪ್ರಕಟಿಸಲು ಕೇಳಿ ಬರುತ್ತಿದ್ದ ಕೂಗುವಿಕೆ ವಿಕಸಿತ ಹೊಂದುತ್ತ ಹೋಗಿ “ಭಾಷೆ” ಯೊಂದು ನಿಖರತೆ ಪಡೆಯಲು ಅನಂತ ವರ್ಷಗಳೇ ಹಿಡಿದವು.ಆಗ ಇಡೀ ವಿಶ್ವಕ್ಕೆ ಒಂದೇ ಭಾಷೆ ಇತ್ತೆ ? ಇರುವ ಆಧಾರಗಳಿಂದ ಸಮರ್ಪಕವಾಗಿ ಉತ್ತರಿಸಲಾರೆವು. ಈಗ ಭಾಷೆಗಳ ಸಂಖ್ಯೆ ವಿಪುಲವಾಗಿದೆ.ಒಂದೊಂದು ಜನಾಂಗಕ್ಕೆ ಒಂದೊಂದು ಭಾಷೆ, ಆ ಜಾನಾಂಗಳ ಒಳಪಂಗಡಗಳಿಗೂ ಬೇರೆಯೇ ಆದ ಭಾಷೆಗಳು. ರಾಜ್ಜಕ್ಕೊಂದು ಒಂದು ಭಾಷೆ ಎಂದು ಭಾಷಾವಾರು ಪ್ರಾಂತಗಳನ್ನು ವಿಂಗಡಣೆ ಮಾಡಿದರೂ ಪ್ರತಿ ರಾಜ್ಯದಲ್ಲಿಯೂ,ಅನೇಕ ಲಿಪಿಸಹಿತ,ಲಿಪಿರಹಿತ, ಪ್ರದೇಶಗಳಿಂದ ಪ್ರಭಾವಿತ, ಪ್ರತಿ ಎರಡು ನೂರು ಕಿಮೀ ಗೆ ಒಂದು ಹೊಸ ರೂಪ ಪಡೆಯುವ ಭಾಷೆ. ಭಾಷಾ ಶಾಸ್ತ್ರದ ಪ್ರಕಾರ ಪ್ರತಿ ಭಾಷೆಯ ಶಬ್ದ ಅರ್ಥಗಳು ಸ್ವಭಾವದಿಂದಾದವುಗಳೇ ?
ಇದೆಲ್ಲ ಕಾವ್ಯ ಮೀಮಾಂಸೆಯ ಹೊರಗೆ ನಿಲ್ಲುವ ಸಂಗತಿಯಾಗಿರುವುದರಿಂದ ಸದ್ಯ ಬೇಡ.

ಅಧ್ಯಯನಾಸಕ್ತರಿಗೆ,ಇಂದು ಶಬ್ದ ದ ಪರಿಚಯ/ಅರ್ಥ ತಿಳಿಯದಿದ್ದರೆ,ನಿಘಂಟು,ಶಬ್ದಕೋಶ ಗಳನ್ನು ನೋಡುತ್ತಾರೆ.ತಿಳಿದವರನ್ನು ಕೇಳುತ್ತಾರೆ. ಅದು ಯಾವ ಸಂದರ್ಭದಲ್ಲಿ ಉಪಯೋಗವಾಯಿತು,ಸರಿಯಾದ ಅರ್ಥ ಯಾವುದು,ಅದರ ನಿಷ್ಪತ್ತಿ ಹೇಗೆ ಅನೇಕ ಸಂಗತಿಗಳು ಮೂಲಕ ಅದರ ವಾಚ್ಯಾರ್ಥ ಕಂಡುಬರುತ್ತದೆ.

ಶಕ್ತಿ ಗ್ರಹಂ ವ್ಯಾಕರಣೋಪಮಾನ
ಕೋಶಾಪ್ತವಾಕ್ಯ ವ್ಯವಹಾರತಸ್ಚ |
ವಾಕ್ಯಸ್ಯ ಶೆಷಾದ್ವಿವ ತೇರ್ವದಂತೇ
ಸಾನ್ನಿಧತಃ ಸಿದ್ಧಪದಸ್ಯ ವೃದ್ಧಾಃ ||
– ಸಾಹಿತ್ಯ ದರ್ಪಣ.


ವ್ಯಾಕರಣ, ಹೋಲಿಕೆ,ನಿಘಂಟು,ಆಪ್ತರ ವಾಕ್ಯ,ಲೋಕ ವ್ಯವಹಾರ, ವಾಕ್ಯದ ಉಳಿದ ಭಾಗ,ತಿಳಿದವರ ವಿವರಣೆ,ತಿಳಿದ ಪದದ ಸನ್ನಿಧಿ ; ಇವುಗಳಿಂದ ಶಬ್ದ ಶಕ್ತಿಯ ತಿಳುವಳಿಕೆ ಉಂಟಾಗುತ್ತದೆ.

ಇದೆಲ್ಲವೂ ಶಬ್ದ- ಅರ್ಥ ಗಳಿಗೆ ಸಂಬಂದಿಸಿದ ಸಂಗತಿಯಾಯಿತು ವಾಕ್ಯಗಳಿಗೆ ಬಂದಾಗ ವಿಭಿನ್ನ ಅನುಭವ ಉಂಟಾಗುತ್ತದೆ. ‘ಅಂತಹ ಒಳ್ಳೆಯ ವ್ಯಕ್ತಿಗೆ, ಕಷ್ಟಬಂದಾಗ ಇಡೀ ಓಣಿಯೇ ಕಣ್ಣೀರಿಟ್ಟಿತು.’ ವಾಕ್ಯವನ್ನು ಗಮನಿಸಿ:- ಓಣಿಯೆಂದರೆ ಮನೆಗಳ ಸಾಲು. ಜೀವ ವಿಲ್ಲದ ಓಣಿ ಅದು ಹೇಗೆ ಕಣ್ಣ್ರೀರಿಡಲು ಸಾಧ್ಯ ? ಇಲ್ಲಿ ಮೇಲೆ ಹೇಳಿದ ಯಾವ ಪರಿಕರಗಳು ಕೆಲಸಕ್ಕೆ ಬರಲಾರವು.
ಓಣಿ ಎಂದರೆ ಮನೆಗಳ ಸಾಲು ಅಲ್ಲ ಅದು ಆ ಓಣಿಯಲ್ಲಿರುವ ಜನಗಳು ಎಂದು ಅರ್ಥೈಸಿಕೊಳ್ಳಬೆಕಾಗುತ್ತದೆ

ಪತಿಗಳೆನ್ನನು ಮಾರಿ ಧರ್ಮ
ಸ್ಥಿತಿ ಯಕೊಂಡರು ಭೀಷ್ಮ ಮೊದಲಾ
ದತರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ
ಸುತನ ಸಿರಿ ಕಡು ಸೊಗಸಲಾ ಭೂ
ಪತಿಗೆ ಗಾಂಧಾರಿಗೆ ಅನಾಥೆಗೆ
ಗತಿಯಕಾಣೆನು ಶಿವಶಿವಾಯೆಂದೊರಲಿದಳು ತರಳೆ.

ಕುಮಾರವ್ಯಾಸ ಭಾರತದ ಈ ಷಟ್ಪದಿಯ ಆರಂಭಿಕ ಸಾಲುಗಳನ್ನು ನೋಡಿ.ಪತಿಗಳೆನ್ನನು ಮಾರಿ ಧರ್ಮವನ್ನು ಖರೀದಿಸಿದರು.ಎನ್ನುವಾಗ ವಾಚಾರ್ಥ್ಯ ನಿಜ ಅರ್ಥ ನೀಡಲಾರದು.ತನ್ನ ಗಂಡದಿರು ಧರ್ಮವನ್ನು ಕಾಪಾಡಿಕೊಳ್ಳಲು ಪತ್ನಿಯ ಮಾನಹರಣವಾಗುತ್ತಿದ್ದರೂ, ಅವಳ ಯೋಚನೆಯನ್ನು ಬಿಟ್ಟರು.ಎನ್ನುವಾಗ ಇಲ್ಲಿ ವಾಕ್ಯದ ಉದ್ದೇಶ ಬೇರೊಂದು ಅರ್ಥದಿಂದಲೇ ಸಾಧ್ಯವಾಯಿತು.ಎಂದಾಗ ಶಬ್ದ ಅರ್ಥ,ವಾಕ್ಯಗಳು ಮನಸ್ಸಿಗೆ ಹೊಳೆದಾಗ ಉಂಟಾಗುವ ಆನಂದಕ್ಕೆ ಸಾಟಿಯಾದುದು ಯಾವುದಾದರೂ ಇದ್ದೀತೆ ?

ಒಂದು ಜಾನಪದ ಗೀತೆ :

ಒಕ್ಕಲಗೇರ‌್ಯಾಗ ಮಳೆರಾಜ,—- ಅವರು
ಮಕ್ಕಳ ಮಾರ‌್ಯಾರು ಮಳೆರಾಜ;
ಮಕ್ಕಳ ಮಾರಿ ರೊಕ್ಕ ತಕ್ಕೊಂಡು
ಭತ್ತsoತ ತಿರಗ್ಯಾರೋ ಮಳೆರಾಜ |

ಹುಟ್ಟಿದ ಮಕ್ಕಳನ್ನೇ ಮಾರಬೇಕಾದರೆ,ಬರಗಾಲ ಎಂತಹ ಸಂಕಟ ತಂದಿರಬಹುದು !! ಮಕ್ಕಳಿಗಿಂತ ಭತ್ತ, ಹೆಚ್ಚು ಪ್ರಿಯ ವಾಯಿತು ಎನ್ನುವಲ್ಲಿಯ ವ್ಯಂಗ್ಯ ಎಲ್ಲ ಅರ್ಥಗಳನ್ನು ಮೀರಿ ನಿಲ್ಲುತ್ತದೆ.

ಕಾವ್ಯ ಮೀಮಾಂಸೆ ಒಂದು ರಾಚನಿಕ ಕ್ರಿಯೆಯನ್ನು ಹೇಗೆ ಪರಿಪಕ್ವ ಗೊಳಿಸುತ್ತದೆ ಎನ್ನವುದು ನಮಗೆ ತಿಳಿಯದೆ ಇರಲಾರದು. ಏನನ್ನು ಬರೆಯಬೇಕಾದರು,ಬಳಸುತ್ತಿರುವ ಪದ, ವಾಕ್ಯಗಳ ಖಚಿತವಾದ ಅರ್ಥ ಮನಸ್ಸಿನಲ್ಲಿ ಉಂಟಾಗುತ್ತದೆ. ಉಂಟಾಗಲೇಬೇಕುಇನ್ನೇನಿದೆ ! ಕಾವ್ಯ ವಾಗಲಿ ಕವಿತೆ ಅಗಲಿ,ಏನೆ ಆಗಲಿ ಓದುಗನಿಗೆ ತಾಕುತ್ತದೆ.ಅವನು ಸಹೃದಯಿ ಆಗುತ್ತಾನೆ. ಸಾಹಿತ್ಯಿಕ ಚಟುವಟಿಕೆಗಳು ಒಬ್ಬ ಸಹೃದಯಿಯ ಮನಗೆಲ್ಲುವಂತಾದರೆ ಇನ್ನೇನಿದೆ !!

‘ಬಾ’ ಎನ್ನುವ ಪದ ಆಂಗಿಕ ಭಾಷೆಯಲ್ಲಿ ಅರ್ಧ ಕೈ ಎತ್ತಿ ಕರೆದರೆ ಆಯಿತು.ಭಾಷೆಯ ಅಗತ್ಯವೇ ಇಲ್ಲ
ಅದೇ ಈ ‘ ಬಾ ‘ ತೆಲುಗಿನಲ್ಲಿ ‘ರಾ’, ತಮಿಳಿನಲ್ಲಿ ‘ವಾ’ ಮರಾಠಿಯಲ್ಲಿ ‘ ಯಾ ‘
ಹಿಂದಿ ಮೊದಲಾದ ಉತ್ತರ ಭಾರತೀಯ ಭಾಷೆಗಳಲ್ಲಿ ‘ಆ ‘ . ಏಕವರ್ಣ ಪ್ರಯೋಗ. ಅರ್ಥ ಒಂದೇ ಆದರೂ ಭಾಷೆಯ ವೈವಿಧ್ಯತೆ ಖುಷಿ ಎನಿಸಿತು. ಈ ಅಂತರ್ಜಾಲ ಕಾಲದಲ್ಲಿಯಂತೂ
ಮೊಗಹೊತ್ತಿಗೆಯಲ್ಲಿ ಅನೇಕ ತಾಣಗಳಿವೆ,ಗಣಗಳಿವೆ.ಶಬ್ದ ಅರ್ಥ, ವುತ್ಪತ್ತಿಗಳ ಮೇಲೆ ವಿಪುಲವಾದ ಚರ್ಚೆ, ನಮ್ಮ ಶಬ್ದ ಭಂಡಾರವನ್ನು ತುಂಬಿಸುತ್ತವೆ.ಅವುಗಳ ಬೆನ್ನು ಹತ್ತಿ ಹೋಗುವ ಕುತೂಹಲ ಬೇಕು.

ವಿವಿಧರಸಗಳ ಭಟ್ಟಿ, ಸೌದರ್ಯಕಾಮೇಷ್ಟಿ
ಕವಿಜಗತ್ಸೃಷ್ಟಿಯದು ಕಲೆಗನಾಕೃಷ್ಟಿ
ಗವಿಯೊಳಗಣ ಪ್ರಕೃತಿಯಂತರ ವೈಚಿತ್ರವದುವಚನ
ತಪಸೊಂದೆ ಪಥವದಕೆ – ಮಂಕುತಿಮ್ಮ.

೦೦O-OOO.