ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾವ್ಯಕ್ಕೆ ಉರುಳು

ಸಿ. ಎಸ್. ಭೀಮರಾಯ

ಕಾವ್ಯಕ್ಕೆ ಉರುಳು : ಜಾಗತಿಕ ಲೇಖಕರ ದುರಂತ ಬದುಕಿನ ಅನಾವರಣ

ಕಾವ್ಯಕ್ಕೆ ಉರುಳು

ಲೇ-ಡಾ.ರಾಜಶೇಖರ ಮಠಪತಿ(ರಾಗಂ)

ಪುಟ-120

ಬೆಲೆ – 80 Rs 

ಪ್ರಕಾಶನ: ಕಣ್ವ ಪ್ರಕಾಶನ ಬೆಂಗಳೂರು

ಡಾ. ರಾಜಶೇಖರ ಮಠಪತಿ

ಡಾ. ರಾಜಶೇಖರ ಮಠಪತಿ ನಾಡಿನ ಪ್ರಮುಖ ಕವಿ, ಕಥೆಗಾರ, ಕಾದಂಬರಿಕಾರ, ನಾಟಕಕಾರ, ಅಂಕಣಕಾರ, ವಿಮರ್ಶಕ ಮತ್ತು ಪ್ರಗತಿಪರ ಚಿಂತಕ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡಲ್ಲಿಯೂ ಬರಹಗಾರರಾಗಿ ಪ್ರಸಿದ್ಧರಾಗಿರುವ ಡಾ.ರಾಗಂವರ ಬರವಣಿಗೆ ಮುಖ್ಯ ಪ್ರೇರಣೆಯಾಗಿರುವುದು ಲೋಕಜೀವನದ ಮಾನವೀಯ ಮೌಲ್ಯಗಳು. ಲೋಕವಾಸ್ತವ ಸತ್ಯಗಳಿಗೆ ಅವರು ತಮ್ಮ ಸೃಜನಶೀಲ ಬರವಣ ಗೆಯಿಂದ ನಿರಂತರ ಮುಕ್ತವಾಗಿ ಪ್ರತಿಸ್ಪಂಧಿಸುತ್ತಾ ಬಂದಿದ್ದಾರೆ.

ಸತ್ಯದ ವಿವೇಚನೆಗೆ ದುರಂತದ ಕಾಲವಿದು. ಜನಪರ – ಜೀವಪರ ಹೋರಾಟ ಮತ್ತು ಆಲೋಚನೆಗಳ ದುರಂತವೇ ಇದಾಗಿದೆ. ಅದು ಸ್ವಾತಂತ್ರ್ಯ, ಸಮಾನತೆ ಭ್ರಾತೃತ್ವಗಳ ವಿವೇಚನೆ ಸತ್ತು ಹೋದವರ ಮಧ್ಯ ಅತ್ಯಂತ ಅಪಾಯಕಾರಿ ಕ್ರಿಯೆ. ಮನುಕುಲದ ಒಳಿತಿಗಾಗಿ ಕೆಲವೊಮ್ಮೆ ಈ ಪ್ರಪಂಚದಲ್ಲಿ ಒಂದು ಹೊಸ ಆಲೋಚನೆಯೇ ಅಪರಾಧವಾಗುತ್ತದೆಯೆಂಬುವುದಕ್ಕೆ ‘ವಿಶ್ವಗುರು ಬಸವಣ್ಣನ ವಿಚಾರವೇ’ ಸಾಕ್ಷಿ. ಈ ಜಗತ್ತಿನ ಕುರಿತು ನೂರಾರು ಲೇಖಕರು, ತತ್ವಶಾಸ್ತ್ರಜ್ಞರು ನೂರಾರು ರೀತಿಯಲ್ಲಿ ತಮ್ಮದೆಯಾದ ಒಳನೋಟಗಳ ಮೂಲಕ ವ್ಯಾಖ್ಯಾನಿಸಿದ್ದಾರೆ. ಆದರೆ ಈಗ ನಮ್ಮ ಮುಂದಿರುವುದು ಈ ಜಗತ್ತನ್ನು ಹೇಗೆ ಬದಲಾಯಿಸುವುದು ? ಎಂಬ ಪ್ರಶ್ನೆ ಕಾಡುತ್ತದೆ. ಸಮತೆ ಮತ್ತು ಬಂಧುತ್ವಗಳ ಆಧಾರದ ಮೇಲೆ ಜಗತ್ತಿನ ಭವಿಷ್ಯ ರೂಪಿಸಬೇಕಿದೆ. ಅದಕ್ಕಾಗಿ ನಮ್ಮ ಬದುಕು, ಬರಹ ಮತ್ತು ಚಿಂತನೆಗಳು ಗುಲಾಮಗಿರಿಯಿಂದ ಮುಕ್ತವಾಗಿ ಕ್ರಿಯಾಶೀಲವಾಗಬೇಕು.

ಪ್ರಸ್ತುತ ‘ಕಾವ್ಯಕ್ಕೆ ಉರುಳು’ ಕೃತಿಯು ಜಗತ್ತಿನ ಇತಿಹಾಸದ ಸತ್ಯ ಕಥೆಗಳ ಸುತ್ತ ಡಾ. ರಾಗಂವರು ಬರೆದು ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟಿಸಿದ ಇಪ್ಪತ್ಮೂರು ಲೇಖನಗಳನ್ನು ಒಳಗೊಂಡಿದೆ. ಈ ಕೃತಿಯ ಹೆಸರು ಕೇಳುತ್ತಲೇ ಅದೇಕೋ ಒಂಥರ ರೋಮಾಂಚನವುಂಟಾಗುತ್ತದೆ. ಕಾವ್ಯ, ಕಥೆ, ನಾಟಕ, ಅನುವಾದ, ವಿಮರ್ಶೆ – ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮನ್ನು ಅಪಾರವಾಗಿ ತೊಡಗಿಸಿಕೊಂಡ ಡಾ.ರಾಗಂವರ ವಿಭಿನ್ನ ಚಿಂತನಾಲಹರಿ ಇಲ್ಲಿ ಅರಳಿದೆ.

ಈ ಜಗತ್ತಿನ ಸಾಹಿತ್ಯ ಚರಿತ್ರೆಯಲ್ಲಿ ಅನೇಕ ಲೇಖಕರು ತಮ್ಮ ಧಿರೋಧಾತ್ತ ಬರವಣ ಗೆ, ವಿಚಾರ ಮತ್ತು ಹೋರಾಟಗಳಿಂದ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಬಂಡೆದ್ದು ಪಟ್ಟಭದ್ರ ವ್ಯವಸ್ಥೆಯ ಕೆಂಗಣ ್ಣಗೆ ಗುರಿಯಾಗಿ ತಮ್ಮ ಜೀವನವನ್ನೇ ದುರಂತಮಯವನ್ನಾಗಿಸಿಕೊಂಡಿದ್ದಾರೆ. ಅಂಥ ಇಪ್ಪತ್ಮೂರು ಲೇಖಕರ ಬಗ್ಗೆ ಇಲ್ಲಿನ ಬರಹಗಳಿವೆ. ಕಗ್ಗತ್ತಲೆಯ ಲೋಕದಿಂದ ಬಂದ ಅನೇಕ ಬರಹಗಾರರು ಸಾಮಾಜಿಕ ನ್ಯಾಯಕ್ಕಾಗಿ, ಸ್ವಾತಂತ್ರ್ಯ -ಸಮಾನತೆ ಮತ್ತು ಭ್ರಾತೃತ್ವಗಳ ಉಳಿವಿಗಾಗಿ, ಮಾನವೀಯತೆಯ ಅಸ್ತಿತ್ವಕ್ಕಾಗಿ, ಧರ್ಮ-ಜಾತಿ-ಮತ-ಪಂಥಗಳ ಅಸಮಾನತೆಗಳ ವಿರುದ್ಧ ನೊಂದವರ ನೋವಿಗೆ ಓಗೊಟ್ಟು ಸಾಹಿತ್ಯ ಸೃಜಿಸುವ ಜವಾಬ್ದಾರಿಗೆ ಬದ್ಧರಾಗಿದ್ದಕ್ಕಾಗಿಯೇ ದೇಶದಿಂದ ಗಡಿಪಾರಗೊಂಡ, ನೇಣ ಗೆ ಕೊರಳೊಡ್ಡಿದ, ವಿಷಕುಡಿದು ಕಣ್ಮರೆಯಾದ, ನಿಂತ ನೆಲ ಕಳೆದುಕೊಂಡು ನಿರಾಧಾರರಾದ, ಬೇರುಗಡಿತರಾಗಿ ಭವಣೆಯಲ್ಲಿ ಬೆಂದು ನಡೆದ ದಾರಿಯಲ್ಲಿ ದಿಟ್ಟವಾಗಿ ಕ್ರಮಿಸುತ್ತಲೇ ನಿಸ್ಸಂಶಯವಾಗಿ ಇತಿಹಾಸವಾಗಿದ್ದಾರೆ. ದುರಂತವೆಂದರೆ ಒಂದು ಕನಿಷ್ಟ ಜೀವನವೂ ಸಿಗದೆ ವಿನಾಕಾರಣ ಬಲಿಯಾದವರ ನತದೃಷ್ಟ ಬದುಕು ಈ ಕೃತಿಯಲ್ಲಿ ಅನಾವರಣಗೊಂಡಿದೆ. ಇಲ್ಲಿಯ ಲೇಖನಗಳನ್ನು ಕಣ ್ಣನಲ್ಲಿ ಕಣ ್ಣಟ್ಟು ನೋಡಿದರೆ ನಾವು ಬದುಕುವ ವರ್ತಮಾನ ನಮ್ಮದಲ್ಲವೆಂದು ಭಾಸವಾಗುತ್ತದೆ. ಜಗತ್ತಿನ ದುರಂತ ಲೇಖಕರ ನಿಸ್ಸಹಾಯಕ ಸ್ಥಿತಿಯನ್ನು ಅಂಗೈಯಲ್ಲಿ ಹಿಡಿದು ತೋರಿಸುವುದರಿಂದ ‘ಕಾವ್ಯಕ್ಕೆ ಉರುಳು’ ಉತ್ತಮ ಕೃತಿಯೆನಿಸುತ್ತದೆ.

ಮೆಕ್ಸಿಕನ್‍ನ ಶ್ರೇಷ್ಠ ಚಿಂತಕಿ, ಕವಯತ್ರಿ, ರೂಪಸಿ ಹಾಗೂ ಕುಂಚ ಕಲಾವಿದೆಯಾದ ಫ್ರಿದಾ ಕಾಹಲೊವಾಳ ದುರಂತ ಬದುಕನ್ನು ‘ಆಗಸವಾಗುವೆ ನಾನು, ಮಳೆಯಾಗಿಸು ನೀನು’ ಲೇಖನ ಫ್ರಿದಾ ಬಿರುಗಾಳಿಯ ಬೆನ್ನುಹತ್ತಿ ಬದುಕು ಕಟ್ಟಿಕೊಳ್ಳಲು ಹೊರಟು ಕೊನೆಗೆ ತಾನೇ ಸೂತ್ರವಿಲ್ಲದ ಗಾಳಿಪಟದಂತಾಗಿದ್ದು ನಿಜಕ್ಕೂ ದುರಂತದ ಸಂಗತಿ. ಭಯ, ಆತಂಕ, ಹುಚ್ಚು ಸಾಹಸ, ಒಂಟಿತನ, ಮೋಸ, ಅನಾರೋಗ್ಯ, ಹತಾಶೆಗಳಲ್ಲಿಯೇ ಬದುಕಿದ ಫ್ರಿದಾ ಕವಿತೆಗಳ ಮೂಲಕ ತನ್ನ ಒಳಗಿನ ಬೇಗುದಿಯನ್ನು ಬಿಚ್ಚಿಟ್ಟವಳು. ಸಾವಿನ ನೆರಳಲ್ಲಿ ನಿಂತಾಗಲೂ ಫ್ರಿದಾಳ ಉತ್ಸಾಹ, ಜೀವನಪ್ರೀತಿ, ಕೆಚ್ಚೆದೆ ಹೋರಾಟ, ವಿಚಾರಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗುತ್ತವೆ.

ಕಾದಂಬರಿಕಾರ್ತಿ ತಸ್ಲಿಮಾ ನಸ್ರೀನ್.

ಮುಸ್ಲಿಂ ಧರ್ಮದ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಸದಾ ಭೂಗತವಾಗಿ ಜೀವಿಸುತ್ತಿರುವ ಕವಯತ್ರಿ, ಕಾದಂಬರಿಕಾರ್ತಿ ತಸ್ಲಿಮಾ ನಸ್ರೀನ್. ಆಧುನಿಕ ಜಗತ್ತಿನ ಸಾರಸ್ವತ ಲೋಕ ಕಂಡ ದುರಂತ ಬದುಕು ನಸ್ರೀನ್‍ಳದಾಗಿದೆ. ಸದಾ ವಾದ, ವಿವಾದ, ಅಲೆಮಾರಿತನ, ದುರಂತಗಳ ಸರಮಾಲೆ ಬದುಕಿಗೆ ಮತ್ತೊಂದು ಹೆಸರು ತಸ್ಲಿಮಾ ನಸ್ರೀನ್‍ಳದು. ಮುಸ್ಲಿಂ ಧರ್ಮದ ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿದ ನಸ್ರೀನ್‍ಳ ಜೀವನ ಹಿಂಸೆ, ಭಯ, ಆತಂಕ, ತಳಮಳ, ಕಾಡುವ ಏಕಾಂಗಿತನ, ಸಾವಿನೊಂದಿಗಿನ ನಿರಂತರ ಸಂಘರ್ಷ ಅವಳನ್ನು ಸಾಕಷ್ಟು ಗಟ್ಟಿಗೊಳಿಸಿವೆ. ನಸ್ರೀನ್‍ಳ ಸಂಘರ್ಷಮಯ ಬದುಕು ‘ಬೆಂಕಿಯಿಂದ ಬಾಣಲೆಗೆ, ಬಾಣಲೆಯಿಂದ ಬೆಂಕಿಗೆ’ ಬೀಳುತ್ತಲೇ ಮುನ್ನಡೆದಿರುವುದು ಆತಂಕಕಾರಿ ಸಂಗತಿ.

ಇಂಗ್ಲೆಂಡ್‍ನ ಅದ್ಭುತ ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ ಮತ್ತು ಪತ್ರಕರ್ತನಾಗಿದ್ದ ಫ್ರಾನ್ಸಿಸ್ ಆ್ಯಡಮ್ಸ್‍ನ ಬದುಕೆನ್ನುವುದು ದುರಂತಗಳ ದೊಡ್ಡ ಸರಮಾಲೆಯೆಂಬುದಕ್ಕೆ ‘ಕುಸಿದಾಗ ಕತ್ತಲೊಂದೆ ಸಂಗಾತಿ’ ಎಂಬ ಲೇಖನ ಓದಿದಾಗ ಮನಸ್ಸು ಮಮ್ಮಲ ಮರುಗದಿರಲಾರದು. ಫ್ರಾನ್ಸಿಸ್ ಆ್ಯಡಮ್ಸ್ ತನ್ನ ಬೆಂಕಿ ಮಾರ್ಕಿನ ಬರಹಗಳ ಮೂಲಕ ಬೆಂಕಿಯನ್ನೆ ಬಿತ್ತಿ ಬೆಂಕಿಯಂತೆ ಬದುಕಿ, ಕೊನೆಗೆ ಬೆಂಕಿಗೇ ಬದುಕನ್ನು ಅರ್ಪಿಸಿಕೊಂಡ ದುರ್ದೈವಿ ಲೇಖಕನ ಬದುಕಿಗೆ ಈ ಲೇಖನ ಕನ್ನಡಿ ಹಿಡಿಯುತ್ತದೆ. ‘ಸಿದ್ಧಾರ್ಥ’ ಕಾದಂಬರಿ ಮೂಲಕ ವಿಶ್ವಾದ್ಯಂತ ಚಿರಪರಿಚಿತನಾದ ಜರ್ಮನ್ ಲೇಖಕ ಹರ್ಮನ್ ಹೆಸೆನ ಅಸಾಧಾರಣವಾದ ವ್ಯಕ್ತಿತ್ವವನ್ನು ‘ಬದುಕು ಎನ್ನುವುದು ಬರೀ ಶರಣಾಗತಿಯಲ್ಲ’ ಲೇಖನ ಅದ್ಭುತವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗುತ್ತದೆ. ಮಿಶನರಿಗಳ ವಂಶದಲ್ಲಿ ಜನಿಸಿದರೂ ತಾನು ಮಿಶನರಿಯಾಗಲು ಒಪ್ಪದ, ಅಂದಿನ ಕ್ರಿಶ್ಚಿಯನ್ ಸಮಾಜದ ಅಪೇಕ್ಷೆ – ನಿರೀಕ್ಷೆಗಳಿಗೆ ವಿರುದ್ಧವಾಗಿ ‘ವ್ಯಕ್ತಿಯೊಬ್ಬನ ಧರ್ಮ ಯಾವುದೆಂಬುದು ನನಗೆ ಮುಖ್ಯವಲ್ಲ’ ಎಂದು ಘೋಷಿಸಿದ, ಎರಡೂ ವಿಶ್ವ ಸಮರಗಳ ಕಾಲದಲ್ಲಿ ತನ್ನ ಯುದ್ಧ ವಿರೋಧ ನೀತಿಯಿಂದಾಗಿ ‘ದೇಶದ್ರೋಹಿ’ ಎಂದು ತನ್ನ ಸಮಕಾಲೀನರ ದ್ವೇಷ – ತಿರಸ್ಕಾರಗಳಿಗೆ ಗುರಿಯಾದ, ಪುಸ್ತಕ ಮಳಿಗೆಯೊಂದರಲ್ಲಿ ಕೂಲಿಕಾರನಾಗಿ ಜೀವನ ಪ್ರಾರಂಭಿಸಿ ಕೊನೆಗೆ 1946ರಲ್ಲಿ ತನ್ನ ಸಾಹಿತ್ಯ ಸಾಧನೆಗಾಗಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತನಾದ ಅಸಾಧಾರಣ ಪ್ರತಿಭಾಶಾಲಿ ಹರ್ಮನ್ ಹೆಸೆ. ಪೂರ್ವದ ರೋಚಕತೆಯನ್ನು ನಿರಾಕರಿಸಿ ಜೀವನದ ಅರ್ಥದ ಅನ್ವೇಷಣೆಯಲ್ಲಿ ಧೈರ್ಯವಾಗಿ ನಡೆದು ಯಶಸ್ಸು ಪಡೆದ ಹೆಸೆನ ಪಾಲಿಗೆ ‘ಬದುಕು ಎನ್ನುವುದು ಬರೀ ಶರಣಾಗತಿಯಲ್ಲ’ ; ಅದು ನಿರಂತರ ಹೋರಾಟದ ಹಾದಿಯಾಗಿರುತ್ತದೆಯೆಂಬುದನ್ನು ಲೇಖನ ತಿಳಿಸಿಕೊಡುತ್ತದೆ. ಕಪ್ಪು ಜನರ ಕ್ರಾಂತಿ ನಾಯಕ, ಕಪ್ಪು ಜನರ ಸ್ವಾಭಿಮಾನ – ಸ್ವಾತಂತ್ರ್ಯ – ಅರಿವು ಮತ್ತು ಒಗ್ಗಟ್ಟುಗಳ ಸಂಕೇತವಾದ ಮಾಲ್‍ಕಾಮ್ ಘಿ ನ ಕೆಚ್ಚೆದೆಯ ಹೋರಾಟ ಅಪ್ರತಿಮವಾದದ್ದು.

ರಾಷ್ಟ್ರಭ್ರಷ್ಟನಾದ ಮಾಲ್‍ಕಾಮ್ ಘಿನು ಕಪ್ಪು ಜನರು ರಾಜಕೀಯವಾಗಿ, ಸಾಮಾಜಿಕವಾಗಿ,ಆರ್ಥಿಕವಾಗಿ,ಸಾಂಸ್ಕೃತಿಕವಾಗಿ ಬಿಳಿಯರ ಸಂಸ್ಕೃತಿ ಯಿಂದ ಪ್ರತ್ತೇಕವಾಗಬೇಕೆಂದು ಹೋರಾಡಿದ ಮಹಾನ್ ನಾಯಕ. ಮಾಲ್‍ಕಾಮ್ ಘಿನು ತುಟಿಯಿಂದ ಕರಿಯರ ಹಾಡ ಹಾಡುತ್ತಾ, ಎದೆತುಂಬ ಬಂಡಾಯದ ಧ್ವಜ ಬಿತ್ತುತ್ತ ಬಿಳಿಯರ ಗುಲಾಮಗಿರಿ ನೀತಿಗೆ ಸವಾಲಾಗಿ ಬೆಳೆಯುತ್ತಾನೆ. ನಿಗ್ರೋಗಳ ಬದುಕು ಹಸನಾಗಲು ಸಂಘಟನೆ ಕಟ್ಟುತ್ತಾನೆ. ಬಿಳಿಯರ ವಿರುದ್ಧ ದಿಕ್ಕಾರದ ಧ್ವಜ ಹಾರಿಸುತ್ತಾನೆ. ತನ್ನ ಜನರಿಗೆ “ಬುಲೆಟ್ ಆಗದಿದ್ದರೆ ಬ್ಯಾಲೆಟ್ ಆಗಿ” ಎಂದು ಪ್ರಖರವಾಗಿ ನುಡಿಯುತ್ತಾ ಸ್ವಾಭಿಮಾನ, ಸ್ವಾತಂತ್ರ್ಯ, ಸಮಾನತೆ, ಆತ್ಮವಿಶ್ವಾಸಗಳನ್ನು ಮೂಡಿಸಿ ಗುಲಾಮಗಿರಿಯಿಂದ ಮುಕ್ತರಾಗಲು ಪ್ರೇರೆಪಿಸುತ್ತಾನೆ. ಮಾಲ್‍ಕಾಮ್ ಘಿ ನ ಜೀವನ – ಸಾಧನೆಗಳೊಂದಿಗೆ ಅವನ ಏಳು – ಬೀಳುಗಳನ್ನು ಪ್ರಾಮಾಣಿಕವಾಗಿ ಚಿತ್ರಿಸುವ “ಬುಲೆಟ್ ಆಗದಿದ್ದರೆ ಬ್ಯಾಲೆಟ್ ಆಗಿ” ಲೇಖನ ಓದುಗರಲ್ಲಿ ಉತ್ಸಾಹ, ಹೋರಾಟ, ಸ್ವಾಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ.

ನಮ್ಮ ಬದುಕು ಸದಾ ಹರಿಯುವ ನದಿಯಿದ್ದಂತೆ, ಅದಕ್ಕೆ ಕೊನೆಯಿಲ್ಲದ ಪಯಣ. ಈ ಪಯಣದಲ್ಲಿ ನಮ್ಮ ಜೊತೆಗೆ ಯಾವುದೂ ಉಳಿಯುದಿಲ್ಲ. ಆದರೆ ನಮ್ಮೊಂದಿಗಿರುವುದು ನಮ್ಮ ಹೃದಯ ತಟ್ಟಿದ ನೆನಪುಗಳು ಮಾತ್ರ ಉಳಿಯುತ್ತವೆ. ಮಲೆಯಾಳಿ ಸೂಕ್ಷ್ಮಸಂವೇದನೆಯ ಕಥೆಗಾರ್ತಿ, ಕವಯತ್ರಿ, ಕಾದಂಬರಿಕಾರ್ತಿ ರಾಜಲಕ್ಷ್ಮೀಯ ಬದುಕು ಮತ್ತು ಸಾವಿನ ನಿಗೂಢವನ್ನು ಕುರಿತು ಓದಲು ಪ್ರಾರಂಭಿಸಿದರೆ ಬಿಡದೆ ಓದಿಸಿಕೊಂಡು ಹೋಗುವುದರೊಂದಿಗೆ ಚಿಂತನೆಗೆ ಪ್ರೇರೆಪಿಸುವ ಈ ಕೃತಿಯೊಳಗಿನ ಲೇಖನಗಳಲ್ಲಿ ಇದು ಒಂದೆನ್ನಲು ಅಡ್ಡಿಯಿಲ್ಲ. ಓದುತ್ತಾ ಹೋದಂತೆ ಅಲ್ಲಲ್ಲಿ ನಮ್ಮ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುವದರೊಂದಿಗೆ ಮನಸ್ಸು ಒದ್ದೆಯಾಗುತ್ತದೆ. ಕಥೆ, ಕಾದಂಬರಿ ಮತ್ತು ಕಾವ್ಯ ರಾಜಲಕ್ಷ್ಮೀಯನ್ನು ಬೆಸೆದಿತ್ತು. ತನ್ನ ಏಕಾಂಗಿತನ, ಅಂತರ್‍ಮುಖಿ ಸ್ವಭಾವ, ಹತಾಶೆಗಳೊಂದಿಗೆ ಮೂವತ್ನಾಲ್ಕರ ಪ್ರಾಯದಲ್ಲಿ ಬದುಕನ್ನು ಪ್ರಜ್ಞಾಪೂರ್ವಕವಾಗಿ ಆತ್ಮಹತ್ಯೆಯ ಮೂಲಕ ನೀಗಿಸಿಕೊಂಡ ರಾಜಲಕ್ಷ್ಮೀಯ ಕುರಿತು ‘ಖಾಲಿ ಕಡಲಿನ ದೋಣ ’ ಅದ್ಭುತ ಲೇಖನವಾಗಿದೆ.

ಈ ಪ್ರಪಂಚ ಕಂಡ ಅದ್ಭುತ ಚಿಂತಕ ಅಥೇನ್ಸ್‍ದ ಸಾಕ್ರೆಟಿಸ್. ‘ಈ ಸಾವು ಒಂದು ಸುಂದರ ಪಯಣ’ ಲೇಖನ ಸಾಕ್ರೆಟಿಸ್‍ನ ಅಗಾಧ ವ್ಯಕ್ತಿತ್ವವನ್ನು ದರ್ಶಿಸುತ್ತದೆ. ಸಾಕ್ರೆಟಿಸ್ ತನ್ನ ಜೀವನದುದ್ದಕ್ಕೂ ಸತ್ಯವನ್ನೇ ಕಾಲ್ನಡಿಗೆಯಾಗಿ ಮಾಡಿಕೊಂಡು ನಡೆದವನು. ತನ್ನ ಜನರ ಅಜ್ಞಾನದಿಂದ ವಿಷಪ್ರಾಶಾಣಕ್ಕೊಳಗಾಗಿ ಮರಣ ಹೊಂದಿದ ದುರಂತ ಚಿಂತಕ. ಆದರೆ ಸಾವಿನ ಕೊನೆಯ ಕ್ಷಣದವರೆಗೂ ಸತ್ಯದೊಳಗಿನ ಆಸಕ್ತಿ – ಉತ್ಸಾಹಗಳನ್ನು ಆತ ಎಂದೂ ಕಳೆದುಕೊಳ್ಳದ ಛಲವಂತ. ತನ್ನ ಇಡೀ ಬದುಕನ್ನು ಪಣಕೊಡ್ಡಿ ಸತ್ಯವನ್ನೇ ಸ್ಥಾಪಿಸಲು ಹೆಣಗಾಡಿದವನು. ‘ಕಾಲಕತ್ತಲೆಯ ಗುಡಿಸಲಲ್ಲಿ ದೀಪ ಹಚ್ಚಿಟ್ಟಂತೆ ಮಾತಾಡಿದ ಆತನಿಗೆ, ಮಾತು ವ್ಯಸನವಾಗಿರಲಿಲ್ಲ. ಹೀಗಾಗಿ ಸಾವು ಸಹ ಆತನನ್ನು ಸಾಯಿಸಲಾಗಲಿಲ್ಲ,
ಆತನಿಂದ ಚರ್ಚಿಸಲ್ಪಟ್ಟ ಸಾವು ಕೂಡ ಮರುಹುಟ್ಟು ಪಡೆದಿದೆ. ಆತನ ಸಾವು ಚರಿತ್ರೆಯ ಪುಟವಾಗಿದೆ’ ಎಂಬ ಲೇಖಕರ ಮಾತು ಸಹ ಅಷ್ಟೇ ಸತ್ಯ.

ಕನ್ನಡದ ಸಾಹಿತ್ಯಿಕ – ಸಾಂಸ್ಕøತಿಯ ಚಿಂತನೆಯನ್ನು ವಿಸ್ತರಿಸಿದವರಲ್ಲಿ ಮಧುರಚೆನ್ನರು ಒಬ್ಬರು. ಮೃತ್ಯುವಿನ ಲೇಪನವಿಲ್ಲದೆ, ಆಧ್ಯಾತ್ಮದ ಬೆಳಕಿಲ್ಲದೆ ಏನ್ನನ್ನೂ ರಚಿಸಲಿಲ್ಲ ಮಧುರಚೆನ್ನರು. ಸಾವಿನ ಮರ್ಮ, ಬದುಕಿನ ಅರ್ಥ ಮತ್ತು ಉದ್ದೇಶಗಳನ್ನು ಅರಿಯಲು ಹೊರಟ ಅನ್ವೇಷಕ. ಮಧುರಚೆನ್ನರ ಜೀವನ – ಸಾಧನೆಗಳ ವಿವಿಧ ಆಯಾಮಗಳನ್ನು ಗುರುತಿಸುವ ಪ್ರಾಮಾಣ ಕ ಪ್ರಯತ್ನ ‘ದಾಸನಲ್ಲ, ಸತ್ಯದ ಸಂಶೋಧಕ’ ಲೇಖನದಲ್ಲಿ ಸಮರ್ಥವಾಗಿ ಗಮನಿಸಬಹುದಾಗಿದೆ.

ಸಾದತ್ ಹಸನ್ ಮಾಂಟೊನ ಬಂಡಾಯ ಮನೋಧರ್ಮವನ್ನು ‘ಮಾಂಟೊ ಮುಸ್ಸಂಜೆ ಮತ್ತು ಮದಿರೆ ಲೇಖನದಲ್ಲಿ ಓದಿ ಆಶ್ಚರ್ಯನಾದೆನು. ವಸ್ತುಸ್ಥಿತಿಯನ್ನು ಇದ್ದಕ್ಕಿದ್ದಂತೆ ಹೇಳುವಲ್ಲಿ ಅಥವಾ ಅಂತಹ ಸ್ಥಿತಿಗೆ ಮಾಂಟೊ ರ್ತೋಪಡಿಸಿದ ಪ್ರತಿಭಟನೆಯಲ್ಲಿ ಇದನ್ನು ಗಮನಿಸಬಹುದಾಗಿದೆ. ನೇರ ಹಾಗೂ ಗಂಭೀರ ಅಭಿವ್ಯಕ್ತಿಯ ಮೂಲಕವೇ ತನ್ನ ಉದ್ದೇಶ ಸಾಧಿಸುವ ಡಾ.ರಾಗಂವರ ಬರವಣ ಗೆ ಶೈಲಿ ಸಂದರ್ಭೋಚಿತವಾಗಿ ತನ್ನ ಹರಿವಿನ ಸ್ವರೂಪವನ್ನು ಬದಲಿಸಿದ್ದು ಕಂಡುಬರುತ್ತದೆ. ಇಂಥಲ್ಲೆಲ್ಲಾ ಅವರು ಭಾಷೆಗಿರುವ ಸ್ಥಿತಿಸ್ಥಾಪಕ ಗುಣವನ್ನು ಸಮರ್ಥವಾಗಿ ಬಳಸಿಕೊಂಡಿದ್ದು ಗಮನಾರ್ಹವಾಗುತ್ತದೆ.

‘ದಾಸಿಯಾಗಿ ಬಂದಳು, ದಾಸಿಯಂತೆ ಬದುಕಿದಳು’ ಲೇಖನ ಲೇಖಕರ ಅಂತಃಕರಣದ ಮೂಸೆಯಲ್ಲಿ ಆಕಾರ ಪಡೆದಿರುವ ಉತ್ತಮ ಕಲಾಕೃತಿಯೆನಿಸಿದೆ. ಹೆಣ್ಣು ಜೀವನಶಕ್ತಿಯಾಗಿ, ಪೋಷಕಶಕ್ತಿಯಾಗಿ, ತ್ಯಾಗ – ಅಂತಃಕರಣದ ಪ್ರತಿಮೆಯಾಗಿ ನಿಲ್ಲುತ್ತಾಳೆಂಬ ನಿಲುವಿಗೆ ಈ ಲೇಖನವೇ ಸಾಕ್ಷಿ. ಕೆ.ಎ.ಅಬ್ಬಾಸ್‍ರ ಜೀವನ ಏಳ್ಗೆಯಲ್ಲಿ ಮುಜ್ಜಿ ಪಾತ್ರ ಅಪ್ರತಿಮವಾಗಿದೆ. ಮುಜ್ಜಿ ಅಬ್ಬಾಸ್‍ರಿಂದ ಏನನ್ನೂ ನಿರೀಕ್ಷೆ ಮಾಡದವಳು. ಚೈತನ್ಯದ ಚಿಲುಮೆಯಾಗಿದ್ದ ಮುಜ್ಜಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಕೇವಲ ಮೂವತ್ತೆರಡನೆಯ ವಯಸ್ಸಿನಲ್ಲಿ ಮರಣ ಹೊಂದಿದ್ದು ತುಂಬಾ ನೋವಿನ ಸಂಗತಿ. ಬದುಕಿನಲ್ಲಿ ತನಗಾಗಿ ಯಾವ ಸುಖವನ್ನು ಬಯಸದೇ ಬೇರೆಯವರಿಗೆ ತನ್ನೆಲ್ಲಾ ಸಂತೋಷವನ್ನು ಹಂಚಿದವಳು. ಅಬ್ಬಾಸ್‍ರ ಜೀವನದಲ್ಲಿ ಮುಜ್ಜಿ ದಾಸಿಯಾಗಿ ಬಂದಳು, ದಾಸಿಯಂತೆ ಬದುಕಿದವಳು. ಆದರೆ ಸಾವಿನ ಕ್ಷಣದಲ್ಲಿಯೂ ಅವಳಲ್ಲಿದ್ದ ಅದಮ್ಯ ಜೀವನಪ್ರೀತಿ, ಚೈತನ್ಯ, ಉತ್ಸಾಹ, ಸಹಾಯ ಗುಣಗಳು ನಮ್ಮೆಲ್ಲರಿಗೂ ಅನುಕರಣ ೀಯವಾಗಿವೆ.

ಈ ಕೃತಿಯಲ್ಲಿನ ‘ಇಸ್ಲಾಂ ಎಂಬುದು ಕುರುಡು ನಂಬಿಕೆಯಲ್ಲ’, ‘ಆಗಸವಾಗುವೇ ನಾನು, ಮಳೆಯಾಗಿಸು ನೀನು’, ‘ಬೆಂಕಿಯಿಂದ ಬಾಣಲೆಗೆ, ಬಾಣಲೆಯಿಂದ ಬೆಂಕಿಗೆ’, ‘ಉರುಳಿನ ಕೊರಳಿಗೆ ವಿಜಯದ ಮಾಲೆ’, ‘ಧ್ವನಿ ಇದ್ದರೆ ಪ್ರತಿಧ್ವನಿ’, ‘ನಾಯಕನಿಲ್ಲದ ಹಾಡು’, ‘ಬಿರುಗಾಳಿಯ ಮಧ್ಯ ಹಾಡುವುದೇ ಚಂದ’, ‘ಕುಸಿದಾಗ ಕತ್ತಲೊಂದೇ ಸಂಗಾತಿ’, ‘ಬೆತ್ತಲೆಗೆ ಬೆರಗಾಗಬಾರದು’, ‘ಕೈರೊ ನಾಡಿನ ಕಾಡುವ ಕೈದಿ’, ‘ಪ್ರೀತಿಯ ಒಂದು ಹನಿಗಾಗಿ’, ‘ನಲುಗಿದ ನಾಡಿನ ಧ್ವನಿ’, ‘ನಲ್ಲಗೊಲಿದ ನಾಲ್ಕನೆಯವಳು’ – ಹೀಗೇ ಎಲ್ಲಾ ಲೇಖನಗಳು ನನಗೆ ಇಷ್ಟವಾದವು. ಕೆಲವನ್ನಂತೂ ಮತ್ತೆ ಮತ್ತೆ ಓದಿ ಬೆರಗಾದೆ. ಡಾ. ರಾಗಂವರು ಜೀವನವನ್ನು ತುಂಬಾ ಎಚ್ಚರಿಕೆಯಿಂದ ಗ್ರಹಿಸಿದ್ದಾರೆ. ಹರಿತವಾದ ಭಾಷೆ, ನಿರೂಪಣೆ, ವಿಶ್ಲೇಷಣೆ, ವರ್ಣನೆಗಳೆಲ್ಲವು ಕೃತಿಗೆ ಒಂದು ರೀತಿ ಗಂಭೀರತೆಯನ್ನು ಒದಗಿಸಿವೆ.

ಹಾಗೆಯೇ ‘ಕಾವ್ಯಕ್ಕೆ ಉರುಳು’ವಿನಲ್ಲಿನ ಎಲ್ಲಾ ಲೇಖನಗಳು ವಾಸ್ತವಿಕತೆಯ, ವಸ್ತುಸ್ಥಿತಿಯ, ಭೂತ – ವರ್ತಮಾನಗಳ ಅನುಭವದಾಳದಿಂದ ಹೊರಹೊಮ್ಮಿವೆ. ಅಣುಶಕ್ತಿ ಹೊಂದಿದ ಬಾಂಬಿನಂತೆ ಇಲ್ಲಿಯ ಪ್ರತಿಯೊಂದು ಲೇಖನಗಳು ಸ್ಫೋಟಿಸುವುದನ್ನು ಕಂಡಾಗ ಈ ಲೇಖಕರಿಂದ ಮುಂದೆ ಇತಿಹಾಸದ ಸತ್ಯ ಕಥೆಗಳ ಸುತ್ತ ಇನ್ನಷ್ಟು ಕೃತಿಗಳನ್ನು ನಿರೀಕ್ಷಿಸಬಹುದು. ಜಾಗತಿಕ ಸಾಹಿತ್ಯದ ವಿಸ್ತಾರವಾದ ಅಧ್ಯಯನ, ಸಂಶೋಧನ ದೃಷ್ಟಿ, ಅರ್ಥಪೂರ್ಣವಾದ ವಿವೇಚನೆ, ಆಧಾರಸಹಿತವಾದ ಚರ್ಚೆ, ತೌಲನಿಕ ವಿಮರ್ಶೆ ಮುಂತಾದ ಗುಣಗಳಿಂದ ‘ಕಾವ್ಯಕ್ಕೆ ಉರುಳು’ ಕೃತಿ ಕನ್ನಡ ಸಾಹಿತ್ಯಕ್ಕೆ ಒಂದು ನವೀನ ಕೊಡುಗೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

-ಸಿ.ಎಸ್. ಭೀಮರಾಯ (ಸಿಎಸ್ಬಿ)
ಆಂಗ್ಲ ಉಪನ್ಯಾಸಕರು
ಮೊ.ನಂ:9741523806