ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾ ಕಂಡಂತೆ ಕಸ್ತೂರ್ ಬಾ: ಭಾಗ-೩

ಎಚ್ಚಾರೆಲ್

Page 19

ಅನಾನುಕೂಲಗಳು, ಆವಶ್ಯಕತೆಗಳ ಕೊರತೆ, ಎಂದೂ ಕಸ್ತೂರ್ ಬಾರಿಗೆ ಬೇಸರ ತರಲಿಲ್ಲ. ಸ್ವಾತಂತ್ರ್ಯ ಸಮರದ ಸೇನಾನಿಯೊಬ್ಬಳಾಗಿ ಹೋಗಿರುವಾಗ, ತಮಗೆ ಎಲ್ಲಾ ಸುವಿಧತೆಗಳು ಬೇಕೆಂದು ಅಪೇಕ್ಷಿಸುವುದು ತರವಲ್ಲ. ಬಾರವರಿಗೆ ಸರಕಾರ ವಿಧಿಸುತ್ತಿರುವ ಹಿಂಸೆಗಳನ್ನು ಕಂಡು ಜನರು ವಿರೋಧಿಸಿದರು. ಬಾ ರ ಅನಾರೋಗ್ಯ ಎಲ್ಲರಿಗೂ ಚಿಂತೆಗೆ ಕಾರಣವಾಗಿತ್ತು. ಇದಾದಮೇಲೆ ಸರಕಾರದವರು ಬಾರನ್ನು ರಾಜಕೋಟ್ ಜೈಲಿಗೆ ಕರೆತಂದು, ಅಲ್ಲಿಂದ ೧೦-೧೫ ಮೈಲಿಗಳ ದೂರದಲ್ಲಿದ್ದ ಹಳೆಯ ಬಂದಿಖಾನೆಯಲ್ಲಿ ಇಟ್ಟರು. ಅಲ್ಲೇನೋ ಒಂದು ಒಳ್ಳೆಯ ಉದ್ಯಾನವಿತ್ತು. ಮಣಿ ಬೆನ್ ಪಟೇಲ್, ಮೃದುಲಾಬೆನ್ ಸಾರಾಭಾಯಿ, ಬಾ ರ ಜತೆಯಲ್ಲಿರಲು ಸೇರಿಕೊಂಡರು. ಕಸ್ತೂರ್ ಬಾ ಇಲ್ಲಿಂದ ಸ್ವಾರಸ್ಯಕರವಾದ ಪತ್ರಗಳನ್ನು ತಮ್ಮ ಪತಿಗೆ, ಹುಡುಗಿಯರ ಸಹಾಯದಿಂದ ಹೇಳಿ ಬರೆಸುತ್ತಿದ್ದರು. ಕಸ್ತೂರ್ ಬಾ ಗೆಳತಿಯರ ಜತೆ ಸಂತೋಷವಾಗಿದ್ದರೂ ಸಹಿತ, ಬಾಪುರವರ ಆರೋಗ್ಯದ ಬಗ್ಗೆ ಕಾಳಜಿ ಅವರ ಮನಸ್ಸಿನಲ್ಲಿ ಸದಾ ಇರುತ್ತಿತ್ತು.

ರಾಜಕೋಟ್ ನಲ್ಲಿ ಬಾರನ್ನು ಬಂಧನದಲ್ಲಿ ಇಟ್ಟನಂತರ, ಬಾಪೂಜಿ ತಾವೇ ಸ್ವತಃ ರಾಜಕೋಟ್ ಗೆ ಹೋಗಿ ಪತ್ನಿಯನ್ನು ಭೇಟಿಮಾಡುವ ಕಾತುರದಲ್ಲಿದ್ದರು. ನನ್ನ ಅಣ್ಣ, ಪ್ಯಾರೇಲಾಲ್, ಕಾನು ಗಾಂಧಿ, ಮತ್ತು ನಾನು ಬಾಪೂರವರ ಜತೆಯಲ್ಲಿ ಹೋದೆವು. ಬಾಪುರವರನ್ನು ಜೈಲಿನ ಅಧಿಕಾರಿಗಳು ಬಾ ಜತೆ ‘ಸಂವಾದ’ಕ್ಕೆ ಒಪ್ಪಿಸಿದರು. ನಮ್ಮನ್ನೂ ಒಳಗೆ ಬಿಟ್ಟರು. ಈ ಸಲ ಬಾರವರಿಗೆ ಎಲ್ಲ ಸುವಿಧತೆಗಳನ್ನೂ ಸರಕಾರ ಒದಗಿಸಿದ್ದರು. ಬಾ ಗೆ ಬಹಳ ಸಮಯ ಪತಿಯಿಂದ ದೂರವಾಗಿದ್ದದ್ದು, ಅವರ ಬೇಸರಕ್ಕೆ ಕಾರಣವಾಗಿತ್ತು. ‘ಧರ್ಯವಾಗಿ ಎದುರಿಸುತ್ತಿದ್ದೇನೆ’, ‘ಸುಖವಾಗಿದ್ದೇನೆ’ ಎಂದು ಬೇರೆಯವರ ಮುಂದೆ ತೋರಿಸಿಕೊಂಡರೂ, ಅದು ಅದು ಕೇವಲ ಆತ್ಮ ವಂಚನೆಯಾಗಿತ್ತು.

ಇದಾದ ನಂತರ ಬಾಪೂರವರ ರಾಜಕೋಟ್ ಉಪವಾಸ ಸತ್ಯಾಗ್ರಹದ ಮಾತುಗಳು ಕೇಳಿಬರುತ್ತಿದ್ದವು. ಈ ಸುದ್ದಿ ಬಾರವರಿಗೆ ಅಸಮಾಧಾನವಾಯಿತು. ಆದರೆ ಇಂತಹ ಶಾಕ್ ಗಳು ಅವರಿಗೆ ಹೊಸದೇನಾಗಿರಲಿಲ್ಲ. ನಾನು ಇದನ್ನು ಅವರಿಗೆ ಮುಟ್ಟಿಸುವ ಜವಾಬ್ದಾರಿ ಹೊಂದಿದ್ದೆ. ಅವರು ತಮ್ಮ ಮುಖ ಕಿವುಚಿ, ‘ಬಾಪೂರವರ ಉಪವಾಸದ ವರದಿ ಆಗಲಿದೆ’ ಎಂದು ನನಗೆ ತಿಳಿಸಬೇಕಿತ್ತು ಎಂದು ಹೇಳಿದರು. ನನಗೇನು ? ಯಾರಿಗೂ ಇದು ಗೊತ್ತಿರಲಿಲ್ಲ ; ಎಂದು ನಾನು ಅವರಿಗೆ ಹೇಳಿದೆ. ಇವತ್ತು ಬೆಳಿಗ್ಯೆ ನನಗೆ ಬಂದ ಪತ್ರದಲ್ಲಿ ಬಾಪು ವಿಷಯ ತಿಳಿಸಿ ಬರೆದಿದ್ದರು. ಅವರು ಹೆಚ್ಚು ಮಾತಿಗೆ ಅವಕಾಶ ಬರದಂತೆ ತಿಳಿಸಿದ್ದರು.

ಬೇರೆ ಏನೂ ಹೇಳದೆ, ಬಾ ಅಡುಗೆಮನೆಯಲ್ಲಿದ್ದ ಮಹಿಳೆಗೆ ಅವರಿಗಾಗಿ ಅಡುಗೆ ಮಾಡಬಾರದೆಂದು ತಿಳಿಸಿದರು. ಬಾಪು ತಮ್ಮ ಉಪವಾಸ ಮಾಡುತ್ತಿರುವಾಗ ದಿನಕ್ಕೆ ಒಂದು ಊಟ ಮಾತ್ರ ನಾನು ಮಾಡುತ್ತೇನೆ. ಅದೂ ಕೇವಲ ಹಣ್ಣು-ಹಾಲು ಮಾತ್ರ, ಎಂದು ತಿಳಿಸಿದರು. ಗಾಂಧೀಜಿಯವರು ಉಪವಾಸವ್ರತ ಮಾಡುವಾಗಲೆಲ್ಲ ಕಸ್ತೂರ್ ಬಾ ರವರು ಊಟಮಾಡದೇ ಹಣ್ಣು-ಹಾಲುಗಳನ್ನು ಸೇವಿಸಿಯೇ ಜೀವಿಸುತ್ತಿದ್ದರು. ಇದರಿಂದ ಅವರಿಗೆ ಅತಿ ಹೆಚ್ಚು ಶಕ್ತಿ ಉದ್ಭವವಾಗಿ ತಮ್ಮ ಪತಿಯನ್ನು ಸೇವಿಸಲು ಅನುಕೂಲವಾಗುತ್ತಿತ್ತು. ತಪಸ್ಸು, ಹಾಗೂ ಇಂದ್ರಿಯ ನಿಗ್ರಹ ಮಾಡಲು ಅನುಕೂಲವಾಗುತ್ತದೆ, ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ರಾಷ್ಟ್ರೀಯ ಶಾಲೆಯಲ್ಲಿ ಉಪವಾಸ ಪ್ರಾರಂಭವಾದ ಎರಡನೆಯ ದಿನವೋ ಮೂರನೆಯ ದಿನವೋ, ಕಸ್ತೂರ್ ಬಾ ರವರು ಗಾಂಧೀಜಿಯ ಮುಂದೆ ಬಂದು ನಿಂತುಕೊಂಡರು. ಆಶ್ಚರ್ಯದಿಂದ ಬಾಪು, ‘ನೀನು ಇಲ್ಲಿಗೆ ಹೇಗೆ ಬಂದೆ ‘? ಎಂದು ವಿಚಾರಿಸಿದರು. ಆಗ ಬಾ ‘ಸರ್ಕಾರ ತಮಗೆ ಪತಿಯನ್ನು ಭೇಟಿಮಾಡುವ ಇಷ್ಟವಿದ್ದರೆ ಹೋಗಿ ನೋಡಿ’, ಎಂದು ಆದೇಶ ಕೊಟ್ಟಕಾರಣದಿಂದ ಬಂದೆ’ ಎಂದು ಉತ್ತರಕೊಡುವಾಗ ಬಾರವರ ಮುಖದಲ್ಲಿ ಪತಿಯನ್ನು ಕಾಣುವ ಸಡಗರ, ಆತಂಕ, ಸಂಭ್ರಮಗಳನ್ನು ಗುರುತಿಸಬಹುದಾಗಿತ್ತು !

Page 20

ಸರ್ಕಾರಿ ವಾಹನ ತಮ್ಮನ್ನು ಇಲ್ಲಿಗೆ ಕರೆದುತಂದು ಬಿಟ್ಟು ಹೋಗಿದೆ. ಸಾಯಂಕಾಲದವರೆವಿಗೂ ಮತ್ಯಾರೂ ವಾಪಸ್ ಕರೆದುಕೊಂಡು ಹೋಗಲು, ಇನ್ನೂ ಬಂದಿರಲಿಲ್ಲ. ಸರಕಾರ ಬಾ ರವರನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಆದರೆ ನೇರವಾಗಿ ಹೇಳುತ್ತಿರಲಿಲ್ಲ. ಗಾಂಧಿಯವರಿಗೆ ಹೀಗೆ ಬಿಡುಗಡೆ ಮಾಡುವುದು ಸರಿಹೋಗಲಿಲ್ಲ. ಒಂದು ವೇಳೆ ಸರಕಾರ ನಿಜವಾಗಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಇಚ್ಚಿಸಿದರೆ, ವ್ಯವಸ್ಥಿತವಾಗಿ ಮಾಡಬೇಕು. ಇನ್ನಿಬ್ಬರು ಬಂದಿಗಳನ್ನೂ, ಮಣಿಬೆನ್ ಮತ್ತು ಮೃದುಲಾಬೆನ್ ರವರನ್ನೂ ಸಹಿತ, ಸರಿಯಾದ ರೀತಿಯಲ್ಲಿ, ರಾತ್ರಿ ೧೦ ಗಂಟೆಗೆ ಅವರನ್ನು ಬಂದಿ ಗೃಹಕ್ಕೆ ವಾಪಸ್ ಕಳಿಸಿದರು. ಯಾರೋ ಹೇಳಿದರು, ‘ಆಗಾ ಖಾನ್ ಪ್ಯಾಲೇಸ್ ಬಂದಿ ಗೃಹಕ್ಕೆ ಹೋಗುವ ದಾರಿಯಲ್ಲಿ ಖಾಸಗಿ ಕಾರ್ ಗಳು ಹೋಗಲು ‘ಸ್ಪೆಷಲ್ ಪಾಸ್’ ಇಲ್ಲದೆ ಅವಕಾಶವಿಲ್ಲವೆಂದು’. ಬಾಪು ತಮ್ಮ ಪತ್ನಿಯ ಕಡೆ ತಿರುಗಿ, ‘ಸತ್ಯಾಗ್ರಹ ಮಾಡು, ವಾಪಸ್ ಬರಲು ವಿರೋಧಿಸು’. ‘ಬೇಕಾದರೆ ನೀವೆಲ್ಲಾ ಗೆಳತಿಯರು ರಸ್ತೆಯಬದಿಯಲ್ಲಿ ರಾತ್ರಿ ಕಳೆಯಬಹುದು’. ಬಾ ಮಾತಿಲ್ಲದೆ ಒಪ್ಪಿಕೊಂಡರು. ಬಾ ರ ಮನಸ್ಸಿನಲ್ಲಿ ಈಗ ಏನು ನಡೆಯುತ್ತಿರಬಹುದು ? ಅಂಥ ಪತ್ನಿಗೆ ಹಾಸಿಗೆಮೇಲೆ ಉಪವಾಸಮಾಡುತ್ತ ಮಲಗಿರುವ ತಮ್ಮ ಪತಿಯನ್ನು ಅಗಲಿರಲು ಸಾಧ್ಯವೇ ? ಗಾಂಧೀಜಿಯವರು ಇದನ್ನೆಲ್ಲಾ ಸರಕಾರಕ್ಕೆ ವಿವರಿಸಿ, ದೊಡ್ಡ ಪತ್ರಬರೆದರು. ಬಾ ರನ್ನು ರಸ್ತೆಯಲ್ಲಿ ರಾತ್ರಿಯೆಲ್ಲಾ ಅಲ್ಲಿ ಕಳೆಯಲು ಬಿಡಲು ಸಾಧ್ಯವೇ ? ಅದಕ್ಕಾಗಿ ಅವರನ್ನು ಆಗಾಖಾನ್ ಪ್ಯಾಲೇಸ್ ಬಂದಿ ಗೃಹಕ್ಕೆ ವಾಪಾಸ್ ಕರೆದುಕೊಂಡು ಹೋದರು. ಮಾರನೆಯ ದಿನ, ಅವರು ಮತ್ತು ಅವರ ಇಬ್ಬರೂ ಗೆಳತಿಯರನ್ನು ಬಿಡುಗಡೆ ಮಾಡಿದಾಗ, ಅವರೆಲ್ಲರೂ ಮದ್ಯಾನ್ಹ ೩ ಗಂಟೆಗೆ ಬಾಪುರವರ ಹತ್ತಿರಕ್ಕೆ ಬಂದಿದ್ದರು. ಗಾಂಧೀಜಿಯವರ ಅನಾರೋಗ್ಯ ಎಲ್ಲರಿಗೂ ತಳಮಳ ತಂದಿತ್ತು.

14

ತಮ್ಮ ಉಪವಾಸದ ಮುಗಿದಕೂಡಲೇ ರಾಜಕೋಟ್ ನಿಂದ ಬಾಪೂಜಿಯವರು ಕಲ್ಕತ್ತಕ್ಕೆ ಹೋಗಬೇಕಾಗಿ ಬಂತು. ಅಲ್ಲಿಂದ ಬಿಹಾರದ ‘ಬೃಂದಾಬನ್’ ಗೆ ಗಾಂಧೀ ಸೇವಾಸಂಘದ ವಾರ್ಷಿಕ ಸಭೆ’ಯಲ್ಲಿ ಪಾಲ್ಗೊಳ್ಳಲು ಹೋಗಬೇಕು. ಅಲ್ಲಿಂದ ರಾಜಕೋಟ್ ಗೆ ವಾಪಸ್ ಪ್ರಯಾಣ. ದಾರಿಯಲ್ಲಿ ದೆಹಲಿಯಲ್ಲಿ ಒಂದೆರಡು ದಿನ ನಿಂತರು. ಬಾಪೂಜಿಯವರಿಗೆ ಆಗ ಚಳಿ- ಜ್ವರ ಶುರುವಾಯಿತು. ಕಸ್ತೂರ್ ಬಾ ರವರ ನಿತ್ರಾಣ ಪರಿಸ್ಥಿತಿಯಲ್ಲಿ ರೈಲು ಪ್ರಯಾಣ ಸಲ್ಲದು, ಎಂದು ನಾನು ಹೇಳಿದೆ. ಆದರೆ ಬಾಪು, ‘ನನ್ನ ಜತೆಯಲ್ಲಿದ್ದರೆ ಅವರಿಗೆ ಏನೂ ಆಗುವುದಿಲ್ಲ ; ಸುಖವಾಗಿ ನೆಮ್ಮದಿಯಿಂದ ಇರುತ್ತಾರೆ’. ಎಂದು ಹೇಳಿದರು. ಪ್ರಯಾಣದ ಸಮಯದಲ್ಲಿ ಜ್ವರದ ಉಷ್ಣಾಂಶ ೧೦೫ ಡಿಗ್ರಿ ಆಗಿತ್ತು. ನಾನು ಅವರಿಗೆ ಏನು ಸಹಾಯ ಮಾಡಬಹುದೋ, ಅದನ್ನು ಪ್ರೀತಿಯಿಂದ ಮಾಡಿದೆ. ಬಾರವರಿಗೂ ಇದು ಹಿತವಾಯಿತು. ರಾಜಕೋಟ್ ತಲುಪಿದಮೇಲೆ ಮಾಡಿದ ಸರಿಯಾದ ಔಷಧೋಪಚಾರಗಳಿಂದ ಅವರು ಗುಣಮುಖರಾದರು.

Page 21

ಗಾಂಧೀಜಿಯವರು ಬಾಂಬೆಗೆ ‘North-West Frontier Province’ ಮಾರ್ಗದ ಮುಖಾಂತರ ಬಂದರು. ಅಷ್ಟು ದೂರದ ರೈಲು ಪ್ರಯಾಣ ಬಾ ರವರ ಆರೋಗ್ಯಕ್ಕೆ ಒಗ್ಗಲಿಲ್ಲ. ‘Broncho-pneumonia’ ಅಟ್ಯಾಕ್, ಆಯಿತು. ನಾನು ಸೇವಾಗ್ರಾಮಕ್ಕೆ ಹೋಗಿದ್ದೆ. ಗಾಂಧೀಜಿಯವರು ತಕ್ಷಣವೇ ನನಗೆ ವೈರ್ ಮಾಡಿ ಬೇಗ ವಾಪಸ್ ಬರಲು ಹೇಳಿದರು. ನಾನು ಬೊಂಬಾಯಿಗೆ ಬಂದು ತಲುಪಿದಾಗ, ಬಾ ರವರ ಆರೋಗ್ಯ ಅಷ್ಟು ಸಮರ್ಪಕವಾಗಿರಲಿಲ್ಲ. ನಾನು ಕೊಟ್ಟ ಔಷಧಗಳಿಗೆ ಅವರು ಸ್ಪಂದಿಸಿದರು. ನಿಧಾನವಾಗಿ ಜ್ವರ ಕಡಿಮೆಯಾಯಿತು. ಬಾಪು ‘North-West Frontier Province’ ಗೆ ಹೋಗಲು ಹೊರಟು ನಿಂತರು. ಬಾರವರಿಗೂ ತಮ್ಮ ಪತಿಯ ಜತೆ ಹೋಗುವ ಮನಸ್ಸಿತ್ತು. ಅವರು ಅಷ್ಟು ಸಮಯ ರೈಲಿನಲ್ಲಿ ಕುಳಿತುಕೊಳ್ಳುವಷ್ಟು ಶಕ್ತಿಯನ್ನು ಹೊಂದಿರಲಿಲ್ಲ. ಸುಮಾರು ೮-೧೦ ದಿನಗಳ ನಂತರ ಅವರನ್ನು follow ಮಾಡಬೇಕೆಂದು ತೀರ್ಮಾನವಾಯಿತು. ಇತ್ತೀಚಿಗೆ ನಾನು ಕೊಡುತ್ತಿದ್ದ ಔಷಧಗಳ ಬಗ್ಗೆ ಬಾರವರಿಗೆ ವಿಶ್ವಾಸಮೂಡಲು ಶುರುವಾಯಿತು. ಅವರ ಮಾತೃಹೃದಯದ ಪ್ರೀತಿ, ಪ್ರೋತ್ಸಾಹ, ಮತ್ತು ನಂಬಿಕೆ ನನಗೆ ನನ್ನ ಸ್ನಾತಕೋತ್ತರ ಅಧ್ಯಯನ ಮುಂದುವರೆಸಲು, ನನ್ನ ಜ್ಞಾನವನ್ನು ಉತ್ತಮ ಪಡಿಸಿಕೊಳ್ಳಲು, ಅನುವುಮಾಡಿಕೊಟ್ಟಿತು.

ರೈಲುಪ್ರಯಾಣದಲ್ಲಿ Frontier Province, ನಿಂದ ಹಿಂದಿರುಗುವಾಗ, ನಾನು ದೆಹಲಿ ನಿಲ್ದಾಣದಲ್ಲಿ ಇಳಿದೆ. ಸ್ನಾತಕೋತ್ತರ ಅಧ್ಯಯನ ಮಾಡಿ, ಮೆಡಿಸಿನ್ ನಲ್ಲಿ ಡಾಕ್ಟರೇಟ್ ಗಳಿಸುವುದು ನನ್ನ ಉದ್ದೇಶ್ಯವಾಗಿತ್ತು. ಅಲ್ಲಿ ನಾನು ಮನಸ್ಸಿಟ್ಟು ಶ್ರದ್ಧೆಯಿಂದ ಅಭ್ಯಾಸಮಾಡುತ್ತಿದ್ದೆ. ಅಷ್ಟರಲ್ಲಿ ಬಾಪು, ನನಗೆ ಒಂದು ಟೆಲಿಗ್ರಾಮ್ ಕಳಿಸಿ, ‘ನಿನ್ನ ಬಾ ತುಂಬಾ ಅನಾರೋಗ್ಯದಿಂದ ನರಳುತ್ತಿದ್ದಾರೆ’. ‘ನೀನು ಬಂದು ಅವರಿಗೆ ಔಷಧ ಕೊಟ್ಟರೆ ಗುಣಮುಖರಾಗಬಹುದು’. ‘ಬೇಗ ಬರುವುದು’. ಕೂಡಲೇ ನಾನು ಮರು ವೈರ್ ಕಳಿಸಿ, ‘ನನಗೆ ಅಲ್ಲಿಗೆ ಬಾರವರನ್ನು ಕಾಣಲು ಬರುವುದು ಬಹಳ ಸಂತೋಷದ ಸಂಗತಿ. ತಕ್ಷಣವೇ ಹೊರಟು ಬರುತ್ತಿದ್ದೇನೆ’.

ಈ ಮಾತು-ಕತೆಗಳು ನಡೆಯುತ್ತಿರುವಾಗಲೇ, ಬಾ ಒಬ್ಬರೇ ದೆಹಲಿಗೆ ಬಂದುಬಿಟ್ಟರು. ನನಗೆ ಬಹಳ ಹೆದರಿಕೆಯಾಗಿ ಮಹದೇವ್ ಭಾಯ್ ರವರಿಗೆ ಪತ್ರಬರೆದು, ಇಂತಹ ಪರಿಸ್ಥಿತಿಯಲ್ಲಿ ನಿಶ್ಶಕ್ತ ಬಾ ಒಬ್ಬರನ್ನೇ ಕಳಿಸಿಕೊಟ್ಟಿದ್ದು ಸರಿಯಿಲ್ಲವೆಂದು ನನ್ನ ಆತಂಕವನ್ನು ತೋಡಿಕೊಂಡೆ. ಮಹದೇವ್ ರವರು ಕೂಡಲೇ ಜವಾಬು ಕೊಡುತ್ತ, ಬಾಪು ತಮಗೆ ಸೂಚಿಸಿದ್ದರಿಂದ ಬಾರವರನ್ನು ಕಳಿಸಿಕೊಡಲೇ ಬೇಕಾಯಿತು, ಎಂದು ತಮ್ಮ ಅಸಹಕಾಯತೆಯನ್ನು ನನ್ನ ಮುಂದೆ ತಿಳಿಸಿದರು. ನನಗೆ ಸುಮ್ಮನಿರಲು ಆಗದೆ, ‘ಬಾಪು ಮಾಡಿದ್ದು ಸರಿಯಿಲ್ಲ’ ಎಂದು ಹೇಳಿದ್ದನ್ನು ಕೇಳಿಸಿಕೊಂಡ ಬಾ ನನ್ನನ್ನೇ, ‘ನೀನೊಬ್ಳು, ಸುಮ್ನಿರದೇ ದೊಡ್ಡ ಭಾಂಗಣವನ್ನೇ ಮಾಡುತ್ತಿರುವೆ’ ಎಂದು ಆಕ್ಷೇಪಿಸಿದರು. ನಾನು ಮಾಡಿದ್ದು through journey. ಮಹದೇವ್ ನನ್ನ ಜತೆ ವಾರ್ಧಾ ರೈಲ್ವೆ ಸ್ಟೇಷನ್ ಗೆ ಬಂದು, ನನ್ನನ್ನು ರೈಲ್ವೆ ಕೋಚಿನೊಳಗೆ ಕೂಡಿಸಿ, ಜತೆ ಪ್ರಯಾಣಿಕರಿಗೆ ‘ಸ್ವಲ್ಪ ನೋಡಿಕೊಳ್ಳಿ, ಒಬ್ರೇ ಹೋಗ್ತಿದ್ದಾರೆ’ ಎಂದು ಅವರನ್ನು ಕೇಳಿಕೊಂಡು, ಕಳಿಸಿಕೊಟ್ಟರು. ಇಲ್ಲಿಗೆ ಬಂದಾಗ ನೀವೆಲ್ಲ ನನ್ನನ್ನು ಕರೆದುಕೊಂಡು ಹೋಗಲು ರೈಲಿನ ಹತ್ತಿರ ಬಂದಿದ್ದಿರಿ. ಗಾಭರಿಯಾಗುವಂಥದ್ದಾದರೂ ಏನಿದೆ ? ಪ್ರಯಾಣದ ಸಮಯದಲ್ಲಿ ಸುಖವಾಗಿ ಕುಳಿತುಕೊಂಡು ಬಂದೆ. ನನಗೆ ಯಾರ ಜೊತೆಯೇಕೆ ?

ಕಸ್ತೂರ್ ಬಾ, ತಮ್ಮ ಮಗ ದೇವದಾಸ್ ಗಾಂಧಿಯ ಮನೆಯಲ್ಲಿ ಇರುತ್ತಿದ್ದರು. ನಾನು ಬಾರನ್ನು ನೋಡಲು ೨-೩ ಬಾರಿ ಅವರ ಮನೆಗೆ ಹೋಗಿದ್ದೆ.
ಬಾರವರು ವಾಪಾಸ್ ಬಂದನಂತರ, ಅವರನ್ನು ಭೆಟ್ಟಿಮಾಡಲು ನಾನು ಹೋದೆ. ಅಷ್ಟುಹೊತ್ತಿಗೆ ನನ್ನ ಈಸ್ಟರ್ ರಜೆ ಶುರುವಾಗಿತ್ತು. ಆ ಸಮಯದಲ್ಲಿಯೇ ನಾನು ಮೊದಲೇ ಬಾಂಬೆಗೆ ಹೋಗಿ, ಅಲ್ಲಿನ ಆಸ್ಪತ್ರೆಗಳಲ್ಲಿ ಕೆಲವು interesting ಕೇಸ್ ಗಳನ್ನು ಸ್ಟಡಿಮಾಡುವ ಉದ್ಯೇಶವನ್ನು ಹೊಂದಿದ್ದೆ. ಆದರೆ ಗಾಂಧೀಜಿಯವರು ಈಸ್ಟರ್ ರಜೆಯ ಸಮಯದಲ್ಲೇ ಸೇವಾಗ್ರಾಮಕ್ಕೆ ನೇರವಾಗಿ ಬರಲು ಹೇಳಿದರು. ದೆಹಲಿಗೆ ಬಂದ ಬಾರವರು, ಕೇವಲ ನನ್ನ ಬಳಿ treatment ತೆಗೆದುಕೊಳ್ಳುವ ಸಲುವಾಗಿಯೇ ಬಂದಿದ್ದರು. ನಾನು ಅವರನ್ನು ಅಲ್ಲೆಯೇ ಬಿಟ್ಟು ಹೇಗೆ ಹೋಗಲಿ ? ಬಾ ಮಾತ್ರ ಬಹಳ ವಿಶಾಲ ಹೃದಯದವರು. ‘ನಿನ್ನ ರಜಗಳನ್ನು ಸದುಪಯೋಗ ಮಾಡಿಕೋ ; ಈಗ ಸೇವಾಗ್ರಾಮಕ್ಕೆ ಹೋಗು, ಅಲ್ಲಿ ನಾನು ನಿನಗಾಗಿ ಕಾಯುತ್ತಿರುತ್ತೇನೆ’. ಎಂದು ಹೇಳಿದರು. ಏಕೋ ಬಾ ರನ್ನು ಬಿಟ್ಟು ಹೋಗಲು ನನಗೆ ಮನಸ್ಸು ಬರಲಿಲ್ಲ. ಬಾಪೂರವರಿಗೆ ಪತ್ರಬರೆದು ನನ್ನನ್ನು ಕ್ಷಮಿಸಲು ಬೇಡಿದೆ. ಬಾಂಬೆ ಕಾರ್ಯಕ್ರಮ ಕೈಬಿಡಬೇಕಾಯಿತು. ಬಾರವರು ತಾವು ನನ್ನ ಜತೆ ಸ್ವಲ್ಪದಿನ ಇರಲು ಇಷ್ಟಪಟ್ಟರು. ‘ನೀನು ನನಗಾಗಿ ಬೆಳಿಗ್ಯೆ ಸಾಯಂಕಾಲ ಪ್ರಾರ್ಥನೆ ಮಾಡುವೆ ; ನಿನ್ನ ಪ್ರೀತಿ ವಿಶ್ವಾಸಗಳಿಂದ ನನಗೆ ಆಶ್ರಮದಲ್ಲಿಯೇ ಇರುವೆನೆಂಬ ನಂಬಿಕೆ ಮೂಡಿಸುತ್ತಿದ್ದೀಯೇ’ ! ಎಂದು ಪ್ರೀತಿಯಿಂದ ನನ್ನನ್ನು ಮಾತಾಡಿಸುತ್ತಿದ್ದ ಬಾ, ನನಗೆ ಪರಮಾಪ್ತರಾದರು. ಬಾ ರವರ ಪ್ರೀತಿ, ವಿಶ್ವಾಸಗಳಿಂದ ನಾನು ಮೂಕ ವಿಸ್ಮಿತೆಯಾದೆ. ನಾನು ಕೆಲಸಮಾಡುತ್ತಿದ್ದ ದೆಹಲಿಯ ಆಸ್ಪತ್ರೆಯ ನನ್ನ ರೂಮಿಗೆ ಅವರನ್ನು ಕರೆದುಕೊಂಡು ಹೋದೆ.

ದೆಹಲಿಯಲ್ಲಿ ಮಾರ್ಚ್ ತಿಂಗಳ ಕೊನೆ ಹಾಗೂ ಏಪ್ರಿಲ್ ತಿಂಗಳ ಮೊದಲ ಭಾಗದಲ್ಲಿ ಬಹಳ ಸೆಖೆಯಿರುತ್ತದೆ. ನಾನು ಒಂದೆರಡು ಬಕೆಟ್ ನೀರನ್ನು ನನ್ನ ಬೆಡ್ ರೂಮ್ ನ ನೆಲದಮೇಲೆ ಸುರಿದು, ಫ್ಯಾನ್ ಜೋರಾಗಿ ಹಾಕಿದೆ. ರೂಮಿನ ಒಳಗೆ ಸ್ವಲ್ಪ ತಂಪು ಆದಾಗ, ಬಾ ಸುಖವಾಗಿ ನೆಮ್ಮದಿಯಿಂದ ನಿದ್ರೆ ಮಾಡಲೆಂದು. ಆದರೆ ಬಾ ಬಹಳ ಸೂಕ್ಷ್ಮ ದೇಹಸ್ಥಿತಿಯವರು. ಅವರಿಗೆ ಸರಿಹೋದಂತೆ ಕಾಣಿಸಲಿಲ್ಲ. ಮಾರನೆಯ ದಿನ ಅವರ ಜ್ವರ ಇನ್ನೂ ಹೆಚ್ಚಾಯಿತು.

Page 22

ಕಸ್ತೂರ್ಬಾ ಕಾಯಿಲೆ ಉಲ್ಬಣಿಸಿತು. ಅವರಿಗೆ broncho-pneumonia ಆಯಿತು. ಹಳೆಯ B-coli infection ಕೂಡಾ ಈಗ ಮರುಕಳಿಸಿತು. ನನಗೆ ಬಹಳ ಗಾಭರಿಯಾಯಿತು. ಬಾ ನನಗಾಗಿ ದೆಹಲಿಗೆ ಬಂದವರು, ಈಗ ಕಾಯಿಲೆ ಬಿದ್ದಿದ್ದಾರೆ. ನನಗೆ ಅವರಿಗೆ ಯಾವುದೇ ರೀತಿ ಸಹಾಯ ಮಾಡಲು ಆಗುತ್ತಿಲ್ಲ. ಏನುಮಾಡುವುದು ? ಒಂದು ವೇಳೆ ಅವರಿಗೆ ಚೇತರಿಸಿಕೊಂಡು /ಸ್ವಸ್ಥಿತಿಗೆ ಬರಲಾಗದಿದ್ದರೆ, ಬಾಪುಗೇ ಹೇಗೆ ಮುಖತೋರಿಸಲಿ ? ನಾನು ಅವರನ್ನು ಮಗ ದೇವದಾಸ್ ಗಾಂಧಿಯವರ ಮನೆಗೆ ಕರೆದೊಯ್ದೆನು. ದೇವರು ದಯಾಮಯ. ಸರಿಯಾದ ಮದ್ದು ಕೊಟ್ಟಮೇಲೆ ಅವರು ಸುಧಾರಿಸಿಕೊಂಡರು. ಗಾಂಧಿಯವರು, ಬಾ ಸ್ಥಿತಿಹೇಗಿದೆ ತಿಳಿಸು ಎಂದು ಟೆಲಿಗ್ರಾಮ್ ಮೇಲೆ ಟೆಲಿಗ್ರಾಮ್ ಗಳನ್ನು ಕಳಿಸುತ್ತಲೇ ಇದ್ದರು. ಇದಲ್ಲದೆ ಅವರು ತಮ್ಮ ಪತ್ನಿಗೆ ಪ್ರೀತಿಯಿಂದ ಪತ್ರಗಳನ್ನು ಪ್ರತಿದಿನವೂ ಬರೆಯುತ್ತಿದ್ದರು. ಆ ಪತ್ರಗಳು ನನ್ನ ಕಾಲೇಜ್ ವಿಳಾಸಕ್ಕೆ ಬರುತ್ತಿದ್ದವು. ನಾನು ಬಾಪೂರವರ ಪತ್ರಗಳನ್ನು ತೆಗೆದುಕೊಂಡು ಹೋದಾಗ ಅವರ ಮುಖ ಅರಳುತ್ತಿತ್ತು. ಮೊದಲು ಓದಿದಮೇಲೆ ಅವನ್ನು ತಮ್ಮ ತೆಲೆದಿಂಬಿನ ಅಡಿಯಲ್ಲಿಟ್ಟು ನಂತರ ಕನ್ನಡಕವನ್ನು ಹಾಕಿಕೊಂಡು, ತಾವೇ ಹಲವು ಬಾರಿ ಪ್ರತಿ ಅಕ್ಷರ-ಅಕ್ಷರವನ್ನೂ ಓದಿ ಆನಂದಿಸುತ್ತಿದ್ದರು. ಪತಿಯ ಪ್ರೀತಿಯ ಪತ್ರಗಳು ಅವರು ಬೇಗ ಚೇತರಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದವೆಂದು ನನ್ನ ನಂಬುಗೆ. ಅವರು ಸಂಪೂರ್ಣವಾಗಿ ಗುಣಮುಖರಾಗಿ ಚೇತರಿಸಿಕೊಂಡಮೇಲೆ ಮಗ ದೇವದಾಸ್ ಗಾಂಧಿ ತಮ್ಮ ಪರಿವಾರದ ಸಮೇತ ಬಂದು ಸೇವಾಗ್ರಾಮಕ್ಕೆ ಕರೆದುಕೊಂಡು ಹೋದರು. ಈಗ ಅವರ ಅರೋಗ್ಯ ಸುಧಾರಿಸಿಯೆಂದು ಅನ್ನಿಸಿದರೂ, ಸ್ವಲ್ಪ ನಿಶ್ಯಕ್ತಿ ಇನ್ನೂ ಮುಖದಮೇಲೆ ಕಾಣಿಸುತ್ತಿತ್ತು.

15

ನಾನು ಆಗಸ್ಟ್ ೧೯೪೨ ರಲ್ಲಿ ‘Lady Hardinge Medical College’ ನಲ್ಲಿ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ doctorate in medicine ಗೂ ತಯಾರಿಮಾಡಿಕೊಳ್ಳುತ್ತಿದ್ದೆ. ಮೇ ತಿಂಗಳ ಕೊನೆಯಲ್ಲಿ ಉತ್ತೀರ್ಣಳಾದೆ. ಆಗಸ್ಟ್ ಮಧ್ಯಭಾಗಕ್ಕೆ ನನ್ನ ರಿಜಿಸ್ಟ್ರಾರ್ ಟರ್ಮ್ ವಿಸ್ತಾರಗೊಂಡಿತು. ನಾನು ಗಾಂಧೀಜಿಯವರನ್ನು ಬೊಂಬಾಯಿನಲ್ಲಿ ಆಯೋಜಿಸಿದ ಅಖಿಲ ಭಾರತೀಯ ಕಾಂಗ್ರೆಸ್ ಕಮಿಟಿ ಮೀಟಿಂಗ್ ಮುಗಿಸಿ, ಸೇವಾಗ್ರಾಮಕ್ಕೆ ಬಂದಮೇಲೆ ಹೋಗಿ ಅವರ ಜತೆ ಸೇರಲು ಯೋಚಿಸುತ್ತಿದ್ದೆ. ಬೊಂಬಾಯಿನಲ್ಲಿ ಜರುಗಿದ ‘AICC Meeting’ ನಲ್ಲಿ ಸರ್ವ ಮತ ಸಮ್ಮತಿಯಿಂದ ತೆಗೆದುಕೊಂಡ ನಿರ್ಣಯವೇ ‘ಕ್ವಿಟ್ ಇಂಡಿಯಾ ಜಂಟಿ ನಿರ್ಣಯ’ವಾಗಿತ್ತು.

Page 23

‘ಬ್ರಿಟನ್ನಿನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಬೇಡಿ ಎಂದು ಹೇಳಿ ನಿಮ್ಮನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಲು ನಾವು ಇಚ್ಛಿಸುವುದಿಲ್ಲ. ಭಾರತದೇಶದ ಹಿತಾಸಕ್ತಿಗಳನ್ನು ದಮನಮಾಡಲು ಹೊರಟಿರುವ ಸಾಮ್ರಾಜ್ಯ ಶಾಹಿಯ ಕಾರ್ಯಚಟುವಟಿಕೆಗಳನ್ನು ಮಾತ್ರ ಕಾಂಗ್ರೆಸ್ ಸಮಿತಿ ವಿರೋಧಿಸುತ್ತದೆ. ಭಾರತ ತನ್ನ ಮಹಾನ್ ರಾಷ್ಟ್ರ ಹಿತಾಸಕ್ತಿಗಳಿಗೆ ಮತ್ತು ವಿಶ್ವದ ಹಿತಕ್ಕಾಗಿ ಕಟಿಬದ್ಧವಾಗಿ ದುಡಿಯುತ್ತಿರುವುದನ್ನು ವಿರೋಧಿಸುವ ಯಾವುದೇ ದುಷ್ಟ ಶಕ್ತಿಯನ್ನು ಮಹಾಸಾಮ್ರಾಜ್ಯವಾದರೂ ಸರಿಯೆ, ಅದನ್ನು ವಿರೋಧಿಸುತ್ತದೆ. ಇಂಗ್ಲಿಷ್ ಸರಕಾರವು ನಮ್ಮಿಂದ ಕಿತ್ತಿಟ್ಟುಕೊಂಡ ಅಧಿಕಾರವನ್ನು ನಮ್ಮ ದೇಶಕ್ಕೆ ಹಸ್ತಾಂತರ ಗೊಳಿಸುವ ಇಚ್ಛೆಯನ್ನೂ ತೋರಿಸದ ಕೂಟ-ನೀತಿಯನ್ನು ವಿರೋಧಿಸುತ್ತದೆ. ಆದ್ದರಿಂದ ಕಾಂಗ್ರೆಸ್ ಸಮಿತಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಾಮೂಹಿಕವಾಗಿಯೂ ಶಾಂತಿಯುತವಾಗಿಯೂ ಆಗಸ್ಟ್ ೪-೫ ರಂದು ನಡೆಸುವ “ಕ್ವಿಟ್ ಇಂಡಿಯಾ ಅಂದೋಳನ”ದ ವಿಧೇಯಕವನ್ನು ಸರ್ವಾನುಮತದಿಂದ ಅನುಮೋದಿಸುತ್ತದೆ’.
ಕೇಂದ್ರ ಸರಕಾರದ ನೌಕರನೊಬ್ಬ ಮಹಾತ್ಮಾ ಗಾಂಧಿಯವರು ಸೇವಾಗ್ರಾಮಕ್ಕೆ ವಾಪಸ್ ಹೋಗುವಮೊದಲೇ ಅವರು ಅರೆಸ್ಟ್ ಆಗುವ ಸಾಧ್ಯತೆಗಳನ್ನು ಕುರಿತು ಹೇಳಿದ್ದರು.

ಇದನ್ನು ಅರಿತ ನಾನು, ಕೆಲಸಮಾಡುತ್ತಿದ್ದ ‘Lady Hardinge Medical College’ ಪ್ರಾಂಶುಪಾಲರಿಂದ ರಜ ಗಳಿಸಿ, ನನ್ನ ಅಣ್ಣ ಹಾಗೂ ಬಾಪುರವರನ್ನು ನೋಡಲು ೮ ಆಗಸ್ಟ್ ರಂದು ಬೊಂಬಾಯಿಗೆ ಹೋದೆ. ನಾನು ತಲುಪಿದಾಗ ಸಾಯಂಕಾಲವಾಗಿತ್ತು. ನಮ್ಮಣ್ಣ ಮತ್ತು ಗಾಂಧೀಜಿ A.I.C.C Meeting ಗೆ ಹೋಗಿದ್ದರು. ಬಾರವರು ತಮ್ಮ ಪತಿ ಗಾಂಧೀಜಿಯವರ ಜತೆಯಲ್ಲಿ ದಕ್ಷಿಣ ಬೊಂಬಾಯಿನ ‘ಬಿರ್ಲಾ ಹೌಸ್’ ನಲ್ಲಿ ವಾಸವಾಗಿದ್ದರು. ಪತಿಗೆ ಬೇಕಾದ ಕೆಲವು ಕೆಲಸಗಳನ್ನು ಮಾಡಿಕೊಡುವುದರಲ್ಲಿ ತಮ್ಮ ಸಮಯ ಕಳೆಯುತ್ತಿದ್ದರು. ನಾನು ಮೀಟಿಂಗ್ ಸ್ಥಳವನ್ನು ತಲುಪಿದೆ. ಬಾಪು ರವರ ಆಗಸ್ಟ್ ೮ ರಂದು ಆಯೋಜಿಸಿದ್ದ ಭಾಷಣ ಕೇಳುವುದು ನನ್ನ ಇಚ್ಛೆಯಾಗಿತ್ತು. ಎಲ್ಲಾರಿಗೂ ನಾನು ಹೋಗಿದ್ದು ಆಶ್ಚರ್ಯವಾಗಿತ್ತು. ನಾನು ಹೋದ ಕಾರಣವನ್ನು ಎಲ್ಲರಮುಂದೆ ಹೇಳಿದಾಗ, ಅವರೆಲ್ಲ ನನ್ನನ್ನು ಟೀಕಿಸಿದರು. ಮೀಟಿಂಗ್ ಮುಗಿಸಿ ೧೧ ಗಂಟೆಗೆ ವಾಪಸ್ ಮನೆಗೆ ಹೋದೆವು. ಗಾಂಧೀಜಿಯವರು ನಂತರ ಪ್ರಾರ್ಥನೆಗೆ ಕುಳಿತರು. ಕಸ್ತೂರ್ ಬಾ ರವರು ಪತಿಗೆ ಕಾದಿದ್ದು ಅವರನ್ನು ಕರೆದುಕೊಂಡು ತಮ್ಮ ಕೋಣೆಗೆ ಹೋದರು. ನಾವುಗಳೂ ೧೨ ಗಂಟೆಗೆ ನಿದ್ದೆಮಾಡಲು ಹೋದೆವು.

ಬೆಳಿಗ್ಯೆ ಮಾಮೂಲಿನಂತೆ 4 ಗಂಟೆಗೆ ಎದ್ದು ಪ್ರಾರ್ಥನೆ ಮಾಡಿದೆವು. ಮಹದೇವ್ ಭಾಯಿ, ಗಾಂಧಿಯವರಿಗೆ ‘ಮಧ್ಯರಾತ್ರಿ ಒಂದು ಗಂಟೆಯವರೆಗೂ ಟೆಲಿಫೋನ್ ಕರೆಗಂಟೆ ಬಾರಿಸುತ್ತಲೇ ಇತ್ತು’, ಎಂದು ವರದಿ ಸಲ್ಲಿಸಿದರು. ಈ ಗತಿ-ವಿಧಿಗಳನ್ನು ಕಂಡ ನಮಗೆ, ಪೊಲೀಸ್ ಯಾವ ಸಮಯದಲ್ಲಾದರೂ ಗಾಂಧೀಜಿಯವರನ್ನು ಬಂಧಿಸಲು ಬರಬಹುದೆಂದು ಅನ್ನಿಸಿತ್ತು. ಇದನ್ನು ಕೇಳಿದ ಬಾಪು ಮುಗುಳ್ನಕ್ಕು, “ನಿನ್ನೆ ನಾನು ಮಾಡಿದ ಭಾಷಣ ಕೇಳಿದವರ್ಯಾರೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ”. “ಸರ್ಕಾರ ನಾವು ತಿಳಿದಂತೆ ಮೂರ್ಖರಲ್ಲ ; ತಮಗೆ ಬೇಕಾದ ಸ್ನೇಹಿತನೊಬ್ಬನನ್ನು ಅರೆಸ್ಟ್ ಮಾಡಲು” ! ತಮ್ಮ ಭಾಷಣ ಕೊಡುವ ಮೊದಲೇ ಅರೆಸ್ಟ್ ಮಾಡುವ ಆದೇಶವನ್ನು ಸರಕಾರದವರು ಹೊರಡಿಸಿದ್ದರು. ೧ ಗಂಟೆಯ ಬಳಿಕ ಟೆಲಿಫೋನ್ ವೈರುಗಳನ್ನು ಸರ್ಕಾರದ ಕಡೆಯಿಂದ ನಾಯಕರ ಮಾತುಗಳನ್ನು ನಿಷ್ಕ್ರಿಯವನ್ನಾಗಿ ಮಾಡಲು ಕತ್ತರಿಸಲಾಗಿತ್ತು.

ಬಾಪೂರವರ ಜೊತೆಯಲ್ಲಿದ್ದವರೆಲ್ಲಾ ಅವರು ಅರೆಸ್ಟ್ ಆಗುವುದಿಲ್ಲವೆಂದು ನಂಬಿದ್ದರು. ದೆಹಲಿಯಿಂದ ಇಲ್ಲಿಗೆ ಏಕೆ ಓಡಿಬಂದಿರಿ ? ದೆಹಲಿಯ ಕೆಲಸಗಳನ್ನೆಲ್ಲಾ ಪೂರ್ತಿಯಾಗಿ ಮಾಡಿ ಸೇವಾಗ್ರಾಮಕ್ಕೆ ಮರಳಿ ಬರಬಹುದಿತ್ತು. ಎಂದು ಹೇಳಿದರು. ಆದರೆ ಅವರದು ತಪ್ಪು ಅನಿಸಿಕೆಯಾಗಿತ್ತು. ಮುಂಜಾನೆ ೫-೩೦ ಕ್ಕೆ ಮಹದೇವ್ ದೇಸಾಯ್ ಭಾಯಿ ಗಾಂಧೀಜಿಯವರ ರೂಮಿಗೆ ಬಂದು, “ಬಾಪು ನೋಡಿ, ಅವರು ಬಂದೇಬಿಟ್ಟರು”, ಎಂದು ಹೇಳಿದಾಗ, ಅದನ್ನು ಕೇಳಿದ ಬಾಪು ವಿಚಲಿತರಾಗದೆ ಸಮಾಧಾನವಾಗಿದ್ದರು.

Page 24

ನಮಗೆ ತಯಾರಾಗಲು ಎಷ್ಟು ಸಮಯ ಸಿಗುತ್ತೆ ? ಪೊಲೀಸ್ ಆಫಿಸರ್ ಗಳು ಅರ್ಧಗಂಟೆ ಎಂದು ಹೇಳಿದರು. ತನಗೆ ಬೇಕಾದ ಕೆಲವು ಪದಾರ್ಥಗಳನ್ನು ತೆಗೆದುಕೊಂಡ ಮೇಲೆ ನಾವೆಲ್ಲಾ ಒಟ್ಟಾಗಿ ಪ್ರಾರ್ಥನೆಗೆ ಕುಳಿತುಕೊಂಡೆವು. ಕಸ್ತೂರ್ ಬಾ ರವರಿಗೆ ಇಷ್ಟವಾದ ‘હરિને ભજતાં હજી કોઈની લાજ જતાં નથી જાણી રે; જેની સુરતા શામળીયા સાથ, વદે વેદ વાણી રે. હરિને.’.
ಹಾಡನ್ನು ಮಹದೇವ್ ಅವರೇ ಹಾಡಿದರು. ಬಾಪು, ಮಹದೇವ್ ಭಾಯಿ, ಮತ್ತು ಮೀರಾಬೆನ್ ರವರನ್ನು ಅರೆಸ್ಟ್ ಮಾಡಲು ಪೊಲೀಸ್ನೋರು ವಾರೆಂಟ್ ತಂದಿದ್ದರು. ಪ್ಯಾರೇಲಾಲ್ ಮತ್ತು ಬಾ ಬೇಕಾದರೆ ಬಾಪು ಜತೆಗೆ ಹೋಗಬಹುದು. ತಮ್ಮ ಪತ್ನಿಯನ್ನು ಕರೆದು ಬಾಪು ‘ನಾನಿಲ್ಲದೇ ನಿನಗೆ ಇಲ್ಲಿರಲು ಸಾಧ್ಯವಾಗುವುದೇಯಿಲ್ಲವೆನ್ನಿಸಿದರೆ ಮಾತ್ರ ನನ್ನ ಜತೆ ಬರಬಹುದು. ನಿಜ ಹೇಳಬೇಕೆಂದರೆ, ನೀವಿಬ್ಬರು ಜೈಲಿನ ಹೊರಗೇ ಇದ್ದು, ನನ್ನ ಕಾರ್ಯಗಳನ್ನು ನಡೆಸಿಕೊಡುವುದು ನನಗೆ ಬಹಳ ಪ್ರಿಯವಾಗುತ್ತದೆ,’ಯೆಂದು ಹೇಳಿದರು. ಇದನ್ನು ಕೇಳಿದ ಬಾ ಬೇರೆಯೇನೂ ಪ್ರಶ್ನಿಸದೆ ಇರಲು ಒಪ್ಪಿಕೊಂಡರು. ೬ ಗಂಟೆಗೆ ಪೋಲಿಸಿನವರು, ಬಾಪು, ಮಹದೇವ್ ಭಾಯಿ ಮೀರಾಬೆನ್ ರನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋದರು.

16

ಗಾಂಧಿಯವರು ಅರೆಸ್ಟ್ ಆದ ವಿಚಾರ ಬಿರುಗಾಳಿಯಂತೆ ಹಬ್ಬಿತು. ‘ಬಿರ್ಲಾ ಹೌಸ್’ ಗೆ ಜನಗಳೆಲ್ಲ ಗುಂಪು ಗುಂಪಾಗಿ ಬರಲು ಪ್ರಾರಂಭಿಸಿದರು. ಬಾ ಫೋನ್ ಮಾಡಿ ಕೇಳಿದವರಿಗೆ ಉತ್ತರ ಕೊಟ್ಟು ಸುಸ್ತಾದರು. ಪತಿ ದಿಢೀರನೆ ಅರೆಸ್ಟ್ ಆಗುತ್ತಿರುವುದು, ಬಾರವರಿಗೆ ಸುತರಾಂ ಇಷ್ಟವಿರಲಿಲ್ಲ. ಅವರಿಗೆ ಮಾನಸಿಕ ಆಘಾತವಾಯಿತು.

ಬಾಪುರವರು, ದಕ್ಷಿಣ ಬೊಂಬಾಯಿನ ಶಿವಾಜಿ ಪಾರ್ಕ್ ನಲ್ಲಿ ಸಂಜೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡಬೇಕಿತ್ತು. ಬಾರವರು, ಗಾಂಧಿಯವರ ಬದಲು ತಾವೇ ಭಾಷಣ ಮಾಡುವುದಾಗಿ ಹೇಳಿಕೆಕೊಟ್ಟರು. ಜನರು ಇದನ್ನು ಸ್ವಾಗತಿಸಿದರು. ಸರ್ಕಾರಕ್ಕೆ ಈ ವಿಷಯ ತಿಳಿಯಿತು. ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಮೀಟಿಂಗ್ ಗೆ ಹೋಗುವ ದಾರಿಯಲ್ಲೇ ಬಾ ರನ್ನು ಅರೆಸ್ಟ್ ಮಾಡಲಾಗುವುದೆಂದು. ಬಿರ್ಲಾ ಹೌಸಿನಲ್ಲಿ ಬಾಪು, ಬಾ ಜತೆಯಲ್ಲಿದ್ದ ಗೆಳೆಯರು ಬಾರವರ ಸ್ಥಿತಿಯಲ್ಲಿ ಅವರು ತಾವಾಗಿಯೇ ಜೈಲಿಗೆ ಹೋಗುವುದು ಒಳ್ಳೆಯದಲ್ಲವೆಂದು ಅಭಿಪ್ರಾಯಪಟ್ಟರು. ಬಾ ಜತೆಯಲ್ಲಿ ಒಬ್ಬ ಒಳ್ಳೆಯ ವೈದ್ಯೆಯಾಗಿ ನಾನಿದ್ದೆ. ನಾನು ಬಾರವರ ಎಲ್ಲ ಸಾಮಾನುಗಳನ್ನೂ ಎತ್ತಿಕೊಂಡು ಸಾಗಿದೆ. ಕಸ್ತೂರ್ ಬಾ ನನಗೆ ಹೇಳಿ ೨ ಪತ್ರಗಳನ್ನು ಬರೆಸಿದರು. ಒಂದು ಮಹಿಳೆಯರಿಗಾಗಿ, ಎರಡನೆಯದು ಭಾರತದ ಜನತೆಯನ್ನೆಲ್ಲಾ ಉದ್ದೇಶಿಸಿ ಬರೆಸಿದ್ದು. ಮಧ್ಯೆ ಒಮ್ಮೆಯೂ ನಿಲ್ಲಿಸದೆ ಬರೆಸಿದ ಪತ್ರದ ವಿಷಯಗಳು ಅತ್ಯಂತ ಸ್ಪಷ್ಟವಾಗಿದ್ದವು. ನಿಖರವಾದ ಪದಗಳು, ಅವರ ಬಾಯಿನಿಂದ ತಡೆಯಿಲ್ಲದೆ ಬರುತ್ತಿದ್ದವು. ಮಹಿಳೆಯರನ್ನು ಸಂಬೋಧಿಸಿ ಬರೆದ ಪತ್ರ : “ನಿನ್ನೆ ರಾತ್ರಿ ಕಾಂಗ್ರೆಸ್ ಕಮಿಟಿ ಮೀಟಿಂಗ್ ನಲ್ಲಿ ಮಾಡಿದ ೨ ಗಂಟೆ ಸತತ ಭಾಷಣದಲ್ಲಿ, ಬಾಪು ತಮ್ಮ ಮನಸ್ಸಿನ ಆಂತರ್ಯವನ್ನು ಬಿಚ್ಚಿ ಹೇಳಿದ್ದಾರೆ. ಅದಕ್ಕೆ ನಾನೇನು ಸೇರಿಸಲಿ ? ನಮಗಿರುವ ಆಯ್ಕೆಯೆಂದರೆ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ತಾವೆಲ್ಲಾ ದಯಮಾಡಿ ಸಹಕರಿಸಬೇಕು”. ಮಹಿಳೆಯರನ್ನುದ್ದೇಶಿಸಿ ಮಾಡಿದ ಕಸ್ತೂರ್ ಬಾ ರವರ ಭಾಷಣ ಬಹಳ ಮಹತ್ವದ್ದಾಗಿತ್ತು.

Page 25

ಕಸ್ತೂರ್ ಬಾರವರು ತಮ್ಮ ಭಾಷಣವನ್ನು ಮುಂದುವರೆಸುತ್ತಾ, ಮಹಿಳೆಯರು ಆಂದೋಲನದಲ್ಲಿ ಭಾಗವಹಿಸಬೇಕು. ಮಹಿಳಾ ಶಕ್ತಿಯನ್ನು ಪ್ರದರ್ಶಿಸಬೇಕು. ಜಾತಿ, ಧರ್ಮದ ಹಂಗು ತೊರೆದು ಸತ್ಯ, ಮತ್ತು ಅಹಿಂಸೆಯನ್ನು ನಾವೆಲ್ಲ ಪ್ರತಿಪಾದಿಸಬೇಕು. ಸಾಯಂಕಾಲ ನಾಲ್ಕೂ ಮುಕ್ಕಾಲಿಗೆ ಬಾ ಮತ್ತು ನಾನು ಮೀಟಿಂಗ್ ಗೆ ಹೊರಟೆವು. ಬಾಗಿಲಿನಲ್ಲೇ ಪೋಲಿಸ್ ಆಫೀಸರ್ ನಿಂತಿದ್ದರು. “ಅಮ್ಮ ನೀವೇಕೆ ಇದರಲ್ಲಿ ಭಾಗಿಯಾಗುತ್ತೀರಿ. ವಯಸ್ಸಾದಮೇಲೆ ಇವೆಲ್ಲಾ ಮಾಡಬೇಡಿ. ನೀವು ಈಗ ಆರಾಮುಮಾಡಬೇಕು. ನೀವು ಮೀಟಿಂಗ್ ಗೆ ಹೋಗುವುದು ಬೇಡ”. ಅವರ ಮಾತುಗಳು ಒಂದು ತಮಾಷೆಯ ತರಹ ಕಾಣಿಸುತ್ತಿತ್ತು. ಅದ್ಯಾವುದನ್ನೂ ಲೆಕ್ಕಿಸದೆ ಕಾರಿನಲ್ಲಿ ಕೂಡಲು ನಾವಿಬ್ಬರು ಅನುವುಮಾಡಿಕೊಳ್ಳುತ್ತಿದ್ದಾಗ, ನಮ್ಮಿಬ್ಬರನ್ನು ಪೋಲಿಸಿನವರು ಬಂಧಿಸಿದರು. ನಮ್ಮಣ್ಣ ಹಾಗೂ ಖುರ್ಶೆದ್ ಬೆನ್ ಬೇರೆಕಾರಿನಲ್ಲಿ, ಬೇರೆ ರಸ್ತೆಯಲ್ಲಿ ಮೀಟಿಂಗ್ ಗೆ ಹೋಗುವವರಿದ್ದರು. ಪೊಲೀಸ್ ಗೆ ಅವರ ಯೋಜನೆ ಅರ್ಥವಾಗಿ ಮೊದಲು ಅಣ್ಣನನ್ನು ಅರೆಸ್ಟ್ ಮಾಡಿದರು. ಖುರ್ಶೆದ್ ಬೆನ್ ಹೇಗೋ ಪೋಲೀಸರ ಕಣ್ಣು ತಪ್ಪಿಸಿ, ಹಿಂದಿನ ಬಾಗಿಲಿನಿಂದ ಹೊರಟುಹೋದರು. ಮೀಟಿಂಗ್ ನಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಿದ್ದರು. ಆದರೆ ಮೀಟಿಂಗ್ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಿದರು.

ಪ್ರತಿಯೊಬ್ಬ ಅಹಿಂಸಾವಾದಿ ಸತ್ಯಾಗ್ರಹಿಯೂ (करेंगे य मरेंगे) ಎಂದು ಬರೆದ Badge ಧರಿಸಬೇಕೆಂದು ಕರೆಕೊಟ್ಟಿದ್ದರು. ಕಾನುಗಾಂಧಿ ಈ ಮಂತ್ರವನ್ನು ಚೀಟಿಗಳಲ್ಲಿ ಬರೆದು ನಮ್ಮೆಲ್ಲರಿಗೂ ಹಂಚಿದನು. ಬಾಗೂ ಅಂತಹ ಚೀಟಿಕೊಡಲು ಮುಂದಾದಾಗ, “ಇದರ ಅವಶ್ಯಕತೆ ನಮಗೆಲ್ಲಿದೆ ? ನನ್ನ ಎದೆಯಲ್ಲಿ ಆ ಪದಪುಂಜ ಕೆತ್ತಲ್ಪಟ್ಟಿದೆ. ಹೊರಗಡೆ ತೋರಿಸುವ ಅಗತ್ಯವಿಲ್ಲ”, ಎಂದು ಹೇಳಿದರು. ಜೈಲಿನ ವ್ಯಾನ್ ಮತ್ತು ಪೊಲೀಸ್ ಎಲ್ಲರು ಒಟ್ಟಿಗೆ ಬಂದರು. ನಮ್ಮನ್ನು (ನಾನು, ಅಣ್ಣ, ಮತ್ತು ಬಾ) ಅರ್ಥರ್ ರೋಡ್ ಜೈಲಿಗೆ ಕರೆದುಕೊಂಡು ಹೋದರು. ಬಾರವರ ಮುಖದಲ್ಲಿ ದುಖಃ- ಆತಂಕ ಮಡುಗಟ್ಟಿದ್ದನ್ನು ನಾವು ಕಂಡೆವು. ಅವರ ಕಣ್ಣಿನಲ್ಲಿ ನೀರು. ನಾನು “ಬಾ ಯಾಕೆ ಯೋಚನೆ ಮಾಡ್ತೀರಾ” ? ಎಂದಾಗ ಅವರು ಉತ್ತರಕೊಡಲಿಲ್ಲ. ಅವರ ಕೈಯನ್ನು ನನ್ನ ಕೈನಲ್ಲಿ ಅದುಮಿ ಹಿಡಿದಾಗ, ಅವರಿಗೆ ಜ್ವರ ಬಂದಿರುವುದು ತಿಳಿಯಿತು. ನಾನು ಅವರನ್ನು ಸಮಾಧಾನ ಮಾಡಲು ಯತ್ನಿಸುತ್ತಿದ್ದೆ. ಬಾ ಈಗ ಬಾಯ್ಬಿಟ್ಟು ನುಡಿದರು, “ಅವರು ಈ ಬಾರಿ ನಮ್ಮನ್ನು ಜೀವಂತವಾಗಿರಲು ಬಿಡೋದಿಲ್ಲ” “ಈ ಸರ್ಕಾರ ಕೆಟ್ಟತನದ ಪ್ರತಿರೂಪವಾಗಿದೆಯಲ್ಲವೇ “? ಹೌದು ಬಾ, ಇಂತಹ ಧೂರ್ತ ಕಾರ್ಯಗಳು ಅವರಿಗೇನು ಹೊಸದಲ್ಲ; ಈ ಕೆಟ್ಟತನವೇ ಒಂದು ದಿನ ಅವರ ಪತನಕ್ಕೆ ಕಾರಣವಾಗುತ್ತೆ. ಬಾಪು ಇದರ ಮೇಲೆ ಜಯ ಖಂಡಿತ ಸಾಧಿಸುತ್ತಾರೆ.’ ಎಂದು ನಾನು ಬಾರವರ ಮಾತನ್ನು ಸಮರ್ಥಿಸಿದೆ.

Page 26

ನಮ್ಮ ಕಾರು ಬಾಂಬೆಯ ಆರ್ಥರ್ ರಸ್ತೆಯ ಜೈಲಿನ ಮುಂಭಾಗದಲ್ಲಿ ಬಂದು ನಿಂತಿತು. ದಾರಿಹೋಕರು ಅಲ್ಲೆಲ್ಲಾ ನಡೆದಾಡುತ್ತಿದ್ದರು. ಅವರು ನಮ್ಮನ್ನು ಗಮನಿಸಲಿಲ್ಲ. ನನಗೆ ಆಶ್ಚರ್ಯ. ನಾನು ಕಸ್ತೂರ್ ಬಾ. ನಮ್ಮನ್ನು ಅವರ್ಯಾರೂ ಗುರುತಿಸಲೇ ಇಲ್ಲ. ನನ್ನನ್ನು ನಾನೇ ಕೇಳಿಕೊಳ್ಳಲು ಪ್ರಯತ್ನಿಸಿದೆ. ‘ಇವತ್ತು ಏನೆಲ್ಲಾ ಆಗ್ತಿದೆ ; ಅನ್ನೋದು ಅವರಿಗೆ ತಿಳೀತಾನೇ ಇಲ್ವಲ್ಲಾ’ ?

ಜೈಲಿನ ಗೇಟ್ ತೆರೆದಾಗ, ನಾವೆಲ್ಲಾ ಜೈಲು ಆಫೀಸಿನ ಹತ್ತಿರ ಇದ್ದೆವು. ಮಹಿಳೆಯರ ವಿಭಾಗದ ಮೇಟ್ರನ್ ಬಂದು, ನಮ್ಮಿಬ್ಬರನ್ನು ಒಳಗೆ ಕರೆದುಕೊಂಡು ಹೋದರು. ಎರಡು ಕಬ್ಬಿಣದ ಫ್ರೇಮ್ ಗಳು ನಮ್ಮ ರೂಮಿಗೆ ತರಲ್ಪಟ್ಟವು. ಉದ್ದನೆಯ ಮರದ ಹಲಿಗೆಗಳು ಇದರ ಮೇಲೆ ಸೇರಿಸಲ್ಪಟ್ಟಿದ್ದವು. ಕೆಲವೇ ಕೆಲವು ಇಂತಹ ಕಾಟ್ ಗಳು ಮೊದಲನೆಯ ದರ್ಜೆಯ ರಾಜಕೀಯ ಕೈದಿಗಳಿಗೆ ಮಾತ್ರ ಒದಗಿಸಲ್ಪಡುತ್ತವೆ. ಇದರಮೇಲೆ ತೆಂಗಿನ ನಾರಿನ ಹಾಸಿಗೆಯಮೇಲೆ ಹಳೆಯ ಬೆಡ್ ಶೀಟ್ಸ್ ಗಳನ್ನು ಹಾಸಲಾಗಿತ್ತು. ನಾನು ಆ ಹಳೆಯ ಬೆಡ್ ಶೀಟ್ಸ್ ಗಳನ್ನು ವಾಪಸ್ ಕಳಿಸಿದೆ. ಬಾ ಗೆ ಒದಗಿಸಿದ ಹಾಸಿಗೆ ಬಹಳ ಒರಟಾಗಿತ್ತು. ನಾನು ಬಾ ಹತ್ತಿರವಿದ್ದ ಮಗ್ಗುಲು ಹಾಸಿಗೆಯನ್ನು ಅದರಮೇಲೆ ಹಾಸಿ ಅವರನ್ನು ಅದರ ಮೇಲೆ ಮಲಗಿಸಿದೆ. ಅವರ ದೇಹದ ಉಷ್ಣತೆ ೯೯.೬ ಡಿಗ್ರಿ ಇತ್ತು. ಊಟಮಾಡಲು ಅವರು ಇಷ್ಟಪಡಲಿಲ್ಲ. ಬಹಳ ದಣಿದಿದ್ದರಿಂದ ಬೇಗ ನಿದ್ದೆಬಂತು.

17

ಮಧ್ಯ ರಾತ್ರಿ ೨ ಗಂಟೆಗೆ ನಾನು ಎದಾಗ, ಕಸ್ತೂರ್ಬಾ ಆಗತಾನೇ ‘ಟಾಯ್ಲೆಟ್’ ನಿಂದ ತಮ್ಮ ರೂಮಿನಕಡೆಗೆ ಬರುತ್ತಿದ್ದರು. ಮೈಮೇಲೆ ಸ್ವಾಧೀನವಿರುವಂತೆ ತೋರಲಿಲ್ಲ. ತೂರಾಡಿಕೊಂಡು ಬರುವ ತರಹ ಕಾಣಿಸುತ್ತಿತ್ತು. ನಾನು ಎದ್ದು ಹೋಗಿ ಸಹಾಯಮಾಡಿದೆ. ರಾತ್ರಿಯಲ್ಲಿ ಅನೇಕ ಸಲ ಮಲವಿಸರ್ಜನೆಯಾಯಿತಂತೆ. ನನಗೆ ನಿದ್ದೆ ಬರುತ್ತಿತ್ತು. ಬಹಳ ಆಯಾಸವಾಗಿದ್ದರಿಂದ ಬೇಗ ಮಲಗಿದೆ. ಬಾರವರೇ ನನ್ನನ್ನು ಎಬ್ಬಿಸಿದಾಗ ಬೇಸರವಾಯಿತು. ಜೈಲಿನ ಡ್ಯೂಟಿ ಡಾಕ್ಟರ್ ತಮ್ಮ ಬೆಳಗಿನ Visit ನಲ್ಲಿ ನಮ್ಮ ಬ್ಲಾಕಿಗೂ ಬಂದರು. ‘ಬಾ ಗೆ ಏನಾದರೂ ವಿಶೇಷ ಪೌಷ್ಟಿಕ ಡಯಟ್ ಕೊಡಿ’ ಎಂದು ನಾನು ಕೇಳಿದಾಗ, ಅವರು ‘ಏನು ಬೇಕೋ ಅದನ್ನು ಹೊರಗಿನಿಂದ ಕೊಂಡು ತಂದು ಕೊಡಿ, ಪರವಾಗಿಲ್ಲ’ ಎಂದರು. ಜೈಲಿನಲ್ಲಿ ಆ ತರಹ ತರಿಸಿಕೊಡುವ ವ್ಯವಸ್ಥೆಯಿಲ್ಲ. ನನ್ನ ಬಳಿಯಾಗಲೀ ಬಾ ಹತ್ತಿರವಾಗಲೀ ಹಣವಿರಲಿಲ್ಲ. ನಾವು ಹೊರಗೆ ಫೋನ್ ಮಾಡಿ, ನಮ್ಮ ಗೆಳತಿಯರನ್ನು ಸಂಪರ್ಕಿಸಿ ಹಣ ಪಡೆಯುತ್ತೇವೆ, ಎಂದು ಹೇಳಿದೆ. ಅದೂ ಸಾಧ್ಯವಿಲ್ಲ. ಈಗ ಹೊರಗೆ ಯಾರನ್ನೂ ಸಂಪರ್ಕಿಸುವಹಾಗೇ ಇಲ್ಲ. ‘ಇದು ಸರಿಯಿಲ್ಲ. ಆಸ್ಪತ್ರೆಯಿಂದಲಾದರೂ ತರಿಸಿಕೊಂಡು ಕೊಡಿ’, ಎಂದು ಪ್ರಾರ್ಥಿಸಿದೆ. ಅವರಲ್ಲೊಬ್ಬ ಆಫೀಸರ್, ‘ನಮ್ಮ ಕೈದಿಗಳಿಗೆ ಸ್ಪೆಷಲ್ ಡಯಟ್ ಕಳಿಸಿಕೊಡಲು ನಾವು ಆಸ್ಪತ್ರೆಗೆ ಬೇಡಿಕೆ ಸಲ್ಲಿಸುತ್ತೇವೆ ; ನೀವು ಬೇಕಾದರೆ ಕೇಳಿ ಹಣಕೊಟ್ಟು ಕೊಂಡುಕೊಳ್ಳಿ’. ಎಂದು ಭರವಸೆ ಕೊಟ್ಟರು.

Page 27

ನಾನು ಒಬ್ಬ ವೈದ್ಯೆಯೆಂದು ಅವರಿಗೆ ಗೊತ್ತಾದ ಮೇಲೆ ಸ್ವಲ್ಪ ಆಸಕ್ತಿ ಹುಟ್ಟಿ, ಬೇಕಾದ ಔಷಧಿಗಳು ಹಾಗೂ ಕೆಲವು ಹಣ್ಣುಗಳನ್ನು ಕಳಿಸಿಕೊಡುವುದಾಗಿ ವಾಗ್ದಾನ ಮಾಡಿದರು. ನಾನು ಬಾರವರಿಗೆ ಸೇಬಿನ ಹಣ್ಣಿನ ರಸ ಕೊಡಲು ನಿರ್ಧರಿಸಿದೆ. ಹಲವಾರು ಬಾರಿ ಫೋನ್ ಮಾಡಿದ ಮೇಲೆ, ಸಾಯಂಕಾಲದ ಹೊತ್ತಿಗೆ ೨ ಸೇಬಿನಹಣ್ಣುಗಳು ಬಂದವು. ಅವುಗಳಿಂದ ಜ್ಯುಸ್ ತೆಗೆಯಲು ಸಾಧನವಿರವಿಲ್ಲ. ಈ ೨ ಹಣ್ಣಿನಲ್ಲಿ ಎಷ್ಟು ರಸ ಬರಬಹುದು ? ನಮಗೆ ಬೇಕಾಗಿದ್ದ ಔಷಧಗಳೂ ಬರಲಿಲ್ಲ. ಈಗ ಬಾ ಗೆ ಭೇದಿ ಶುರುವಾಯಿತು. ಬಹಳ ಸುಸ್ತಾದರು. ನನಗೆ ಬಹಳ ಆತಂಕವಾಗತೊಡಗಿತು. ಅವರಿಗೆ ಬಹಳ ತಡೆಯಲಾರದ ವೇದನೆ, ಸಂಕಟ ಮತ್ತು ಬೇಸರವಾಗುತ್ತಿತ್ತು. ಅವರ ಹತ್ತಿರ ೨-೩ ಸಲ ಮಾತನಾಡಲು ಪ್ರಯತ್ನಿಸಿದಾಗ ಉತ್ತರಿಸಲಿಲ್ಲ. ನಮ್ಮ ರೂಮಿನಲ್ಲಿ ಗಾಳಿ-ಬೆಳಕು ಇರಲಿಲ್ಲ. ದುರ್ಗಂಧ, ಬಹಳ ಸೆಖೆಯಾಗುತ್ತಿತ್ತು. ವರಾಂಡದ ಮುಂದೆ ಎತ್ತರದ ಗೋಡೆಗಳು ಒಳ್ಳೆಯ ಗಾಳಿ ಬರಲು ತಡೆಯಾಗಿದ್ದವು. ಚರಂಡಿಯಿಂದ ಕೆಟ್ಟ ಗ್ಯಾಸ್ ವಾಸನೆ ಬರುತ್ತಿತ್ತು. ಆ ಅಸಹ್ಯ ವಾಸನೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ನಮಗಿಬ್ಬರಿಗೂ ತಲೆನೋವು ಶುರುವಾಯಿತು. ಮೇಟ್ರನ್ ಒಳ್ಳೆಯ ಹೆಂಗಸು. ಹೊರಗೆ ಬಂದು, ತಮ್ಮ ಜತೆ ವರಾಂಡದಲ್ಲಿ ಕುಳಿತುಕೊಳ್ಳಲು ಆಹ್ವಾನಿಸಿದರು. ಬಾ ರ ಹಾಸಿಗೆಯನ್ನು ಎತ್ತಿಕೊಂಡು ಹೋಗಿ ಅಲ್ಲಿ ಹಾಸಿದಾಗ, ಅವರು ಸ್ವಲ್ಪ ಹೊತ್ತು ಮಲಗಿ ರೆಸ್ಟ್ ತೆಗೆದುಕೊಂಡರು. ಆದರೆ ಬಚ್ಚಲು ಮನೆಯ ವ್ಯವಸ್ಥೆ ಮುಖ್ಯವಾಗಿ ಇರಲಿಲ್ಲ. ನಿಶ್ಯಕ್ತಿಯಿಂದ ನರಳುತ್ತಿದ್ದ ಬಾ ಗೆ ಪ್ರತಿಸರ್ತಿಯೂ Toilet ಗೆ ಹೋಗಿ ಬರುವುದು ಬಹಳ ತೊಂದರೆಯಾಗುತ್ತಿತ್ತು.

ನಾನು ಬಾರನ್ನು ರೂಮಿಗೆ ವಾಪಸ್ ಕರೆದುಕೊಂಡು ಬಂದೆ. ಮೇಟ್ರನ್ ವರಾಂಡಕ್ಕೆ ಹೋಗೋಣವೆಂದು ಪದೇ-ಪದೇ ಹೇಳುತ್ತಿದ್ದರು. ಅವರನ್ನು ಮೆಚ್ಚಿಸಲು ಒಂದು ನಿಮಿಷ ಹೋದಹಾಗೆ ಮಾಡಿ, ವಾಪಸ್ ಬಂದೆ. ಅಷ್ಟು ಹೊತ್ತಿಗೆ ಸಣ್ಣಗೆ ಮಳೆ ಬರಲು ಶುರುವಾಯಿತು. ಇನ್ನೊಬ್ಬ ಮಹಿಳಾ ಬಂದಿ ಶ್ರೀಮತಿ. ಶೀತಲ್ ದಾಸ್, ಎನ್ನುವ ಹೆಸರಿನವರು ನಮ್ಮ ರೂಮ್ಮೇಟ್ ಆಗಿ ಬಂದು ಸೇರಿದರು. ಅವರಿಗೆ ೩-೪ ಜನ ಚಿಕ್ಕ ಮಕ್ಕಳಿದ್ದರು. ಕಿರಿಯ ಮಗ, ೨ ವರ್ಷದ ಮಗುವಿಗೆ ಆರೋಗ್ಯಸರಿಯಿರಲಿಲ್ಲ. ಬಾರವರು ಶೀತಲ್ ಬೆನ್ ಕಂಡು ಮಾತಾಡಿಸುತ್ತಾ ತಮ್ಮ ದುಖಃಗಳನ್ನು ಮರೆತರು. ಆಕೆಯ ಪರಿವಾರದ ಬಗ್ಗೆ ಎಲ್ಲಾ ವಿವರಗಳನ್ನು ಕೇಳಿ, ಆಕೆಗೆ ಸಮಾಧಾನ ಮಾಡುತ್ತಿದ್ದರು. ಕಸ್ತೂರ್ ಬಾ ಭಾರತದ ಲಕ್ಷಗಟ್ಟಲೆ ಮಹಿಳೆಯರಿಗೆ ತಾಯಿಯಂತಾದರು. ಮಿಲಿಯಾಂತರ ಜನ ಕಷ್ಟಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿರುವಾಗ, ಒಬ್ಬಿಬ್ಬರ ಪಾಡೇನು ? ತಮ್ಮ ಕಾರ್ಪಣ್ಯಗಳಿಗಿಂತ ದೇಶದ ಅಪಾರ ಜನಸ್ತೋಮದ ಕಷ್ಟನಿವಾರಣೆಗೆ ತಮ್ಮ ಪತಿಜವಾಬ್ದಾರಿ ಹೊತ್ತಿದ್ದಾರೆ. ಈ ಹೋರಾಟದಲ್ಲಿ ಜಯಶೀಲರಾಗಬಲ್ಲರೇ ?
ಸೋಲು ತಮ್ಮ ಮುಂದೆ ಗರಿಗೆದರಿ ನರ್ತನಮಾಡುತ್ತಿತ್ತು. ‘ಯಾಕೆ ಸುಮ್ಮನೆ ತಲೆ ಕೆಡೆಸಿಕೊಳ್ಳುತ್ತಿರುವಿರಿ ಬಾ’ ಎಂದು ನಾನು ವಾದಿಸಿದೆ. ‘ಬಾಪು ಏನು ಮಾಡಿದರೂ ಯೋಚಿಸಿ ಒಳ್ಳೆಯ ಪ್ರತಿಫಲಕ್ಕಾಗಿಯೇ ಮಾಡಿರುತ್ತಾರೆ. ಅವರು ಯಾರನ್ನೂ ಸುಮ್ಮನೆ ನಂಬುವುದಿಲ್ಲ. ಆ ದಯಮಯನಾದ ಪರಮಾತ್ಮನನ್ನು ಹೊರತು. ಬಾಪು ರವರ ನಿಸ್ವಾರ್ಥ ದೇಶಹಿತ ಕಾರ್ಯಗಳು ಅವರಿಗೆ ಜಯವನ್ನು ತಂದುಕೊಡುವುದರಲ್ಲಿ ಯಾವ ಅನುಮಾನವೂ ಇಲ್ಲ’. ಬಾ ಮಾತನಾಡದೆ ಸುಮ್ಮನಿದ್ದರು. ಭಾರತದ ಮಿಲಿಯಾಂತರ ಜನರ ಆತಂಕಭರಿತ ಮುಖಗಳ ಚಿತ್ರಗಳು ಅವರ ಕಣ್ಣಿನ ಮುಂದೆ ನಿಧಾನವಾಗಿ ಸಾಗುತ್ತಿದ್ದವು.

Page 28

ಹಿಂದಿನಿಂದ ಬಂದ ನಂಬಿಕೆಗಳನ್ನು ಸಾಕಾರಗೊಳಿಸಲು ಬಾರವರಿಗೆ ಸಾಧ್ಯವಾಗುತ್ತಿರಲಿಲ್ಲ. ಮುಖದಲ್ಲಿ ಗೆಲುವಿರಲಿಲ್ಲ ಕಣ್ಣಿನಲ್ಲಿ ಕಾಂತಿಯಿರಲಿಲ್ಲ. ಮೊದಲನೆಯ ದಿನ ನಾನು ಬಾ ಬಹಳ ಬೇಗ ಮಲಗಿದೆವು. ನಮ್ಮ ರೂಮನ್ನು ಹೊರಗಡೆಯಿಂದ ಲಾಕ್ ಮಾಡಿರುವ ವಿಷಯ ಬೆಳಿಗ್ಯೆ ಎದ್ದಾಗ ನಮಗೆ ಗೊತ್ತಾಯಿತು. ಎರಡನೆಯ ದಿನ ಹೊಸ ಜೊತೆಗಾರರು ಹಾಸಿಗೆಗಳನ್ನು ವರಾಂಡಕ್ಕೆ ತಂದು ಹಾಸಿದರು. ಈ ಬಾರಿ ನಮ್ಮನ್ನು ಒಳಗೆ ಕೂಡಿಹಾಕುವ ಪದ್ಧತಿಯನ್ನು ಪ್ರತಿಭಟಿಸಿದೆವು. ಮೇಟ್ರನ್, ಇದನ್ನು ಕೇಳಿ ತಬ್ಬಿಬ್ಬಾಗಿ ಜೈಲರ್ ಹತ್ತಿರ ವರದಿಮಾಡಲು ಹೋದರು, ಜೈಲರು ಸುಮ್ಮನಿರಲು ಹೇಳಿ, ನನಗೆ ತಿಳಿದಂತೆ ಹೇಗಿದ್ದರೂ ಇವರುಗಳು ಇವತ್ತಿನ ರಾತ್ರಿ ಇಲ್ಲಿ ಮಲಗುವುದಿಲ್ಲ. ವರಾಂಡದ ಹವಾ ರೂಮಿಗಿಂತ ಸ್ವಲ್ಪ ಉತ್ತಮವಾಗಿತ್ತು. ಉಸಿರುಕಟ್ಟುವ ವಾತಾವರಣವಿದ್ದರೂ ಕೊಳಚೆ ವಾಸನೆ ಇರಲಿಲ್ಲ. ಆಗಲೇ ಸುಸ್ತಾಗಿದ್ದ ಬಾ ತಕ್ಷಣ ನಿದ್ದೆಹೋದರು. ಶ್ರೀಮತಿ ಶೀತಲ್ ದಾಸ್ ಹಾಗೂ ನಾನು ಹರಟೆಹೊಡೆಯುತ್ತಾ ಮಲಗಿದ್ದೆವು. ಆಕೆಯ ಹತ್ತಿರ ಗಾಂಧೀಜಿಯವರ ಸಾರಥ್ಯದ ‘ಹರಿಜನ್ ಪತ್ರಿಕೆ’ ಇತ್ತು. ಅದನ್ನು ನಾನು ಆಮೂಲಾಗ್ರವಾಗಿ ಓದಿದೆ. ಸಾಯಂಕಾಲದ ಪ್ರೇಯರ್ ಹೊತ್ತಿಗೆ ಬಾ ಏಳುವುದನ್ನೇ ನಾವು ಕಾಯುತ್ತಿದ್ದೆವು. ಆದರೆ ಬಾ ೯ ಗಂಟೆಯ ತನಕ ನಿದ್ದೆಮಾಡುತ್ತಿದ್ದರು. ಅಷ್ಟುಹೊತ್ತಿಗೆ ಮೇಟ್ರನ್ ಬಂದು, ಬಾ ಮತ್ತು ನೀವು ೧೧ ಗಂಟೆಗೆ ಇಲ್ಲಿಂದ ಹೋಗಬೇಕೆಂದು ಹೇಳಿದರು. ನಾನು ತಕ್ಷಣ ಎದ್ದು ನನ್ನ ಹಾಸಿಗೆ ಸುತ್ತಿ ಮಡಿಸಿಟ್ಟು ನನ್ನ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿದೆ. ಬಾ ಮಲಗಿದ್ದರಿಂದ ಅವರನ್ನು ಎಬ್ಬಿಸುವುದು ಬೇಡವೆಂದು ಭಾವಿಸಿದೆವು. ನಮ್ಮ ಕೆಲಸಗಳೆಲ್ಲಾ ಮುಗಿದ ಬಳಿಕ ಬಾರನ್ನು ಕೂಗಿ ಎಬ್ಬಿಸಿದೆವು. ಪ್ರೇಯರ್ ರೂಮಿಗೆ ಹೋಗಿ ಕುಳಿತು ‘ರಾಮಧುನ್ ಭಜನೆ’ ಹಾಡಿದೆವು. ಜೈಲರ್ ಮತ್ತು ಅವರ ಜೊತೆಗಾರರು ಅಲ್ಲಿಗೆ ಬಂದರು. ಶ್ರೀಮತಿ, ಶೀತಲ್ ದಾಸ್ ನಾನು ಜೈಲು ಡಾಕ್ಟರ್ ಹತ್ತಿರ ಬಾ ರ ಡಯಟ್ ಬಗ್ಗೆ ವಿಚಾರಿಸುತ್ತಿದ್ದಿದ್ದನ್ನು ಕೇಳಿಸಿಕೊಂಡರು. ತಮ್ಮ ಹಣದ ಪರ್ಸ್ ಕೊಡುತ್ತ, ‘ನಿಮಗೆ ಏನುಬೇಕೋ ಅದನ್ನು ಖರೀದಿಸಿ’, ಎಂದು ಹೇಳಿದರು. ಪರ್ಸ್ ನಲ್ಲಿ ೨೦ ರೂಪಾಯಿಗಳಿತ್ತು. ನಾನು ೫ ರೂಪಾಯಿನ ಒಂದು ನೋಟನ್ನು ತೆಗೆದುಕೊಂಡೆ. ಶೀತಲ್ ದಾಸ್, ಬಣ್ಣದ ಸೀರೆಗಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ನನ್ನ ಸೀರೆಯೊಂದನ್ನು ಅವರಿಗೆ ಕೊಟ್ಟೆ. ನನಗೆ ಒಂದು ಸಮಾಧಾನ. ಅವರಿಂದ ೫ ರೂಪಾಯಿ ಸಾಲದ ಋಣ ನನ್ನಮೇಲಿದೆಯಲ್ಲ ! ಹೀಗಾದರೂ ಅದನ್ನು ತೀರಿಸುವ ಸಂದರ್ಭ ಬಂದಿದ್ದಕ್ಕೆ ದೇವರನ್ನು ಮನಸಾರೆ ಪ್ರಾರ್ಥಿಸಿದೆ. ಆಗಾಖಾನ್ ಗೃಹಬಂಧನದಿಂದ ಮುಕ್ತಗೊಂಡನಂತರ ಎರಡು ವರ್ಷಗಳ ಮೇಲೆ ನಾನು ಶೀತಲ್ ದಾಸ್ ರನ್ನು ಬಾಂಬೆಯಲ್ಲಿ ಭೆಟ್ಟಿಮಾಡಿದೆ. ಆಗ ಕಸ್ತೂರ್ ಬಾ ಬದುಕಿರಲಿಲ್ಲ. ‘ನೀವು ಸಾಲ ಕೊಟ್ಟ ೫ ರೂಪಾಯಿ ಹಣವನ್ನು ದಯಮಾಡಿ ಸ್ವೀಕರಿಸಿ’, ಎಂದು ಎಷ್ಟು ಕೇಳಿಕೊಂಡರೂ ಅವರು ತೆಗೆದುಕೊಳ್ಳಲು ನಿರಾಕರಿಸಿದರು. ನಾನು ಆ ಹಣವನ್ನು ‘ಹರಿಜನ್ ಕಾಣಿಕೆ ಡಬ್ಬಿಗೆ’ ಹಾಕಿದೆ.

ಜೈಲ್ ಸೂಪರಿಂಟೆಂಡೆಂಟ್ ನಮ್ಮ ಲಗೇಜನ್ನು ತನ್ನ ಆಫೀಸಿಗೆ ತೆಗೆದುಕೊಂಡು ಹೋದ. ಬಾ ಗೆ ಹೆದರಿಕೆ. ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ? ಯರವಾಡ ಜೈಲಿಗೋ ; ಇಲ್ಲ ಬಾಪೂರವರ ಹತ್ತಿರಕ್ಕೋ ? ಇದೇ ಪ್ರಶ್ನೆಯನ್ನು ಬಾ ಮೇಟ್ರನ್ ಗೂ ಕೇಳಿದ್ದರು. ಆಕೆ ನಕ್ಕು, ಉತ್ತರ ಕೊಡಲಿಲ್ಲ. ಸೂಪರಿಂಟೆಂಡೆಂಟ್ ಗಾಗಲಿ ಮೇಟ್ರನ್ ಗಾಗಲಿ ಮುಂದಿನ ಗತಿವಿಧಿಗಳು ಗೊತ್ತಿರಲಿಲ್ಲ. ‘ದಯಮಾಡಿ ನನಗೆ ಹೇಳಿ’ ಎಂದು ಬಾ ಮತ್ತೆ ಪೀಡಿಸಿದಾಗ, ಅವರು, ‘ನಿಮ್ಮ ಪತಿ ಬಾಪುರವರ ಬಳಿ ‘; ಎಂದು ಹೇಳಿದಮೇಲೆ ನಮ್ಮಿಬ್ಬರಿಗೂ ಸಮಾಧಾನವಾಯಿತು.

Page 29

ಜೈಲಿನ ಅಧಿಕಾರಿಗಳು ನಮ್ಮಿಬ್ಬರನ್ನು ರೈಲ್ವೆ ಸ್ಟೇಷನ್ ಗೆ ಕರೆದುಕೊಂಡು ಹೋಗಿ, Waiting room ನಲ್ಲಿ ಕೂಡಿಸಿದರು. ನನಗೆ ಕಣ್ಣು ಹತ್ತಿತ್ತು. ಬಾ ಲವಲವಿಕೆಯಿಂದ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದರು. ರೈಲ್ವೆ ಸ್ಟೇಷನ್ ನ ಶಬ್ದಗಳು ಕೇಳಿಸುತ್ತಿದ್ದವು. ರೈಲುಗಳು ಬರುವುದು, ಹೋಗುವುದು , ಜನರ ಓಡಾಟ, ಪ್ರಯಾಣಿಕರು ಸಿಗರೇಟ್ ಸೇದುತ್ತ ಮಾತಾಡಿಕೊಂಡು ಹೋಗುವ ಶಬ್ದ, ಕೂಲಿಗಳು ಸಾಮಾನು ಸಾಗಿಸುವಾಗ ಮಾಡುವ ಕೂಗಾಟಗಳೆಲ್ಲವನ್ನು ಬಾ ಗಮನಿಸುತ್ತಾ ಕುಳಿತಿದ್ದರು. ಪಕ್ಕದಲ್ಲಿ ಕುಳಿತಿದ್ದ ನನ್ನನ್ನು ನೋಡಿ, ಬಾ ‘ನೋಡು ಹೇಗೆ ಈ ಪ್ರಾಪಂಚಿಕ ವ್ಯಾಪಾರಗಳೆಲ್ಲ ನಡೆದುಕೊಂಡು ಹೋಗುತ್ತಿವೆ. ಬಾಪು ಮತ್ತು ಅವರ ಸಹಯೋಗಿಗಳು ಪಡುತ್ತಿರುವ ಕಷ್ಟ ಕೋಟಲೆಗಳ ಪರಿವೆಯೇ ಇಲ್ಲದಂತೆ ಈ ಜನ ಹೇಗೆ ಓಡಾಡ್ತಿದಾರೆ ನೋಡು’ ? ಹೀಗಿದ್ದರೆ, ಹೇಗೆ ತಾನೇ ಬಾಪು ಸ್ವರಾಜ್ಯ ಸಾಧಿಸ್ತಾರೆ ‘? ಬಾ ರವರ ಮಾತಿನಲ್ಲಿ ತೀವ್ರವಾದ ನೋವು, ಕಳವಳ, ಕಾಣಿಸುತ್ತಿತ್ತು. ಇಂತಹ ಉದಾತ್ತ ಭಾವನೆಗಳನ್ನು ಹೊತ್ತು ಸತಿ-ಪತಿಯರಿಬ್ಬರೂ ಪಡುತ್ತಿರುವ ಕಷ್ಟವನ್ನು ಕಣ್ಣಾರೆ ಕಂಡು ನನ್ನ ಹೃದಯ ಮರುಗಿತು. ನಾನು ಬಾರವರನ್ನು ಸಾಂತ್ವನ ಗೊಳಿಸುತ್ತಾ, ‘ಎಲ್ಲಾ ಸರಿಹೋಗುತ್ತದೆ, ಏಕೆ ವ್ಯಥೆಪಡುತ್ತೀರಿ’ ಎಂದು ಹೇಳಿದೆ. ಪೊಲೀಸ್ ಅಧಿಕಾರಿಗಳು ನಮ್ಮ ಬಳಿ ಬಂದು ‘ಫಸ್ಟ್ ಕ್ಲಾಸ್ ಡಬ್ಬಿ’ಯಲ್ಲಿ ನಮ್ಮಿಬ್ಬರನ್ನು ಕೂಡಿಸಿ ಪೂನಾಕ್ಕೆ ಕಳಿಸಿಕೊಟ್ಟರು.

18

ಬೆಳಗಿನ ೭ ಗಂಟೆಗೆ ರೈಲು ಒಂದು ಚಿಕ್ಕ ಸ್ಟೇಷನ್ ನಲ್ಲಿ ನಿಂತಿತು. ನಮ್ಮನ್ನು ಕರೆದುಕೊಂಡು ಹೋಗಲು ಒಬ್ಬ ಪೊಲೀಸ್ ಆಫೀಸರ್ ಬಂದಿದ್ದರು. ರಾತ್ರಿಯೆಲ್ಲಾ ಭೇದಿಯಾಗಿದ್ದ ಪ್ರಯುಕ್ತ ಬಾ ಬಹಳ ನಿಶ್ಯಕ್ತರಾಗಿದ್ದರು. ಪೊಲೀಸ್ ಬಾರನ್ನು ಕುರ್ಚಿಯಮೇಲೆ ಕೂಡಿಸಿಕೊಂಡು, ಸ್ಟೇಷನ್ ಹೊರಗಡೆ ಕರೆದೊಯ್ಯಲು ಪ್ರಶ್ನಿಸಿದಾಗ, ಬಾ ‘ಕುರ್ಚಿಬೇಡ ನಾನು ನಡೆದೇ ಹೋಗುತ್ತೇನೆ’ ಎಂದು ಆಗ್ರಹ ಮಾಡಿದರು. ಪುಣ್ಯಕ್ಕೆ ಹೆಚ್ಚು ದೂರ ಹೋಗಬೇಕಾಗಿರಲಿಲ್ಲ. ಹೊರಗೆ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರನ್ನು ತಲುಪಲು ನಡೆದು ಹೋಗಲು ೨-೩ ನಿಮಿಷಗಳು ಆದವು. ಅರ್ಧಗಂಟೆಯ ಒಳಗೆ ನಾವಿಬ್ಬರು ಆಗಾ ‘ಖಾನ್ ಪ್ಯಾಲೇಸ್ ಬಂದಿಗೃಹ’ದ ಹೊರಗಿನ ಗೇಟ್ ಮುಂದೆ ಇದ್ದೆವು. ಮಿಲಿಟರಿ ಗಾರ್ಡ್, ಪ್ಯಾಲೇಸ್ ನ ಕಬ್ಬಿಣದ ಬಾಗಿಲನ್ನು ತೆರೆದನು. ಕಾರ್ ಒಳಗೆ ೫೦ ಅಡಿ ದೂರಸಾಗಿ, ಪೊರ್ಚ್ ಕೆಳಗೆ ನಿಂತಿತು. ಇತ್ತೀಚಿಗೆ ಹೊಸದಾಗಿ ಮುಳ್ಳಿನ ತಂತಿ ಬೇಲಿಯನ್ನು ಹಾಕಿದ್ದುದಾಗಿ ತಿಳಿಯಿತು. (ಬಾಪೂರವರು ಬಂಧನಲ್ಲಿರುವಾಗ) ಒಳಗೆ ಹೋಗಲು ಮೆಟ್ಟಿಲುಗಳನ್ನು ಹತ್ತಿಹೋಗಬೇಕು. ಕಸ್ತೂರ್ ಬಾರಿಗೆ ಮೇಲೆ ಹತ್ತಲು ನಾನು ಮತ್ತು ಸಿಪಾಯಿಗಳು ಸಹಾಯಮಾಡಿದೆವು. ಬಂಧಿಗಳಲ್ಲಿ ಕೆಲವರು ಅಲ್ಲಿನ ಅಂಗಳದ ಕಸ ಹೊಡೆಯುತ್ತಿದ್ದರು. ‘ಬಾಪು ಯಾವ ರೂಮಿನಲ್ಲಿದ್ದಾರೆ’ ? ಎಂದು ಕೇಳಿದಾಗ, ಅವರು ಬೆರಳು ಮಾಡಿ ತೋರಿಸಿದರು. ನನ್ನ ಸಹಾಯದಿಂದ ಬಾ ನಡೆದು, ಬಾಪೂರವರ ರೂಮನ್ನು ತಲುಪಿದರು. ಬಾಪು ಕುಳಿತ ಹಾಸಿಗೆಯ ಮೇಲೆ ಅನೇಕ ಕಾಗದಗಳ ಫೈಲುಗಳನ್ನು ಪೇರಿಸಿಟ್ಟಿದ್ದರು. ಒಂದು ಪೆನ್ಸಿಲ್ ಹಿಡಿದು ಅವರು ಕರಡು ಪ್ರತಿಗಳನ್ನು ಪರಿಶೀಲಿಸುತ್ತಿದ್ದರು. ಪಕ್ಕದಲ್ಲಿ ನಿಂತಿದ್ದ ಮಹದೇವ್ ಬಾಪೂರವರ ಜತೆ ಏನೋ ಮಾತುಕತೆ ನಡೆಸುತ್ತಿದ್ದರು. ನಾವು ಬಂದಿದ್ದು ಅವರ ಗಮನಕ್ಕೆ ಬರಲಿಲ್ಲ.

Page 30

ಮಹದೇವ್ ಗೆ ನಾವು ಕಾಣಿಸಿದಕೂಡಲೇ ಸ್ವಾಗತವನ್ನು ಬಯಸಿ, ಸಂತೋಷದಿಂದ ಆಹ್ವಾನಿಸಿದರು. ಆದರೆ ಬಾಪು ಕಿಡಿಕಾರುತ್ತಿದ್ದರು. ದುರ್ಬಲರಾಗಿರುವ ಬಾಗೆ ತಮ್ಮಿಂದ ದೂರವಿರಲು ಅಸಾಧ್ಯವೆಂದು ತಿಳಿದಾಗ ಸರ್ಕಾರಕ್ಕೆ ಮನವಿಮಾಡಿದ್ದೆ ತನ್ನ ಬಳಿ ತಕ್ಷಣ ಕಳಿಸಿಕೊಡಲು. ಬಾ ಕಡೆ ತಿರುಗಿ ಬಾಪೂರವರು, ‘ನೀನು ಸರಕಾರಕ್ಕೆ ಇಲ್ಲಿಗೆ ಕಳಿ ಸಿಕೊಡಲು ಮನವಿ ಮಾಡಿದ್ದೆಯಾ’ ? ಅಥವಾ ‘ಅವರೇ ನಿನ್ನನ್ನು ಇಲ್ಲಿಗೆ ಕಳಿಸಿಕೊಡಲು ನಿರ್ಧರಿಸಿದರೆ’ ? ಬಾಪುರವರ ಧ್ವನಿಯಲ್ಲಿ ಉದ್ವೇಗವಿತ್ತು. ಬಾ ಸ್ವಲ್ಪ ತಡವರಿಸುತ್ತ, ತಮ್ಮ ಪತಿ ಏನನ್ನು ಪ್ರಶ್ನಿಸುತ್ತಿದ್ದಾರೆ, ಎನ್ನುವುದು ಸರಿಯಾಗಿ ಅರ್ಥವಾಗದೇ ಇರುವಾಗ, ನಾನು ಮಧ್ಯೆ ಪ್ರವೇಶಿಸಿ ಬಾಪು, ‘ನಮ್ಮನ್ನು ಸರ್ಕಾರ ಅರೆಸ್ಟ್ ಮಾಡಿ ಇಲ್ಲಿಗೆ ಕರೆತಂದಿದ್ದಾರೆ’ ಎಂದು ಹೇಳಿದೆ. ಈಗ ಬಾಗೆ ತಮ್ಮ ಪತಿ ಯಾಕೆ ಹೀಗೆ ಪ್ರಶ್ನಿಸುತ್ತಿದ್ದಾರೆ ಎನ್ನುವ ಬಗ್ಗೆ ಸ್ವಲ್ಪ ಸ್ವಲ್ಪ ಅರ್ಥವಾಗತೊಡಗಿತು. ಇಲ್ಲ. ಇಲ್ಲ.. ‘ನಾನೇನು ಮನವಿ ಮಾಡಿಕೊಳ್ಳಲಿಲ್ಲ; ಸರ್ಕಾರ Arrest ಮಾಡಿ ನಮ್ಮಿಬ್ಬರನ್ನು ಇಲ್ಲಿಗೆ ಕರೆದುಕೊಂಡು ಬಂದು ಬಿಟ್ಟರು’; ಬಾರವರು ಅಸ್ಪಷ್ಟವಾಗಿ ಉತ್ತರಿಸಿದರು. ಪೊಲೀಸ್ ಆಫೀಸರೊಬ್ಬ ಬಂದು, ‘ನಿಮ್ಮ ಲಗೇಜ್ ಗಳು ಸರಿಯಾಗಿವೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿ’, ಎಂದು ಹೇಳಿದರು. ನನಗೆ ಬಾ ಮೆಟ್ಟಿಲಿಳಿದು ಪೊರ್ಚ್ ಹತ್ತಿರ ಪಾರ್ಕ್ ಮಾಡಿರುವ ಕಾರ್ ನಲ್ಲಿ ಇರುವ ಸಮಾನುಗಳನ್ನು ಪರಿಶೀಲಿಸುವುದು ಇಷ್ಟವಾಗಲಿಲ್ಲ. ಆದರೂ ಒಮ್ಮೆ ಚೆಕ್ ಮಾಡೋದು ಒಳ್ಳೆಯದೆಂದು ಬಾರವರು ತಮ್ಮ ಅಭಿಪ್ರಾಯ ತಿಳಿಸಿದರು. ಬಾ ಏನೇ ಕೆಲಸ ಮಾಡಿದರೂ ಕ್ರಮಬದ್ಧವಾಗಿ ಮಾಡುತ್ತಿದ್ದರು. ಬಹಳ ಚಟುವಟಿಕೆಯಿಂದಿದ್ದರು. ಈಗ ಪತಿಯ ಸಾನ್ನಿಧ್ಯದಲ್ಲಿ ಇರುವಾಗ ಅವರ ಆತ್ಮ ಸ್ಥೈರ್ಯ ಇನ್ನೂ ಹೆಚ್ಚಿತ್ತು. ಕಸ್ತೂರ್ ಬಾರ, ಅರೋಗ್ಯ ಚೆನ್ನಾಗಿಲ್ಲವೆಂದು ಕೇಳಿದ್ದ ಮಹದೇವ್ ಅವರಿಗಾಗಿ ಒಂದು ಹೊಸ ಹಾಸಿಗೆಯ ವ್ಯವಸ್ಥೆ ಮಾಡಿದರು. ನಮ್ಮ ಲಗೇಜ್ ಚೆಕ್ ಮಾಡುತ್ತಿದ್ದಾಗ ನಮ್ಮ ಹೊಸ ಜೈಲ್ Superintendent ಮಿ. ಕಟೇಲಿಯವರ ಪರಿಚಯವಾಯಿತು. ನಾವುಗಳು ಬಾಪುರವರ ರೂಮಿಗೆ ಹೋಗಿ ಬಂದಿರುವುದು ಅವರಿಗೆ ಗೊತ್ತಿರಲಿಲ್ಲ. ಅತ್ಯಂತ ಗೌರವ, ಹಾಗೂ ಮಿಲಿಟರಿ ಶಿಸ್ತಿನಿಂದ ಕಸ್ತೂರ್ಬಾರವರನ್ನು ಅವರ ಪತಿಯ ರೂಮಿಗೆ ಎಸ್ಕಾರ್ಟ್ ಮಾಡಿದರು.

ಬಾರವರನ್ನು ಹಾಸಿಗೆಯಮೇಲೆ ಮಲಗಿಸಿ, ಅವರಿಗೆ ಕೊಡಬೇಕಾಗಿದ್ದ ಔಷಧಗಳ ಪಟ್ಟಿಯನ್ನು ಬರೆದು ಕೊಟ್ಟಾಗ, ಮಿ. ಕಟೇಲಿಯವರು ಕೆಮಿಸ್ಟ್ ಹತ್ತಿರಹೋಗಿ ಔಷಧಿಗಳನ್ನು ಕೊಂಡು ತರಲು, ಒಬ್ಬರನ್ನು ಸೈಕಲ್ ಕೊಟ್ಟು ಕಳಿಸಿದರು. ಆದರೆ ಬಾ ಅನುಭವಿಸುತ್ತಿದ್ದ diarrhoea, nervous type ಆಗಿತ್ತು. ಪತಿಯನ್ನು ಭೇಟಿಮಾಡಿದ ಕೂಡಲೇ ಹೇಗೋ ಅವರ ಆರೋಗ್ಯ ಸ್ವಲ್ಪಮಟ್ಟಿಗೆ ಸುಧಾರಿಸಿತು. ಮಾರನೆಯ ದಿನದಿಂದಲೇ ಬಾ ಚಿಕ್ಕ-ಪುಟ್ಟ ಮನೆಯ ಕೆಲಸಗಳನ್ನು ತಾವೇ ತೋಚಿಕೊಂಡು ಮಾಡಲು ಆರಂಭಿಸಿದರು. ಆಗ, ಆಗಾ ಖಾನ್ ಪ್ಯಾಲೇಸ್ ನಲ್ಲಿ ಸೊಳ್ಳೆ, ನೊಣ, ಮತ್ತು ಚಿಕ್ಕ-ಚಿಕ್ಕ ಕೀಟಗಳು ರೂಮಿನಲ್ಲಿ ಬರಲಾರಂಭಿಸಿದವು. ಗಾಂಧೀಜಿಯವರು ಸಾಮಾನ್ಯವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಮಯದಲ್ಲೇ ನಿದ್ರಿಸುತ್ತಿದ್ದರು. ಈಗ ಈ ಕೀಟಗಳು ಬಹಳ ತೊಂದರೆಕೊಡಲಾರಂಭಿಸಿದವು. ಮಹದೇವ್ ಭಾಯ್ ಸ್ವಲ್ಪ ಸಮಯ ಬೀಸಣಿಗೆಯಲ್ಲಿ ಗಾಳಿ ಬೀಸಲು ಪ್ರಯತ್ನಿಸುತ್ತಿದ್ದರು. ಬಾರವರು ಮಹದೇವ್ ರವರನ್ನು ರಿಲೀವ್ ಮಾಡಿ, ಮಸಾಜ್ ಸಮಯದಲ್ಲಿ ಕುರ್ಚಿಯಮೇಲೆ ಕುಳಿತು ತಾವೇ ಬೀಸಣಿಗೆಯಿಂದ ಗಾಳಿ ಬಿಸುತ್ತಾ ಇದ್ದರು.

Page 31

19

ಬಾಪು, ಆಗಾಖಾನ್ ಪ್ಯಾಲೇಸ್ ಗೃಹಬಂಧನಕ್ಕೆ ರವಿವಾರ ೯, ಆಗಸ್ಟ್, ಸೇರಿಸಲ್ಪಟ್ಟರು. ಮಂಗಳವಾರ ಪ್ರಾತಃಕಾಲ ನಾನು ಮತ್ತು ಬಾ ಅಲ್ಲಿಗೆ ಹೋದೆವು. ಬಾಪು ಬಾಂಬೆಯ ಗವರ್ನರ್ ಸರ್, ‘ರೋಜರ್ ಲ್ಯೂಮ್ಲೆ’ ರವರಿಗೆ ಪತ್ರಬರೆದು ಮುಗಿಸಿದರು. ಮಹದೇವ್ ಆ ಪತ್ರದ ಕರಡುಪ್ರತಿಯನ್ನು ಸಂಪಾದಿಸಿ ‘ಪಕ್ಕಾ ಪ್ರತಿ’ಯನ್ನು ತಯಾರಿಸಿ, ಸೂಪರಿಂಟೆಂಡೆಂಟ್ ರವರ ಹತ್ತಿರ ಕೊಟ್ಟು ಪೋಸ್ಟ್ ಮಾಡಲು ಹೇಳಿದರು. ಇದು, ಆಗಾಖಾನ್ ಪ್ಯಾಲೇಸ್ ನಿಂದ ಬರೆದ ಮೊದಲ ಲೆಟರ್ ಆಗಿತ್ತು. ತಾವು ಅನುಭವಿಸುತ್ತಿರುವ ಪೊಲೀಸ್ ದೌರ್ಜನ್ಯಗಳ ವಿವರಗಳನ್ನು ದಾಖಲಿಸಿದ್ದರು. ಚಿಂಚ್ವಾಡ ರೈಲ್ವೆ ಸ್ಟೇಷನ್ ನಲ್ಲಿ ಒಬ್ಬ ಯುವಕನಿಗೆ ಮಾಡಿದ ಹಿಂಸಾಚಾರಗಳನ್ನು ಕಣ್ಣಾರೆ ಕಂಡಿದ್ದರು. ಬಂಧಿತರಿಗೆ ಓದಲು ವರ್ತಮಾನ ಪತ್ರಿಕೆಗಳನ್ನು ಒದಗಿಸಬೇಕು, ಎನ್ನುವುದು ಮತ್ತೊಂದು ಮುಖ್ಯ ಬೇಡಿಕೆಯಾಗಿತ್ತು. ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರನ್ನು ಇಲ್ಲಿಗೆ ಕರೆಸಿ ಬಾಪೂರವರ ಜೊತೆಯಲ್ಲಿರಲು ಅನುವುಮಾಡಿಕೊಡಬೇಕು. ಅರೆಸ್ಟ್ ಆಗುವ ಮೊದಲು ಪಟೇಲರು ಬಾಪೂರವರ ‘nature cure’ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಟೇಲರ ಮಗಳು ಮಣಿಬೆನ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಲೆಟರ್ ಪೋಸ್ಟ್ ಮಾಡಿದಮೇಲೆ, ಸರ್ದಾರ್ ಪಟೇಲ್ ಇಲ್ಲಿಗೆ ಬಂದರೆ ಅವರಿಗೆ ಯಾವ ಕೊಠಡಿ ಕೊಡಬೇಕೆಂಬ ಬಗ್ಗೆ ನಾವು ಯೋಚಿಸುತ್ತಿದ್ದೆವು. ಸರ್ದಾರ್ ಪಟೇಲ್, ಆಗಾ ಖಾನ್ ಪ್ಯಾಲೇಸ್ ಗೆ ಬರುವ ವಿಷಯ ತಿಳಿದು ಕಸ್ತೂರ್ ಬಾ ಬಹಳ ಸಂತೋಷಪಟ್ಟರು. ಪಟೇಲ್ ಒಬ್ಬ ಹಾಸ್ಯಪ್ರಿಯ ವ್ಯಕ್ತಿ. ಹಲವಾರು ವಿಷಯಗಳನ್ನು ಸ್ವಾರಸ್ಯವಾಗಿ ವಿವರಿಸಿ, ಎಲ್ಲರನ್ನೂ ನಗಿಸುತ್ತಿದ್ದರು. ತಮಾಷೆಮಾಡುವುದರಲ್ಲಿ ಪಟೇಲರು ನಿಪುಣರು. ಬಾಪು ಸಹಿತ ನಮ್ಮೆಲ್ಲರನ್ನೂ ನಗಿಸಿ ಗೋಳ್ಹೊಯ್ಕೋತಿದ್ದರು. ಆದರೆ ಗಾಂಧೀಜಿ ಮತ್ತೆ ಎಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವರೋ, ಎನ್ನುವ ಆತಂಕ ಸದಾ ಮಹದೇವ್ ರವರನ್ನು ಕಾಡುತ್ತಿತ್ತು. ಪಟೇಲ್ ಸಾನ್ನಿಧ್ಯ ಈ ನಿಟ್ಟಿನಲ್ಲಿ ಸ್ವಲ್ಪ ಸಹಾಯಮಾಡಬಹುದೇನೋ, ಎಂದು ಬಾರವರಿಗೆ ಸಂತೋಷವಾಯಿತು. ಪಟೇಲ್ ಮತ್ತು ಅವರ ಪುತ್ರಿ ಮಣಿಬೆನ್ ಬರ್ತಿರೋ ವಿಷಯ ತಿಳಿದಮೇಲಂತೂ ಎಲ್ಲರಿಗೂ ಏನೋ ಸಮಾಧಾನ, ಧರ್ಯ. ಒಟ್ಟಿನಲ್ಲಿ ಎಲ್ಲರೂ ಪಟೇಲ್ ಬರುವಿಕೆಯನ್ನು ಆತುರದಿಂದ ಕಾಯುತ್ತಿದ್ದರು.

ಮಾರನೆಯ ದಿನ ಬಾಪು, ವೈಸ್ ರಾಯ್ ರವರಿಗೆ ಪತ್ರಬರೆಯಲು ಯೋಚಿಸಿದರು. ‘ಮೊದಲು ನಾನು ಡ್ರಾಫ್ಟ್ ತಯಾರುಮಾಡುತ್ತೇನೆ. ನೀವೆಲ್ಲ ಎಚ್ಚರಿಕೆಯಿಂದ ಓದಿ’. ‘ನಿಮಗೆಲ್ಲ ಒಪ್ಪಿಗೆಯಾದರೆ ಮಾತ್ರ, ಪೋಸ್ಟ್ ಮಾಡೋಣ’, ಎಂದು ಅವರು ಹೇಳಿದರು. ಹಲವಾರು ಕರಡು ಪ್ರತಿಗಳು ಬರೆಯಲ್ಪಟ್ಟವು. ಆದರೆ ಹೆಚ್ಚು ಶ್ರಮ ಮಹದೇವ್ ಅವರಿಗೆ ಆಯಿತು. ಉಲ್ಲೇಖಗಳನ್ನು ಸೇರಿಸುವುದು. ಖಾಲಿಯಾಗಿರುವ ಜಾಗವನ್ನು ಭರ್ತಿಮಾಡುವುದು, ಸಲಹೆಗಳನ್ನು ದಾಖಲಿಸುವುದು, ಇತ್ಯಾದಿ. ಶುಕ್ರವಾರ ೧೪ ಆಗಸ್ಟ್ ರಂದು, ಬಾಪು ಮುಂದೆ ತಯಾರಿಸಿದ ಸುಂದರ ಕೈ-ಬರವಣಿಗೆಯ ಫೈನಲ್ ಕಾಪಿಯನ್ನು ಮಹದೇವ್, ಗಾಂಧೀಜಿಯವರ ಅವಗಾಹನೆಗೆ ಇಟ್ಟರು. ಬಾಪು ಒಪ್ಪಿ ಆ ಪ್ರತಿಯನ್ನು ನಕಲುಮಾಡಲು ತಮಗೆ ೨ ಗಂಟೆ ಸಮಯ ಹಿಡಿಯಿತೆಂದು ಹೇಳಿದಾಗ, ಬಾಪುರವರ ಮುಖದಲ್ಲಿ ತೃಪ್ತಿ ಕಾಣಿಸುತ್ತಿತ್ತು. ಮಹದೇವ್ ರವರವರ ಬರವಣಿಗೆ ಅವರಿಗೆ ಅತ್ಯಂತ ಮುದನೀಡುತ್ತಿತ್ತು.

Page 32

ಮಹದೇವ್ ಬರೆದು ಮುಗಿಸಿದ ಫೈನಲ್ ಕಾಪಿಯ ಅಡಿಯಲ್ಲಿ ಮುಗುಳ್ನಗುತ್ತಾ ಸಹಿ ಹಾಕಿ ಕೊಡುತ್ತಾ, ಬಾಪು ಪೋಸ್ಟ್ ಮಾಡಲು ಸೂಪರಿಂಟೆಂಡೆಂಟ್ ಗೆ ಹೇಳಿದರು. ಅಲ್ಲಿಯವರೆಗೆ ಎಲ್ಲವನ್ನು ನೋಡುತ್ತಿದ್ದ ನಮಗೆ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಈಗ ಬಾ ಸ್ವಲ್ಪಮಟ್ಟಿಗೆ ಗುಣಮುಖರಾದರಂದು ಅನ್ನಿಸಿತು. ತಾವೇ ಎದ್ದು ಮನೆಯೊಳಗೆಲ್ಲಾ ಓಡಾಡಿದರು, ಅಡುಗೆಮನೆಗೆ ಒಂದು ಬಾರಿ ಸುತ್ತು ಹೊಡೆದು, ಪ್ರೇಯರ್ ಹಾಲಿಗೆ ಹೋಗಿ ಕೆಲವು ಧಾರ್ಮಿಕ ಪುಸ್ತಕಗಳನ್ನು ಅವಲೋಕಿಸಿದರು. ಈ ದಿಢೀರ್ ಬೆಳವಣಿಗೆಯಿಂದ ನಮಗೆಲ್ಲ ಒಂದು ತರಹದ ನೆಮ್ಮದಿ ಸಿಕ್ಕಂತೆ ಅನ್ನಿಸತೊಡಗಿತು.

20

ಶನಿವಾರ, ಆಗಸ್ಟ್ ೧೫ ರಂದು ಪ್ರಾತಃಕಾಲ, ಎಂದಿನಂತೆ, ೭-೩೦ ಕ್ಕೆ ಬಾಪು ಗಾರ್ಡನ್ ನಲ್ಲಿ ‘ವಾಕ್’ ಹೋದರು. ಮಹದೇವ್ ಅವರ ಜತೆ ಸೇರಿಕೊಂಡು ಅನೇಕ ಪ್ರಸಂಗಗಳನ್ನು ಹಾಗೂ ಇತ್ತೀಚಿನ ಅಚಾನಕ್ಕಾಗಿ ಆದ ನಿಧನದ ವಿಚಾರವನ್ನು ಚರ್ಚಿಸುತ್ತಿದ್ದರು. ೮ ಗಂಟೆಗೆ ವಾಪಸ್ ಬಂದರು. ಬಾಪು ತಮ್ಮ ‘ಮಸಾಜ್ ಟೇಬಲ್’ ಹತ್ತಿರ ಬಂದು ಕುಳಿತರು. ಮಹದೇವ್ ತಮ್ಮ ಕೊಠಡಿಗೆ ಹೋದರು. ಬಾ ಕೈನಲ್ಲಿ ಬೀಸಣಿಗೆ ಹಿಡಿದು ಮಸಾಜ್ ರೂಮಿಗೆ ದಿನವೂ ಬರುತ್ತಿದ್ದವರು, ಇಂದು ಬೆಳಿಗ್ಯೆ ಯಾಕೋ ಬರಲಿಲ್ಲ. ಸರೋಜಿನಿ ನಾಯಿಡು (ಸರೋಜಿನಿ ನಾಯಿಜುರವರು ಗೃಹ ಬಂಧನದಲ್ಲಿ ಗಾಂಧಿಯವರ ಜೊತೆಗಿದ್ದರು) ರವರ ಒಟ್ಟಿಗೆ ರೂಮಿನಲ್ಲಿದ್ದರು. ಐ.ಜಿ.ಪಿ.ಕರ್ನಲ್ ಭಂಡಾರಿ, ಪ್ಯಾಲೇಸ್ ಬಂಧನಗೃಹದ ತನಿಖೆಮಾಡಲು ಬರುವವರಿದ್ದರು; ಕೆಲವು ಬಂದಿಗಳು ವರಾಂಡವನ್ನು ಕಸಹೊಡೆಯುವುದರಲ್ಲಿ ಬ್ಯುಸಿಯಾಗಿದ್ದರು. ಶ್ರೀಮತಿ ಸರೋಜಿನಿ ನಾಯಿಡು, ಹೂಗಳನ್ನು ವಾಸ್ ನಲ್ಲಿ ಸಜಾವಟ್ ಮಾಡುವುದರಲ್ಲಿ ವ್ಯಸ್ತರಾಗಿದ್ದರು. ದೂರದಿಂದ ಕರ್ನಲ್ ಭಂಡಾರಿಯವರ ಕಾರ್ ಬಂದ ಶಬ್ದವಾಯಿತು. ಅವರು ಪ್ಯಾಲೇಸ್ ನ ಮೆಟ್ಟಿಲುಗಳನ್ನು ಏರಿ ಬರುವ ಶಬ್ದ ನಿಧಾನವಾಗಿ ಕೇಳಿಸುತ್ತಿತ್ತು. ಬಂದವರು ಮೊದಲು ಸರೋಜಿನಿ ನಾಯ್ಡುರವರ ಕೊಠಡಿಗೆ ಹೋದರು. ಬಾಪು ಹಾಗೂ ನಾನು ಆರೂಮಿನಲ್ಲಿರಲಿಲ್ಲ. ಬೇರೆಯವರೆಲ್ಲ ಇದ್ದರು.

ವರಾಂಡದಲ್ಲಿ ಮಸಾಜ್ ಮಾಡಲೆಂದೇ ಒಂದು ಚಿಕ್ಕ ಕೋಣೆಯನ್ನು ನಿರ್ಮಾಣಮಾಡಿದ್ದರು. ಅಲ್ಲಿ ನಾನು, ಬಾಪುರವರಿಗೆ ‘ಮಸಾಜ್’ ಮಾಡುತ್ತಿದ್ದೆ. ರೂಮಿನಲ್ಲಿ ಅವರೆಲ್ಲ ನಗುತ್ತಾ ಮಾತನಾಡುತ್ತಿರುವ ಶಬ್ದ ಕೇಳಿಸಿತು. ಮಹದೇವ್ ರವರ ಮಾತುಗಳೂ ಅಸ್ಪಷ್ಟವಾಗಿ ಕೇಳಿಸುತ್ತಿದ್ದವು. ತಕ್ಷಣ ಸ್ವಲ್ಪ ನಿಶಬ್ದ. ಯಾರೋ ನನ್ನ ಹೆಸರು ಹಿಡಿದು ಕರೆದಂತೆ ಆಯಿತು. ಬಹುಶಃ ಐ. ಜಿ. ಪಿ. ಯವರು ನನಗೆ ಹೇಳಿಕಳಿಸಿರಬಹುದೆಂದು ಅನ್ನಿಸಿತು. ಅಷ್ಟು ಹೊತ್ತಿಗೆ ಬಾ ಓಡುತ್ತಾ ಅಲ್ಲಿಗೆ ಧಾವಿಸಿದರು. ‘ಸುಶೀಲ ಬೇಗ ಬಾ. ಮಹದೇವ್ ಗೆ ಫಿಟ್ಸ್ (ಮೂರ್ಚ್ಛಾ ರೋಗ) ಬಂದಿದೆ.’ ನಾನು ಓಡಿಹೋಗಿ ಅವರನ್ನು ನೋಡುವಷ್ಟರಲ್ಲಿ, ಮಹದೇವ್ ತಮ್ಮ ಇಹಲೋಕದ ಯಾತ್ರೆಗೆ ವಿದಾಯ ಹೇಳಿದಂತೆ ಭಾಸವಾಗುತ್ತಿತ್ತು. ಪರೀಕ್ಷಿಸಿದಾಗ ಹೃದಯದ ಬಡಿತ ಮತ್ತು ಪಲ್ಸ್ ನಿಂತಿತ್ತು. ಪ್ರಯಾಸದಿಂದ ಉಸಿರಾಡಲು ಯತ್ನಿಸುತ್ತಿದ್ದರು. ಸ್ವಲ್ಪ ಮುಲುಗುವ ಶಬ್ದ. ಮುಖ ನೋವಿನಿಂದ ತಿರುಚಿಕೊಂಡಿತ್ತು. ತುಟಿಗಳು ನಡುಗುತ್ತಿದ್ದವು. ನನಗೆ ಏನೂ ತೋಚದೆ, ಬಾಪೂರವರಿಗೆ ಹೇಳಿ ಕಳಿಸಿದೆ. ಐ. ಜಿ. ಪಿ. ಕರೆಯುತ್ತಿರಬಹುದೆಂದು ಅವರಿಗೂ ಅನ್ನಿಸಿರಬೇಕು. ಅಲ್ಲಿದ್ದವರಲ್ಲಿ ಯಾರೋ, ಮಹದೇವ್ ಯಾಕೋ ಬಹಳ ನರಳುತ್ತಿದ್ದಾರೆ ; ಅವರ ದೇಹಸ್ಥಿತಿ ಸರಿಯಿಲ್ಲವೆಂದು ಅವರ ಕಿವಿಯಲ್ಲಿ ಹೇಳಿದರು.

Page 33

ಅವರು ಹೇಳುವ ರೀತಿಯನ್ನು ನೋಡಿದರೆ, ಬಹುಶಃ ಮಹದೇವ್ ಇನ್ನೇನು ಜೀವಂತವಾಗಿ ಉಳಿಯಲಾರರೆಂದು ಬಾಪುರವರಿಗೆ ಅನ್ನಿಸುತ್ತಿತ್ತು. ಬಾಪುಗೇ ತಾವು ನಿಂತಿರುವ ಭೂಮಿಯೇ ಕುಸಿಯುತ್ತಿರುವಂತೆ ಭಾಸವಾಗತೊಡಗಿತು. ಮಹದೇವ್ ರ ಹತ್ತಿರ ನಿಂತು “ಮಹದೇವ್, ಮಹದೇವ್, ಏಳಿ, ಏನಾಗಿದೆ ನಿಮಗೆ” ಎಂದು ಮಾತನಾಡಿಸಿದಾಗ ಉತ್ತರವಿಲ್ಲ. ಬಾ ಅಲ್ಲಿಗೆ ಬಂದು ಮಹದೇವ್ ರವರ ಕೈಯನ್ನು ಹಿಡಿದು, ಮಹದೇವ್, ನೋಡಿ ಬಾಪು ನಿಮ್ಮನ್ನು ಕರೆಯುತ್ತಿದ್ದಾರೆ” ಎಂದು ಪ್ರೀತಿಯಿಂದ ಮಾತನಾಡಿಸಿದಾಗ, ಮೊದಲಬಾರಿಗೆ ಮಹದೇವ್ ತಮ್ಮ ಪ್ರೀತಿಯ ಬಾ ಹಾಗೂ ಬಾಪೂರವರ ಮಾತಿಗೆ ಉತ್ತರಕೊಡಲಾರದ ಸ್ಥಿತಿಯಲ್ಲಿದ್ದಾರೆ. ನಾನು ತಕ್ಷಣವೇ ಒಂದು stimulant injection ಅವರ ಕೈಗೆ ಚುಚ್ಚಿದೆ. ಇದರಿಂದ ಯಾವ ಉಪಯೋಗವೂ ಆಗಲಿಲ್ಲ. ನಿಧಾನವಾಗಿ ಉಸಿರಾಟವೂ ನಿಲ್ಲುವ ಸ್ಥಿತಿಗೆ ಬಂತು. ಉಸಿರಾಟ ನಿಧಾನವಾಗಿ ನಿಂತುಹೋಯಿತು. ಈ ಸನ್ನಿವೇಶ ಬಾರವರ ಹೃದಯದಲ್ಲಿ ಮರೆಯಲಾರದ ಗಾಯವನ್ನು ಉಂಟುಮಾಡಿತು. ಅಷ್ಟರಲ್ಲೇ ಅವರು ಹೇಗೋ ನಗುಮುಖದ ಮುಖವಾಡ ಹಾಕಿಕೊಂಡು, ಆಗತಾನೇ ಶುರುವಾಗುತ್ತಿದ್ದ ಪ್ರಾರ್ಥನೆಯಲ್ಲಿ ಭಾಗಗೊಂಡರು. ಆದರೆ ಕಣ್ಣೀರು ಸುರಿದುಹೋಗುತ್ತಿತ್ತು. ಅವರ ವಿಶ್ವ ಅವರ ತಲೆಯ ಸುತ್ತ ತಿರುಗುತ್ತಿತ್ತು.
ಮಹದೇವ್ ರವರ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ‘ಆಗಾಖಾನ್ ಪ್ಯಾಲೇಸ್ ಬಂಧಿ ಮಹಲ್’ ನ ಮೆಟ್ಟಿಲಿಂದ ಕೆಳಗೆ ಇಳಿಸಿ ತೆಗೆದುಕೊಂಡು ಹೋಗಿದ್ದರು. ಆದರೆ ಕಸ್ತೂರ್ ಬಾರವರಿಗೆ ಅಷ್ಟೊಂದು ಮೆಟ್ಟಿಲು ಇಳಿದು cremation ground ಹತ್ತಿರ ಹೋಗುವುದು, ಮತ್ತೆ ವಾಪಸ್ ಹತ್ತಿ ಬರುವುದು ಕಷ್ಟವಾಗುವುದೆಂದು ನಮಗೆಲ್ಲಾ ಅನ್ನಿಸಿತ್ತು. ಆದರೆ ಬಾರವರನ್ನು ತಡೆಯುವುದು ಕಷ್ಟವಾಯಿತು. ಬಾಗೆ ಮಹದೇವ್ ಅವರ ಅಂತಿಮ ದರ್ಶನವನ್ನು ಮಾಡುವುದು ಬಹಳ ಮಹತ್ವದ ನಿರ್ಣಯವಾಗಿತ್ತು. ಕಸ್ತೂರ್ ಬಾ ಮಹದೇವ್ ರವರ ಚಿತೆಗೆ ಸ್ವಲ್ಪ ದೂರದಲ್ಲಿ ಒಂದು ಕುರ್ಚಿಯಲ್ಲಿ ಕುಳಿತು, ದೇವರನ್ನು ಪ್ರಾರ್ಥಿಸುತ್ತಿದ್ದರು. ದಹನಕ್ರಿಯೆಗಳೆಲ್ಲಾ ಮುಗಿದು ವಾಪಸ್ ತಮ್ಮ ರೂಮಿಗೆ ಬರುವಾಗ ಸಾಯಂಕಾಲ ೫ ಗಂಟೆ. ಎಲ್ಲೆಲ್ಲೂ ಸ್ಮಶಾನ ಮೌನ ಆವರಿಸಿತ್ತು. ಬ್ರಾಹ್ಮಣರು, ಬ್ರಹ್ಮ ಹತ್ಯಾದೋಷವೆನ್ನುವ ಅಪವಾದಗಳು, ಅವರ ತಲೆಯಲ್ಲಿ ಹೊಕ್ಕು ನರ್ತನ ಮಾಡುತ್ತಿದ್ದವು.

Page 34

ಬ್ರಿಟಿಷ್ ಸರ್ಕಾರದ ನಿಯತ್ತು ಸರಿಯಿಲ್ಲ. ಅವರದು ದುಷ್ಟ ವ್ಯವಹಾರ. ಬಾ ಹಿಂದೂ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳೆದ ಓರ್ವ ಮಹಿಳೆ. ಅವರ ನಂಬಿಕೆಗಳನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿರಲಿಲ್ಲ. ದಿನವೂ ತುಳಸೀ ಮಾತೆಯನ್ನು ಧ್ಯಾನಿಸುತ್ತಿದ್ದರು. ಮೀರಾಬೆನ್ ತಮ್ಮ ರೂಮಿನ ಟೇಬಲ್ ಮೇಲೆ ಒಂದು ಬಾಲಕೃಷ್ಣನ ಮೂರ್ತಿಯನ್ನು ಇಟ್ಟುಕೊಂಡಿದ್ದರು. ಅದಕ್ಕೆ ಹೂವಿನಹಾರ ಹಾಕಿ ಅಲಂಕರಿಸುತ್ತಿದ್ದರು. ಬಾ ತುಳಸಿ ಪೂಜೆ, ಮತ್ತು ಬಾಲಕೃಷ್ಣ ಪೂಜೆಯನ್ನು ದೇವಸ್ಥಾನದ ಮೂರ್ತಿಯತರಹವೇ ಭಕ್ತಿ-ಶ್ರದ್ಧೆಗಳಿಂದ ದಿನವೂ ಮಾಡುತ್ತಿದ್ದರು. ಮಹದೇವ್ ರವರ ಸಮಾಧಿ ಅವರ ಮೂರನೆಯ ದೇವಾಲಯದ ತರಹವೇ ಆಗಿತ್ತು. ಅವರಿಗೆ ನಡೆಯಲು ಶಕ್ತಿಯಿರುವವರೆಗೂ ಬಾಪು ಜತೆಗೆ ಅಲ್ಲಿಗೆ ಹೋಗಿ, ಪ್ರದಕ್ಷಿಣೆ ನಮಸ್ಕಾರ ಹಾಕಿ ಬರುತ್ತಿದ್ದರು. ೨ ನೇ ಅಕ್ಟೊಬರ್ ಪತಿಯ ಹುಟ್ಟುಹಬ್ಬದ ದಿನ. ಸರೋಜಿನಿ ನಾಯಿಡುರವರು ಮನೆಯಲ್ಲಿ ದೀಪಾಲಂಕಾರ ಮಾಡಿದ್ದರು. ಕಸ್ತೂರ್ ಬಾರವರು ನನ್ನನ್ನು ಕರೆದು, ‘ಸುಶೀಲ, ಶಂಕರ್ ದೇವಾಲಯದಲ್ಲಿ ದೀಪ ಹಚ್ಚಿಬರಲು ಮರೆಯಬೇಡ’ ಎಂದು ಹೇಳಿದರು. ಒಂದು ಕ್ಷಣ ನನಗೆ ಅರ್ಥವಾಗದೆ ಶಂಕರದೇವಾಲಯ ಎಲ್ಲಿದೆ ? ಎಂದು ಮನಸ್ಸಿನಲ್ಲೇ ಯೋಚಿಸುತ್ತಿದ್ದಾಗ ; ಹೊಳೆಯಿತು. ಓ ಶಂಕರ ಮತ್ತು ಮಹದೇವ್ ಎರಡೂ ಒಬ್ಬ ಶಿವನ ಹೆಸರಲ್ಲವೇ ? ನೀವು ಹೇಳಿದ್ದು ಮಹದೇವ್ ರವರ ಸಮಾಧಿಗಲ್ಲವೇ ಬಾ ? ಎಂದು ಸ್ಪಷ್ಟಿಕರಣ ಕೇಳಿದಾಗ, ‘ಹೌದು ; ಅದನ್ನೇ ನಾನು ಹೇಳಿದ್ದು. ಅದೇ, ಮಹದೇವ್ ರವರ ದೇವಾಲಯವೆಂದರೆ, ಶಂಕರ ದೇವಾಲಯವಲ್ಲವೇ’ ? ಎಂದು ಬಾ ಮುಗುಳ್ನಕ್ಕರು.

21

ಮಹದೇವ್ ದೇಸಾಯ್ ರವರ ನಿಧನದನಂತರ, ಆಗಾಖಾನ್ ಪ್ಯಾಲೇಸ್ ಬಂಧನ ಗೃಹದಲ್ಲಿ ಅಸಂತೋಷದ ವಾತಾವರಣ ಎದ್ದು ಕಾಣಿಸುತ್ತಿತ್ತು. ಅನಿರೀಕ್ಷಿತ ಮರಣಗಳು ಎಲ್ಲರಿಗೂ ಗೊಂದಲ, ಮತ್ತು ಮಾನಸಿಕ ಆಘಾತವನ್ನು ತಂದಿದ್ದವು. ಇದು ಎಲ್ಲರ ಮನಸ್ಸಿಗೂ ತಕ್ಷಣ ವಾಸಿಯಾಗದ ಗಾಯವಾಗಿತ್ತು. ಅಹಿತಕರ ಸನ್ನಿವೇಶವನ್ನು ಅರ್ಥಮಾಡಿಕೊಂಡ ಬಾಪೂಜಿಯವರು, ಇದಕ್ಕೆ ಒಂದು ಉಪಾಯ ಕಂಡುಹಿಡಿದರು. ಪ್ರತಿನಿಮಿಷದಲ್ಲೂ ನಾವು ಬ್ಯುಸಿಯಾಗಿರಬೇಕು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ, ಯಾವ ಕೆಲಸಕ್ಕೆ ಬಾರದ ವಿಷಯಗಳು ನಮ್ಮ ಮನಸ್ಸಿನಲ್ಲಿ ಹೊಕ್ಕು ಧೃತಿಗೆಡಿಸದಂತೆ ನಿಗಾ ವಹಿಸಬೇಕು. ಎಲ್ಲೆಲ್ಲೂ ಹಿಂಸಾಚಾರವೇ ತಾಂಡವವಾಡುತ್ತಿರುವಾಗ, ಅಹಿಂಸೆ ತಕ್ಷಣ ಕಣ್ಣಿಗೆ ಬೀಳುವುದು ಕಷ್ಟ. ಗಡಿಯಾರದ ತರಹ, ಸಮಯ ಪಾಲನೆ ಮಾಡುವುದನ್ನು ಅಭ್ಯಾಸಮಾಡಿಕೊಂಡಿದ್ದರು. ಹಾಗೆಯೆ ನಡೆಯಲು ಬೇರೆಯವರಿಗೂ ಉಪದೇಶಮಾಡುತ್ತಿದ್ದರು.

ಗಾಂಧೀಜಿಯವರು ತಮ್ಮ ಪತ್ನಿ, ಕಸ್ತೂರ್ ಬಾರವರಿಗೆ ಪಾಠ ಹೇಳುವುದಕ್ಕೆ ಪ್ರಾರಂಭಿಸಿದರು. ಗುಜರಾತಿ ಭಾಷೆಯಿಂದ ಶುರುವಾಗಿ, ಭಗವದ್ಗೀತೆ, ಭೂಗೋಳ, ಮತ್ತು ಕೆಲವು ವೇಳೆ ಇತಿಹಾಸದ ಪಾಠಗಳನ್ನೂ ಹೇಳಿಕೊಡಲು ಆರಂಭಿಸಿದರು. ಊಟಮಾಡಿದ ನಂತರ ಮಲಗಿದ್ದಾಗ, ಏನಾದರೊಂದು ವಿಷಯವನ್ನು ವಿವರಿಸಿ, ಅದರ ಅರ್ಥ ಇತ್ಯಾದಿಗಳನ್ನು ಹೇಳುತ್ತಿದ್ದರು. ಬಾ ಒಬ್ಬ ಒಳ್ಳೆಯ ವಿಧೇಯ ವಿದ್ಯಾರ್ಥಿನಿಯ ತರಹ, ಬಹಳ ಆಸ್ಥೆಯಿಂದ ಎಲ್ಲವನ್ನು ಕೇಳಿಸಿಕೊಂಡು ಅಭ್ಯಾಸಮಾಡುತ್ತಿದ್ದರು. ಕೆಲವು ವೇಳೆ ಇವನ್ನು ತಾವು ಮೊದಲೇ ಕಲಿತಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಖಿನ್ನತೆ, ವ್ಯಸನ, ಅವರನ್ನು ಬಾಧಿಸುತ್ತಿತ್ತು.

Page 35

ಕಸ್ತೂರ್ ಬಾ ಓದಿನ ಬಗ್ಗೆ ವಿಶೇಷ ಆಸಕ್ತಿ ತೆಗೆದುಕೊಂಡರು. ಆದರೆ ಬಾಪುರವರ ಮನಸ್ಸಿನ ತರಹ ಹೊಸ ಉತ್ಸಾಹ, ಲವಲವಿಕೆ ಯಿರಲಿಲ್ಲ. ದುಡಿದು, ದುಡಿದು ಸೊರಗಿ ಬೆಂಡಾಗಿದ್ದರು. ಈ ವಯಸ್ಸಿನಲ್ಲಿ ಕಲಿಯಲು ಕಷ್ಟವೆನ್ನುವ ಅಂಶ ಅವರ ತಲೆಯಲ್ಲಿ ಹೊಕ್ಕಿತ್ತು. ಬಾಪು ಹಿಂದಿನ ದಿನ ಹೇಳಿಕೊಟ್ಟ ಪಾಠದ ವಿಷಯವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದಾಗ, ನೆನಪಿಟ್ಟುಕೊಂಡಿರುತ್ತಿರಲಿಲ್ಲ. ಬಾಪು ಎಂದೂ ಅವರನ್ನು ದಂಡಿಸಲಿಲ್ಲ. ಬಾರವರಿಗೆ ಇದು ಅರ್ಥವಾಗಿ ಮುಂದೆ ಹೆಚ್ಚು ಶ್ರಮವಹಿಸಿ ಕಲಿತುಕೊಳ್ಳುವ ನಿರ್ಣಯ ಕೈಗೊಂಡರು. ಬಾಪು, ಪಂಜಾಬ್ ರಾಜ್ಯದ ಅನೇಕ ಸ್ಥಳಗಳನ್ನು ಹಾಗೂ ಆ ರಾಜ್ಯದ ನದಿಗಳನ್ನು ವಿವರವಾಗಿ ಹೇಳಿಕೊಟ್ಟರು. ಬಾ ನನ್ನ ಹತ್ತಿರ ಬಂದು, “ಸುಶೀಲ, ನನಗೆ ಈ ನದಿಗಳ ಹೆಸರುಗಳನ್ನು ಒಂದು ಚೀಟಿಯಲ್ಲಿ ಬರೆದುಕೊಡುವೆಯಾ “? ಎಂದು ಕೇಳಿ ಬರೆಸಿಕೊಂಡ ಆ ಚೀಟಿಯನ್ನು ಯಾವಾಗಲೂ ತಮ್ಮ ಹತ್ತಿರವೇ ಇಟ್ಟುಕೊಂಡಿರುತ್ತಿದ್ದರು. ಆ ಚೀಟಿ ಅವರ ಬಳಿ ಮನೆಯ ಎಲ್ಲಾ ಕೆಲಸಗಳನ್ನು ಮಾಡುವ ಸಮಯದಲ್ಲೂ ಇರುತ್ತಿತ್ತು. ಚರಖಾದಲ್ಲಿ ದಾರ ನೂಲುವಾಗ, ಅದನ್ನು ನೋಡಿಕೊಂಡು ಓದುತ್ತ ಕೆಲಸಮಾಡುತ್ತಿದ್ದರು. ೭೪ ನೆಯ ವಯಸ್ಸಿನಲ್ಲಿ ಅವನ್ನೆಲ್ಲಾ ನೆನಪಿಸಿಕೊಳ್ಳುವುದು ಅಷ್ಟು ಸುಲಭವಾಗಿರಲ್ಲ. ಮಾರನೆಯದಿನ ಬಾಪು ಪ್ರಶ್ನೆಕೇಳಿದಾಗ, ಅವರಿಗೆ ಉತ್ತರ ಹೇಳಲು ಆಗುತ್ತಿರಲಿಲ್ಲ. ಬಾಪು ಸ್ವಾಭಾವಿಕ ಭೂಗೋಳಶಾಸ್ತ್ರವನ್ನು ಕಲಿಸುವಾಗ ಅಕ್ಷಾಂಶ, ರೇಖಾಂಶ, ಭೂಮಧ್ಯರೇಖೆ, ಮೊದಲಾದವುಗಳನ್ನು ಹೇಳಿಕೊಟ್ಟರು. ತಮ್ಮ ಪಾಠವನ್ನು ಸ್ಪಷ್ಟಪಡಿಸಲು, ಬಾಪು ಒಂದು ಕಿತ್ತಳೆಹಣ್ಣನ್ನು ತೆಗೆದುಕೊಂಡು, ಆದರ ಮೇಲೆ ಭೂಮಧ್ಯರೇಖೆ, ಅಕ್ಷಾಂಶ, ರೇಖಾಂಶಗಳನ್ನು ಕೈನಲ್ಲಿ ಎಳೆದು ತೋರಿಸಿದಾಗ, ಬಾರವರಿಗೆ ಚೆನ್ನಾಗಿ ಅರ್ಥವಾಗುತ್ತಿತ್ತು. ನಮ್ಮ ಜತೆ ಸೇರಿದ ನಮ್ಮ ಅಣ್ಣ ಪ್ಯಾರೇಲಾಲ್, ಮನು ಬೆನ್ ಗೆ ಇದೇ ಪಾಠವನ್ನು ಹೇಳಿಕೊಡುತ್ತಿದ್ದ. ಮನು ಬೆನ್, ಬಾ ರ ಆಶಯದ ಮೇರೆಗೆ ಸರಕಾರದಿಂದ ಒಬ್ಬ ನರ್ಸ್ ತರಹ, ಆಗಾಖಾನ್ ಪ್ಯಾಲೇಸ್ ಬಂಧನ ಗೃಹಕ್ಕೆ ಬಂದಿದ್ದರು. ಪ್ಯಾರೇಲಾಲ್ ಗೆ ಹಿಂದೂಸ್ತಾನಿ ಶಬ್ದಗಳು ಸ್ಪಷ್ಟವಾಗಿ ತಿಳಿದಿರಲಿಲ್ಲ. ವಿವರಿಸುವಾಗ ಅಕ್ಷಾಂಶ, ರೇಖಾಂಶಗಳ ಪದಗಳು ಅದಲು ಬದಲಾಗಿ ಗೊಂದಲವಾಗುತ್ತಿತ್ತು. ಇದನ್ನು ಕೇಳಿಸಿಕೊಂಡ ಬಾ, ಪ್ಯಾರೇಲಾಲ್ ಹೇಳುವ ಅಕ್ಷಾಂಶ, ಬಾಪು ಪ್ರಕಾರ ರೇಖಾಂಶವೆನ್ನುವ ವಿಷಯವನ್ನು ನನ್ನ ಜತೆ ಹಂಚಿಕೊಂಡರು. ಬಾ ಹೇಳಿದ್ದು ಸರಿಯಾಗಿತ್ತು ; ಎನ್ನುವ ವಿಷಯ ಪ್ಯಾರೇಲಾಲ್ ಒಪ್ಪಿ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡರು.

ಬಾಪು ೫ ನೆಯ ಸ್ಟ್ಯಾಂಡರ್ಡ್ ರೀಡರ್ ನ್ನು ಬಾ ಗೆ ಪಾಠಹೇಳುವಾಗ ಬಳಸುತ್ತಿದ್ದರು. ಪುಸ್ತಕದಲ್ಲಿ ಅನೇಕ ಪದ್ಯಗಳು, ಹಾಡುಗಳು ಇದ್ದವು. ಪದ್ಯಗಳನ್ನು ಸರಿಯಾದ ರಾಗದಲ್ಲಿ ಹಾಡಲು ನಮೂದಿಸಿದ್ದರು. ಬಾಪೂಜಿಗೆ ಹಾಡಿನ ರಾಗಗಳ ಬಗ್ಗೆ ವಿಸ್ತೃತ ಜ್ಞಾನವಿತ್ತು. ಅವರು ಪ್ರತಿದಿನ ರಾತ್ರಿ ೨ ಹಾಡುಗಳನ್ನು ರಾಗವಾಗಿ ಹೇಳಿಕೊಡಲು ನಿರ್ಧರಿಸಿದ್ದರು. ಹಿರಿಯ ದಂಪತಿಗಳು ಪ್ರೇಯರ್ ನಂತರ ಜೊತೆಯಲ್ಲಿ ಕುಳಿತು ಹಾಡುತ್ತಿದ್ದದ್ದನ್ನು ನೋಡಿ ಕವಯತ್ರಿ ಸರೋಜಿನಿ ನಾಯಿಡುರವರು, “ಈಗ ಬಾಪು-ಬಾ ಹನಿಮೂನ್ ಮೂಡಿನಲ್ಲಿದ್ದಾರೆ “ಎಂದು ನಗೆಯಾಡುತ್ತಿದ್ದರು. ಬಾಪು ಆ ಪ್ರತಿಕ್ರಿಯೆಯನ್ನು ಕೇಳಿ ಮುಗುಳ್ನಗುತ್ತಿದ್ದರು.

ಪ್ರತಿದಿನವೂ ಪಾಠ ಹೇಳಿಕೊಡುವ ಪ್ರಕ್ರಿಯೆ ನಡೆಯುತ್ತಿತ್ತು. ಗಾಂಧೀಜಿಯವರು ತಮ್ಮ ಪತ್ನಿಗೆ ರಾಷ್ಟ್ರದ ಎಲ್ಲ ರಾಜ್ಯಗಳ ಹೆಸರುಗಳು, ಹಾಗೂ ಆಯಾಯ ರಾಜ್ಯಗಳ ದೊಡ್ಡ ನಗರಗಳ ಹೆಸರುಗಳನ್ನೂ ಹೇಳಿಕೊಡುತ್ತಿದ್ದರು. ಬಾ ಅವೆಲ್ಲವನ್ನೂ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಸಾಧ್ಯವಾಗುತ್ತಿರಲಿಲ್ಲ ; ಲಾಹೋರ್ ಯಾವ ರಾಜ್ಯದ ರಾಜಧಾನಿ ? ಎಂದು ಬಾಪು ಕೇಳಿದಾಗ, ಕಲ್ಕತ್ತಾ, ಇಲ್ಲವೇ ಅದೇ ತರಹ ಪದಪುಂಜದ ಇನ್ನಾವುದೋ ಹೆಸರನ್ನು ಹೇಳುತ್ತಿದ್ದರು. ಇದರಿಂದ ಆಕೆಗೆ ಗ್ರಹಿಸುವುದು ಎಷ್ಟು ಕಷ್ಟವೆಂದು ನಮಗೆ ತಿಳಿಯತೊಡಗಿತು.

Page 36

ಆಕೆಯ ಆಸಕ್ತಿ ನಿಧಾನವಾಗಿ ಕುಂಠಿತಗೊಳ್ಳಲಾರಂಭಿಸಿತು. ಯಾವಾಗಲೂ ಅನಾರೋಗ್ಯ, ಮಾನಸಿಕ ಅಸಮತೋಲನ ಳಿಂದ ತಮ್ಮ ನೆನಪಿನ ಶಕ್ತಿ ಹಾಳಾಗಿದೆ, ಎಂದು ಅವರೇ ನಿರ್ಧರಿಸುತ್ತಿದ್ದರು. ಪ್ರತಿಬಾರಿಯೂ ಇದನ್ನೇ ಹೇಳುತ್ತಾ ತಮ್ಮ ಅಭ್ಯಾಸವನ್ನು ಪೂರ್ತಿಯಾಗಿ ನಿಲ್ಲಿಸಿಬಿಟ್ಟರು. ಈಗ ಭಗವದ್ಗೀತೆಯ ಶ್ಲೋಕಗಳ ಪಠನದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಮದ್ಯಾನ್ಹ ಪತಿಯ ಜೊತೆ ಪಾಠಗಳನ್ನು ಓದುತ್ತಿದ್ದರು. ಸಾಯಂಕಾಲದ ಪ್ರೇಯರ್ ನಂತರ ನನ್ನ ಜತೆ ಹಾಡುತ್ತಿದ್ದರು. ಹೀಗೆ ಸತತವಾಗಿ ತಮ್ಮ ಕೊನೆಗಾಲದವರೆಗೂ ಇದೇ ಪ್ರಥ ಜಾರಿಯಲ್ಲಿತ್ತು. ಮಹದೇವ್ ರವರ ನಿಧನದ ನಂತರ, ಬಾ ಬೆಳಗಿನ ಹೊತ್ತು ಮತ್ತು ಸಾಯಂಕಾಲ ಪತಿಯ ಜೊತೆ ವಾಕಿಂಗ್ ಹೋಗಲು ಪ್ರಾರಂಭಿಸಿದರು. ಬಾಪು ಪತ್ನಿಯ ಹೆಗಲ ಮೇಲೆ ಕೈ ಊರಿ ಸ್ವಲ್ಪ ವೇಗವಾಗಿ ನಡೆಯುತ್ತಿದ್ದರು. ಒಂದು ತಿಂಗಳಿನ ನಂತರ ಬಾ ವಾಕ್ ಹೋಗುವುದನ್ನು ನಿಲ್ಲಿಸಿದರು. ಅವರಿಗೆ ಬಾಪು ಜೊತೆ ಹಾಗೆ ವೇಗವಾಗಿ ನಡೆಯುವುದು, ಬಹಳ ಕಷ್ಟವಾಗತೊಡಗಿತು. ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತು.

ಇದಾದ ನಂತರ ಬಾ ಗೆ ಮೊದಲಿನಂತೆ ವಾಕ್ ಹೋಗುವುದು ಕಷ್ಟವಾಗತೊಡಗಿತು. ಬಹಳ ದಿನಗಳ ನಂತರ ತಮಗೆ ಸಾಧ್ಯವಾದಾಗ, ವರಾಂಡದಲ್ಲಿ ಮಾತ್ರ ಸುತ್ತಾಡುತ್ತಿದ್ದರು. ಬಾಪು ಮಾತ್ರ ಮೊದಲಿನಂತೆಯೇ ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದರು. ಕಸ್ತೂರ್ ಬಾ ಸ್ಟೇರ್ ಕೇಸ್ ಹತ್ತಿರ ವ್ಹಿಲ್ ಕುರ್ಚಿಯಲ್ಲಿ ಕುಳಿತು ಬಾಪು ವಾಕ್ ಮಾಡುವುದನ್ನು ನೋಡುತ್ತಾ ಕಣ್ತುಂಬಿಕೊಳ್ಳುತ್ತಿದ್ದರು. ‘ಆಶ್ರಮದ ಭಜನಾವಳಿ’ (ಅನಾಸಕ್ತಿಯೋಗ/ಟೋಗ) ಯನ್ನು ಒಂದು ಗಂಟೆ ಓದುತ್ತಿದ್ದರು ನಂತರ ಮಸಾಜ್, ಹಾಗೂ ಸ್ನಾನ. ಕೆಲವೊಮ್ಮೆ ಅವರು ಪತ್ರಿಕೆಗಳನ್ನು ಒಂದು ತರಹ ರಾಗವಾಗಿ ಓದುತ್ತಿದ್ದರು (ಅನಾಸಕ್ತಿ ಟೋಗ). ಬಾಪು, ಮೆಲ್ಲಗೆ ಮನಸ್ಸಿನಲ್ಲಿಯೇ ಓದಲು ಮನವಿಮಾಡಿದಾಗ, ಬಾ ಜೋರಾಗಿ ಓದುವುದನ್ನೇ ಬಿಟ್ಟರು. ಅನಾರೋಗ್ಯದ ಕಾರಣದಿಂದ ಅವರಿಗೆ ಬಹಳ ನಿಶ್ಯಕ್ತಿ, ಹಾಗೂ ಅವರ ಪರಿಸ್ಥಿತಿ ನಾಜೂಕಾಯಿತು. ಪ್ರಸಕ್ತ ವಿಷಗಳ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಮದ್ಯಾನ್ಹದ ಹೊತ್ತಿನಲ್ಲಿ ತಮ್ಮ ಕೈನಲ್ಲಿ ಒಂದು ನಿಯತಕಾಲಿಕೆಯನ್ನು ಹಿಡಿದು, ನನ್ನ ಬಳಿಯೋ ಅಥವಾ ಅಣ್ಣನ ಹತ್ತಿರವೋ ಬಂದು ನಮ್ಮ ಕೈಲಿ ಓದಿಸಿ ಕೇಳುತ್ತಿದ್ದರು. ಬ್ರಿಟಿಷರ ಯುದ್ಧಸಮಯದ ಪ್ರಚಾರ, ಬಾಪುರವರ ಬಗ್ಗೆ ಅಪಪ್ರಚಾರ, ಅವರಿಗೆ ಬಹಳ ಕೋಪ ತರಿಸುತ್ತಿತ್ತು.

ಆಧುನಿಕ ರಾಜಕೀಯ (ಕು) ತಂತ್ರಗಳ ಬಗ್ಗೆ ಅವರಿಗೆ ಹೆಚ್ಚು ಪರಿಚಯವಿರಲಿಲ್ಲ ಬ್ರಿಟಿಷ್ ಸೆಕ್ರೆಟರಿ ಆಫ್ ಸ್ಟೇಟ್ಸ್, (ಟೋರಿ) ಮತ್ತಿತರ ಆಫಿಸರ್ ಗಳು ತಮಗೆ ಇಷ್ಟವಾಗದ್ದದ್ದನ್ನು ಪತ್ರಿಕೆಯಲ್ಲಿ ಬರೆದರೆ, ಅದನ್ನು ಓದಿ ಅವರು ಕಸಿವಿಸಿಗೊಳ್ಳುತ್ತಿದ್ದರು, ಮಗುವಿನ ಮುಗ್ದತೆ ಅವರಲ್ಲಿ ಮನೆಮಾಡಿತ್ತು. ಒಮ್ಮೆ ” ನೋಡು ಏನೆಲ್ಲಾ ಸುಳ್ಳುಗಳನ್ನು ಹೇಳ್ತಿದ್ದಾರೆ”. ಮಿ. Amery ನನಗೇನಾದರೂ ಸಿಕ್ಕರೆ, ಯಾಕೆ ಹಾಗೆ ಇಲ್ಲಸಲ್ಲದ್ದನ್ನು ಹೇಳಿ ಅಪಪ್ರಚಾರ ಮಾಡ್ತೀರಿ ಎಂದು ತರಾಟೆಗೆ ತೆಗೆದುಕೊಳ್ಳುತ್ತೇನೆ”. ಎಂದು ಹೇಳುತ್ತಿದ್ದರು. ಇದು ಗಾಂಧೀಜಿಯವರ ಅಹಿಂಸಾ ಚಳುವಳಿಯ ವಿರುದ್ಧ ಕೊಟ್ಟ ಹೇಳಿಕೆಯಾಗಿತ್ತು. ಇದರಲ್ಲಿ ಯಾವ ಸತ್ಯವೂ ಇಲ್ಲ ; ಹೇಳುವ ಅವಶ್ಯಕತೆಯಾದರೂ ಏನಿದೆ ? ನಮಗೆ ಇದು ಸರಿತೋರುವುದಿಲ್ಲ”. ಎಂದು ಕೋಪಪ್ರಕಟಿಸಿದರೂ, ಬಾಗೆ ಮಗುವಿನ, ಮುಗ್ದತೆ, ಆಸಕ್ತಿ ಮತ್ತು ಉತ್ಸಾಹವಿತ್ತು. ಹೊಸದನ್ನು ಕಲಿಯಲು ಯಾವಾಗಲು ಆಸಕ್ತರಾಗಿದ್ದರು.

Page 37

ಏನೇ ಹೊಸವಿಚಾರ ಕಣ್ಣಿಗೆ ಬಿದ್ದರೆ, ಅದನ್ನು ತಕ್ಷಣ ಕಲಿಯುವಾಸೆ. ಇತ್ತೀಚಿಗೆ ಬಾರ ೧೯೩೧-೩೩ ರ ಸಮಯದ ಡೈರಿ ಸಿಕ್ಕಿದಾಗ ನೋಡಲು ತೆಗೆದುಕೊಂಡೆ. ಆ ಸಮಯದಲ್ಲಿ ಬಾ ಬಹಳ ಸಮಯ ಕಾರಾಗೃಹದಲ್ಲಿ ಕಳೆದಿದ್ದ ಸಂಗತಿಗಳು ದಾಖಲಾಗಿದ್ದವು. ಆಗಲೂ ಅವರು ಕಲಿಯುವ ವಿದ್ಯಾರ್ಥಿಯಾಗಿಯೇ ರೂಪುಗೊಂಡಿದ್ದರು. ಮೀರಾಬೆನ್ ಹಿಂದಿ ಭಾಷೆ, ಹಾಗೂ ಬೇರೆಯವರಿಂದ ಗುಜರಾತಿ ಕಲಿಯುತ್ತಿದ್ದರು. ಜೈಲು ಬಂದಿಗಳು ‘napkins’, ತಯಾರಿಸುತ್ತಿದ್ದದ್ದನ್ನು ನೋಡಿ ಅವರೂ ಕಲಿತುಕೊಂಡರು. ಇದೇ ತರಹ ಮುಂದೆ ಸೇವಾಗ್ರಾಮದಲ್ಲಿದ್ದಾಗ, ಮೊಮ್ಮಗ ಕಾನು ಗಾಂಧಿ, ಇತಿಹಾಸ, ಭೂಗೋಳ ಶಾಸ್ತ್ರ ಕಲಿಯುತ್ತಿದ್ದ. ತಮಗೂ ಅದನ್ನು ಕಲಿಯುವಾಸೆಯೆಂದು ಹೇಳುತ್ತಿದ್ದರು. ಕಸ್ತೂರ್ ಬಾ ರವರ ಬರವಣಿಗೆ ಬಹಳ ಸುಮಾರಾಗಿತ್ತು ; ಪಕ್ವತೆ ಕಡಿಮೆ. ಪ್ರತಿ ಅಕ್ಷರವನ್ನೂ ಪ್ರತ್ಯೇಕವಾಗಿ ಜಾಗಬಿಟ್ಟು ವ್ಯವಸ್ಥಿತವಾಗಿ ಬರೆಯುತ್ತಿರಲಿಲ್ಲ. ಓದುಗರಿಗೆ ಕಷ್ಟವಾಗುತ್ತಿತ್ತು. ಬಾಪು ತಮ್ಮ ಪತ್ನಿಯ ಬರವಣಿಗೆಯನ್ನು ಸುಧಾರಣೆ ಮಾಡಲು ಯೋಚಿಸಿ, ಪ್ರತಿದಿನವೂ ಅಭ್ಯಾಸಮಾಡಿದರೆ ಮಾತ್ರ, ಸಾಧ್ಯವೆಂದು ಬುದ್ಧಿಹೇಳಿದರು. ಬಾಪೂಜಿ ನಮಗೆಲ್ಲ ನೋಟ್ ಬುಕ್ಸ್ ತರಿಸಿ ಕೊಟ್ಟರು. ಬಾ ಸಹಿತ ತಮಗೆ ಬೇಕೆಂದು ಕೇಳಿದಾಗ, ಗಾಂಧಿಯವರು ಅವರಿಗೆ ಬಿಡಿ ಹಾಳೆಗಳನ್ನು ಕೊಡುತ್ತಾ, ‘ಇದರಲ್ಲಿ ಬರೆದು ಅಭ್ಯಾಸಮಾಡಿಕೋ. ನಿನ್ನ ಅಕ್ಷರಗಳು ಸುಧಾರಿಸಿದನಂತರ ನೋಟ್ ಬುಕ್ ಕೊಡುತ್ತೇನೆ’ ಎಂದು ಹೇಳಿದರು. ಇದರಿಂದ ಬಾ ರವರ ಮನಸ್ಸಿಗೆ ಆಘಾತವಾಯಿತು. ಬಾಪೂರವರಿಗೆ ತಮ್ಮ ತಪ್ಪಿನ ಅರಿವಾಗಿದ್ದು ಬಹಳ ತಡವಾಗಿ. ಇದನ್ನು ಅವರು ಎಂದೂ ನಿರೀಕ್ಷಿಸಿರಲಿಲ್ಲ.

ತಮ್ಮ ಪರೀಕ್ಷೆ ವಿಫಲವಾಗಿದ್ದನ್ನು ಕಂಡು, ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರಾದರೂ, ಸಮಯ ಮೀರಿತ್ತು. ಆದ ಗಾಯ ಮಾಯಲು ತುಂಬಾ ಕಷ್ಟವಾಗಿತ್ತು. ಸರೋಜಿನಿ ನಾಯಿಡು ನೋಟ್ ಬುಕ್ ಕಳಿಸಿಕೊಟ್ಟರು. ನಾನು ಬಾಗೋಸ್ಕರ ಒಂದು ನೋಟ್ ಬುಕ್ಕನ್ನು ಪಡೆದು, ನನ್ನ ಬಳಿ ಇಟ್ಟುಕೊಂಡೆ. ನಾನು ಬಾರವರಿಗೆ ಕೊಡಲು ಹೋದಾಗ, ಅದನ್ನು ಪಕ್ಕಕ್ಕಿಟ್ಟು ತೆಗೆದುಕೊಳ್ಳಲು ನಿರಾಕರಿಸಿದರು. ನಮ್ಮಲ್ಲೆಲ್ಲರ ಬೇಡಿಕೆಗಳು ಅವರಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಬಾಪು ಮಧ್ಯ ಬಂದು, “ದಯಮಾಡಿ ತೆಗೆದುಕೋ”. “ನಾನು ಹಾಗೆ ಹೇಳಬಾರದಿತ್ತು”, ಎಂದು ಎಷ್ಟು ಬೇಡಿ ದರೂ ಕೇಳದೆ, “ನನಗೇಕೆ ಬೇಕು ನೋಟ್ ಬುಕ್” ? ಎಂದು ಸ್ವಾಭಿಮಾನದಿಂದ ನುಡಿದರು. ಆಮೇಲೆ ಆ ಉಳಿದ ನೋಟ್ ಬುಕ್ ಗಳನ್ನು ಯಾರೂ ಬಳಸಲೇ ಇಲ್ಲ.

22

೧೯೩೧-೧೯೩೩ ರ ಬಾ ರವರ ದಿನಚರಿಯನ್ನು ಓದಿದ ನನಗೆ, ಬಾ ೩ ಸಲ ಜೈಲಿಗೆ ಹೋಗಿದ್ದರೆಂದು ಗೊತ್ತಾಯಿತು. ಅಲ್ಲಿದ್ದಾಗ ರಾಮಾಯಣ ಭಾಗವತವನ್ನು ನಿಯಮಿತವಾಗಿ ಓದಿ ಕೇಳಿಸಿಕೊಳ್ಳುತ್ತಿದ್ದರು. ಆಗಾ ಖಾನ್ ಪ್ಯಾಲೇಸ್ ಗೃಹ ಬಂಧನದಲ್ಲಿ ನಾವು ಅವರಿಗೆ ತುಳಸೀದಾಸ ರಾಮಾಯಣದ ೨ ಶ್ಲೋಕಗಳನ್ನು ಸಾಯಂಕಾಲದ ಪ್ರೇಯರ್ ಸಮಯದಲ್ಲಿ ಓದಿ ಹೇಳುತ್ತಿದ್ದೆವು. ಮದ್ಯಾನ್ಹದ ಹೊತ್ತಿನಲ್ಲಿ ರಾಮಾಯಣ ಪುಸ್ತಕವನ್ನು ಹಿಡಿದು ಬಾ ಕುಳಿತುಕೊಳ್ಳುತ್ತಿದ್ದರು. ಸಾಯಂಕಾಲದ ಪ್ರೇಯರ್ ನಲ್ಲಿ ಹೇಳಬೇಕಾದ ಶ್ಲೋಕಗಳ ಟಿಪ್ಪಣಿಗಳ ಸಹಿತ ಅವರ ಬಳಿ ಇರುತ್ತಿತ್ತು. ಸೇವಾಗ್ರಾಮದಲ್ಲಿರುವಾಗಲೂ ಇದೇ ಪದ್ಧತಿಯನ್ನು ಅವರು ಅನುಸರಿಸುತ್ತಿದ್ದರು. ನಮ್ಮ ಹತ್ತಿರವಿದ್ದ ಶ್ಲೋಕಾರ್ಥಗಳ ಟಿಪ್ಪಣಿಯ ಪುಸ್ತಕ ಹಿಂದಿ ಭಾಷೆಯಲ್ಲಿತ್ತು. ಹಿಂದಿ ಭಾಷೆ ಬಾರವರಿಗೆ ಸರಿಯಾಗಿ ಬರುತ್ತಿರಲಿಲ್ಲ. ಅದಲ್ಲದೆ ಪುಸ್ತಕದಲ್ಲಿನ ಅರ್ಥವಿವರಣೆಗಳು ಸಮರ್ಪಕವಾಗಿರಲಿಲ್ಲ. ಈಗ ಗಾಂಧೀಜಿಯವರೇ ಪ್ರತಿಪದಾರ್ಧಗಳನ್ನು ಹೇಳಿ ಕೊಡಲು ಪ್ರಾರಂಭಿಸಿದರು.

Page 38

ಬಾ ಈ ವ್ಯಾಖ್ಯಾನವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಕೇಳಿಸಿಕೊಳ್ಳುತ್ತಿದ್ದರು. ರಾಮಾಯಣ ಅವರಿಗೆ ಬಲು ಪ್ರಿಯವಾದ ಕತೆ. ಅವರು ಭಕ್ತಿಯಿಂದ ಕಥೆಯಲ್ಲಿ ಬರುತ್ತಿದ್ದ ಪವಾಡಗಳು, ಘಟನೆಗಳು, ಅಥವಾ ಅಪೌರುಷವಾದ ಬಂದಾಗ ಅವರು ನಿಜವಾಗಿಯೂ ಇದು ನಿಜವಿರಲಾರದು ಎಂದು ಪ್ರತಿಕ್ರಿಯಿಸುತ್ತಿದ್ದರು. ಕೆಲವು ಸನ್ನಿವೇಶಗಳು, ಉದಾಹರಣೆಗೆ, ದಶರಥ ಮಹಾರಾಜನ ಆಸ್ಥಾನ, ಜನಕ ಮಹಾರಾಜನ ಒಡ್ಡೋಲಗದ ವೈಭಗಳನ್ನು ಸೀತಾರಾಮರ ಮದುವೆಯ ವೈಭವವನ್ನು ಅಲಂಕಾರಗಳನ್ನು ಓದಿಹೇಳಿದಾಗ ಬಾ ತುಳಸಿದಾದಾರಿಗೆ ಬಿಡುವು ಬಹಳ ಇತ್ತು ಅಂತ ಕಾಣಿಸುತ್ತೆ. ಈ ವೈಭವಗಳನ್ನೆಲ್ಲಾ ವಿವರಿಸಲು ಎಷ್ಟೊಂದು ಸಮಯ ತೆಗೆದುಕೊಂಡಿದ್ದಾರೆ, ಎಂದು ನಗುತ್ತಾ ಹೇಳುತ್ತಿದ್ದರು.

ಗಾಂಧೀಜಿಯವರು ಬಾ ಗೋಸ್ಕರವಾಗಿಯೇ ರಾಮಾಯಣದ ಪರಿಷ್ಕೃತ /ಸಂಕ್ಷಿಪ್ತ ಕೃತಿಯೊಂದನ್ನು ತಯಾರುಮಾಡಲು ಇಚ್ಚಿಸಿದರು. ಅವರಿಗಾಗಿ ಆ ಮಹಾಕೃತಿಯಿಂದ ಕೆಲವು ವಿಶೇಷ ಶ್ಲೋಕಗಳನ್ನು ಆರಿಸಿ ಮೊದಲ ೨ ಭಾಗಗಳನ್ನು ಬರೆದು ಮುಗಿಸಿದರು. ಅಣ್ಣ ಪ್ಯಾರೇಲಾಲ್ ರಿಗೆ ಹೇಳಿ ಸರಳವಾದ ಗುಜರಾತಿ ಭಾಷೆಯಲ್ಲಿ ಟಿಪ್ಪಣಿ ಬರೆಯಲು ಹೇಳಿದರು. ಪ್ರತಿದಿನ ದಪ್ಪ ಅಕ್ಷರಗಳಲ್ಲಿ ಶ್ಲೋಕಗಳ ಅನುವಾದಗಳನ್ನು ಸಾಯಂಕಾಲದ ಪ್ರಾರ್ಥನೆ ಸಮಯಕ್ಕೆ ಸರಿಯಾಗಿ ದೊರೆಯುವಂತೆ ಆಯೋಜಿಸಿದರು. ಇದರಿಂದ ಬಾರವರಿಗೆ ರಾಮಾಯಣ ಮಹಾಕಾವ್ಯದ ಗುಜರಾತಿ ಆವೃತ್ತಿಯನ್ನೇ ತಕ್ಷಣವೇ ಪ್ರಾರ್ಥನೆಗೆ ಬಳಸಬಹುದಾಗಿತ್ತು. ಪ್ಯಾರೇಲಾಲ್ ಗುಜರಾತಿ ಭಾಷೆಗೆ ಅನುವಾದ ಮಾಡಿದ ಪದ್ಯಗಳನ್ನು ತಿದ್ದಬೇಕೆನ್ನಿಸಿದರೆ ಪುನಃ ಸಂಪಾದಿಸುತ್ತಿದ್ದರು. ಈ ಪ್ರಕ್ರಿಯೆ ಮಧ್ಯದಲ್ಲೇ ಕೊನೆಗೊಂಡಿತು.

ಮಹಾತ್ಮಾ ಗಾಂಧಿಯವರ ಉಪವಾಸ, ಸರ್ಕಾರದ ಜತೆ ಮಾಡಿದ ದೊಡ್ಡ ಪ್ರಮಾಣದ ಪತ್ರವ್ಯವಹಾರ, ಬಾರ ಯೋಗಕ್ಷೇಮ ಇವೆಲ್ಲವೂ ವ್ಯವಸ್ಥಿತವಾಗಿ ನಿಭಾಯಿಸಿಕೊಂಡು ಸಾಗುವುದು ನಮಗೆ ಇಡೀ ದಿನದ ಕೆಲಸವಾಗಿತ್ತು. ಇದರಿಂದಾಗಿ ರಾಮಾಯಣದಿಂದ ಆಯ್ಕೆಮಾಡಿದ ಕೆಲವು ಶ್ಲೋಕಗಳ ಗುಜರಾತಿಭಾಷೆಯ ಅನುವಾದ ಕೆಲಸ ನಿಂತಿತು. ಗಾಂಧೀಜಿಯವರು ಉಪವಾಸಮಾಡುವ ಸಮಯದಲ್ಲಿ ಸಾಯಂಕಾಲದ ಪ್ರಾರ್ಥನೆ ಸಮಯದಲ್ಲಿ ಅನುವಾದ, ಶ್ಲೋಕಗಳ ಅರ್ಥವನ್ನು ವಿವರಿಸುವ ಕೆಲಸ, ಮೊದಲಾದವುಗಳನ್ನು ನನಗೆ ಒಪ್ಪಿಸಿದ್ದರು. ನಾನು ಅವುಗಳ ಅರ್ಥವನ್ನು ಸರಳವಾದ ಗುಜರಾತಿ ಭಾಷೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವಿವರಿಸಲು ಪ್ರಯತ್ನಿಸಿದೆ. ಬಾ ಗಮನವಿಟ್ಟು ಬಹಳ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಧರ್ಮದ ಬಗ್ಗೆ ವ್ಯಾಖ್ಯಾನ ಬಂದಾಗ ಅವರು ತಮ್ಮ ಅನಿಸಿಕೆಗಳನ್ನು ಮಂಡಿಸುತ್ತಿದ್ದರು. ಅವರ ಜೀವನದ ಕೊನೆಯವರೆವಿಗೂ ಇದೆ ಪ್ರಥ ಜಾರಿಯಲ್ಲಿತ್ತು. ೨-೩ ದಿನಗಳ ನಂತರ ಬಹಳ ದಣಿದವರ ತರಹವಿದ್ದರು. ಹೆಚ್ಚುಸಮಯವೆಲ್ಲಾ ಕಣ್ಣು ಮುಚ್ಚಿ ಮಲಗಿರುತ್ತಿದ್ದರು. ನಾನು, ‘ಬಾ ನಿಮಗೆ ರಾತ್ರಿ ರಾಮಾಯಣದ ಅರ್ಥ ಓದಿ ಹೇಳಲೇ ? ಎಂದಾಗ ಅವರಿಗೆ ಆಶ್ಚರ್ಯ. ಈಗ ಈ ಪ್ರಶ್ನೆ ಏಕೆ ಬಂತು ? ಕಥೆ ಕೇಳಲು ಕುಳಿತುಕೊಂಡಾಗ ಮಾತ್ರ ಅದರ ವಿಷಯ ಬರುತ್ತದೆ ಅಲ್ಲವೇ ? ಇಲ್ಲ, ಇವತ್ತು ನೀವ್ಯಾಕೋ ಸ್ವಲ್ಪ ಸುಸ್ತಾದಂತೆ ಕಾಣಿಸ್ತಿದಿರಿ, ಅದಕ್ಕೆ ಹೇಳಿದೆ ಅಷ್ಟೆ ಎಂದು ಹೇಳಿ ನಾನು, ರಾಮಾಯಣದ ಪುಸ್ತಕ ತರಲು ಒಳಗೆ ಹೋದೆ. ‘ಹಾಸ್ಗೆಮೇಲ್ಕೂತ್ಕೊಂಡೇ ರಾಮಯಣ ಕೇಳೋದು ನನಗೇನೂ ಪಾಪ ತರಲ್ಲ. ಶುರುಮಾಡಮ್ಮ, ಪರವಾಗಿಲ್ಲ’. ಅಂದರು.

Page 39

ಬಾಪು ಮದ್ಯಾನ್ಹದ ಊಟ ಮಾಡುವಾಗ, ನಾನು ಅವರ ಸಹಾಯ ಪಡೆದು ಸಂಸ್ಕೃತ ವಾಲ್ಮೀಕಿ ರಾಮಾಯಣ ಪಾರಾಯಣ ಮಾಡ್ತಿದ್ದೆ. ಆಗ ಬಾ ಕೂಡಾ ಕೆಳಕ್ಕೆ ಬರ್ತಿದ್ರು. ಸ್ವಲ್ಪಸಮಯದ ನಂತರ ಬಾರವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಇದನ್ನು ಬಿಡಬೇಕಾಗಿ ಬಂತು. ಬಾಪು ಸಂಕ್ಷಿಪ್ತ ರಾಮಾಯಣದಿಂದ ಕೆಲವು ಆಯ್ದ ಭಾಗಗಳನ್ನು ವಾಚಿಸಲು ನಿರ್ಧರಿಸಿ, ಬಾಲಕಾಂಡದವರೆಗೆ ಆಗಲೇ ಗುರುತು ಮಾಡಿಟ್ಟಿದ್ದರು. ಆದರೆ ತುಳಸಿ ರಾಮಾಯಣನದ ತರಹವೇ ಇದನ್ನೂ ಪೂರ್ತಿ ಮುಗಿಸಲಾಗಲಿಲ್ಲ. ಒಮ್ಮೆ ಶ್ರದ್ಧಾಳುಗಳಲ್ಲೊಬ್ಬರು ಗುಜರಾತಿ ಭಾಷೆಯ ಆವೃತ್ತಿಯ ‘ಬಾರ್ಡೋಲಿಯ ಕತೆ’ ಎಂಬ ಪ್ರಕರಣವನ್ನು ಓದಲು ಅಪೇಕ್ಷಿಸಿದಾಗ, ಬಾ ಇದನ್ನು ಇಷ್ಟಪಡದೆ ಬಾರ್ಡೋಲಿಯ ಹೋರಾಟದ ಕತೆ ನನಗೇನು ಹೊಸದಲ್ಲ. ನಾನು ಅಲ್ಲಿದ್ದು ಅನುಭವಿಸಿದ್ದೇನೆ, ಎಂದರು. ಧಾರ್ಮಿಕ ಗ್ರಂಥಗಳು ಅವರಿಗೆ ಬಲು ಪ್ರಿಯ. ಭಾಗವತ ಪುರಾಣವನ್ನು ತರಲು ಹೇಳಿಕಳಿಸಿ, ಪೂರ್ತಿಯಾಗಿ ಓದಿಸಿ ಕೇಳಿದರು. ಕೆಲವು ಪ್ರಮುಖದಿನಗಳಲ್ಲಿ ಏಕಾದಶಿ ಮೊದಲಾದ ದಿನಗಳಲ್ಲಿ ಪಠನ ಮಾಡಿಸುತ್ತಿದ್ದರು. ಕೊನೆಕೊನೆಗೆ ಭಾಗವತವನ್ನು ಬಿಡದೆ ಓದಿಸಿ, ಕೇಳುತ್ತಿದ್ದರು. ‘ಇಂಟರ್ ವ್ಯೂ’ ಸಮಯದ ಹೊತ್ತಿನಲ್ಲಿ ಭಾಗವತ ಪಾರಾಯಣ ಆಗುತ್ತಿತ್ತು. ಕೆಲವು ಸಮಯ ಭಾಗವತ ಪುರಾಣವನ್ನು ಕೇಳಲು ಸಾಧ್ಯವಾಗುತ್ತಿರಲಿಲ್ಲ.

ಒಂದು ಸಲ ಪುರಾಣ ಕಥನ ಒಟ್ಟಿಗೆ ೬ ದಿನ ಜರುಗಿತು. ೭ ನೆಯ ದಿನ ಭಾಗವತ ಓದಿ ಹೇಳಬೇಕಾಗಿದ್ದ ನಾನು ಬರಲು ಸಾಧ್ಯವಾಗಲಿಲ್ಲ. ನನಗೆ ಹೇಗಿದ್ದರೂ ಬಾ ಗೆ ನಾವು ಓದಿ ಹೇಳಿದ್ದು ನೆನಪಿರುವುದಿಲ್ಲ. ನಾಳೆ ಓದಿ ಹೇಳಿದರಾಯಿತು, ಎಂದು ಸುಮ್ಮನಾದೆ. ಇದನ್ನು ನೆನಪಿಟ್ಟುಕೊಂಡಿದ ಬಾ ಮನುಬೆನ್ ಕೈಲಿ ಭಾಗವತವನ್ನು ಓದಿಸಿ ಕೇಳಿದರು. ಇದಾದ ಕೆಲವು ದಿನ ಬಾ ರನ್ನು ಎದುರಿಸಲು, ನನಗೆ ಭಯ ಹಾಗೂ ಮುಜುಗರವಾಗುತ್ತಿತ್ತು. ಆ ಸಮಯದಲ್ಲಿ ಮನು ಬೆನ್ ದಿನವೂ ಬಾರವರಿಗೆ ತಪ್ಪದೆ ಓದಿಹೇಳುತ್ತಿದ್ದರು. ಮನುಬೆನ್ ರನ್ನೂ ಎದುರಿಸುವುದು ನನಗೆ ಸ್ವಲ್ಪ ಕಷ್ಟವಾಯಿತು. ಒಂದು ದಿನ ನಾನು ಸೋಮಾರಿಯಾಗಿದ್ದೆ. ಮಾರನೆಯ ದಿನ ಹೋದಾಗ ನನ್ನನ್ನು ಮೂದಲಿಸಿ ಮಾತಾಡಬಹುದು. ಎಂದು ನಾನು ಎಣಿಸಿದ್ದೆ. ವಾಸ್ತವವಾಗಿ ಬಾರವರಿಗೆ ಸಂತೋಷವೇ ಆಗಿತ್ತು. ನನಗೆ ಬಾರವರ ‘ಒಂದು ಬಂಗಾರದ ವಾಕ್ಯ’ ನೆನಪಿಗೆ ಬಂತು. ‘ನಾವೆಲ್ಲ ಸಮಯದ ಗುಲಾಮರು. ಎಂದೂ ನಮಗೆ ಸಿಕ್ಕ ಯಾವುದೇ ಸಹಾಯಮಾಡುವ ಸುವರ್ಣಾವಕಾಶವನ್ನು ಕಳೆದುಕೊಳ್ಳಬಾರದು. ಒಮ್ಮೆ ಕಳೆದುಕೊಂಡರೆ, ಮತ್ತೆ ಅದು ದೊರಕಲಾರದು’, ಈ ವಾಕ್ಯ ಎಷ್ಟು ಅರ್ಥಗರ್ಭಿತವಾಗಿದೆ !