ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀ ರಮೇಶಬಾಬು ಕವಿತೆಗಳು

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)
ಗಾಯ ಮತ್ತು ತಳಿರು ಮೆದ್ದ ಕೋಗಿಲೆ- ಕವಿತೆಗಳು

ಗಾಯ

ಈ ಗಾಯದ ಕಲೆ ನನ್ನನ್ನೆಲ್ಲೋ ಒಯ್ಯುತ್ತಿದೆ
ಇದು ಬಿದ್ದ ಗಾಯವಲ್ಲ
ಕಾದಾಡಿ ಗೆದ್ದ ಗಾಯ
ಯದ್ಧದಲ್ಲೇ ಆಗಬೇಕಂತೇನೂ ಇಲ್ಲ
ಗಲ್ಲಿಯ ಗದ್ದಲದಲ್ಲೂ ಆಗಬಹುದು
ನಂಬಿದ ನಿಜಕ್ಕಾಗಿ ಗುದ್ದಾಡಿದಾಗ
ಆದ ಗಾಯದ ಬಗ್ಗೆ ಹೆಮ್ಮೆ ಎನಿಸುತ್ತದೆ
ಅದರ ಮೇಲೆ ಕೈಯಾಡಿಸಿದಾಗ
ಆತ್ಮೀಯವೆನಿಸುತ್ತದೆ
ಅದರ ಮೇಲೆ ಮುಲಾಮು ಸವರುತ್ತ
ಕಣ್ಣೀರು ಹಾಕಿದ ಅಮ್ಮ ಕಾಣುತ್ತಾಳೆ
ಅದರ ಬಗ್ಗೆ ತಿಳಿದು
ಸವರಿ ಮುತ್ತು ಕೊಟ್ಟ
ಹೆಂಡತಿ ನೆನಪಾಗುತ್ತಾಳೆ
ನನ್ನಪ್ಪ ಹೀರೋ ಗೊತ್ತಾ
ಅಂತ ಕಣ್ಣಲ್ಲಿ ಮಿಂಚು ತರುವ
ಪುಟ್ಟಿ ಕಣ್ಣ ಮುಂದೆ ನಿಲ್ಲುತ್ತಾಳೆ
ಸಮವಸ್ತ್ರಕ್ಕೆ ತೂಗುವ ಪದಕಗಳೇ
ಸಾಹಸದ ಕುರುಹುಗಳಲ್ಲ
ಗಾಯಗಳು ತುಂಬುವ ಹುರುಪು
ಯಾವ ಪದಕಕ್ಕೂ ಕಮ್ಮಿ ಅಲ್ಲ
ಈಗ ಈ ಚಳಿಗೆ ನಡುಗುತ್ತಾ
ವೈರಿ ಮಾಡಬಹುದಾದ
ಇನ್ನಷ್ಟು ಗಾಯಗಳ ಬಗ್ಗೆ ಊಹಿಸುತ್ತ
ಎಲ್ಲೆಗಳ ಎಲ್ಲೆಗಳು
ಎಲ್ಲಿಯವರೆಗೋ
ತಿಳಿಯದ ಈ ಸಮರಕ್ಕೆ
ಸಾಕ್ಷಿಯಾಗಿ
ಕಾಲ ಕಳೆಯುತ್ತಿದ್ದೇನೆ

ತಳಿರು ಮೆದ್ದ ಕೋಗಿಲೆ

ಪ್ರತಿವರ್ಷದಂತೆ
ಯುಗಾದಿಯಂದು
ವಸಂತನ ಆಗಮನ
ಸೂಚ್ಯವಾಗಿ
ಸಾಂಕೇತಿಕವಾಗಿ
ದನಿ ಹೊರಡಿಸಲು
ಕೊರಳು ಸರಿಪಡಿಸಿಕೊಂಡ ಕೋಗಿಲೆ
ಎಂದಿನಂತೆ ಕೆಲ ಕ್ಷಣಕ್ಕೆ
ಮಾತ್ರ ಎಂದು ತಯಾರಿ
ಅದೇನಾಶ್ಚರ್ಯ
ತನ್ನ ಉಸಿರು ಕಟ್ಟಲಿಲ್ಲ
ದನಿ ಗೊಗ್ಗರಾಗಲಿಲ್ಲ
ಸರಾಗವಾಗಿ ಹೊರಟ ಇಂಚರ
ಉಬ್ಬಸ ಕಳೆದ ನಿಸರ್ಗ
ಹರಡಿದ ರಂಗಸ್ಥಳ
ದಿನವಿಡೀ ಮನತುಂಬಿ
ಸಾಗಿತು ಗಾನ
ಕೊರೋನಾದ ಖಬರಿಲ್ಲ
ಆಡಳಿತದ ಅರಿವಿಲ್ಲ
ಕಾಲುಷ್ಯ ಕಾಣದ್ದೇ ಮಾನದಂಡ
ಅಂದಿನಿಂದ ಇಂದಿಗೂ
ಚುಮುಚುಮು ವೇಳೆ
ಆರಂಭವಾದರೆ ಕಚೇರಿ
ಗೂಡು ಸೇರುವ ಹೊತ್ತಿಗೂ ಮುಗಿಯದು
ಮತ್ತೆಂದು ಸಿಕ್ಕೀತೋ
ಎನ್ನುವ ಹಾಗೆ
ಕತ್ತುಚಾಚಿ
ಸ್ವರದೌತಣ ನೀಡುತ್ತಿದೆ
ತಳಿರು ಮೆದ್ದ ಕೋಗಿಲೆ !